Pahalgam Terror Attack: ಪಹಲ್ಗಾಮ್ನಲ್ಲಿ ಉಗ್ರರ ದಾಳಿ, ಕನ್ನಡಿಗರ ನೆರವಿಗೆ ಅಧಿಕಾರಿಗಳನ್ನ ಕಳುಹಿಸಿದ ಸಿಎಂ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಮೃತಪಟ್ಟಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಜಮ್ಮು-ಕಾಶ್ಮೀರ ಪ್ರವಾಸಕ್ಕೆ ತೆರಳಿರುವ ಕನ್ನಡಿಗರ ನೆರವಿಗೆ ವಿಶೇಷ ತಂಡ ಕಳುಹಿಸಿದ್ದಾರೆ.

ಬೆಂಗಳೂರು, ಏಪ್ರಿಲ್ 22: ಜಮ್ಮು-ಕಾಶ್ಮೀರದ ಪಹಲ್ಗಾಮ್ದಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಉಗ್ರರ ಗುಂಡಿನ ದಾಳಿಯಲ್ಲಿ (Pahalgam Terror Attack) ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಮೃತಪಟ್ಟಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಅಧಿಕಾರಿಗಳ ಸಭೆ ನಡೆಸಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ತಕ್ಷಣ ಕಾರ್ಯಪ್ರವತ್ತರಾಗುವಂತೆ ಸೂಚನೆ ನೀಡಿದರು. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಅಧಿಕಾರಿಗಳ ಒಂದು ತಂಡ ಕನ್ನಡಿಗರ ನೆರವಿಗೆ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದೆ. ಮುಂದಿನ ಕ್ರಮಗಳ ಉಸ್ತುವಾರಿ ನೋಡಿಕೊಳ್ಳುವಂರೆ ದೆಹಲಿಯ ರೆಸಿಡೆಂಟ್ ಕಮಿಷನರ್ಗೆ ಸೂಚನೆ ನೀಡಿದ್ದಾರೆ.
ಘಟನೆ ಸಂಬಂಧ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ, ಘಟನೆ ಕುರಿತು ನಾನು ಸಿಎಂ ಜೊತೆಗೆ ಚರ್ಚಿಸಿದ್ದೇನೆ. ಕರ್ನಾಟಕದ ಹಿರಿಯ ಅಧಿಕಾರಿಯನ್ನ ಕಳುಹಿಸಿದ್ದೇವೆ. ಕನ್ನಡಿಗರನ್ನ ವಾಪಸ್ ತರಲು ಎಲ್ಲ ಕ್ರಮಕೈಗೊಳ್ತೇವೆ. ಒಟ್ಟು 15 ಜನ ಸಿಲುಕಿರುವ ಮಾಹಿತಿ ಇದೆ. ಸಹಾಯವಾಣಿ ತೆರೆಯುವ ಬಗ್ಗೆ ಕಾರ್ಯಪ್ರವತ್ತರಾಗುತ್ತೇವೆ ಎಂದು ಹೇಳಿದರು.
ಮಂಜುನಾಥ್ ಶವ ತರಲು ಎಲ್ಲ ರೀತಿಯ ಪ್ರಯತ್ನ: ಡಿಸಿ
ಮೃತ ಮಂಜುನಾಥ್ ಅವರ ಪತ್ನಿ ಪಲ್ಲವಿಯವರನ್ನು ಸಂಪರ್ಕಿಸಲಾಗಿದೆ. ಮಂಜುನಾಥ್ ಮೃತದೇಹ ಬೆಟ್ಟದ ಮೇಲಿರುವುದರಿಂದ, ಮೃತದೇಹ ಕೆಳಗೆ ತರಲು ಅಧಿಕಾರಿಗಳ ಜತೆ ಸಂಪರ್ಕ ಮಾಡಿದ್ದೇನೆ. ಅಲ್ಲಿನ ಸ್ಥಳೀಯ ಅಧಿಕಾರಿಗಳನ್ನ ಸಂಪರ್ಕ ಮಾಡಿದ್ದೇವೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಇರುವ ಬಗ್ಗೆ ಮಾಹಿತಿ ಇದೆ. ಮಂಜುನಾಥ್ ಅವರ ಶವ ತರಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇವೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಮಾಹಿತಿ ನೀಡಿದರು.
ರಾಷ್ಟ್ರಪತಿ ಮುರ್ಮು ಸಂತಾಪ
“ಪ್ರವಾಸಿಗರ ಮೇಲಿನ ಉಗ್ರರ ಗುಂಡಿನ ದಾಳಿ ಆಘಾತ, ನೋವು ತಂದಿದೆ. ಇದು ಒಂದು ಹೇಯ ಮತ್ತು ಅಮಾನವೀಯ ಕೃತ್ಯವಾಗಿದ್ದು, ಇದನ್ನು ನಿಸ್ಸಂದೇಹವಾಗಿ ಖಂಡಿಸಬೇಕು. ಪ್ರವಾಸಿಗರ ಮೇಲಿನ ಉಗ್ರ ದಾಳಿ ಕ್ಷಮಿಸಲಾಗದ ಕೃತ್ಯ. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪಗಳು. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲೆಂದು ಪ್ರಾರ್ಥಿಸ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.
ಹೇಡಿತನದ ದಾಳಿಯನ್ನು ನಾನು ಖಂಡಿಸುತ್ತೇನೆ: ಖರ್ಗೆ
ಪ್ರವಾಸಿಗರ ಮೇಲೆ ಹೇಡಿತನದ ದಾಳಿಯನ್ನು ನಾನು ಖಂಡಿಸುತ್ತೇನೆ. ಭಯೋತ್ಪಾದನೆಯ ಎದುರಿಸಲು ಇಡೀ ರಾಷ್ಟ್ರ ಒಗ್ಗಟ್ಟಿನಿಂದ ನಿಂತಿದೆ. ಉಗ್ರರ ದಾಳಿಗಳು ಮಾನವೀಯತೆಗೆ ಕಳಂಕವಾಗಿವೆ. ಉನ್ನತ ಮೂಲಗಳ ಪ್ರಕಾರ ಅಮೂಲ್ಯ ಜೀವಗಳು ಕಳೆದುಹೋಗಿವೆ. ನೊಂದವರಿಗೆ ಕಾಂಗ್ರೆಸ್ ಪಕ್ಷದ ಪರವಾಗಿ ಹೃದಯಪೂರ್ವಕ ಸಂತಾಪ ಸೂಚಿಸುತ್ತೇನೆ, ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಭಾರತದ ರಾಷ್ಟ್ರೀಯ ಭದ್ರತೆಯು ಪ್ರಮುಖ ವಿಷಯವಾಗಿದೆ. ಭದ್ರತೆ ಖಾತ್ರಿಪಡಿಸಲು ಕೇಂದ್ರಸರ್ಕಾರ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸುವೆ” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿಗೆ ಶಿವಮೊಗ್ಗ ಉದ್ಯಮಿ ಬಲಿ
ಡಿಕೆ ಶಿವಕುಮಾರ್ ಸಂತಾಪ
“ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಮನ ಬಂದಂತೆ ಗುಂಡಿನ ದಾಳಿ ನಡೆಸಿರುವ ವಿಚಾರ ತಿಳಿದು ಆಘಾತವಾಯಿತು. ಪ್ರವಾಸಿಗರ ಪೈಕಿ ಶಿವಮೊಗ್ಗ ಮೂಲದ ಓರ್ವ ಕನ್ನಡಿಗ ಮೃತಪಟ್ಟಿದ್ದು, ಅವರ ಮೃತದೇಹವನ್ನು ತರಲು ಸರ್ಕಾರದಿಂದ ಸಕಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಕಾಶ್ಮೀರದಲ್ಲಿ ಸಿಲುಕಿರುವ ಪ್ರವಾಸಿ ಕನ್ನಡಿಗರನ್ನು ಸಂಪರ್ಕಿಸಿ, ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಈಗಾಗಲೇ ಪೊಲೀಸ್ ಅಧಿಕಾರಿಗಳ ತಂಡವೊಂದನ್ನು ಕಳುಹಿಸಲಾಗಿದೆ. ಮೃತರ ಕುಟುಂಬಕ್ಕೆ ತೀವ್ರ ಸಂತಾಪಗಳು” ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:36 pm, Tue, 22 April 25