
ಬೆಂಗಳೂರು, ಜು.7: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಆದರೆ, ಇದೇ ರಾಜ್ಯದ ಮತ್ತೊಂದು ಭಾಗವಾದ ಕಲ್ಯಾಣ ಕರ್ನಾಟಕದ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಮಾತ್ರ ಮಳೆಯ ಸುಳಿವೇ ಇಲ್ಲದೆ ತೀವ್ರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಬಿತ್ತನೆ ಮಾಡಿದ ಬೆಳೆಗಳು ಕಣ್ಣೆದುರೇ ಒಣಗುತ್ತಿರುವುದನ್ನು ಕಂಡು ಅನ್ನದಾತರು ಕಣ್ಣೀರು ಇಡುತ್ತಿದ್ದಾರೆ.
ಬಿಸಿಲುನಾಡು ರಾಯಚೂರಿನಲ್ಲಿ ಮೇ ತಿಂಗಳ ಕೊನೆಯಲ್ಲಿ ಸುರಿದ ಮಳೆಯನ್ನು ನಂಬಿ ಹತ್ತಿ ಹಾಗೂ ತೊಗರಿ ಬಿತ್ತನೆ ಮಾಡಿದ್ದ ರೈತರು ಈಗ ಆಕಾಶದತ್ತ ಮುಖ ಮಾಡಿ ಕುಳಿತಿದ್ದಾರೆ. ಜಿಲ್ಲೆಯಾದ್ಯಂತ ಮಳೆ ಇಲ್ಲದೆ ಕೃಷಿ ಜಮೀನುಗಳು ಬರಡು ಭೂಮಿಯಂತೆ ಗೋಚರಿಸುತ್ತಿವೆ. ರಾಯಚೂರು ತಾಲೂಕಿನ ಆಶಾಪುರ ಗ್ರಾಮ ಸೇರಿದಂತೆ ಜಿಲ್ಲೆಯ ಹಲವೆಡೆ ಬಿತ್ತನೆ ಮಾಡಿರುವ ಹೊಲಗಳಲ್ಲಿ ಅಲ್ಲೊಂದು ಇಲ್ಲೊಂದು ಹತ್ತಿ ಬೀಜ ಮಾತ್ರ ನಾಟಿಯಾಗಿದೆ. ಉಳಿದ ಭಾಗ ಸಂಪೂರ್ಣ ಬರಿದಾಗಿದೆ. ಇನ್ನು ಕೆಲವೆಡೆ ಮೂರು ಮೂರು ಬಾರಿ ಬಿತ್ತನೆ ಮಾಡಿದರೂ ಬೀಜಗಳು ಮೊಳಕೆಯೊಡೆದಿಲ್ಲ. ಇನ್ನು ಕೆಲವು ಹೊಲಗಳಲ್ಲಿ ಒಂದು ಅಡಿಯಷ್ಟು ಬೆಳೆದಿರುವ ಹತ್ತಿ ಗಿಡಗಳು ತೇವಾಂಶದ ಕೊರತೆಯಿಂದಾಗಿ ಒಣಗಲಾರಂಭಿಸಿವೆ.
ಇದನ್ನೂ ಓದಿ: ಮಳೆ ಇಲ್ಲದಿದ್ದರೂ ಬಾಗಲಕೋಟೆಯಲ್ಲಿ ಬೊರ್ಗರೆಯುತ್ತಿರುವ ನದಿಗಳು, ಬೆಳೆಗಳಿಗಿಲ್ಲ ನೀರು!
ಕೊಪ್ಪಳ ಜಿಲ್ಲೆಯಲ್ಲೂ ಕಳೆದ ಒಂದು ತಿಂಗಳಿಂದ ಮಳೆಯಾಗದ ಹಿನ್ನೆಲೆಯಲ್ಲಿ ಭೀಕರ ಬರಗಾಲದ ಛಾಯೆ ಆವರಿಸಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುವ ಭೀತಿಯಲ್ಲಿ ರೈತರಿದ್ದಾರೆ. ಕುಕನೂರು ತಾಲೂಕಿನ ಭಾನಾಪೂರ ಗ್ರಾಮದ ರೈತ ಸಿದ್ದಲಿಂಗನಗೌಡ ಪಾಟೀಲ್ ಅವರು ಸುಮಾರು 60 ರಿಂದ 70 ಸಾವಿರ ರೂಪಾಯಿ ಸಾಲಸೋಲ ಮಾಡಿ 4 ಎಕರೆ ಜಮೀನಿನಲ್ಲಿ ತೊಗರಿ ಬೆಳೆದಿದ್ದಾರೆ. ಈಗ ಮಳೆ ಕೈಕೊಟ್ಟಿದ್ದರಿಂದ ಬೆಳೆ ಉಳಿಸಿಕೊಳ್ಳಲು ಪ್ರತಿ ಟ್ಯಾಂಕರ್ ನೀರಿಗೆ 700 ರಿಂದ 800 ರೂಪಾಯಿ ಖರ್ಚು ಮಾಡಿ ಪೈಪ್ಗಳ ಮೂಲಕ ಗಿಡಗಳಿಗೆ ನೀರುಣಿಸುತ್ತಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಅತ್ಯಂತ ಕಡಿಮೆ ಬಿತ್ತನೆಯಾಗಿದೆ. ಮಳೆಯಾಗದ ಕಾರಣ ನೂರಾರು ರೈತರು ಬಿತ್ತನೆಗಾಗಿ ತಂದಿದ್ದ ಬೀಜ ಮತ್ತು ಗೊಬ್ಬರವನ್ನು ಬಳಸಲಾಗದೆ ಮನೆಯಲ್ಲೇ ಸ್ಟಾಕ್ ಇಟ್ಟುಕೊಂಡಿದ್ದಾರೆ.
ಒಟ್ಟಾರೆಯಾಗಿ, ರಾಜ್ಯದ ಒಂದು ಭಾಗದಲ್ಲಿ ನೆರೆ ಹಾವಳಿಯಿದ್ದರೆ, ಕಲ್ಯಾಣ ಕರ್ನಾಟಕದ ಭಾಗದಲ್ಲಿ ಮಾತ್ರ ಬರಗಾಲ ತುತ್ತೂರಿ ಊದುತ್ತಿದೆ. ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಂಕಷ್ಟದಲ್ಲಿರುವ ಅನ್ನದಾತನ ನೆರವಿಗೆ ಧಾವಿಸಬೇಕಿದೆ.
ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ