ಗರ್ಭಿಣಿ ಸೊಸೆಯನ್ನು ಮಾವ ಕೊಂದಿದ್ಯಾಕೆ ಗೊತ್ತಾ? ವಿಚಾರಣೆ ವೇಳೆ ಬಾಯ್ಬಿಟ್ಟ ಆರೋಪಿ!

ರಾಯಚೂರು ಜಿಲ್ಲೆಯ ಸಿರವಾರದಲ್ಲಿ ಗರ್ಭಿಣಿ ಸೊಸೆಯನ್ನು ಮಾವ ಕತ್ತು ಸೀಳಿ ಕೊಲೆಗೈದ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದ್ದು, ತನಿಖೆ ವೇಳೆ ಕೊಲೆ ಆರೋಪಿ ಸತ್ಯ ಬಿಚ್ಚಿಟ್ಟಿದ್ದಾನೆ. ನಾಲ್ಕು ತಿಂಗಳ ಗರ್ಭಿಣಿ ಸೊಸೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಮಾವನನ್ನು ಬಂಧಿಸಿರುವ ಪೊಲೀಸರು, ಆರಂಭದಲ್ಲಿ ಕೌಟುಂಬಿಕ ಕಲಹದಿಂದಲೇ ಈ ಕೊಲೆ ನಡೆದಿದೆ ಎಂದು ಶಂಕೆ ವ್ಯಕ್ತಪಡಿಸಿದ್ದರು. ಆದರೆ ಸತ್ಯಾಂಶವೇನೆಂದು ವಿಚಾರಣೆ ವೇಳೆ ಹೊರಬಂದಿದೆ.

ಗರ್ಭಿಣಿ ಸೊಸೆಯನ್ನು ಮಾವ ಕೊಂದಿದ್ಯಾಕೆ ಗೊತ್ತಾ? ವಿಚಾರಣೆ ವೇಳೆ ಬಾಯ್ಬಿಟ್ಟ ಆರೋಪಿ!
ಗರ್ಭಿಣಿ ಸೊಸೆಯನ್ನು ಮಾವ ಕೊಂದಿದ್ಯಾಕೆ ಗೊತ್ತಾ?
Edited By:

Updated on: Jan 30, 2026 | 10:27 AM

ರಾಯಚೂರು, ಜನವರಿ 30: ಜಿಲ್ಲೆಯ ಸಿರವಾರ ತಾಲ್ಲೂಕಿನ ಚಿಕ್ಕ ಹಣಗಿ ಗ್ರಾಮದಲ್ಲಿ ಗರ್ಭಿಣಿ ಸೊಸೆಯನ್ನು ಕತ್ತು ಸೀಳಿ ಕೊಲೆಗೈದ (Pregnant Daughter-in-Law Murdered)  ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಘಟನೆ ನಿನ್ನೆ (ಜನವರಿ 29) ಬೆಳಕಿಗೆ ಬಂದಿತ್ತು. ಈ ಪ್ರಕರಣಕ್ಕೀಗ ಹೊಸ ತಿರುವು ಸಿಕ್ಕಿದೆ. ಆರಂಭದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ಮಾವ ಸಿದ್ದಪ್ಪ ನಾಲ್ಕು ತಿಂಗಳ ಗರ್ಭಿಣಿ ಸೊಸೆ ರೇಖಾರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಖಾಕಿ ತನಿಖೆಯಲ್ಲಿ ಈ ಭೀಕರ ಕೃತ್ಯದ ಹಿಂದಿರುವ ನಿಜವಾದ ಉದ್ದೇಶ ಬಹಿರಂಗವಾಗಿದೆ.

ನಡೆದಿದ್ದೇನು?

ಗುರುವಾರ ಸೊಸೆ ರೇಖಾಳ (24) ಮನೆಗೆ ಬಂದಿದ್ದ ಮಾವ ಸಿದ್ದಪ್ಪ (50), 4 ತಿಂಗಳ ಗರ್ಭಿಣಿ ಸೊಸೆಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದ. ಈ ವೇಳೆ ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಹೊರಬಂದ ರೇಖಾ, ನರಳಾಡಿ ಸಾವನ್ನಪ್ಪಿದ್ದಳು. ಪ್ರಾಥಮಿಕವಾಗಿ ಕೌಟುಂಬಿಕ ಕಲಹಕ್ಕೆ ಕೊಲೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಇತ್ತ ಕೃತ್ಯವೆಸಗಿ ಪರಾರಿಯಾಗಿದ್ದ ಆರೋಪಿ ಸಿದ್ದಪ್ಪನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ ನಂತರ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದೆ.

ತನಿಖೆ ವೇಳೆ ಹೊರ ಬಂದ ಸತ್ಯವೇನು?

ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿ ತಂದಿದ್ದ ಕವಿತಾಳ ಠಾಣೆ ಪೊಲೀಸರು ತನಿಖೆ ಮುಂದಿವರೆಸಿದ್ದರು. ಈ ವೇಳೆ ಮೃತ ರೇಖಾಳ ಆಸ್ತಿ ಮೇಲೆ ಕಣ್ಣು ಹಾಕಿದ್ದ ಮಾವ ಸಿದ್ದಪ್ಪ ನಿತ್ಯ ಆಸ್ತಿಗಾಗಿ ಕಿರುಕುಳ ನೀಡುತ್ತಿದ್ದ ಎಂಬುದು ತಿಳಿದುಬಂದಿದೆ. ಸೊಸೆಯು ತನ್ನ ಪೋಷಕರ ಬಳಿ ಆಸ್ತಿಯನ್ನೂ ಕೇಳುತ್ತಿಲ್ಲ, ಮನೆಗೆಲಸ ಮತ್ತು ಹೊಲದ ಕೆಲಸ ಮಾಡುತ್ತಿಲ್ಲ ಎಂಬ ನೆಪದಲ್ಲಿ ರೇಖಾಳನ್ನು ನಿರಂತರವಾಗಿ ಹಿಂಸಿಸಲಾಗುತ್ತಿತ್ತು ಎಂದು ಆರೋಪಿ ಬಾಯ್ಬಿಟ್ಟಿದ್ದಾನೆ.

ಇದನ್ನೂ ಓದಿ ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಎಸ್ಪಿ​

ರೇಖಾಳ ತಂದೆ ಏನಂದ್ರು?

ರೇಖಾ ತನ್ನ ಮಾತು ಕೇಳುವುದಿಲ್ಲ, ಆಕೆಗೆ ಹುಟ್ಟುವ ಮಗು ನಮಗೆ ಬೇಡ ಎಂಬ ಕ್ರೂರ ಮನೋಭಾವದಿಂದ ಈ ಕೊಲೆ ಮಾಡಿದ್ದಾನೆ ಎಂದು ಮೃತಳ ತಂದೆ ಬಸವರಾಜ್ ಗಂಭೀರ ಆರೋಪ ಮಾಡಿದ್ದಾರೆ. ಟಿವಿ9 ಸುದ್ದಿವಾಹಿನಿ ಎದುರು ಮಾತನಾಡಿದ ಬಸವರಾಜ್, ತಾನು ಹಿಂಸೆ ಅನುಭವಿಸುತ್ತಿದ್ದರೂ ಈ ನೋವನ್ನು ತಂದೆ-ತಾಯಿಗೆ ಹೇಳಬಾರದೆಂದು ಮಗಳು ಸಹಿಸಿಕೊಂಡಿದ್ದಳು. ರೇಖಾಳನ್ನು ಹೊಡೆದು, ಬಡಿದು, ಮಾನಸಿಕವಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ತಂದೆ ಕಣ್ಣೀರಿಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

Bhemesh Poojar

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More
Follow Us