
ರಾಮನಗರ, ಜೂ.05: ಚನ್ನಪಟ್ಟಣ(Channapatana) ವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಅವರು ಇದೀಗ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ರಾಜ್ಯ ರಾಜಕಾರಣದಿಂದ ಕೇಂದ್ರದ ಕಡೆ ಮುಖ ಮಾಡಿದ್ದಾರೆ. ಈ ಹಿನ್ನಲೆ ಅವರ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಇದಾದ ಬಳಿಕ ಅವರ ಕ್ಷೇತ್ರದಲ್ಲಿ ಯಾರು ಸ್ಪರ್ಧೆಗಿಳಿಯುತ್ತಾರೆ ಎಂಬ ಕುತೂಹಲ ಶುರುವಾಗಿದೆ. ಈ ಮಧ್ಯೆ ಲೋಕಾ ಕಣದಲ್ಲಿ ಸೋಲುಂಡಿರುವ ಡಿಕೆ ಸುರೇಶ್(DK Suresh) ಸ್ಪರ್ಧೆ ಮಾಡುತ್ತಾರಾ? ಎಂಬ ಪ್ರಶ್ನೆ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.
ಈ ಕುರಿತು ಮಾಗಡಿಯಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ಹೆಚ್.ಸಿ.ಬಾಲಕೃಷ್ಣ, ‘ಅಲ್ಲಿ ಸ್ಪರ್ಧಿಸುವುದು ಡಿ.ಕೆ.ಸುರೇಶ್ ಹಾಗೂ ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದಿದ್ದಾರೆ. ಈ ಉಪಚುನಾವಣೆಯಲ್ಲಿ ಚನ್ನಪಟ್ಟಣ ನಮ್ಮ ಕೈವಶ ಆಗುತ್ತದೆ. ಅಲ್ಲಿ ಯಾರೂ ಇಲ್ಲದೆ 80 ಸಾವಿರ ಮತಗಳನ್ನು ಪಡೆದಿದ್ದೇವೆ. ಗೆಲುವಿಗೆ ಬೇಕಾಗಿರುವುದೇ ಇನ್ನು 20 ಸಾವಿರ ಮತಗಳು ಅಷ್ಟೇ, ಈ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ನಡೆಯಲ್ಲ, ಕಾರ್ಯಕರ್ತರೂ ಕೂಡ ಮೈತ್ರಿ ಒಪ್ಪಲ್ಲ. ಹೆಚ್ಡಿಕೆ ಈಗ ನಮ್ಮ ಜಿಲ್ಲೆಯಲ್ಲಿಲ್ಲ, ಮಂಡ್ಯಕ್ಕೆ ಹೋಗಾಯಿತು. ಇನ್ನು ಚನ್ನಪಟ್ಟಣ, ರಾಮನಗರಕ್ಕೆ ಬರುವ ವಿಚಾರವಿಲ್ಲ. ಇನ್ನೇನಿದ್ದರೂ ಮಂಡ್ಯ, ಹಾಸನ ನೋಡಿಕೊಂಡು ಇರುತ್ತಾರೆ ಎಂದಿದ್ದಾರೆ.
ಲೋಕಸಭಾ ಫಲಿತಾಂಶದ ಬಳಿಕ ಡಿಕೆ ಸುರೇಶ್ ಮಾತನಾಡಿ, ‘ಮೂರು ಬಾರಿ ಸಂಸದನಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದೀರಿ. ನಾಲ್ಕನೇ ಬಾರಿ ಅಗ್ನಿಪರೀಕ್ಷೆಯಲ್ಲಿ ವಿರಾಮ ಕೊಟ್ಟಿದ್ದೀರಿ. ಮಾದ್ಯಮದ ಮುಖಾಂತರ ಕ್ಷೇತ್ರದ ಮತದಾರರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದರು. ಮತದಾರ ಪ್ರಭುಗಳು ಕೊಟ್ಟಿರುವ ತಿರ್ಮಾನವನ್ನು ಸ್ವಾಗತಿಸುತ್ತೇನೆ. ಗೆಲುವು ಸಾಧಿಸಿದ ಡಾ. ಮಂಜುನಾಥ್ ಅವರಿಗೆ ಧನ್ಯವಾದ ಹೇಳುತ್ತೇನೆ. ನನಗೆ ಅವಕಾಶ ಕೊಟ್ಟ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್ ಗಾಂಧಿಯವರಿಗೆ ಹಾಗೂ ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:29 pm, Wed, 5 June 24