ಹಣ್ಣಿನ ರಾಜನಿಗೆ ಇದೆಂಥಾ ಸ್ಥಿತಿ: ಭಾರೀ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ಆಘಾತ

ಬೆಂಗಳೂರು ದಕ್ಷಿಣ ಜಿಲ್ಲೆ ರಾಜ್ಯದ ಎರಡನೇ ಅತಿದೊಡ್ಡ ಮಾವು ಬೆಳೆಯುವ ಜಿಲ್ಲೆ. ಈ ಬಾರಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಹವಾಮಾನ ವೈಪರೀತ್ಯ ದೊಡ್ಡ ಹೊಡೆತ ನೀಡಿದೆ. ಹೂವು ಕಚ್ಚಿದರೂ ಕಾಯಿ ಕಟ್ಟದೇ ಶೇ. 50ರಷ್ಟು ಬೆಳೆ ನಷ್ಟವಾಗಿದೆ. ಕಳೆದ ವರ್ಷ ಸರಿಯಾದ ಬೆಲೆ ಸಿಗದೆ, ಈ ವರ್ಷ ಬೆಳೆಯೂ ಇಲ್ಲದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹಣ್ಣಿನ ರಾಜನಿಗೆ ಇದೆಂಥಾ ಸ್ಥಿತಿ: ಭಾರೀ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ಆಘಾತ
ಮಾವು
Image Credit source: tv9 kannada
Edited By:

Updated on: Mar 10, 2026 | 5:21 PM

ರಾಮನಗರ, ಮಾರ್ಚ್​ 10: ಮಾವು (Mango Crop) ಬೆಂಗಳೂರು ದಕ್ಷಿಣ ಜಿಲ್ಲೆಯ ರೈತರ ಪ್ರಮುಖ ಬೆಳೆ. ರಾಜ್ಯದಲ್ಲಿಯೇ ಮಾವು ಬೆಳೆಗೆ ಎರಡನೇ ಸ್ಥಾನದಲ್ಲಿದೆ. ಈ ಬಾರಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿ ಜಿಲ್ಲೆಯ ರೈತರಿದ್ದರು. ಆದರೆ ಹವಮಾನ ವೈಪರೀತ್ಯದಿಂದಾಗಿ ಮಾವು ಬೆಳೆ ರೈತರಿಗೆ ಕೈಕೊಟ್ಟಿದೆ. ಹೀಗಾಗಿ ಉತ್ತಮ ಬೆಳೆ ಬರುವ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಪ್ರಮುಖ ತೋಟಗಾರಿಕಾ ಬೆಳೆಯಾದ ಮಾವು ಸದ್ಯ ರೈತರಿಗೆ ಕೈಕೊಟ್ಟಿದೆ. ಅಂದಹಾಗೆ ಈ ಬಾರಿ ಜಿಲ್ಲೆಯಾದ್ಯಂತ ಮಾವಿನ ಮರಗಳಲ್ಲಿ ವ್ಯಾಪಕವಾಗಿ ಹೂ ಬಿಟ್ಟಿತ್ತು. ಹೀಗಾಗಿ ಜಿಲ್ಲೆಯ ಮಾವು ಬೆಳೆಗಾರರು ಉತ್ತಮ ಬೆಳೆ ಬರುವ ನಿರೀಕ್ಷೆಯಲ್ಲಿ ಇದ್ದರು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಹೂ ಹಾಳಾಗಿ ಕಾಯಿ ಕಟ್ಟಿಲ್ಲ. ಸರಿಯಾದ ಇಬ್ಬನಿ ಬೀಳದೆ, ಮಳೆ ಕೂಡ ಬಾರದೇ ಮರಗಳಲ್ಲಿ ಕಾಯಿ ಕಟ್ಟಿಲ್ಲ. ಅರ್ಧದಷ್ಟು ಬೆಳೆಕೂಡ ಕೈಕೊಟ್ಟಿದೆ.

ಇದನ್ನೂ ಓದಿ: ಬಡವರ ಬಾದಾಮಿ ಬೆಳೆದ ರೈತರಿಗೀಗ ಸಂಕಷ್ಟ: ದಲ್ಲಾಳಿ-ಕಮಿಷನ್ ಏಜೆಂಟ್ ಮೋಸದಿಂದ ಕಂಗಾಲು

ಬೆಂಗಳೂರು ದಕ್ಷಿಣ ಜಿಲ್ಲೆಯಾದ್ಯಂತ 26 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯನ್ನ ಬೆಳೆಯಲಾಗುತ್ತದೆ. ರಾಜ್ಯದಲ್ಲಿ ಮಾವು ಬೆಳೆಯಲ್ಲಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಜಿಲ್ಲೆಯ ರಾಮನಗರ, ಕನಕಪುರ, ಚನ್ನಪಟ್ಟಣ ಹಾಗೂ ಮಾಗಡಿ ತಾಲ್ಲೂಕುಗಳಲ್ಲಿ ರೈತರು ಮಾವು ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಬಾದಾಮಿ, ಸೇಂದೂರ, ನೀಲಂ, ಮಲ್ಲಿಕಾ, ಮಲಗೋಬ ಸೇರಿದಂತೆ ಮೊದಲಾದ ತಳಿಯನ್ನ ಬೆಳೆಯಲಾಗುತ್ತದೆ.

ಪ್ರಾರಂಭದಲ್ಲಿ ತೋಟಗಳಲ್ಲಿ ಶೇ 50ರಷ್ಟು‌ ಹೂ ಮರದಲ್ಲಿ ಕಚ್ಚಿತ್ತು. ಮತ್ತಷ್ಟು ಹೂವು ಬಂದು ಬೆಳೆ ಚೆನ್ನಾಗಿ ಬರಬಹುದು ಎಂದು ರೈತರು ನಿರೀಕ್ಷೆಯಲ್ಲಿ ಇದ್ದರು. ಆದರೆ ರೈತರ ನಿರೀಕ್ಷೆ ಹುಸಿಯಾಗಿದೆ. ಇನ್ನು ಕೆಲ ದಲ್ಲಾಳಿಗಳು ಈಗಾಗಲೇ ತೋಟಗಳಿಗೆ ಭೇಟಿ ನೀಡಿ ಮುಂಗಡವಾಗಿಯೇ ಹಣ ಕೊಟ್ಟು ಮಾವು ಖರೀದಿಸಲು ಮುಂದಾಗಿದ್ದರು. ಜಿಲ್ಲೆಯ ಮಾವು ಅತೀ ಬೇಗ ರಾಜ್ಯದ ಮಾರುಕಟ್ಟೆಗೆ ಲಗ್ಗೆ ಇಡುತ್ತದೆ. ಕಳೆದ ಬಾರಿ 1.8 ಲಕ್ಷ ಟನ್ ಮಾವು ಜಿಲ್ಲೆಯಾದ್ಯಂತ ಬಂದಿತ್ತು. ಈ ಬಾರಿ ಎರಡು ಲಕ್ಷ ಟನ್ ಮಾವು ಬರುವ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆಯಂತೆ ಬೆಳೆ ಬಂದಿಲ್ಲ.

ಇದನ್ನೂ ಓದಿ: ಬರದ ನಾಡಲ್ಲಿ ಬಂಗಾರದ ಬೆಳೆ ಬೆಳೆದ ಯುವ ರೈತ: ಮೂರುವರೆ ಎಕರೆ ಜಮೀನಿನಲ್ಲಿ ಲಕ್ಷಾಂತರ ರೂ ಲಾಭ

ಒಟ್ಟಾರೆ ಕಳೆದ ಬಾರಿ ಉತ್ತಮ ಬೆಳೆ ಬಂದಿದ್ದರು, ಸರಿಯಾದ ಬೆಲೆ ಸಿಗದ ಕಾರಣ ಮಾವು ಬೆಳೆಗಾರರು ಸಾಕಷ್ಟು ಸಂಕಷ್ಟ ಎದುರಿಸಿದ್ದರು. ಆದರೆ ಈ ಬಾರಿ ಬೆಳೆಯೇ ಸರಿಯಾಗಿ ಬಾರದೇ ಮತ್ತೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.‌

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us