ಬರದ ನಾಡಲ್ಲಿ ಬಂಗಾರದ ಬೆಳೆ ಬೆಳೆದ ಯುವ ರೈತ: ಮೂರುವರೆ ಎಕರೆ ಜಮೀನಿನಲ್ಲಿ ಲಕ್ಷಾಂತರ ರೂ ಲಾಭ
ಯಾದಗಿರಿ ಜಿಲ್ಲೆಯ ಯುವ ರೈತ ಬರಡಾದ ಪ್ರದೇಶದಲ್ಲಿ ಸಾಂಪ್ರದಾಯಿಕ ಬೆಳೆಗಳನ್ನು ಬಿಟ್ಟು, ಕೇವಲ ಮೂರೂವರೆ ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದು ಭರ್ಜರಿ ಯಶಸ್ಸು ಗಳಿಸಿದ್ದಾರೆ. ನೀರಿನ ಕೊರತೆಯ ಸವಾಲನ್ನು ಮೆಟ್ಟಿ ನಿಂತು, ಎರಡು ತಿಂಗಳಲ್ಲಿ 16 ಲಕ್ಷ ರೂ ನಿವ್ವಳ ಲಾಭ ಗಳಿಸಿ, ಇತರ ರೈತರಿಗೆ ಮಾದರಿಯಾಗಿದ್ದಾರೆ.

ಯಾದಗಿರಿ, ಫೆಬ್ರವರಿ 01: ಅದು ಬರದ ನಾಡು. ಮಳೆ ಬಂದರೆ ಬೆಳೆ, ಇಲ್ಲವೆಂದರೆ ಬರಗಾಲ ಎನ್ನುವಂತಿದೆ. ಹೀಗಾಗಿ ಬಹುತೇಕ ರೈತರು ಮಳೆ ಆಶ್ರಿತ ಬೆಳೆಗಳನ್ನ ಹೆಚ್ಚಾಗಿ ಬೆಳೆಯುತ್ತಾರೆ. ಅನೇಕ ರೈತರು ನಷ್ಟ ಅನುಭವಿಸುತ್ತಾರೆ. ಆದರೆ ಆ ಯುವ ರೈತ (Farmer) ಮಾತ್ರ ಇದಕ್ಕೆ ವಿರೋಧ ಎನ್ನುವ ಹಾಗೆ ತೋಟಗಾರಿಕೆ ಬೆಳೆಯನ್ನ ಬೆಳೆದು ಭರ್ಜರಿ ಲಾಭ ಗಳಿಸಿದ್ದಾರೆ. ಕೇವಲ ಮೂರುವರೆ ಎಕರೆ ಜಮೀನಿನಲ್ಲಿ ಕಲ್ಲಂಗಡಿ (Watermelon) ಬೆಳೆಯನ್ನ ಬೆಳೆದು ಲಕ್ಷಾಂತರ ರೂ. ಲಾಭ ಪಡೆದು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.
ಯಾದಗಿರಿ ಜಿಲ್ಲೆಯ ಅಂದರೆ ಸಾಕು ಬರದ ನಾಡು ಅಂತಲೇ ಕರೆಯಲಾಗುತ್ತೆ. ಏಕೆಂದರೆ ಜಿಲ್ಲೆಯಲ್ಲಿ ಅನ್ನದಾತರ ಸ್ಥಿತಿ ಹೇಗಿದೆ ಅಂದರೆ ಮಳೆ ಬಂದರೆ ಬೆಳೆ, ಇಲ್ಲವೆಂದರೆ ಬರಗಾಲ ಎನ್ನುವಂತ ಸ್ಥಿತಿಯಿದೆ. ಅದರಲ್ಲೂ ಬಹುತೇಕ ರೈತರು ಸಂಪ್ರದಾಯಿಕ ಬೆಳೆಗಳಾದ ತೊಗರಿ, ಹತ್ತಿ, ಸಜ್ಜೆ ಇನ್ನಿತರ ಬೆಳೆಗಳನ್ನ ಬೆಳೆದು ಮಳೆ ಮೇಲೆ ಬಾರ ಹಾಕಿಕೊಂಡು ಕುಳಿತುಕೊಳ್ಳುತ್ತಾರೆ. ಮಳೆ ಬಂದರೆ ಬೆಳೆ ಸಿಗುತ್ತೆ ಇಲ್ಲಂದ್ರೆ ಮೈತುಂಬಾ ಸಾಲ ಮಾಡಿಕೊಂಡು ಊರು ಬಿಟ್ಟು ಹೊಟ್ಟೆ ಪಾಡಿಗಾಗಿ ಮಹಾನಗರಗಳಿಗೆ ಹೋಗಬೇಕು.
ಇದನ್ನೂ ಓದಿ: ಬಿಸಿಯೂಟದಲ್ಲಿ ಹುಳುಗಳು ಪತ್ತೆ: ಟಿವಿ9 ವರದಿ ಇಂಪ್ಯಾಕ್ಟ್; ಶಾಲೆಗಳಿಗೆ ಬಂತು ಗುಣಮಟ್ಟದ ಬೇಳೆ
ಇಂತಹ ಪರಿಸ್ಥಿಯಲ್ಲಿ ಯಾದಗಿರಿ ತಾಲೂಕಿನ ಅಶೋಕ್ ನಗರದ ತಾಂಡದ ಯುವ ರೈತ ಮಲ್ಲಿಕಾರ್ಜುನ ತೋಟಗಾರಿಕೆ ಬೆಳೆಯನ್ನ ಬೆಳೆದು ಎಲ್ಲಾ ರೈತರಿಗೆ ಮಾದರಿಯಾಗಿದ್ದಾರೆ. 20 ಸಾವಿರ ರೂ ಕೊಟ್ಟು ಮೂರುವರೆ ಎಕರೆ ಜಮೀನು ಲೀಸ್ ಗೆ ಪಡೆದು ಕಲ್ಲಂಗಡಿ ಬೆಳೆಯನ್ನ ಬೆಳೆದು ಲಕ್ಷಾಂತರ ರೂ. ಲಾಭ ಗಳಿಸಿದ್ದಾರೆ. ಕೇವಲ ಎರಡು ತಿಂಗಳಲ್ಲೇ 20 ಲಕ್ಷ ರೂ ಲಾಭ ಪಡೆದು ಸಾಧನೆ ಮಾಡಿದ್ದಾರೆ.

ಇನ್ನು ರೈತ ಮಲ್ಲಿಕಾರ್ಜುನ ಬೋರವೆಲ್ ನೀರು ಸೇರಿದಂತೆ ಜಮೀನಿನಲ್ಲಿ ಯಾವುದೇ ನೀರು ಇಲ್ಲದ ಜಮೀನು ಲೀಸ್ ಪಡೆದಿದ್ದರು. ಮೂರುವರೆ ಎಕರೆಯಲ್ಲಿ ಹೇಗಾದರೂ ಮಾಡಿ ತೋಟಗಾರಿಕೆ ಬೆಳೆಯನ್ನ ಬೆಳೆಯಬೇಕು ಎಂದು ನಿರ್ಧರಿಸಿ ಕಲ್ಲಂಗಡಿ ಬೆಳೆಯೋಕೆ ಪ್ಲಾನ್ ಮಾಡಿದ್ದರು. ಜಮೀನಿನಲ್ಲಿ ನೀರು ಇಲ್ಲದ ಕಾರಣಕ್ಕೆ ಇದು ಅಸಾಧ್ಯವಾಗಿತ್ತು. ಆದರೆ ಪಕ್ಕದ ಜಮೀನಿನಲ್ಲಿರುವ ಬೋರವೆಲ್ ನೀರು ಬಾಡಿಗೆಗೆ ಪಡೆದು ಕಲ್ಲಂಗಡಿ ಬೆಳೆದಿದ್ದಾರೆ.
ಕೊಪ್ಪಳದಿಂದ ಕಲ್ಲಂಗಡಿ ಬೆಳೆಯ ಮೆಲೊಡಿ ತಳಿಯ ಸಸಿಗಳನ್ನ ತಂದು ಹಾಕಿದ್ದಾರೆ. ಜೊತೆಗೆ ತೋಟಗಾರಿಕೆ ಇಲಾಖೆಯ ಯಾವುದೇ ಸಹಾಯವಿಲ್ಲದೆ ತಾವೇ ಸ್ವಂತ ದುಡ್ಡು ಖರ್ಚು ಮಾಡಿ ಸ್ಪಿಂಕ್ಲರ್ ಪೈಪ್ಗಳನ್ನ ತಂದು ಅಳವಡಿಕೆ ಮಾಡಿದ್ದಾರೆ. ಬಳಿಕ ಇಡೀ ಕುಟುಂಬಸ್ಥರೊಂದಿಗೆ ಜಮೀನಿನಲ್ಲಿ ದುಡಿದ ಕಾರಣ ಎರಡೇ ತಿಂಗಳಲ್ಲಿ ಭರ್ಜರಿ ಬೆಳೆ ಕೈಗೆ ಬಂದಿದೆ.
ಬರೋಬರಿ 16 ಲಕ್ಷ ರೂ ಲಾಭ
ಮೊದಲ ಫಸಲು 22 ಟನ್ ಬಂದಿದ್ದು, ಸುಮಾರು 22 ರೂ. ಕೆಜಿ ಮಾರಾಟ ಮಾಡಿ ಸುಮಾರು 15 ಲಕ್ಷ ರೂ ಲಾಭ ಗಳಿಸಿದ್ದಾರೆ. ಇನ್ನು ಎರಡನೇ ಕಟಾವು 12 ಟನ್ ಬಂದಿದ್ದು ಸ್ವಲ್ಪ ಬೆಲೆ ಕಡಿಮೆ ಸಿಕ್ಕ ಕಾರಣಕ್ಕೆ 4 ಲಕ್ಷ ರೂ ಲಾಭ ಸಿಕ್ಕಿದೆ. ಕೊನೆಯ ಕಾಟಾವಿನಿಂದ ಸುಮಾರು ಒಂದು ಲಕ್ಷಕ್ಕೂ ಅಧಿಕ ಲಾಭ ಸಿಕ್ಕಿದೆ. ಈ ಬೆಳೆಯನ್ನ ಬೆಳೆಯೋಕೆ ಸುಮಾರು 4 ಲಕ್ಷ ರೂ ಖರ್ಚು ಮಾಡಿದ್ದು, ಖರ್ಚು ತೆಗೆದು ಬರೋಬರಿ 16 ಲಕ್ಷ ರೂ ಮಲ್ಲಿಕಾರ್ಜುನ ಅವರಿಗೆ ಲಾಭವಾಗಿದೆ. ಕೇವಲ ಎರಡೇ ತಿಂಗಳಲ್ಲಿ ಇಷ್ಟು ಲಾಭ ಆಗಿದ್ದಕ್ಕೆ ತಾಂಡದ ನಿವಾಸಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮೈಲಾರಲಿಂಗನಿಗೆ ಬಲಿ ಕೊಡಲು ತಂದಿದ್ದ ಕುರಿಮರಿಗಳನ್ನ ವಶಕ್ಕೆ ಪಡೆದು ಮಾರಾಟ ಮಾಡಿದ ಅಧಿಕಾರಿಗಳು
ಒಟ್ಟಿನಲ್ಲಿ ಯುವ ರೈತ ಮಲ್ಲಿಕಾರ್ಜುನ ಕೇವಲ ಮೂರುವರೆ ಎಕರೆ ಜಮೀನಿನಲ್ಲಿ ಖರ್ಚು ತೆಗೆದು ಬರೋಬರಿ 16 ಲಕ್ಷ ರೂ ಲಾಭ ಪಡೆದಿದ್ದು ಸಾಂಪ್ರದಾಯಿಕ ಬೆಳೆಯನ್ನ ಬೆಳೆದು ನಷ್ಟ ಅನುಭವಿಸುವ ರೈತರಿಗೆ ಮಾದರಿಯಾಗಿದ್ದಾರೆ. ಹೀಗಾಗಿ ರೈತರು ತೋಟಗಾರಿಕೆ ಇಲಾಖೆಯಿಂದ ಸವಲತ್ತು ಪಡೆದು ಈ ರೀತಿಯ ಬೆಳೆಗಳನ್ನ ಬೆಳೆದು ಲಾಭ ಪಡೆಯಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:21 pm, Sun, 1 February 26