AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಡವರ ಬಾದಾಮಿ ಬೆಳೆದ ರೈತರಿಗೀಗ ಸಂಕಷ್ಟ: ದಲ್ಲಾಳಿ-ಕಮಿಷನ್ ಏಜೆಂಟ್ ಮೋಸದಿಂದ ಕಂಗಾಲು

ಯಾದಗಿರಿ ಜಿಲ್ಲೆಯ ರೈತರು ಶೇಂಗಾ ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ವಿಂಟಾಲ್‌ಗೆ 12 ಸಾವಿರವಿದ್ದ ದರ 4-6 ಸಾವಿರಕ್ಕೆ ಕುಸಿದಿದೆ. ಎಪಿಎಂಸಿ ದಲ್ಲಾಳಿಗಳು ಮತ್ತು ಕಮಿಷನ್ ಏಜೆಂಟರು ಹೊರಗಿನ ವ್ಯಾಪಾರಿಗಳನ್ನು ಹಿಂತಿರುಗಿಸಿ ರೈತರಿಗೆ ಮೋಸ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ರೈತರು ರಾಜ್ಯ ಹೆದ್ದಾರಿ ಬಂದ್ ಮಾಡಿ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದಾರೆ.

ಬಡವರ ಬಾದಾಮಿ ಬೆಳೆದ ರೈತರಿಗೀಗ ಸಂಕಷ್ಟ: ದಲ್ಲಾಳಿ-ಕಮಿಷನ್ ಏಜೆಂಟ್ ಮೋಸದಿಂದ ಕಂಗಾಲು
ಶೇಂಗಾ, ರೈತರ ಪ್ರಭಟನೆImage Credit source: tv9 kannada
ಅಮೀನ್​ ಸಾಬ್​
| Edited By: |

Updated on: Feb 06, 2026 | 8:22 PM

Share

ಯಾದಗಿರಿ, ಫೆಬ್ರವರಿ 06: ರೈತ ದೇಶದ ಬೆನ್ನೆಲಬು ಅಂತಾರೆ, ಆದರೆ ರೈತರು ಬೆಳೆಗೆ ಸರಿಯಾದ ಬೆಲೆ ಸಿಗುವುದಿಲ್ಲ. ಇದೆ ಕಾರಣಕ್ಕೆ ರೈತರು ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತೆ. ಏಕೆಂದರೆ ಯಾದಗಿರಿ ಜಿಲ್ಲೆಯ ರೈತರು ಸಾವಿರಾರು ರೂ. ಖರ್ಚು ಮಾಡಿ ಕಷ್ಟ ಪಟ್ಟು ಶೇಂಗಾ (Groundnut) ಬೆಳೆಯನ್ನ ಬೆಳೆದರೆ ಸರಿಯಾದ ಬೆಲೆ ಸಿಗುತ್ತಿಲ್ಲ. ದಲ್ಲಾಳಿ ಹಾಗೂ ಕಮಿಷನ್ ಏಜೆಂಟ್​ಗಳ ಮೋಸಕ್ಕೆ ಕಂಗಲಾಗಿ ಹೋಗಿದ್ದಾರೆ. ಹೀಗಾಗಿ ಕೊನೆಗೂ ರೊಚ್ಚಿಗೆದ್ದ ರೈತರು ಸರ್ಕಾರ ಹಾಗೂ ಕಮಿಷನ್ ಏಜೆಂಟ್​ಗಳ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.

ಯಾದಗಿರಿ ನಗರದ ಎಪಿಎಂಸಿ ಮುಂದೆ ಇಂದು ರೈತರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ ಬಂದ್ ಮಾಡುವ ಮೂಲಕ ತಮಗೆ ಆಗುತ್ತಿರುವ ಅನ್ಯಾಯವನ್ನ ತೋಡಿಕೊಂಡಿದ್ದಾರೆ. ರೈತರು ಈ ರೀತಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡುವುದಕ್ಕೆ ಕಾರಣವೇ ಶೇಂಗಾ ಬೆಳೆಯ ದರ ಕುಸಿತ.

ಕ್ವಿಂಟಲ್​ಗೆ ಕೇವಲ 4 ರಿಂದ 6 ಸಾವಿರ ರೂ

ಜಿಲ್ಲೆಯಲ್ಲಿ ಸದ್ಯ ಶೇಂಗಾ ಬೆಳೆಯ ರಾಶಿ ನಡೆಯುತ್ತಿದೆ. ಹೀಗಾಗಿ ರೈತರು ತಾವು ಬೆಳೆದ ಸಾವಿರಾರು ಕ್ವಿಂಟಲ್ ಶೇಂಗಾ ಬೆಳೆಯನ್ನ ನಗರದ ಕೃಷಿ ಮಾರುಕಟ್ಟೆ ತೆಗೆದುಕೊಂಡು ಬರುತ್ತಿದ್ದಾರೆ. ಆದರೆ ಶೇಂಗಾ ಮಾರಾಟಕ್ಕೆ ಮುಂದಾದ ರೈತರಿಗೆ ಶಾಕ್ ಎದುರಾಗಿದೆ. ಏಕೆಂದರೆ ಕಳೆದ ಕೆಲ ದಿನಗಳಿಂದ ದಿಢೀರ್ ಶೇಂಗಾ ಬೆಳೆಯ ದರ ಕುಸಿತವಾಗಿದೆ. ಕ್ವಿಂಟಲ್​ಗೆ 12 ಸಾವಿರಕ್ಕೆ ಮಾರಾಟವಾಗುತ್ತಿದ್ದ ಬೆಳೆ ಈಗ ಏಕಾಏಕಿ ಕ್ವಿಂಟಲ್​ಗೆ ಕೇವಲ 4 ರಿಂದ 6 ಸಾವಿರಕ್ಕೆ ಮಾರಾಟವಾಗುತ್ತಿದೆ. ಇದು ರೈತರಿಗೆ ಶಾಕ್ ಕೊಟ್ಟಿದೆ. ಕಷ್ಟಪಟ್ಟು ಸಾವಿರಾರು ರೂ. ಖರ್ಚು ‌ಮಾಡಿ ಬೆಳೆ ತಂದು ಮಾರಾಟ ಮಾಡಲು ಬಂದರೆ ಬೆಳೆಗೆ ಬೆಲೆನೇ ಕೊಡ್ತಾಯಿಲ್ಲ. ಹೀಗಾಗಿ ನಾವೆಲ್ಲಾ ವಿಷ ಕುಡಿದು ಸಾಯುವುದು ಒಂದೇ ಉಳಿದಿದೆ ಅಂತ ರೈತ ಮಲ್ಲಿಕಾರ್ಜುನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬರದ ನಾಡಲ್ಲಿ ಬಂಗಾರದ ಬೆಳೆ ಬೆಳೆದ ಯುವ ರೈತ: ಮೂರುವರೆ ಎಕರೆ ಜಮೀನಿನಲ್ಲಿ ಲಕ್ಷಾಂತರ ರೂ ಲಾಭ

ಇನ್ನು ರೈತರು ಕಳೆದ ಮೂರು ತಿಂಗಳ ಹಿಂದೆ ಶೇಂಗಾ ಬೆಳೆಯನ್ನ ಬೆಳೆಯುವುದಕ್ಕೆ ಇದೆ ಎಪಿಎಂಸಿಯ ಕಮಿಷನ್ ಏಜೆಂಟ್​ಗಳಿಂದ ಕ್ವಿಂಟಲ್​ಗೆ 12 ಸಾವಿರ ರೂ. ಕೊಟ್ಟು ಶೇಂಗಾ ಬೀಜವನ್ನ ಖರೀದಿ ಮಾಡಿದ್ದರು. ಆದರೆ ಅದೇ ರೈತರು ಬೆಳೆದ ಶೇಂಗಾ ಬೆಳೆಯನ್ನ ಮಾರಾಟ ಮಾಡಲು ಬಂದರೆ ದಿಢೀರ್ ದರವನ್ನ ಇಳಿಸಲಾಗಿದೆ.

ಏಜೆಂಟ್​ರಿಂದ ರೈತರಿಗೆ ಮೋಸ

ಬೇರೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಶೇಂಗಾ ಖರೀದಿ ಮಾಡುವುದಕ್ಕೆ ವ್ಯಾಪಾರಸ್ಥರು ಬಂದಿದ್ದರೂ, ಇದೆ ಎಪಿಎಂಸಿ ಯಾರ್ಡ್​ನ ವರ್ತಕರು ಹಾಗೂ ಕಮಿಷನ್ ಏಜೆಂಟ್​ಗಳು ಬೇರೆ ಕಡೆಯಿಂದ ಬಂದಿದ್ದ ವ್ಯಾಪಾರಸ್ಥರನ್ನ ವಾಪಸ್ ಕಳುಹಿಸುವ ಕೆಲಸ ಮಾಡಿದ್ದಾರೆ. ಏಕೆಂದರೆ ಹೊರಗಿನಿಂದ ಬಂದಿದ್ದ ವ್ಯಾಪಾರಸ್ಥರು ಕ್ವಿಂಟಲ್​ಗೆ 11 ರಿಂದ 13 ಸಾವಿರ ರೂ ಕೊಟ್ಟು ಖರೀದಿ ಮಾಡಲು ಮುಂದಾಗಿದ್ದರು. ಇದು ಸ್ಥಳೀಯ ಕಮಿಷನ್ ಏಜೆಂಟ್​ಗಳಿಗೆ ಹೊಡೆತ ಬೀಳುತ್ತೆ ಎನ್ನುವ ಕಾರಣಕ್ಕೆ ಖರೀದಿ ಮಾಡಲು ಬಿಡದೆ ವಾಪಸ್ ಕಳುಹಿಸಿದ್ದಾರೆ. ಆ ಮೂಲಕ ರೈತರಿಗೆ ಮೋಸ ಮಾಡಿದ್ದಾರೆ.

ಹೊರಗಿನಿಂದ ಬಂದ ವ್ಯಾಪಾರಸ್ಥರು ಹೆಚ್ಚಿನ ದರಕ್ಕೆ ಖರೀದಿ ಮಾಡಿದರೆ ರೈತರಿಗೆ ಲಾಭವಾಗುತ್ತಿತ್ತಿ. ಆದರೆ ಸ್ಥಳೀಯ ಏಜೆಂಟ್​ಗಳಿಂದ ದೋಖಾ ಆಗಿದೆ. ಇದೆ ಕಾರಣಕ್ಕೆ ಇಂದು ಎಪಿಎಂಸಿ ಮುಂದೆ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಸಂಘಟನೆ ನೇತೃತ್ವದಲ್ಲಿ ನೂರಾರು ರೈತರು ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ್ದಾರೆ. ರೈತರ ಪ್ರತಿಭಟನೆಯಿಂದ ಎರಡು ಗಂಟೆ ಕಿ.ಮೀ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಇದನ್ನೂ ಓದಿ: ಮೈಲಾರಲಿಂಗನಿಗೆ ಬಲಿ ಕೊಡಲು ತಂದಿದ್ದ ಕುರಿಮರಿಗಳನ್ನ ವಶಕ್ಕೆ ಪಡೆದು ಮಾರಾಟ ಮಾಡಿದ ಅಧಿಕಾರಿಗಳು

ಒಟ್ಟಿನಲ್ಲಿ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದಂತಾಗಿದೆ. ಮೊದಲೇ ಪ್ರವಾಹದಿಂದ ಮುಂಗಾರು ಬೆಳೆ ಕಳೆದುಕೊಂಡು ಕಂಗಲಾದ ಅನ್ನದಾರಿಗೆ ಹಿಂಗಾರು ಬೆಳೆಯಾಗಿ ಶೇಂಗಾ ಬೆಳೆ ಕೈಹಿಡಿದಿತ್ತು. ಆದರೆ ಈಗ ದಿಢೀರ್ ದರ ಕುಸಿತ ಆಗಿದ್ದಕ್ಕೆ ರೈತರು ಕಂಗಲಾಗುವಂತೆ ಮಾಡಿದೆ. ಹೀಗಾಗಿ ಅಧಿಕಾರಿಗಳು ಹಾಗೂ ಸರ್ಕಾರ ಮಧ್ಯಪ್ರವೇಶಿಸುವಂತೆ ಒತ್ತಾಯಿಸಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us