ಬಿಜೆಪಿ-ಜೆಡಿಎಸ್​​ ಮೈತ್ರಿ ಹಿಂದಿನ ಉದ್ದೇಶ ಬಹಿರಂಗಪಡಿಸಿದ ಮಾಜಿ ಸಚಿವ CP ಯೋಗೇಶ್ವರ್

| Updated By: ಗಂಗಾಧರ​ ಬ. ಸಾಬೋಜಿ

Updated on: Oct 08, 2023 | 3:04 PM

ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಎರಡು ಪಕ್ಷಗಳು ಕಾಂಗ್ರೆಸ್ ವಿರುದ್ದವಾಗಿ ಹೋರಾಟ ಮಾಡುತ್ತಿವೆ. ಹಾಗಾಗಿ ಮುಂದಿನ ಲೋಕಸಭಾ ಚುನಾವಣಾ ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ನಾಯಕರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಸಿಪಿ ಯೋಗೇಶ್ವರ್ ಹೇಳಿದ್ದಾರೆ.

ಬಿಜೆಪಿ-ಜೆಡಿಎಸ್​​ ಮೈತ್ರಿ ಹಿಂದಿನ ಉದ್ದೇಶ ಬಹಿರಂಗಪಡಿಸಿದ ಮಾಜಿ ಸಚಿವ CP ಯೋಗೇಶ್ವರ್
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್
Follow us on

ರಾಮನಗರ, ಅಕ್ಟೋಬರ್​​​ 08: ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಎರಡು ಪಕ್ಷಗಳು ಕಾಂಗ್ರೆಸ್ ವಿರುದ್ದವಾಗಿ ಹೋರಾಟ ಮಾಡುತ್ತಿವೆ. ಹಾಗಾಗಿ ಮುಂದಿನ ಲೋಕಸಭಾ ಚುನಾವಣಾ ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ನಾಯಕರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಸಿಪಿ ಯೋಗೇಶ್ವರ್ (CP Yogeshwar) ಹೇಳಿದ್ದಾರೆ. ಚನ್ನಪಟ್ಟಣ ತಾಲ್ಲೂಕು ಬಿಜೆಪಿ ಮುಖಂಡರ ಸಭೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈತ್ರಿ ವಿಚಾರವಾಗಿ ಜಿಲ್ಲೆ ಬಹಳ ವಿರೋಧ ಇದ್ದ ಕ್ಷೇತ್ರ. ನಾವು, ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ನೇರಾ ನೇರವಾಗಿ ಪರಸ್ಪರ ವಿರೋಧವಾಗಿ ರಾಜಕೀಯ ಮಾಡಿಕೊಂಡು ಬಂದಿದ್ದೆವು. ಹೊಂದಾಣಿಕೆ ಎನ್ನುವುದು ತಾಳ್ಮೆಯಿಂದ ಪರಸ್ಪರ ಒಂದಾಗಿ ಎಲ್ಲರ ಮನಸ್ಸನ್ನು ಒಗ್ಗೂಡಿಸುವುದು ಎಂದು ಹೇಳಿದ್ದಾರೆ.

ಇಂದು ಪಕ್ಷದ ಕಾರ್ಯಕರ್ತರ, ಮುಖಂಡರ ಸಭೆ ಕರೆಯಲಾಗಿದೆ. ಸಭೆಯಲ್ಲಿ ನಮ್ಮ ರಾಷ್ಟೀಯ ನಾಯಕರು ತೆಗೆದುಕೊಂಡಿರುವ ನಿರ್ಧಾರವನ್ನು ತಿಳಿಸಲಾಗುವುದು. ಮೈತ್ರಿಯ ಅನಿವಾರ್ಯತೆ ಏನೆಂಬುದು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಬೂತ್ ಮಟ್ಟದಲ್ಲಿ ಎರಡು ಪಕ್ಷದವರನ್ನು ಒಗ್ಗೂಡಿಸಿ ಒಂದಾಗಿ ಕೆಲಸ ಮಾಡಬೇಕಾಗಿದೆ ಎಂದರು.

ಇದನ್ನೂ ಓದಿ: ಬಿಜೆಪಿ, ಜೆಡಿಎಸ್ ಮೈತ್ರಿ: ಕಲಬುರಗಿಯಲ್ಲಿ JDS ಮುಸ್ಲಿಂ ಮುಖಂಡರು, ಕಾರ್ಯಕರ್ತರ ಸಭೆ ಅಂತ್ಯ

ಜೆಡಿಎಸ್ ಜೊತೆ ಫೈಟ್ ಕಾರ್ಯಕರ್ತರು ಒಪ್ಪುತ್ತಾರಾ ಎಂಬ ವಿಚಾರವಾಗಿ ಮಾತನಾಡಿ, ನೂರಕ್ಕೆ ನೂರು ಪರ್ಸೆಂಟ್ ಕಾರ್ಯಕರ್ತರು ಒಪ್ಪಿದ್ದಾರೆ. ನಮ್ಮ ಹಾಗೂ ಜೆಡಿಎಸ್​ನ ಲಾಭವನ್ನು ಕಾಂಗ್ರೆಸ್​ ಪಡೆದುಕೊಂಡಿದೆ. ಕಳೆದ‌ ಎಂಎಲ್​ಎ ಚುನಾವಣೆಯಲ್ಲೂ ಕಾಂಗ್ರೆಸ್​ಗೆ ಲಾಭವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಆ ತಪ್ಪು ಆಗಬಾರದು. ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡಬೇಕಾಗಿದೆ. ಹಾಗಾಗಿ ಹೊಂದಾಣಿಕೆ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವೈಯಕ್ತಿಕವಾಗಿ ಬಿಜೆಪಿ, ಜೆಡಿಎಸ್​​ ಮೈತ್ರಿಗೆ ನನ್ನ ಸಹಮತ ಇಲ್ಲ: ಶಾಸಕ ಎಸ್​​ಟಿ ಸೋಮಶೇಖರ್

ಮೈತ್ರಿ ನಂತರ ಹೆವ್​ಡಿ ಕುಮಾರಸ್ವಾಮಿ ಭೇಟಿ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಮೈತ್ರಿ ನಂತರ ವೈಯಕ್ತಿಕವಾಗಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿಲ್ಲ. ಒಂದು ಸಲ ಪೋನ್​ನಲ್ಲಿ ಮಾತಾಡಿದ್ದೇನೆ ಎಂದು ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಸ್ಪರ್ಧೆ ಅಭ್ಯರ್ಥಿ ವಿಚಾರವಾಗಿ ಮಾತನಾಡಿ, ಯಾವ ಪಕ್ಷದ ಅಭ್ಯರ್ಥಿ ಸ್ಪರ್ಧೆ ಮಾಡಬೇಕು ಎಂದು ಎರಡು ಪಕ್ಷದ ನಾಯಕರು ಚರ್ಚೆ ಮಾಡುತ್ತಾರೆ. ಪಕ್ಷ ತೀರ್ಮಾನ ಮಾಡಿದರೆ ಸ್ಪರ್ಧೆ ಮಾಡುತ್ತೇನೆ. ಕಾಂಗ್ರೆಸ್​ ಪಕ್ಷದ ಅಭ್ಯರ್ಥಿಯನ್ನು ಸೋಲಿಸುವುದೇ ನಮ್ಮ ಕೆಲಸ. ಸಂಸದ ಡಿಕೆ ಸುರೇಶ್ ದರ್ಪದಿಂದ ಜನ ಬೇಸತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ- ಜೆಡಿಎಸ್​ಗೆ ತನ್ನದೇ ಆದ ಮತಗಳಿವೆ. ಎರಡು ಪಕ್ಷದ ಅಭ್ಯರ್ಥಿಗಳು ಒಟ್ಟಾಗಿ ಕೆಲಸ ಮಾಡಿದರೆ ಚುನಾವಣೆ ಒಂದು ಸೈಡ್ ಆಗುತ್ತೆ. ಬಿಜೆಪಿ ಅಭ್ಯರ್ಥಿ ಸ್ಪರ್ಧೆ ಮಾಡಿದರೆ ಗೆಲುವು ಖಚಿತ ಎಂದು ಹೇಳಿದ್ದಾರೆ.

ಶಾಸಕ ಎಸ್​.ಟಿ.ಸೋಮಶೇಖರ್ ಬಿಜೆಪಿಯಲ್ಲಿ ದೊಡ್ಡ ಫಲಾನುಭವಿ

ಬಿಜೆಪಿ-ಜೆಡಿಎಸ್ ಮೈತ್ರಿಗೆ ಶಾಸಕ ಎಸ್.ಟಿ.ಸೋಮಶೇಖರ್ ವಿರೋಧ ವಿಚಾರವಾಗಿ ಮಾತನಾಡಿ, ಎಸ್.ಟಿ.ಸೋಮಶೇಖರ್ ಬಿಜೆಪಿಯಲ್ಲಿ ದೊಡ್ಡ ಫಲಾನುಭವಿ. ಬಿಜೆಪಿಗೆ ಬಂದ ಮೇಲೆ ಬಿಡಿಎ ಅಧ್ಯಕ್ಷ ಆದರು. ಮಂತ್ರಿ ಆಗಿ ಪ್ರಬಲ ಖಾತೆ ಪಡೆದ್ರು, ಅಧಿಕಾರ ಅನುಭವಿಸಿದ್ರು. ಇವತ್ತು ಅಧಿಕಾರ ಇಲ್ಲ ಅಂತ ಹೀಗೆ ಮಾತನಾಡುತ್ತಾರೆ. ಡಿಕೆ ಶಿವಕುಮಾರ್​ ಜೊತೆಗಿನ ಸಂಬಂಧ ಇಟ್ಕೊಂಡು ನಮ್ಮ ಪಕ್ಷವನ್ನ ಟೀಕಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮೈತ್ರಿ ವಿಚಾರ ಚರ್ಚೆಗೂ ಮೊದಲೂ ಟೀಕೆ ಮಾಡುತ್ತಿದ್ದರು. ಈಗಲೂ ಟೀಕೆ ಮಾಡ್ತಿದ್ದಾರೆ. ಬಹುಶಃ ಎಂಎಲ್ಎ ಸ್ಥಾನಕ್ಕೆ ರಾಜಿನಾಮೆ ಕೊಟ್ಟರೆ ಮಾಜಿ ಶಾಸಕ ಆಗಬಹುದು ಇನ್ನೇನು ಆಗಲು ಸಾಧ್ಯವಿಲ್ಲ. ಒಂದುವೇಳೆ ಹೊರಹೋಗುವ ತೀರ್ಮಾನ ಮಾಡಿದ್ರೆ ನಮ್ಮ ವಿರೋಧ ಇಲ್ಲ, ಸ್ವಾಗತಿಸುತ್ತೇವೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:03 pm, Sun, 8 October 23