AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಜಾಬ್ ಕುರಿತ ನನ್ನ ಹೇಳಿಕೆ ತಿರುಚಲಾಗಿದೆ: ಚನ್ನಪಟ್ಟಣದಲ್ಲಿ ಎಚ್​ಡಿ ಕುಮಾರಸ್ವಾಮಿ ಸ್ಪಷ್ಟನೆ

ಜೆಡಿಎಸ್​ ಪಕ್ಷವನ್ನು ಯಾರು ಎಷ್ಟೇ ನಿರ್ಮಾಮ ಮಾಡಿದರೂ ಅದು ಪುಟಿದೇಳಲಿದೆ. ಬಿಜೆಪಿ ಜೊತೆಗೆ ಜೆಡಿಎಸ್​ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಎಚ್​ಡಿ ಕುಮಾರಸ್ವಾಮಿ ಹೇಳಿದರು.

ಹಿಜಾಬ್ ಕುರಿತ ನನ್ನ ಹೇಳಿಕೆ ತಿರುಚಲಾಗಿದೆ: ಚನ್ನಪಟ್ಟಣದಲ್ಲಿ ಎಚ್​ಡಿ ಕುಮಾರಸ್ವಾಮಿ ಸ್ಪಷ್ಟನೆ
ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Feb 19, 2022 | 4:26 PM

Share

ರಾಮನಗರ: ಹಿಜಾಬ್ ವಿವಾದ ಕುರಿತು ಮಂಡ್ಯದಲ್ಲಿ ನೀಡಿದ್ದ ನನ್ನ ಹೇಳಿಕೆಯನ್ನು ಬೇಕಾದಂತೆ ತಿರುಚಲಾಗಿದೆ. ನಾನು ಯಾವುದೇ ಧರ್ಮ ಅಥವಾ ಸಮುದಾಯಕ್ಕೆ ಅಪಚಾರ ಎಸಗಿಲ್ಲ. ಹಿಜಾಬ್ (Hijab)​ ಬಗ್ಗೆ ಕೇಳಿದಾಗ ತೀರಾ ಸಹಜವಾಗಿ ಎನ್ನುವಂತೆ ಹಿಜಾಬ್-ಗಿಜಾಬ್ ಎಂದಿದ್ದೆ. ಅದು ನಮ್ಮ ಪದಬಳಕೆಯ ಮಾದರಿ. ಅದರಲ್ಲಿ ಯಾವುದೇ ಮರೆಮಾಚಿದ ಅರ್ಥ ಇಲ್ಲ. ಮಕ್ಕಳ ಜೀವದ ಜೊತೆಗೆ ಚೆಲ್ಲಾಟ ಆಡಬೇಡಿ ಎಂದು ಚನ್ನಪಟ್ಟಣ ತಾಲ್ಲೂಕು ತಗಚಗೆರೆ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದರು. 2023ರಲ್ಲಿ ಜೆಡಿಎಸ್ (JDS) ಅಧಿಕಾರಕ್ಕೆ ಬರಲಿದೆ ಎನ್ನುವುದು ನನ್ನ ವಿಶ್ವಾಸ. ಜೆಡಿಎಸ್​ ಪಕ್ಷವನ್ನು ಯಾರು ಎಷ್ಟೇ ನಿರ್ಮಾಮ ಮಾಡಿದರೂ ಅದು ಪುಟಿದೇಳಲಿದೆ. ಬಿಜೆಪಿ ಜೊತೆಗೆ ಜೆಡಿಎಸ್​ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ರಾತ್ರಿ ಕಂಡ ಬಾವಿಗೆ ಹಗಲು ಬೀಳಲು ಸಾಧ್ಯವೇ? ಕಾಂಗ್ರೆಸ್ ಅಲೆ ರಾಜ್ಯದಲ್ಲಿ ಇಲ್ಲ. ಅವರು ಗೆದ್ದರೆ 70ರಿಂದ 80 ಸ್ಥಾನಗಳನ್ನು ಗೆಲ್ಲಬಹುದು ಅಷ್ಟೇ. ನಮ್ಮ ಶಾಸಕರಲ್ಲಿ ಯಾರು ಏನು ಮಾಡುತ್ತಿದ್ದಾರೆ, ಡಬಲ್ ಗೇಮ್ ಯಾರದು? ಯಾರು ಹೊರಗೆ ಹೋಗುತ್ತಾರೆ ಎಂಬುದು ಗೊತ್ತಿದೆ. ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ ಎಂದು ತಿಳಿಸಿದರು.

ಜೆಡಿಎಸ್ ಎಲ್ಲಿದೆ ಎಂದು ಕೇಳುವ ನಾಯಕರಿಗೆ ನಾಡಿನ ಜನತೆ ಮತದಾನದ ಮೂಲಕ ಉತ್ತರ ನೀಡುತ್ತಾರೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇವೇಗೌಡರ ಮೇಲೆ ವಿಶ್ವಾಸ ಇದೆ. ಆದರೆ ಇದು ರಾಜಕೀಯ ಸಂಬಂಧ ಅಲ್ಲ. ನಾವು ಎಂದಿಗೂ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಮೇಕೆದಾಟು ಯೋಜನೆಗೆ ಒತ್ತಾಯಿಸಿ ಫೆಬ್ರುವರಿ 27ರಿಂದ ಪಾದಯಾತ್ರೆ ನಡೆಸಲು ಮತ್ತು ಆ ಮೂಲಕ ಅಧಿಕಾರ ಹಿಡಿಯಲು ಹೊರಟಿದ್ದಾರೆ. ನನ್ನನ್ನು ನನ್ನ ಕರ್ಮಭೂಮಿ ರಾಮನಗರದಿಂದ ತಳ್ಳಬೇಕು ಎಂಬ ಯೋಚನೆಯಲ್ಲಿದ್ದಾರೆ. ಜನರ ಪ್ರೀತಿ ಇರುವವರೆಗೂ ನನ್ನನ್ನು ಯಾರೂ ಅಲುಗಾಡಿಸಲು ಆಗುವುದಿಲ್ಲ. ಇವರು ಇನ್ನೂ ಹತ್ತು ಪಾದಯಾತ್ರೆ ಬೇಕಾದರೂ ಮಾಡಲಿ. ದಿನವೂ ಬಿರಿಯಾನಿ ಊಟ, ಬಾಳೆಕಾಯಿ ಬಜ್ಜಿ, ಜ್ಯೂಸ್ ಸೇವನೆಗೆ ವ್ಯವಸ್ಥೆ ಇದ್ದರೆ ಅದು ಹಕ್ಕೊತ್ತಾಯದ ಪಾದಯಾತ್ರೆಯೇ? ಇದನ್ನು ಪ್ರತಿಭಟನೆ ಎನ್ನಬೇಕೆ ಎಂದು ಪ್ರಶ್ನಿಸಿದರು.

ಕರ್ನಾಟಕದ ಎಷ್ಟೋ ಯೋಜನೆಗಳು ಅರ್ಧಕ್ಕೆ ನಿಂತಿವೆ. ಪ್ರತಿವರ್ಷ 8 ಸಾವಿರ ಕೋಟಿ ರೂಪಾಯಿಯನ್ನು ನೀರಾವರಿಗೆಂದು ಮೀಸಲು ಇಡುತ್ತಾರೆ. ಆದರೆ ಈ ಹಣದಲ್ಲಿ ಅರ್ಧದಷ್ಟು ಗುತ್ತಿಗೆದಾರ ಜೇಬಿಗೆ ಇನ್ನರ್ಧ ಹಣ ಇವರ ಜೇಬಿಗೆ ಹೋಗುತ್ತದೆ ಎಂದು ಟೀಕಿಸಿದರು.

ರಾಷ್ಟ್ರಧ್ವಜದ ವಿಚಾರವನ್ನು ಇವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ದೇಶವನ್ನೇ ಲೂಟಿ ಮಾಡಿ ಕುಳಿತಿರುವವರು ರಾಷ್ಟ್ರಧ್ವಜದ ಗೌರವ, ರಾಷ್ಟ್ರಭಕ್ತಿ ಉಳಿಸಿಕೊಳ್ಳುತ್ತಾರಾ? ಧರ್ಮಧರ್ಮಗಳ ಮಧ್ಯೆ ಇವರು ಸಂಘರ್ಷ ಬಿತ್ತುತ್ತಿದ್ದಾರೆ. ಹಿಂದೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕಾಂಗ್ರೆಸ್ ಈಗ ಸತ್ತು ಹೋಗಿದೆ. ಸ್ವಾತಂತ್ರ ಬರುವಾಗ ಇದ್ದ ಕಾಂಗ್ರೆಸ್ ಪಕ್ಷ ಇದಲ್ಲ. ಈ ಮಾತನ್ನು ಮಹಾತ್ಮಗಾಂಧಿ ಅವರೇ ಈ ಹಿಂದೆ ಹೇಳಿದ್ದರು ಎಂದು ನೆನಪಿಸಿಕೊಂಡರು. ರಾಷ್ಟ್ರಧ್ವಜದ ಬಗ್ಗೆ ಕುಮಾರಸ್ವಾಮಿಗೆ ಗೊತ್ತಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಈ ಮೂಲಕ ಪರೋಕ್ಷವಾಗಿ ಟಾಂಗ್ ಕೊಟ್ಟರು. ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿಧಾನಸಭೆಯಲ್ಲಿ ಈ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ರಾಷ್ಟ್ರಧ್ವಜದ ಬಗ್ಗೆ ಇವರೊಬ್ಬರೇ ಗೌರವ ಇಟ್ಟುಕೊಂಡಿಲ್ಲ. ಸದನದಿಂದ ಹೊರಬಂದು ಬೀದಿಯಲ್ಲಿ ಹೋರಾಟ ಮಾಡಲಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ: ಅಧಿವೇಶನದಲ್ಲಿ ಕುಸಿದ ಚರ್ಚೆಯ ಗುಣಮಟ್ಟ: ಜೆಡಿಎಸ್ ನಾಯಕರಾದ ದೇವೇಗೌಡ, ಕುಮಾರಸ್ವಾಮಿ ವಿಷಾದ

ಇದನ್ನೂ ಓದಿ: ವ್ಯವಹಾರಕ್ಕೆ ಸಂಬಂಧಿಸಿದಂತೆ ರೇವಣ್ಣ ಮತ್ತು ನನ್ನ ಕುಟುಂಬಗಳು ಬೇರೆ ಬೇರೆಯಾಗಿವೆ: ಹೆಚ್ ಡಿ ಕುಮಾರಸ್ವಾಮಿ