ಕನಕಪುರ ಸರ್ಕಾರಿ ಶಾಲೆಯಲ್ಲಿದೆಂತ ಸ್ಥಿತಿ, ಮಕ್ಕಳ ಕೈಯಿಂದಲೇ ಶಾಲೆ ಆವರಣದಲ್ಲಿ ಬಿದ್ದ ಬಿಯರ್ ಬಾಟಲ್, ಮಲ ಸ್ವಚ್ಛ ಕಾರ್ಯ

| Updated By: ಆಯೇಷಾ ಬಾನು

Updated on: Dec 13, 2023 | 12:10 PM

ಜ್ಞಾನ ದೇಗುಲವೆಂದರೆ ಕೈ ಮುಗಿದು ಒಳಗೆ ಹೋಗುವ ಮನಸ್ಥಿತಿ ಇರಬೇಕು. ಆದರೆ ಮುನೇಶ್ವರ ದೊಡ್ಡಿ ಶಾಲೆ ಕುಡುಕರ ಅಡ್ಡೆಯಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಬಿಯರ್ ಬಾಟಲಿಗಳನ್ನು ಎತ್ತಿ ಶಾಲೆ ಆವರಣವನ್ನು ಸ್ವಚ್ಛಗೊಳಿಸುವ ಸ್ಥಿತಿ ಇದೆ.

ರಾಮನಗರ, ಡಿ.12: ಒಂದು ಕಡೆ ಸರ್ಕಾರಿ ಶಾಲೆ (Government School) ಉಳಿಸಿ ಎಂಬ ಅಭಿಯಾನಗಳು ರಾಜ್ಯದೆಲ್ಲೆಡೆ ನಡೆಯುತ್ತಲೇ ಇವೆ. ಮತ್ತೊಂದೆಡೆ ಖಾಸಗಿ ಶಾಲೆಗಳು ಹೈಟೆಕ್ ಸೌಲಭ್ಯಗಳನ್ನು ನೀಡಿ ಪೋಷಕರನ್ನು ಸೆಳೆದು ಮಕ್ಕಳ ದಾಖಲಾತಿಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಇಂತದರ ನಡುವೆ ರಾಮನಗರ (Ramanagara) ಜಿಲ್ಲೆ ಕನಕಪುರ ತಾಲೂಕಿನ ಮುನೇಶ್ವರ ದೊಡ್ಡಿ ಶಾಲೆ ಸರಿಯಾದ ಸೌಲಭ್ಯವಿಲ್ಲದೆ ಸೊರಗುತ್ತಿದೆ. ಅದರಲ್ಲೂ ಈ ಶಾಲೆಯಲ್ಲಿ ಮಕ್ಕಳೇ (Students) ಶಾಲೆಯನ್ನು ಸ್ವಚ್ಛಗೊಳಿಸಬೇಕು. ಪಾಠಕ್ಕೂ ಮುನ್ನ ಶಾಲೆ ಆವರಣದಲ್ಲಿ ಬಿದ್ದ ಬಿಯರ್ ಬಾಟಲಿಗಳನ್ನು ಎತ್ತಿ ಸ್ವಚ್ಛಗೊಳಿಸಬೇಕು. ಈ ವಿಚಾರ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಜ್ಞಾನ ದೇಗುಲವೆಂದರೆ ಕೈ ಮುಗಿದು ಒಳಗೆ ಹೋಗುವ ಮನಸ್ಥಿತಿ ಇರಬೇಕು. ಆದರೆ ಮುನೇಶ್ವರ ದೊಡ್ಡಿ ಶಾಲೆ ಕುಡುಕರ ಅಡ್ಡೆಯಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಬಿಯರ್ ಬಾಟಲಿಗಳನ್ನು ಎತ್ತಿ ಶಾಲೆ ಆವರಣವನ್ನು ಸ್ವಚ್ಛಗೊಳಿಸುವ ಸ್ಥಿತಿ ಇದೆ.

ಇದನ್ನೂ ಓದಿ: ಬೀಡಾ ಅಂಗಡಿಯಲ್ಲಿ ಅಂಗನವಾಡಿ! ಇದು ಸೆಷನ್​​ನಲ್ಲಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತುರ್ತು ಗಮನಕ್ಕೆ…

ತರಗತಿಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದ ಮದ್ಯದ ಬಾಟಲ್, ಶೌಚ, ಕುಡುಕರು ಮಾಡಿದ ಗಲೀಜನೆಲ್ಲ ಬಾಜಿ ಸ್ವಚ್ಛಗೊಳಿಸಬೇಕು. ಶಾಲೆ ಗೇಟ್ ಹಾಕಿದ ಬಳಿಕ ರಾತ್ರಿ ವೇಳೆ ಶಾಲೆಗೆ ನುಗ್ಗುವ ಕುಡುಕರು ಶಾಲೆ ಆವರಣದಲ್ಲೇ ತಿಂದು, ಕುಡಿದು ಮಜಾ ಮಾಡಿ ಹೋಗುತ್ತಿದ್ದಾರೆ. ಕುಡುಕ ಕಿಡಗೇಡಿಗಳ ಕೃತ್ಯಕ್ಕೆ ಮಕ್ಕಳು ಶಿಕ್ಷೆ ಅನುಭವಿಸುತ್ತಿದ್ದಾರೆ. ಪ್ರತಿ ದಿನ ಶಾಲೆ ಬಂದ ತಕ್ಷಣವೇ ಬರಿಗೈಯಲ್ಲಿ ಆವರಣ ಕ್ಲೀನ್ ಮಾಡ್ತಿದ್ದಾರೆ. ದಿನಕ್ಕೆ ಹತ್ತಾರು ಬಾಟಲಿಗಳು ಪತ್ತೆಯಾಗುತ್ತಿವೆ. ಇದಕ್ಕೆ ಕಡಿವಾಣವೇ ಇಲ್ಲದಂತಾಗಿದೆ.

2009-10‌ರಲ್ಲಿ ನಿರ್ಮಾಣಗೊಂಡಿರುವ ಕಿರಿಯ ಪ್ರಾರ್ಥಮಿಕ ಶಾಲೆಯಲ್ಲೀಗ ವಿದ್ಯಾರ್ಥಿಗಳ ಕೊರತೆ ಉಂಟಾಗಿದೆ. ಪೆನ್ನು, ಪೆನ್ಸಿಲ್ ಹಿಡಿದು ಓದಾಬೇಕಾದ ವಿದ್ಯಾರ್ಥಿಗಳು ಶಾಲೆಗೆ ಬಂದ ತಕ್ಷಣವೇ ಮದ್ಯದ ಬಾಟಲಿ ಹಿಡಿದು ಶಾಲೆ ಸ್ವಚ್ಛಗೊಳಿಸುತ್ತಿದ್ದಾರೆ. ಇದೇ ಕಾರಣಕ್ಕೆ ಶಾಲೆಯ ಮಕ್ಕಳ ಸಂಖ್ಯೆಯೂ ಕುಸಿಯುತ್ತಿದೆ. 50‌ ಇದ್ದ ವಿದ್ಯಾರ್ಥಿಗಳ ಸಂಖ್ಯೆ ಈಗ 25ಕ್ಕೆ ಇಳಿದಿದೆ. ಸ್ವಚ್ಛ ವಾತಾವರಣ ನಿರ್ಮಾಣ ಮಾಡುವಂತೆ ವಿದ್ಯಾರ್ಥಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ರಾಮನಗರ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:57 am, Wed, 13 December 23