11 ತಿಂಗಳ ಮಗು ದುರಂತ ಅಂತ್ಯ: ಚನ್ನಪಟ್ಟಣದಲ್ಲೊಂದು ಮನಕಲಕುವ ಘಟನೆ
ಸರಿಯಾಗಿ ಇನ್ನು ಪ್ರಪಂಚವನ್ನೇ ನೋಡದ, ಈಗಷ್ಟೇ ಅಂಬೆಗಾಲು ಇಡುತ್ತಿದ್ದ 11 ತಿಂಗಳ ಮಗುವೊಂದು ದುರಂತ ಅಂತ್ಯ ಕಂಡಿರಯವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ನಗರದ ಜೀವನ್ ಪುರ ನಗರದಲ್ಲಿ ನಡೆದಿದೆ. ಮಗು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ತಂದೆ ತಾಯಿಯ ಗೋಳಾಟ ಎಂತವರ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು.

ಚನ್ನಪಟ್ಟಣ, ಅಕ್ಟೋಬರ್ 20: ನೀರಿನ ಟಬ್ ಒಳಗೆ ಬಿದ್ದು 11 ತಿಂಗಳ ಮಗು ಸಾವನ್ನಪ್ಪಿರುವ ಮನಕಲಕುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ (Ramanagar) ಚನ್ನಪಟ್ಟಣ ನಗರದ ಜೀವನ್ ಪುರ ನಗರದಲ್ಲಿ ನಡೆದಿದೆ. ಶಂಷಾದ್ ಪಠಾಣ್ ಮತ್ತು ಮುಸ್ಕಾನ್ ದಂಪತಿಗಳ ನಾಲ್ಕನೇ ಪುತ್ರಿ ಖುಷಿ ಮೃತ ದುರ್ದೈವಿಯಾಗಿದ್ದು, ಪ್ರಪಂಚವನ್ನು ಸರಿಯಾಗಿ ನೋಡುವ ಮೊದಲೇ ಕಂದಮ್ಮ ಕಣ್ಮುಚ್ಚಿದೆ. ಮಗು ಆಟವಾಡುವ ವೇಳೆ ಆಯತಪ್ಪಿ ನೀರಿಗೆ ಬಿದ್ದ ಪರಿಣಾಮ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಮನೆ ಒರೆಸುವ ಸಲುವಾಗಿ ಟಬ್ಗೆ ನೀರನ್ನು ತುಂಬಿಸಿ ಇಡಲಾಗಿತ್ತು. ಅಲ್ಲೇ ಮಗು ಕೂಡ ಆಟವಾಡಿಕೊಂಡಿತ್ತು. ಈ ವೇಳೆ ಚನ್ನಪಟ್ಟಣದ ಖಾಸಗಿ ಹೋಟಲ್ ವೊಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಮಗುವಿನ ತಂದೆ ಶಂಷಾದ್ ಕೆಲಸ ಮುಗಿಸುಕೊಂಡು ಮನೆಗೆ ಬಂದಿದ್ದಾರೆ. ತೀವ್ರ ಬಾಯಾರಿಕೆಯಿಂದ ಬಳಲಿದ್ದ ಕಾರಣ ಹೆಂಡತಿ ಮುಸ್ಕಾನ್ ಬಳಿ ಕುಡಿಯಲು ನೀರು ಕೇಳಿದ್ದಾರೆ. ಮುಸ್ಕಾನ್ ಪತಿಗಾಗಿ ನೀರು ತರಲು ಹೋಗಿ ಬರುವಷ್ಟರಲ್ಲಿ ಆಟವಾಡುತ್ತಿದ್ದ ಖುಷಿ ಟಬ್ ಒಳಗೆ ಬಿದ್ದಿದ್ದಾಳೆ. ಟಬ್ಗೆ ಬಿದ್ದ ತಕ್ಷಣವೇ ಮಗುವಿಗೆ ಪ್ರಜ್ಞೆ ತಪ್ಪಿದೆ. ಇದರಿಂದ ಭಯಗೊಂಡ ಪೋಷಕರು ಕೂಡಲೇ ಹತ್ತಿರದ ಆಸ್ಪತ್ರೆಗೆ ಮಗುವನ್ನು ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲೇ ಖುಷಿ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಮನೆ ಕಟ್ಟಲು ಪಡೆದಿದ್ದ ಸಾಲ ತೀರಿಸಲಾಗದೆ ಯೋಧ ಆತ್ಮಹತ್ಯೆ
ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ
ಪ್ರಪಂಚಕ್ಕೆ ಬಂದ ಕೇವಲ 11 ತಿಂಗಳಲ್ಲೇ ಪುಟ್ಟ ಮಗು ವಿಧಯಾಟಕ್ಕೆ ಬಲಿಯಾಗಿದ್ದು, ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸುಂದರ ಕುಟುಂಬದ ಜೊತೆ ಈಗಷ್ಟೇ ಅಂಬೆಗಾಲು ಇಡುತ್ತಿದ್ದ ಖುಷಿಯ ಸಾವು, ಕುಟುಂಬಸ್ಥರ ಸಂತೋಷವನ್ನೇ ಕಸಿದಿದೆ. ಘಟನೆ ಸಂಬಂಧ ಚನ್ನಪಟ್ಟಣದ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



