
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಸುದ್ದಿಸ್ಫೋಟ ಪ್ರಕರಣದಲ್ಲಿರುವ ಸಂತ್ರಸ್ತೆ ಎನ್ನಲಾದ ಯುವತಿಯ ತಂದೆ ನೀಡಿದ್ದ ಅಪಹರಣದ ದೂರಿನ ಪ್ರಕರಣವನ್ನು ಬೆಳಗಾವಿಯ ಎಪಿಎಂಸಿ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಬೆಂಗಳೂರಿನ ಆರ್.ಟಿ.ನಗರ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ಪೊಲೀಸ್ ಮಹಾನಿರ್ದೇಶಕರ ನಿರ್ದೇಶನದ ಮೇರೆಗೆ ಈ ಕ್ರಮಕೈಗೊಳ್ಳಲಾಗಿದೆ. ಆರ್.ಟಿ.ನಗರ ಪೊಲೀಸರು ಈ ಪ್ರಕರಣವನ್ನು ಎಸ್ಐಟಿಗೆ ಹಸ್ತಾಂತರಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಬೆಳಗಾವಿ ಎಪಿಎಂಸಿ ಠಾಣೆಯಿಂದ ಪ್ರಕರಣದ ಕಡತ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಅವರ ಕಚೇರಿ ತಲುಪಿತು. ಕಡತವನ್ನು ಪರಿಶೀಲಿಸಿದ ನಂತರ ಆರ್.ಟಿ.ನಗರ ಠಾಣೆಯ ಇನ್ಸ್ಪೆಕ್ಟರ್ ಅಶ್ವತ್ಥ ಗೌಡ ಅವರಿಗೆ ಡಿಸಿಪಿ ಕಡತವನ್ನು ಹಸ್ತಾಂತರಿಸಲಿದ್ದಾರೆ.
ಸಂತ್ರಸ್ತೆ ಎನ್ನಲಾದ ಯುವತಿಯ ತಂದೆ ಮಾರ್ಚ್ 16ರಂದು ಬೆಳಗಾವಿಯ ಎಪಿಎಂಸಿ ಠಾಣೆಗೆ ದೂರು ನೀಡಿದ್ದರು. ಐಪಿಸಿ 363, 368, 343, 346, 354, 506 ಸೆಕ್ಷನ್ಗಳಡಿ ದೂರು ದಾಖಲಿಸಿಕೊಳ್ಳಲಾಗಿತ್ತು. ಬೆಂಗಳೂರಿನ ಹಾಸ್ಟೆಲ್ನಲ್ಲಿದ್ದಾಗ ನನ್ನ ಮಗಳನ್ನು ಅಪಹರಿಸಿ, ಹೆದರಿಸಿ, ಕಿರುಕುಳ ಕೊಟ್ಟು ಅಶ್ಲೀಲ ಸಿಡಿ ಮಾಡಲಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.
ಮಾಜಿ ಪತ್ರಕರ್ತ ನರೇಶ್ ಗೌಡ ಊರಿನಲ್ಲಿ ಪೊಲೀಸರ ಶೋಧ
ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಸುದ್ದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪತ್ರಕರ್ತ ನರೇಶ್ ಗೌಡ ಪತ್ತೆಹಚ್ಚಲು ಎಸ್ಐಟಿ ಅಧಿಕಾರಿಗಳು ಶಿರಾ ಹಾಗೂ ಭುವನಹಳ್ಳಿಯಲ್ಲಿ ಎಸ್ಐಟಿಯಿಂದ ಶೋಧ ನಡೆಸುತ್ತಿದ್ದಾರೆ.
ಸ್ಥಳೀಯರು ಹಾಗೂ ಸ್ನೇಹಿತರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. 3 ತಿಂಗಳ ವ್ಯವಹಾರ, ಹಣ ವಹಿವಾಟು ಬಗ್ಗೆ ಮಫ್ತಿಯಲ್ಲಿಯೇ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ:
ರಮೇಶ್ ಜಾರಕಿಹೊಳಿ ‘ಸಿಡಿ’ ಮಾಸ್ಟರ್ ಮೈಂಡ್ ಮನೆ ಮೇಲೆ ಎಸ್ಐಟಿ ಅಧಿಕಾರಿಗಳ ದಾಳಿ
ರಮೇಶ್ ಜಾರಕಿಹೊಳಿ ‘ಸಿಡಿ’ ಮಾಸ್ಟರ್ ಮೈಂಡ್ ಮನೆ ಮೇಲೆ ಎಸ್ಐಟಿ ಅಧಿಕಾರಿಗಳ ದಾಳಿ