ರಮೇಶ್ ಜಾರಕಿಹೊಳಿ ಗೋಕಾಕ ಆಸ್ಪತ್ರೆಯಲ್ಲಿ ಇದ್ದಾರೆ ಎಂದು ಟಿವಿ9ಗೆ ವಿಡಿಯೋ ಕಾಲ್ ಮಾಡಿ ತೋರಿಸಿದ ವೈದ್ಯಾಧಿಕಾರಿ
ಸಂಜೆಯ ವೇಳೆಗೆ ಗೋಕಾಕ್ ಆಸ್ಪತ್ರೆಗೆ ವಕೀಲ ಚಂದನ್ ಗಿಡ್ನವರ ಮತ್ತು ರಮೇಶ್ ಜಾರಕಿಹೊಳಿ ಬೆಂಬಲಿಗರ ನಡುವೆ ಗೋಕಾಕ್ನ ತಾಲೂಕು ಆಸ್ಪತ್ರೆ ಆವರಣದಲ್ಲಿ ವಾಗ್ವಾದ ನಡೆದಿದೆ.

ಬೆಂಗಳೂರು: ಮಾಜಿ ಸಚಿವ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಇಂದು ಕೊರೊನಾ ಸೋಂಕಿನವರೆಗೂ ಬಂದು ನಿಂತಿದೆ. ಶಾಸಕ ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಗೋಕಾಕ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮುತ್ತಣ್ಣ ಕೊಪ್ಪದ ಇಂದು ಬೆಳಗ್ಗೆ ಮಾಹಿತಿ ನೀಡಿದ್ದರು. ಏಪ್ರಿಲ್ 1ರಂದು ಗೋಕಾಕ ಆಸ್ಪತ್ರೆಗೆ ಬಂದು ಕೊವಿಡ್ ಟೆಸ್ಟ್ ಮಾಡಿಸಿದ್ದ ಶಾಸಕ ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ ಎಂದು ಆರೋಗ್ಯಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದರು. ಇದೀಗ ಸಂಜೆಯ ವೇಳೆಗೆ ಗೋಕಾಕ್ ಆಸ್ಪತ್ರೆಗೆ ವಕೀಲ ಚಂದನ್ ಗಿಡ್ನವರ (ಸಂತ್ರಸ್ತೆ ಪರ ವಕೀಲ K.N.ಜಗದೀಶ್ ಸ್ನೇಹಿತ) ಮತ್ತು ಶಾಸಕ ರಮೇಶ್ ಜಾರಕಿಹೊಳಿ ಬೆಂಬಲಿಗರ ನಡುವೆ ಗೋಕಾಕ್ನ ತಾಲೂಕು ಆಸ್ಪತ್ರೆ ಆವರಣದಲ್ಲಿ ವಾಗ್ವಾದ ನಡೆದಿದೆ. ಶಾಸಕ ರಮೇಶ್ ಜಾರಕಿಹೊಳಿ ಐಸಿಯುನಲ್ಲಿ ಇಲ್ಲ ಎಂದು ವಕೀಲ ಚಂದನ್ ಗಿಡ್ನವರ ಬಲವಾಗಿ ಆರೋಪಿಸಿದ್ದಾರೆ. ಆದರೆ ವಕೀಲ ಚಂದನ್ ಗಿಡ್ನವರ ಆರೋಪಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಬೆಂಬಲಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ಆವರಣದಲ್ಲಿಯೇ ಮಾಧ್ಯಮಗಳ ಮುಂದೆಯೇ ಎರಡೂ ಕಡೆಯ ಮಧ್ಯೆ ಮಾತಿನ ಜಟಾಪಟಿ, ತಳ್ಳಾಟಗಳು ನಡೆದಿವೆ.
ಈ ವೇಳೆ ವೈದ್ಯ ಡಾ. ರವೀಂದ್ರ ಅವರು ಟಿವಿ9 ಪ್ರತಿನಿಧಿ ಫೋನ್ಗೆ ವಿಡಿಯೋ ಕಾಲ್ ಮಾಡಿ, ಗೋಕಾಕ ಸರ್ಕಾರಿ ಆಸ್ಪತ್ರೆಯೊಳಗಿರುವ ಐಸಿಯು ಘಟಕದ ವರೆಗೂ ಸ್ವತಃ ವೈದ್ಯರೇ ತೆರಳಿ ಅಲ್ಲಿನ ಚಿತ್ರಣವನ್ನು ಕಟ್ಟಿಕೊಟ್ಟರು. ಐಸಿಯುನಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಬೆಡ್ ಮೇಲೆ ಮಲಗಿರುವುದು ಮತ್ತು ಅವರ ಸುತ್ತಮುತ್ತ ವೈದ್ಯಕೀಯ ಸಿಬ್ಬಂದಿ ಇರುವುದನ್ನು ವಿಡಿಯೋ ಮೂಲಕ ತೋರಿಸಿ, ಕೊರೊನಾ ಪೀಡಿತ ಶಾಸಕ ರಮೇಶ್ ಜಾರಕಿಹೊಳಿ ಆಸ್ಪತ್ರೆಯಲ್ಲಿರುವುದು ಖಚಿತ ಎಂದು ಋಜುವಾತು ಪಡಿಸಲು ಯತ್ನಿಸಿದರು. ಇದರ ಹೊರತಾಗಿಯೂ ವಕೀಲ ಚಂದನ್ ಗಿಡ್ನವರ ಅವರು ಇದೆಲ್ಲ ಸುಳ್ಳು. ಶಾಸಕ ರಮೇಶ್ ಆಸ್ಪತ್ರೆಯ ಒಳಗೆ ಇಲ್ಲ ಎಂದರು.

ಶಾಸಕ ರಮೇಶ್ ಜಾರಕಿಹೊಳಿ ಕೊರೊನಾ ರಿಪೋರ್ಟ್
ಇದಕ್ಕೂ ಮುನ್ನ, ಶಾಸಕ ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂಬುದು ಸುಳ್ಳು. ಅವರಿಗೆ ಕೊರೊನಾ ಸೋಂಕು ಬಂದಿಲ್ಲ. ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ಶಾಸಕ ರಮೇಶ್ ದಾಖಲಾಗಿಲ್ಲ. ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿಲ್ಲ ಎಂಬ ಮಾಹಿತಿಯನ್ನು ಬೆಳಗಾವಿಯ ನನ್ನ ಸ್ನೇಹಿತರ ಮೂಲಕ ಸಂಗ್ರಹಿಸಿದ್ದೇನೆ ಎಂದು ಸಿಡಿ ಪ್ರಕರಣದ ಯುವತಿ ಪರ ವಕೀಲ ಕೆ.ಎನ್.ಜಗದೀಶ್ ಕುಮಾರ್ ಅವರು ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಆರೋಪಿಸಿದ್ದರು.
ಈ ಪ್ರಕರಣದ ಆರೋಪಿಯಿಂದ ಸರ್ಕಾರ ನೀಡಿರುವ ಸವಲತ್ತು ದುರ್ಬಳಕೆಯಾಗುತ್ತಿದೆ. ಕೊರೊನಾ ನೆಪ ಹೇಳಿಕೊಂಡು ಆರೋಪಿ ವಿಚಾರಣೆಗೆ ಗೈರಾಗುತ್ತಿದ್ದಾರೆ. ನನಗೆ ಬೆಳಗಾವಿಯಲ್ಲಿರುವ ನನ್ನ ಗೆಳೆಯರು ನೀಡಿರುವ ಮಾಹಿತಿ ಪ್ರಕಾರ ಶಾಸಕ ರಮೇಶ್ ಜಾರಕಿಹೊಳಿ ಗೋಕಾಕ ಆಸ್ಪತ್ರೆಗೆ ದಾಖಲಾಗಿಲ್ಲ. ಅವರು ತನಿಖೆಯಿಂದ ತಪ್ಪಿಸಿಕೊಳ್ಳಲು ಕೊರೊನಾ ಸೋಂಕಿನ ನೆಪ ಒಡ್ಡುತ್ತಿದ್ದಾರೆ ಎಂಬುದು ವಕೀಲ ಜಗದೀಶ್ ಅವರ ದೂರಿನ ಪ್ರಮುಖ ಅಂಶವಾಗಿತ್ತು.
ಶಾಸಕ, ಕಾರು ಚಾಲಕ, ಅಡುಗೆ ಭಟ್ಟ – ಮೂವರಿಗೂ ಕೊರೊನಾ ಸೋಂಕು ಗೋಕಾಕ ತಾಲ್ಲೂಕು ಆಸ್ಪತ್ರೆ ವೈದ್ಯ ರವೀಂದ್ರ ಈ ಕುರಿತು ಬೆಳಗ್ಗೆ, ಮಾಜಿ ಸಚಿವರ ಕಾರು ಚಾಲಕ ಹಾಗೂ ಅಡುಗೆ ಭಟ್ಟ ಇಬ್ಬರಿಗೂ ಕೊರೊನಾ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದರು. ಕೆಲ ಹೊತ್ತಿನ ಹಿಂದೆಯಷ್ಟೇ ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ತಗುಲಿದ ಬಗ್ಗೆ ವಿವರಣೆ ನೀಡಿದ್ದ ಗೋಕಾಕ ತಾಲ್ಲೂಕು ಆಸ್ಪತ್ರೆ ವೈದ್ಯ ಡಾ.ರವೀಂದ್ರ ಅವರು ರಮೇಶ್ ಜಾರಕಿಹೊಳಿಗೆ ನಿನ್ನೆ ರಾತ್ರಿ ಉಸಿರಾಟ ತೊಂದರೆಯಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶುಗರ್, ಬಿಪಿಯಲ್ಲಿ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕೊವಿಡ್ ನಿಯಮದಂತೆ ಇನ್ನೂ 5 ದಿನ ಆಸ್ಪತ್ರೆಯಲ್ಲಿರಬೇಕು ಎಂದು ತಿಳಿಸಿದ್ದಾರೆ.
ಗೋಕಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ರಮೇಶ್ ಜಾರಕಿಹೊಳಿಗೆ ಸೂಕ್ತ ಚಿಕಿತ್ಸೆ ಒದಗಿಸಲಾಗಿದ್ದು, ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ. ಅವರು ಹಿಂದಿನಿಂದಲೂ ಗೋಕಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಿದ್ದರು. ಸದ್ಯ ರಮೇಶ್ ಜಾರಕಿಹೊಳಿ ಮಹಾರಾಷ್ಟ್ರ, ಬೆಂಗಳೂರಿಗೆ ಹೋಗಿ ಬಂದಿದ್ದ ಕಾರಣ ಅವರಿಗೆ ರ್ಯಾಪಿಡ್ ಟೆಸ್ಟ್ ಮಾಡಲಾಗಿದ್ದು, ಪಾಸಿಟಿವ್ ಕಾಣಿಸಿಕೊಂಡಿದೆ. ತಜ್ಞ ವೈದ್ಯರ ನಿಗಾದಲ್ಲಿ ರಮೇಶ್ ಜಾರಕಿಹೊಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗ್ಗೆ ಮಾತನಾಡಿದ್ದ ಸಚಿವ ಭೈರತಿ ಬಸವರಾಜು, ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಇದೆ ಎಂದು ಗೊತ್ತಾಗಿದೆ. ಹೀಗಾಗಿ ಅವರು ಬೈಎಲೆಕ್ಷನ್ ಪ್ರಚಾರಕ್ಕೆ ಬರುವ ಸಾಧ್ಯತೆ ಕಡಿಮೆ ಎಂದು ಬೆಳಗಾವಿಯಲ್ಲಿ ಹೇಳಿದ್ದರು. ಉಪಚುನಾವಣೆ ಪ್ರಚಾರಕ್ಕೆ ಕರೆಯುವ ಸಲುವಾಗಿ ನಾನು ರಮೇಶ್ ಜಾರಕಿಹೊಳಿ ಅವರಿಗೆ ಕರೆ ಮಾಡಿದ್ದೆ. ಆದರೆ, ಅವರು ಪ್ರಚಾರಕ್ಕೆ ಬರುವುದು ಅನುಮಾನ. ನಾನು ಫೋನ್ ಮಾಡಿದ್ದಾಗ ರಮೇಶ್ ಜಾರಕಿಹೊಳಿ ಅವರೇ ತಮಗೆ ಕೊರೊನಾ ಇರುವುದಾಗಿ ಮಾಹಿತಿ ನೀಡಿದ್ದಾರೆಂದು ಭೈರತಿ ಬಸವರಾಜು ತಿಳಿಸಿದ್ದರು.
ಇದನ್ನೂ ಓದಿ:
ಕಾರು ಚಾಲಕ, ಅಡುಗೆ ಭಟ್ಟನಿಗೂ ಕೊರೊನಾ: ಇನ್ನು 15 ದಿನ ಬೆಂಗಳೂರು ಕಡೆ ತಲೆಹಾಕೋಲ್ಲ ರಮೇಶ್ ಜಾರಕಿಹೊಳಿ
ಯುವತಿ ಪರ ವಕೀಲರಿಂದ ಎಸ್ಐಟಿ ತನಿಖಾದಿಕಾರಿಗಳ ಮೇಲೆ ಒತ್ತಡ ಹೇರುವ ಯತ್ನ: ರಮೇಶ್ ಜಾರಕಿಹೊಳಿ ಪರ ವಕೀಲ ಶ್ಯಾಮ್ ಸುಂದರ್
Published On - 5:37 pm, Mon, 5 April 21