ಕಾಂಗ್ರೆಸ್ ಶಾಸಕರಿಗೆ ಕೇಳಲು 6 ಪ್ರಶ್ನೆ ಸಿದ್ಧ ಮಾಡಿಕೊಂಡ ಸುರ್ಜೇವಾಲ! ಸೆಪ್ಟೆಂಬರ್ ಕ್ರಾಂತಿಗೆ ಸಿದ್ಧವಾಗ್ತಿದೆಯಾ ವೇದಿಕೆ?

ಕರ್ನಾಟಕ ಕಾಂಗ್ರೆಸ್‌ ಆಂತರಿಕ ಕಲಹ ಮತ್ತು ಗೊಂದಲಗಳ ಮಧ್ಯೆ ಶಾಸಕರ ಜತೆ ಚರ್ಚಿಸಲು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಮೂರು ದಿನಗಳ ಕಾಲ ಶಾಸಕರೊಂದಿಗೆ ಸಭೆ ನಡೆಸಿ, ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿ ಹೈಕಮಾಂಡ್‌ಗೆ ವರದಿ ಸಲ್ಲಿಸುವ ನಿರೀಕ್ಷೆಯಿದೆ. ಶಾಸಕರ ಜತೆ ಸುರ್ಜೇವಾಲ ಏನೇನು ಚರ್ಚೆ ನಡೆಸಬಹುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಕಾಂಗ್ರೆಸ್ ಶಾಸಕರಿಗೆ ಕೇಳಲು 6 ಪ್ರಶ್ನೆ ಸಿದ್ಧ ಮಾಡಿಕೊಂಡ ಸುರ್ಜೇವಾಲ! ಸೆಪ್ಟೆಂಬರ್ ಕ್ರಾಂತಿಗೆ ಸಿದ್ಧವಾಗ್ತಿದೆಯಾ ವೇದಿಕೆ?
ರಣದೀಪ್ ಸಿಂಗ್ ಸುರ್ಜೇವಾಲ
Updated By: Ganapathi Sharma

Updated on: Jun 30, 2025 | 10:48 AM

ಬೆಂಗಳೂರು, ಜೂನ್ 30: ಸ್ವಪಕ್ಷದ ಶಾಸಕರಿಂದಲೇ ಭ್ರಷ್ಟಾಚಾರ ಆರೋಪ, ನಾಯಕತ್ವ ಬದಲಾವಣೆ ಕುರಿತ ಹೇಳಿಕೆಗಳು, ಸಚಿವ ಕೆಎನ್ ರಾಜಣ್ಣ ಅವರ ‘ಸೆಪ್ಟೆಂಬರ್ ಕ್ರಾಂತಿ’ ಹೇಳಿಕೆಗಳಿಂದ ತಲ್ಲಣಗೊಂಡಿರುವ ಕರ್ನಾಟಕ ಕಾಂಗ್ರೆಸ್ (Karnataka Congress) ಆಂತರಿಕ ಗೊಂದಲಗಳಿಗೆ ತೆರೆ ಎಳೆಯಲು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Surjewala) ಇಂದು ಬೆಂಗಳೂರಿಗೆ ಬರುತ್ತಿದ್ದಾರೆ. ಮೂರು ದಿನಗಳ ಕಾಲ ರಾಜ್ಯ ರಾಜಧಾನಿಯಲ್ಲಿ ವಾಸ್ತವ್ಯ ಕೂಡಲಿರುವ ಅವರು, ಕಾಂಗ್ರೆಸ್ ಶಾಸಕರ ಜೊತೆ ಮುಖಾಮುಖಿ (ಒನ್ ಟು ಒವ್) ಸಭೆ ನಡೆಸಲಿದ್ದಾರೆ. ಶಾಸಕರ ಅಭಿಪ್ರಾಯ ಸಂಗ್ರಹಿಸಲಿರುವ ಅವರು ಹೈಕಮಾಂಡ್‌ಗೆ ರವಾನಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ, ಶಾಸಕರ ಬಳಿ ಸಮಾಲೋಚನೆ ನಡೆದಲು ಸುರ್ಜೇವಾಲ ಆರು ಪ್ರಶ್ನೆಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಪ್ರಶ್ನೆಗಳ ಬಗ್ಗೆ ಶಾಸಕರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಅವುಗಳಿಗೆ ಸಮರ್ಪಕ ಮಾಹಿತಿ ಸಿದ್ಧ ಮಾಡಿ ಇಟ್ಟುಕೊಳ್ಳುವಂತೆಯೂ ಶಾಸಕರಿಗೆ ಸೂಚನೆ ನೀಡಲಾಗಿದೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.

ಶಾಸಕರಿಗೆ ಸುರ್ಜೇವಾಲ ಕೇಳಲಿರುವ ಪ್ರಶ್ನೆಗಳು

  1. ನಿಮ್ಮ ಕ್ಷೇತ್ರಗಳಲ್ಲಿ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹೇಗಿದೆ?
  2. ನಿಮ್ಮ ಕ್ಷೇತ್ರ, ಜಿಲ್ಲೆಯ ರಾಜಕೀಯ, ಸಾಮಾಜಿಕ ಸಮಸ್ಯೆಗಳೇನು? ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರ ಅವುಗಳನ್ನು ಹೇಗೆ ಬಗೆಹರಿಸಬೇಕು?
  3. ಕ್ಷೇತ್ರಗಳಲ್ಲಿ ಬಾಕಿ ಇರುವ ಅಭಿವೃದ್ಧಿ ಕಾರ್ಯ, ಸಮಸ್ಯೆ ಪಟ್ಟಿ ಕೊಡಿ. ಯಾವ ಇಲಾಖೆಯ ಅಭಿವೃದ್ಧಿ ಕೆಲಸ, ಅನುದಾನ ಎಷ್ಟು ಎಂಬ ಪಟ್ಟಿ ಕೊಡಿ.
  4. ನಿಮ್ಮ ಕ್ಷೇತ್ರದಲ್ಲಿ ಪಕ್ಷದ ವಿವಿಧ ವಿಂಗ್ ಹೇಗೆ ಕೆಲಸ ‌ಮಾಡುತ್ತಿದೆ? ಬ್ಲಾಕ್ ಕಾಂಗ್ರೆಸ್, ಯೂತ್ ಕಾಂಗ್ರೆಸ್, ಎನ್​ಎಸ್​ಯುಐ, ಮಹಿಳಾ ಘಟಕ, ಸೇವಾದಳ, ರೈತ ಘಟಕ, ಒಬಿಸಿ, ಅಲ್ಪಸಂಖ್ಯಾತ ಘಟಕ ರಚನೆ ಆಗಿದೆಯಾ?
  5. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳ ಪಟ್ಟಿ ತರಲು ಸೂಚನೆ. ಬ್ಲಾಕ್ ಕಾಂಗ್ರೆಸ್ ಸಮಿತಿ ಎಷ್ಟು ದಿನಗಳಿಂದ ಕೆಲಸ ಮಾಡುತ್ತಿದೆ? ನಿಗಮ ಮಂಡಳಿಯಲ್ಲಿ ಕ್ಷೇತ್ರದ ಯಾರಿಗೆ ಸ್ಥಾನಮಾನ ಕೊಡಬೇಕು? ಅವರ ಹೆಸರು, ಯಾಕೆ ಸ್ಥಾನಮಾನ ಕೊಡಬೇಕು ಎಂದು ಕಾರಣ ಕೊಡಿ.
  6. ಬೇರೆ ಸಲಹೆಗಳು ಏನಾದರೂ ಇವೆಯೇ?

10 ಜಿಲ್ಲೆಗಳ ಶಾಸಕರ ಜತೆ‌ ಮಾತುಕತೆಗೆ ಸಮಯ ನಿಗದಿ

ರಾಜ್ಯದ 10 ಜಿಲ್ಲೆಗಳ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಶಾಸಕರ ಜತೆ ಮಾತುಕತೆಗೆ ಸುರ್ಜೇವಾಲ ಸಮಯ ನಿಗದಿಪಡಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಾಂಬ್​ ಬೆದರಿಕೆ: ಭದ್ರತೆ ಹೆಚ್ಚಳ
ಮುಸ್ಲಿಂ ವ್ಯಕ್ತಿ ಜೊತೆ ಲಿವಿಂಗ್ ಟುಗೆದರ್: ಮಹಿಳೆ ಶವ ಕಸದ ಲಾರಿಲಿ ಪತ್ತೆ
ಕಾಂಗ್ರೆಸ್ ಗೊಂದಲ, ಬಿಕ್ಕಟ್ಟು ಶಮನಕ್ಕೆ ಇಂದು ಬೆಂಗಳೂರಿಗೆ ಸುರ್ಜೇವಾಲ
ಕೆಪಿಸಿಸಿ ಸಾಮಾಜಿಕ ಮಾಧ್ಯಮ ವಿಭಾಗಕ್ಕೆ ಐಶ್ವರ್ಯಾ ಮಹಾದೇವ್ ನೂತನ ಮುಖ್ಯಸ್ಥೆ

ಸೆಪ್ಟೆಂಬರ್ ಕ್ರಾಂತಿಗೆ ಸಿದ್ಧವಾಗ್ತಿದೆಯಾ ವೇದಿಕೆ?

ರಣದೀಪ್ ಸುರ್ಜೇವಾಲ ಶಾಸಕರ ಜತೆ ಒನ್ ಟು ಒನ್ ಮಾತುಕತೆಗೆ ಸಿದ್ಧರಾದ ಬೆನ್ನಲ್ಲೇ, ‘ಸೆಪ್ಟೆಂಬರ್ ಕ್ರಾಂತಿ’ಗೆ ವೇದಿಕೆ ಸಿದ್ಧವಾಗುತ್ತಿದೆಯಾ ಎಂಬ ಅನುಮಾನಗಳೂ ಮೂಡಿವೆ. ಸಂಪುಟ ಪುನಾರಚನೆಗೆ ಕಾಂಗ್ರೆಸ್ ಹೈಕಮಾಂಡ್ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ನಾಯಕತ್ವ ಬದಲಾವಣೆ ವಿಚಾರದಲ್ಲಿ ಮಾತ್ರ ಸ್ಪಷ್ಟತೆ ಇಲ್ಲ ಎನ್ನಲಾಗಿದೆ.

ಆಪ್ತರನ್ನು ಹುರಿಗೊಳಿಸುತ್ತಿರುವ ಡಿಕೆ ಶಿವಕುಮಾರ್

ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಡಿಸಿಎಂ ಡಿಕೆ ಶಿವಕುಮಾರ್ ಮಾತ್ರ ಆಪ್ತ ಶಾಸಕರನ್ನು ಹುರಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಸುರ್ಜೇವಾಲಾ ಜತೆ ಮಾತುಕತೆಗೆ ಬರುವಂತೆ ತಾವೇ ಖುದ್ದಾಗಿ ಕರೆ ಮಾಡಿ ಶಾಸಕರಿಗೆ ಆಹ್ವಾನ ನೀಡುತ್ತಿದ್ದಾರೆ. ಕೆಲ ಆಪ್ತ ಶಾಸಕರಿಗೆ ಸಂದೇಶವನ್ನೂ ರವಾನಿಸಿದ್ದಾರೆ. ‘ಎಲ್ಲಿ ಏನು ಹೇಳಬೇಕೋ ಎಲ್ಲವನ್ನೂ ಹೇಳಿ’ ಎಂದು ಡಿಕೆ ಶಿವಕುಮಾರ್ ಆಪ್ತರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ ಗೊಂದಲ, ಬಿಕ್ಕಟ್ಟು ಶಮನಕ್ಕೆ ಇಂದು ಬೆಂಗಳೂರಿಗೆ ಸುರ್ಜೇವಾಲ

ಹೈಕಮಾಂಡ್ ಪ್ರಶ್ನೆಗಳನ್ನು ಹೊರತುಪಡಿಸಿ ಶಾಸಕರು ವೈಯಕ್ತಿಕ ಅಭಿಪ್ರಾಯವನ್ನೂ ಹಂಚಿಕೊಳ್ಳುವ ಸಾಧ್ಯತೆ ಇದೆ. ಶಾಸಕರ ಕಾರ್ಯಕ್ಷಮತೆ ಕೂಡ ಸುರ್ಜೆವಾಲಾ ಸಭೆಯಲ್ಲಿ ಪರಿಶೀಲನೆಗೆ ಒಳಪಡಲಿದೆ. ಪಕ್ಷ ಸಮರ್ಥಕರು ಯಾರು, ಪಕ್ಷದಿಂದ ಅಂತರ ಕಾಯ್ದುಕೊಳ್ಳುವವರು ಯಾರು ಎಂಬುದನ್ನೂ ಪರಿಗಣಿಸಿ ಸುರ್ಜೇವಾಲ ಚರ್ಚೆ ನಡೆಸಲಿದ್ದಾರೆ. ಮುಂದಿನ ನಾಯಕತ್ವದ ಬಗ್ಗೆಯೂ ಸುರ್ಜೇವಾಲ ಬಳಿ ವೈಯಕ್ತಿಕ ಅಭಿಪ್ರಾಯ ಹಂಚಿಕೊಳ್ಳಲು ಕೆಲ ಶಾಸಕರು ತಯಾರಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ