AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ ಜಿಲ್ಲೆಯ ರಂಗಾಯಣದ ರಂಗ ನವಮಿ ನಾಟಕೋತ್ಸವಕ್ಕೆ ಚಾಲನೆ

ರಂಗ ನವಮಿಯ ಮೊದಲ ದಿನದ ನಾಟಕವಾಗಿ ರಂಗಕರ್ಮಿ ಯಶವಂತ ಸರದೇಶಪಾಂಡೆ ನಿರ್ದೇಶನದ ‘ಅಕಸ್ಮಾತ್‌ ಹಿಂಗಾದ್ರ’ ನಗೆ ನಾಟಕ ಪ್ರದರ್ಶನಗೊಂಡಿದ್ದು, ಮರಾಠಿ ಮೂಲದ ಈ ನಾಟಕವನ್ನು ರಂಗಾಯಣದ ರೆಪರ್ಟರಿ ಕಲಾವಿದರು ಪ್ರದರ್ಶಿಸಿದರು.

ಧಾರವಾಡ ಜಿಲ್ಲೆಯ ರಂಗಾಯಣದ ರಂಗ ನವಮಿ ನಾಟಕೋತ್ಸವಕ್ಕೆ ಚಾಲನೆ
ರಂಗ ನವಮಿ ನಾಟಕೋತ್ಸವಕ್ಕೆ ಚಾಲನೆ
Follow us
preethi shettigar
| Updated By: ರಶ್ಮಿ ಕಲ್ಲಕಟ್ಟ

Updated on: Feb 21, 2021 | 1:16 PM

ಧಾರವಾಡ: ಜಿಲ್ಲೆಯ ಪಂಡಿತ ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ರಂಗಾಯಣವು ಹಮ್ಮಿಕೊಂಡಿರುವ ರಂಗ ನವಮಿ ನಾಟಕೋತ್ಸವಕ್ಕೆ ಶನಿವಾರ ಮಂಡ್ಯ ರಮೇಶ ಚಾಲನೆ ನೀಡಿದ್ದು ಈ ಸಂದರ್ಭದಲ್ಲಿ ಮಾತನಾಡಿದ ಅವರು ರಂಗ ಮಾಧ್ಯಮ ಸರಳ ಮತ್ತು ಪರಿಣಾಮಕಾರಿಯಾದ ಮಾಧ್ಯಮವಾಗಿದ್ದು, ಅನಕ್ಷರಸ್ಥರಿಗೂ ಸಂವಹನ ನಡೆಸಲು ರಂಗಭೂಮಿಯಲ್ಲಿ ಸಾಧ್ಯತೆಗಳು ಇದೆ. ರಂಗಭೂಮಿ ಎಲ್ಲರನ್ನೂ ಒಗ್ಗೂಡಿಸುವ ಮಾಧ್ಯಮವಾಗಿದೆ ಎಂದು ಹೆಸರಾಂತ ರಂಗ ನಿರ್ದೇಶಕ ಮಂಡ್ಯ ರಮೇಶ ಹೇಳಿದರು. 

ರಂಗ ಪ್ರಕ್ರಿಯೆ ನಿರಂತರವಾಗಿ ನಡೆಯುವಂತದ್ದು, ದಿನ ಕಳೆದಂತೆ ರಂಗಭೂಮಿ ಮರುಹುಟ್ಟು ಪಡೆಯುತ್ತದೆ. ರಂಗಭೂಮಿಯಲ್ಲಿ ಪ್ರತಿಯೊಬ್ಬ ನಟ ಪ್ರತಿದಿನ ಹೊಸರೂಪ ಪಡೆಯುತ್ತಾನೆ. ಕಾವ್ಯ, ಕಲೆ, ನಟನೆ ಎಲ್ಲವನ್ನೂ ಒಳಗೊಂಡು ಸಹಿಷ್ಣುತೆ ಭಾವವನ್ನು ಈ ರಂಗಭೂಮಿ ಮಾಧ್ಯಮ ತಿಳಿಸುತ್ತದೆ. ರಂಗಭೂಮಿಯನ್ನು ಎಳೆಯರಿಗೆ ನೀಡಬೇಕು ಎನ್ನುವ ಉದ್ದೇಶದಿಂದ ಬಿ.ವಿ. ಕಾರಂತರು ರಂಗಾಯಣ ಆರಂಭಿಸಿದ್ದಾರೆ. ಇಂತಹ ರಂಗಾಯಣಗಳಿಗೆ ಸರ್ಕಾರದ ನೆರವು ತುಂಬ ಅಗತ್ಯವಾಗಿದ್ದು, ಉತ್ತರ ಕರ್ನಾಟಕ ರಂಗಭೂಮಿಯ ಉಗಮಸ್ಥಾನವಾಗಿದೆ.

ರಂಗಾಯಣಗಳಿಗೆ ನೆರವು ನೀಡುವುದಲ್ಲದೇ, ಇಲ್ಲಿ ಕೆಲಸ ಮಾಡುವ ಕಲಾವಿದರ ಸಂಖ್ಯೆಯನ್ನು ಏರಿಕೆ ಮಾಡಿ, ಅವರ ವೇತನ ಶ್ರೇಣಿಯನ್ನು ಮೇಲ್ದರ್ಜೆಗೆ ಏರಿಸಬೇಕು. ರಂಗದಲ್ಲಿ ಹಣ ಹೂಡಿಕೆ ಮಾಡಿದರೆ ಜನರಲ್ಲಿ ಮೌಲ್ಯಗಳನ್ನು ಬೆಳೆಸಲು ಸಾಧ್ಯ. ರಂಗಭೂಮಿ ಜನರಲ್ಲಿ ಎಚ್ಚರಿಕೆ ಹಾಗೂ ಮೌಲ್ಯಗಳನ್ನು ಬೆಳೆಸುವ ಮಾಧ್ಯಮವಾಗಿದೆ ಎಂದು ಮಂಡ್ಯ ರಮೇಶ ಹೇಳಿದರು.

rangayana dharwad

ಅಕಸ್ಮಾತ್‌ ಹಿಂಗಾದ್ರ ನಗೆ ನಾಟಕ ಪ್ರದರ್ಶನ

ಇನ್ನೂ ಮೂರು ಹೊಸ ರಂಗಾಯಣ: ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಅರವಿಂದ ಲಿಂಬಾವಳಿ ಅವರು ಇನ್ನೂ ಮೂರು ರಂಗಾಯಣಗಳನ್ನು ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ. ಇದು ಬಿ.ವಿ. ಕಾರಂತರ ಕನಸಾಗಿತ್ತು. ರಂಗಾಯಣಗಳು ಬೆಳೆಯಬೇಕು ಎಂಬ ಆಸೆಗೆ ಇದೀಗ ಲಿಂಬಾವಳಿ ಅವರು ಕಾರ್ಯಪ್ರವೃತ್ತರಾಗಿರುವುದು ಸ್ವಾಗತಾರ್ಹ ಎಂದು ಮಂಡ್ಯ ರಮೇಶ ಸಂತೋಷ ವ್ಯಕ್ತಪಡಿಸಿದರು.

rangayana dharwad

ರಂಗಾಯಣದ ರೆಪರ್ಟರಿ ಕಲಾವಿದರಿಂದ ನಾಟಕ ಪ್ರದರ್ಶನ

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಹ್ಲಾದ್ ಜೋಶಿ ಮಾತನಾಡಿ, ನಾಟಕಕ್ಕೆ ತನ್ನದೇ ಆದ ಶಕ್ತಿ ಇದೆ. ಮಾನವ ಸಮಾಜಕ್ಕೆ ಸಂವಹನಕ್ಕಾಗಿ ಇರುವ ಏಕೈಕ ಮಾಧ್ಯಮ ಭಾಷೆ. ಭಾಷೆ ಬಳಸಿಕೊಂಡು ಹಲವರಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಅದೇ ನಾಟಕದಲ್ಲಿ ಭಾವನೆಗಳನ್ನು ವ್ಯಕ್ತಪಡಿಸಬಹುದು. ಭಾವನೆಗಳಿಗೆ ಸ್ಪಂದಿಸುವ ಮಾರ್ಗ ರಂಗಭೂಮಿ ಎಂದು ಹೇಳಿದರು.

rangayana dharwad

ಅಕಸ್ಮಾತ್‌ ಹಿಂಗಾದ್ರ ನಗೆ ನಾಟಕ

ಸಮುದ್ರಗುಪ್ತನ ಕಾಲದಲ್ಲಿ ಆರನೇ ಶತಮಾನದಲ್ಲಿಯೇ ಜಗತ್ತಿಗೆ ನಾಟಕವನ್ನು ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಆ ಕಾಲದಲ್ಲಿಯೇ ಕಾಳಿದಾಸನ ಅಭಿಜ್ಞಾನ ಶಾಂಕುಂತಲಾ, ಮಾಳವಿಕಾಗ್ನಿಮಿತ್ರ ಸೇರಿದಂತೆ ಹಲವು ನಾಟಕಗಳನ್ನು ರಚಿಸಿದ್ದು, ಕನ್ನಡ ನಾಡು ನಾಟಕ, ಕಲೆ, ಸಾಹಿತ್ಯ ಕ್ಷೇತ್ರಗಳಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಕಾರಂತರ ಆಶಯದಿಂದ ಆರಂಭಗೊಂಡ ರಂಗಾಯಣಗಳು ನಾಡಿಗೆ ಹಲವು ಕೊಡುಗೆಗಳನ್ನು ನೀಡಿವೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

rangayana dharwad

ಅಕಸ್ಮಾತ್‌ ಹಿಂಗಾದ್ರ ನಾಟಕದ ಚಿತ್ರಣ

ರಂಗಾಯಣದ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿದರೆ ಉದ್ಯಮಗಳ ಸಿಎಸ್‌ಆರ್‌ ನಿಧಿಯಿಂದ ಹಣಕಾಸು ನೀಡಲು ಪ್ರಯತ್ನಿಸುತ್ತೇನೆ. ರಂಗಾಯಣಕ್ಕೆ ಸ್ವಂತ ಜಾಗ ಇಲ್ಲದಿರುವುದು ಇಂದು ನನ್ನ ಗಮನಕ್ಕೆ ಬಂದಿದೆ. ಇದಕ್ಕೆ ಸ್ವಂತ ಜಾಗ ನೀಡಲು ಯತ್ನಿಸುವುದಾಗಿ ರಂಗಾಯಣದ ರಂಗ ನವಮಿ ನಾಟಕೋತ್ಸವದ ಚಾಲನೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದರು.

ರಂಗ ನವಮಿಯ ಮೊದಲ ದಿನದ ನಾಟಕವಾಗಿ ರಂಗಕರ್ಮಿ ಯಶವಂತ ಸರದೇಶಪಾಂಡೆ ನಿರ್ದೇಶನದ ‘ಅಕಸ್ಮಾತ್‌ ಹಿಂಗಾದ್ರ’ ನಗೆ ನಾಟಕ ಪ್ರದರ್ಶನಗೊಂಡಿದ್ದು, ಮರಾಠಿ ಮೂಲದ ಈ ನಾಟಕವನ್ನು ರಂಗಾಯಣದ ರೆಪರ್ಟರಿ ಕಲಾವಿದರು ಪ್ರದರ್ಶಿಸಿದರು. ಮೊದಲ ಪ್ರಯೋಗದಲ್ಲಿಯೇ ಈ ನಾಟಕ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.

ಇದನ್ನೂ ಓದಿ: ಧಾರವಾಡ ರಂಗಾಯಣದಲ್ಲಿ ಮತ್ತೆ ಶುರುವಾಯಿತು ರಾಜೀನಾಮೆ ಪರ್ವ