AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಬೊಮ್ಮಾಯಿ ಸಂಪುಟ ರಚನೆಗೆ ಸಿದ್ಧವಾಗಿದೆ ಆರ್​ಎಸ್​​ಎಸ್​ ಸೂತ್ರ: ಕ್ಲೀನ್ ಮಂತ್ರಿಮಂಡಲಕ್ಕೆ ಒತ್ತು, ಒತ್ತಡ ತಂದಿದೆ

RSS: ಮೂಲಗಳ ಪ್ರಕಾರ ಆರ್​ಎಸ್​​ಎಸ್, ಈಗಾಗಲೇ ರಾಜ್ಯ ಬಿಜೆಪಿ ನಾಯಕರ ಜೊತೆ ಸಂಪುಟ ರಚನೆ ವಿಚಾರವಾಗಿ ಒಂದು ಸುತ್ತು ಮಾತುಕತೆ ನಡೆಸಿದೆ. ಸಂಘದ ಮೂಲ ಹೊಂದಿರುವ ಹಾಗೂ ಸಾಮಾಜಿಕವಾಗಿ ನಿಷ್ಕಳಂಕ ವ್ಯಕ್ತಿತ್ವ ಹೊಂದಿರುವ ಆರರಿಂದ ಹತ್ತು ಶಾಸಕರ ಹೆಸರು ಇರುವ ಪಟ್ಟಿಯನ್ನ ಸಂಘ ಬಿಜೆಪಿ ನಾಯಕರಿಗೆ ನೀಡಲಿದೆ.

ಸಿಎಂ ಬೊಮ್ಮಾಯಿ ಸಂಪುಟ ರಚನೆಗೆ ಸಿದ್ಧವಾಗಿದೆ ಆರ್​ಎಸ್​​ಎಸ್​ ಸೂತ್ರ: ಕ್ಲೀನ್ ಮಂತ್ರಿಮಂಡಲಕ್ಕೆ ಒತ್ತು, ಒತ್ತಡ ತಂದಿದೆ
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
TV9 Web
| Updated By: ಸಾಧು ಶ್ರೀನಾಥ್​|

Updated on: Jul 30, 2021 | 1:38 PM

Share

ಬೆಂಗಳೂರು: ರಾಜ್ಯ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ, ಇತ್ತ ಸಂಪುಟ ರಚನೆ ವಿಚಾರ ಗರಿಗೆದರುತ್ತಿದೆ. ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿಗಳಾಗಿ ಕಾರ್ಯನಿರ್ವಹಿಸಿದವರು ಈಗ ಮತ್ತೆ ಮಂತ್ರಿಯಾಗಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಕೆಲವರಂತೂ ದೆಹಲಿಯಲ್ಲೇ ಠಿಕಾಣಿ ಹೂಡಿ ಹೈಕಮಾಂಡ್ ಒಲವುಗಳಿಸಲು ಭಾರಿ ಲಾಬಿ ಮಾಡುತ್ತಿದ್ದಾರೆ.

ಈ ನಡುವೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಈಗ ಸಂಪುಟ ರಚನೆಯಲ್ಲಿ ಪ್ರಮುಖ ಪಾತ್ರವಹಿಸಲು ಮುಂದಾಗುತ್ತಿದೆ. ಕಳಂಕ ರಹಿತ ಸಂಪುಟ ರಚನೆಯೇ ನಮ್ಮ ಗುರಿ ಎಂಬ ಸಂದೇಶವನ್ನ ಈಗಾಗಲೇ ಆರ್ ಎಸ್ ಎಸ್ ಬಿಜೆಪಿ ರಾಜ್ಯ ಘಟಕಕ್ಕೆ ರವಾನಿಸಿದೆ. ಸಿಎಂ ಪದಗ್ರಹಣದ ಹಿಂದಿನ ದಿನ ಆರ್​ಎಸ್​​ಎಸ್ ಕೇಂದ್ರ ಕಚೇರಿ ಕೇಶವ ಕೃಪಕ್ಕೆ ಭೇಟಿ ನೀಡಿದಾಗ ಹಾಗೂ ನಿನ್ನೆ ಯಡಿಯೂರಪ್ಪ ಸಂಘದ ಪ್ರಮುಖರನ್ನ ಭೇಟಿಯಾದ ಸಂದರ್ಭದಲ್ಲೂ ಈ ವಿಚಾರವನ್ನ ಸ್ಪಷ್ಟಪಡಿಸಲಾಗಿದೆ.

ಈಗಾಗಲೇ ಆಪರೇಷನ್ ಕಮಲ ಕಪ್ಪುಚುಕ್ಕೆ ಬಿಜೆಪಿಗೆ ಅಂಟಿದೆ. ಇದರ ಜೊತೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸರ್ಕಾರವನ್ನ ಮುಜುಗರಕ್ಕೀಡು ಮಾಡಿದೆ. ಇದರ ಜೊತೆಗೆ ಸರ್ಕಾರದ ಅನೇಕ ಸಚಿವರು ಸುದ್ದಿ ಪ್ರಸಾರ ತಡೆ ಕೋರಿ ಕೋರ್ಟ್ ನಿಂದ ಪ್ರತಿಬಂಧಕ ತಂದಿರುವುದು ಸಹ ಮಂತ್ರಿ ಮಂಡಲವನ್ನೇ ಅನುಮಾನದಿಂದ ನೋಡುವಂತಾಗಿದೆ. ಹೀಗಾಗಿ ಆರ್​ಎಸ್​​ಎಸ್ ಈ ಬಾರಿ ಕ್ಲೀನ್ ಮಂತ್ರಿಮಂಡಲಕ್ಕೆ ಒತ್ತಡ ತಂದಿದೆ.

ಆರ್​ಎಸ್​​ಎಸ್ ಪಾತ್ರ ಏನು ? ಮೂಲಗಳ ಪ್ರಕಾರ ಆರ್​ಎಸ್​​ಎಸ್, ಈಗಾಗಲೇ ರಾಜ್ಯ ಬಿಜೆಪಿ ನಾಯಕರ ಜೊತೆ ಸಂಪುಟ ರಚನೆ ವಿಚಾರವಾಗಿ ಒಂದು ಸುತ್ತು ಮಾತುಕತೆ ನಡೆಸಿದೆ. ಸಂಘದ ಮೂಲ ಹೊಂದಿರುವ ಹಾಗೂ ಸಾಮಾಜಿಕವಾಗಿ ನಿಷ್ಕಳಂಕ ವ್ಯಕ್ತಿತ್ವ ಹೊಂದಿರುವ ಆರರಿಂದ ಹತ್ತು ಶಾಸಕರ ಹೆಸರು ಇರುವ ಪಟ್ಟಿಯನ್ನ ಸಂಘ ಬಿಜೆಪಿ ನಾಯಕರಿಗೆ ನೀಡಲಿದೆ. ಹಾಗಂತ ಎಲ್ಲರನ್ನ ಮಂತ್ರಿ ಮಾಡಲೇ ಬೇಕು ಎಂದೇನು ಇಲ್ಲ. ರಾಜಕೀಯ ಇತಿಮಿತಿ, ಜಾತಿ ಸಮೀಕರಣ, ಹಾಗೂ ಹಿಂದಿನ ರಾಜಕೀಯ ಬದ್ಧತೆಗಳಿಗೆ ಅನುಸಾರವಾಗಿ ಸಂಪುಟದಲ್ಲಿ ಆರ್​ಎಸ್​​ಎಸ್ ಹಿನ್ನೆಲೆಯ ಶಾಸಕರಿಗೆ ಸ್ಥಾನಮಾನ ನೀಡುವಂತೆ ಸೂಚಿಸಿದೆ.

ಈ ಮೂಲಕ ಸಾಮಾಜಿಕವಾಗಿ ಸಚ್ಚಾರಿತ್ರ್ಯ ಹಾಗೂ ನಡತೆ ಉಳ್ಳುವವರನ್ನ ಸಂಪುಟಕ್ಕೆ ಸೇರಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಕ್ಲೀನ್ ಇಮೇಜ್ ಪ್ರತಿಬಿಂಬಿಸಲು ತಂತ್ರ ರೂಪಿಸಿದೆ. ಇದಲ್ಲದೇ ಸಂಪುಟ ರಚನೆ ವೇಳೆ ಆರ್ ಎಸ್ ಎಸ್ ಮೂಲದವರಲ್ಲದ ಶಾಸಕರ ಹಿನ್ನಲೆಯೂ ಪರಿಶೀಲಿಸುವಂತೆ ಸಂಘ ಸಲಹೆ ನೀಡಿದೆ. ಪ್ರಮುಖವಾಗಿ ಕ್ರಿಮಿನಲ್ ಹಿನ್ನಲೆ ಹಾಗೂ ಸಾಮಾಜಿಕವಾಗಿ ದುರ್ವರ್ತನೆ ಹೊಂದಿರುವವರನ್ನ ಅಧಿಕಾರದಿಂದ ದೂರ ಇಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅತ್ತ ಬಿಜೆಪಿ ನಾಯಕರು ಕೂಡ ಸಂಘದ ಮೂಲದವರಿಗೆ ಸೂಕ್ತ ಸ್ಥಾನ ಮಾನ ನೀಡಲು ನಿರ್ಧರಿಸಿದ್ದು, ಹೈಕಮಾಂಡ್ ಜೊತೆ ಕೂಡ ಮಾತನಾಡಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದೆ.

ಕಣ್ಣಿರಿಟ್ಟ ಯಡಿಯೂರಪ್ಪ ಇನ್ನೊಂದೆಡೆ ನಿನ್ನೆ ಆರ್​ಎಸ್​​ಎಸ್ ಕೇಂದ್ರ ಕಚೇರಿ ಕೇಶವ ಕೃಪಕ್ಕೆ ಭೇಟಿ ನೀಡಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಆರ್​ಎಸ್​​ಎಸ್  ಹಿರಿಯ ಪ್ರಚಾರಕರಾದ 87ರ ಹರೆಯದ ಸು. ರಾಮಣ್ಣ ಅವರನ್ನ ನೋಡುತ್ತಿದ್ದಂತೆ ಅವರ ಕಾಲಿಗೆರಗಿ ನಮಸ್ಕರಿಸಿದ್ದಾರೆ. ಈ ವೇಳೆ ಭಾವಕರಾಗಿದ್ದ ಯಡಿಯೂರಪ್ಪ, ಕಣ್ಣಿರಟ್ಟ ಘಟನೆ ನಡೆಯಿತು. ಹಿಂದೆ ಬೆಂಗಳೂರಿನಲ್ಲಿ ಪ್ರಚಾರಕರಾಗಿದ್ದ ವೇಳೆ ಅಂದಿನ ಸನ್ನಿವೇಶಗಳು, ಒಡನಾಟವನ್ನ ನೆನಪಿಸಿಕೊಂಡು ಯಡಿಯೂರಪ್ಪ ಸು ರಾಮಣ್ಣ ಜೊತೆ ಮಾತನಾಡುತ್ತಿರುವ ವೇಳೆ ಬಿಎಸ್ ವೈ ಭಾವುಕರಾದರು. ಬಳಿಕ ಯಡಿಯೂರಪ್ಪ ಅವರ ಸಂಘಟನಾ ಶಕ್ತಿಯ ಬಗ್ಗೆ ಆರ್​ಎಸ್​​ಎಸ್ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು.

– ಪ್ರಮೋದ್​ ಶಾಸ್ತ್ರಿ, ಹಿರಿಯ ವರದಿಗಾರ, ಟಿವಿ9

(RSS to help in forming new ministry by karnataka cm basavaraj bommai say sources )