ಚಿಕಿತ್ಸೆಯಲ್ಲಿ ವೈದ್ಯರ ನಿರ್ಲಕ್ಷತೆ ಆರೋಪ ಸಮರ್ಥಿಸಲು ತಜ್ಞ ವೈದ್ಯರ ಅಭಿಪ್ರಾಯ ಅಗತ್ಯ; ಹೈಕೋರ್ಟ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 13, 2023 | 2:52 PM

ವೈದ್ಯರ ನಿರ್ಲಕ್ಷ್ಯ ಆರೋಪಿಸಿ ದಾಖಲಿಸುವ ದೂರುಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಪೊಲೀಸರು ವೈದ್ಯರ ವಿರುದ್ದ ಆರೋಪಪಟ್ಟಿ ದಾಖಲಿಸುವ ಮೊದಲು ಆರೋಪಿ ವೈದ್ಯರ ನಿರ್ಲಕ್ಷದ ಕುರಿತಂತೆ ಸ್ವತಂತ್ರ ತಜ್ಞರ ಅಭಿಪ್ರಾಯ ಪಡೆಯಬೇಕೆಂದು ಅಭಿಪ್ರಾಯಪಟ್ಟಿದೆ.

ಚಿಕಿತ್ಸೆಯಲ್ಲಿ ವೈದ್ಯರ ನಿರ್ಲಕ್ಷತೆ ಆರೋಪ ಸಮರ್ಥಿಸಲು ತಜ್ಞ ವೈದ್ಯರ ಅಭಿಪ್ರಾಯ ಅಗತ್ಯ; ಹೈಕೋರ್ಟ್
ಹೈಕೋರ್ಟ್​
Follow us on

ಬೆಂಗಳೂರು: ವೈದ್ಯರ ನಿರ್ಲಕ್ಷ್ಯ ಆರೋಪಿಸಿ ದಾಖಲಿಸುವ ದೂರುಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್(high Court) ಮಹತ್ವದ ಆದೇಶ ನೀಡಿದೆ. ಪೊಲೀಸರು ವೈದ್ಯರ ವಿರುದ್ದ ಆರೋಪಪಟ್ಟಿ ದಾಖಲಿಸುವ ಮೊದಲು ಆರೋಪಿ ವೈದ್ಯರ ನಿರ್ಲಕ್ಷದ ಕುರಿತಂತೆ ಸ್ವತಂತ್ರ ತಜ್ಞರ ಅಭಿಪ್ರಾಯ ಪಡೆಯಬೇಕೆಂದು ಅಭಿಪ್ರಾಯಪಟ್ಟಿದೆ. ಲಿಯಾಕ್ ಅಹ್ಮದ್ ಎಂಬುವರು ಶಿವಮೊಗ್ಗದ ವಿವೇಕಾನಂದ ಹೆರಿಗೆ ಆಸ್ಪತ್ರೆ ವೈದ್ಯರ ವಿರುದ್ಧ ನಿರ್ಲಕ್ಷ ಹಾಗೂ ತಪ್ಪು ಚಿಕಿತ್ಸೆ ನೀಡಿದ ಆರೋಪ ಹೊರಿಸಿ ದೂರು ನೀಡಿದ್ದರು. ಡಾ. ಶ್ಯಾಮಲಾ ಬಾಯಿ, ಡಾ. ಹೆಚ್.ಎಲ್.ಮಹೇಂದ್ರ, ಡಾ.ಹುನಗುಂದ್ ಬಿ.ಜಿ. ವಿರುದ್ಧ ಪೊಲೀಸರು ಆರೋಪಪಟ್ಟಿ ದಾಖಲಿಸಿದ್ದರು.

ಆರೋಪಪಟ್ಟಿ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ವೈದ್ಯರು

ಈ ಆರೋಪಪಟ್ಟಿ ರದ್ದು ಕೋರಿ ವೈದ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ತಜ್ಞರ ವರದಿ ಆಧರಿಸಿ ವೈದ್ಯರನ್ನು ದೋಷಮುಕ್ತಿಗೊಳಿಸಿದೆ. ನೈತಿಕ ಸಮಿತಿ ಕೂಡ ವೈದ್ಯರ ಮೇಲಿನ ಆರೋಪ ಆಧಾರರಹಿತವೆಂದು ಅಭಿಪ್ರಾಯಪಟ್ಟಿದೆ. ಆರೋಪಿ ವೈದ್ಯರಿಗೆ ಎಚ್ಚರಿಕೆ ಮಾತ್ರ ನೀಡಿ ಪ್ರಕರಣದಿಂದ ಕೈಬಿಟ್ಟಿದೆ. ಈ ಮಧ್ಯೆ ಪೊಲೀಸರು ವೈದ್ಯರ ವಿರುದ್ಧ ಆರೋಪಪಟ್ಟಿ ದಾಖಲಿಸಿದ್ದು ಸರಿಯಲ್ಲವೆಂದು ವಾದಿಸಿದ್ದರು. ಹೈಕೋರ್ಟ್ ವೈದ್ಯರ ಪರ ವಕೀಲರ ವಾದವನ್ನು ಆಲಿಸಿ, ವೈದ್ಯರ ಮೇಲಿನ ನಿರ್ಲಕ್ಷ ಆರೋಪವನ್ನು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಕೈಬಿಟ್ಟಿದೆ.

ಇದನ್ನೂ ಓದಿ:Karnataka High Court : ಕಳಂಕಿತ ಅಧಿಕಾರಿಯನ್ನು ಮಾಹಿತಿ ಆಯುಕ್ತರನ್ನಾಗಿ ನೇಮಿಸಿರುವ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನೋಟಿಸ್​​

ವೈದ್ಯರ ವಿರುದ್ಧ ದಾಖಲಿಸಿದ್ದ ಆರೋಪಪಟ್ಟಿಯನ್ನು ರದ್ದುಪಡಿಸಿದ ಹೈಕೋರ್ಟ್​

ನಿರ್ಲಕ್ಷತೆಯನ್ನು ಸಮರ್ಥಿಸುವ ಯಾವುದೇ ಸ್ವತಂತ್ರ ವೈದ್ಯರ ಅಭಿಪ್ರಾಯವಿಲ್ಲದೇ ಆರೋಪಪಟ್ಟಿ ಸಲ್ಲಿಸಿರುವುದರಿಂದ ಕಾರ್ಯಸಾಧನೆಯಾಗುವುದಿಲ್ಲ. ಬದಲಿಗೆ ಕಾನೂನು ಪ್ರಕ್ರಿಯೆಯ ದುರುಪಯೋಗವಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ರವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ. ವೈದ್ಯರ ವಿರುದ್ಧ ದಾಖಲಿಸಿದ್ದ ಆರೋಪಪಟ್ಟಿಯನ್ನು ರದ್ದುಪಡಿಸಿದೆ. ಲೋಪವೆಸಗುವ ವೈದ್ಯರ ವಿರುದ್ಧ ಆರೋಪಪಟ್ಟಿ ದಾಖಲಿಸುವ ಮೊದಲು ಸಂಬಂಧಿಸಿದ ಶಾಖೆಯಲ್ಲಿ ಅನುಭವ ಹೊಂದಿದ ತಜ್ಞ ಸರ್ಕಾರಿ ವೈದ್ಯರ ಅಭಿಪ್ರಾಯ ಪಡೆಯುವುದು ಸೂಕ್ತವೆಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:51 pm, Thu, 13 July 23