ಶಿವಮೊಗ್ಗದಲ್ಲಿ ಬಿಜೆಪಿಗೆ ಭಾರಿ ಮುಖಭಂಗ: ಹಿಂದಿನ ಡಿಸಿಸಿ ಬ್ಯಾಂಕ್ ನೇಮಕಾತಿ ಹಗರಣ ತನಿಖೆಗೆ ಮುಂದಾದ ಕಾಂಗ್ರೆಸ್ ಸರ್ಕಾರ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಮಲೆನಾಡಿನ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಚುಕ್ಕಾಣಿಯು ಬಿಜೆಪಿಯಿಂದ ಕೈತಪ್ಪಿದೆ. ಇನ್ನು ಡಿಸಿಸಿ ಬ್ಯಾಂಕ್ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಹಗರಣ ಕುರಿತು ಕಾಂಗ್ರೆಸ್ ಸರಕಾರವು ತನಿಖೆ ನಡೆಸುವುದಕ್ಕೆ ಮುಂದಾಗಿರುವುದು ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದೆ.

ಶಿವಮೊಗ್ಗದಲ್ಲಿ ಬಿಜೆಪಿಗೆ ಭಾರಿ ಮುಖಭಂಗ: ಹಿಂದಿನ ಡಿಸಿಸಿ ಬ್ಯಾಂಕ್ ನೇಮಕಾತಿ ಹಗರಣ ತನಿಖೆಗೆ ಮುಂದಾದ ಕಾಂಗ್ರೆಸ್ ಸರ್ಕಾರ
DCC Bank: ಶಿವಮೊಗ್ಗದಲ್ಲಿ ಬಿಜೆಪಿಗೆ ಭಾರಿ ಮುಖಭಂಗ
Follow us
| Updated By: ಸಾಧು ಶ್ರೀನಾಥ್​

Updated on: Jul 29, 2023 | 12:49 PM

ಶಿವಮೊಗ್ಗ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರ ವಿರುದ್ದ ಅವಿಶ್ವಾಸ ಗೊತ್ತುವಳಿಯಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಿಗೆ ಯಶಸ್ಸು ಸಿಕ್ಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಬಿಜೆಪಿ ಹಿಡಿತದಲ್ಲಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನು ಕಿತ್ತುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಲ್ಲಿ ಆಪರೇಶನ್ ಹಸ್ತ ಕುರಿತು ಒಂದು ವರದಿ ಇಲ್ಲಿದೆ.. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಬಿಜೆಪಿ ಬೆಂಬಲಿತ ಅಧ್ಯಕ್ಷರಾಗಿದ್ದ ಚನ್ನವೀರಪ್ಪ ಪದಚ್ಯುತಿಯಾಗಿದೆ. ಅವಿಶ್ವಾಸಮತಕ್ಕೆ ಜಯ ದೊರೆತಿದೆ. ಇದರಿಂದ ಮಂಜುನಾಥ್ ಗೌಡರ ಬಣ ಮತ್ತೊಮ್ಮೆ ಮೇಲುಗೈ ಸಾಧಿಸಿದಂತಾಗಿದೆ. ಅವಿಶ್ವಾಸ ಗೊತ್ತುವಳಿಯಲ್ಲಿ ಯಶಸ್ಸು ಸಿಗುತ್ತಿದ್ದಂತೆ ಡಿಸಿಸಿ ಬ್ಯಾಂಕ್ ಮುಂಭಾಗದಲ್ಲಿ ಕಾಂಗ್ರೆಸ್ ಬೆಂಬಲಿತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ. ಚುನಾವಣೆ ಅಧಿಕಾರಿಯಾಗಿ ಜೆಸಿ ವೆಂಕಟಾಚಲಪತಿ ನೇತೃತ್ವದಲ್ಲಿ ಗೌಪ್ಯ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. 9 ನಿರ್ದೇಶಕರು ಅವಿಶ್ವಾಸ ನಿರ್ಣಯದ ಪರ ಆದರೆ, ವಿರುದ್ಧ 3 ಮೂವರು ನಿರ್ದೇಶಕರು ಮತ ಚಲಾವಣೆ ಮಾಡಿದರು. ಬಿಜೆಪಿ ಸರಕಾರವ ಅವಧಿಯಲ್ಲಿ ಚನ್ನವೀರಪ್ಪ ಅವರನ್ನು ಸಂಸದ ಬಿ ವೈ ರಾಘವೇಂದ್ರ ಮತ್ತು ಬಿಎಸ್ ವೈ ಚಾಣಾಕ್ಷತನದಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಿದ್ದರು. ಈ ಮೂಲಕ ಮಾಜಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡಗೆ ತಿರುಗೇಟು ಕೊಟ್ಟಿದ್ದರು.

ಆದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರುತ್ತಿದ್ದಂತೆ ಮಂಜುನಾಥ್ ಗೌಡರು ಬಿಜೆಪಿ ಬೆಂಬಲಿತ ಅಧ್ಯಕ್ಷ ಚನ್ನವೀರಪ್ಪ ವಿರುದ್ದ ಅವಿಶ್ವಾಸ ನಿರ್ಣಯಕ್ಕೆ ಪ್ಲ್ಯಾನ್ ಮಾಡಿದ್ದರು. ಅದರಂತೆ ನಿನ್ನೆ ಶುಕ್ರವಾರ ನಡೆದ ಅವಿಶ್ವಾಸ ಗೊತ್ತುವಳಿಯಲ್ಲಿ ಹಾಲಿ ಅಧ್ಯಕ್ಷ ಚನ್ನವೀರಪ್ಪ ಅವರಿಗೆ ಸೋಲುಂಟಾಗಿದೆ. ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಬ್ಯಾಂಕ್ ಗೆ ಎಂಟ್ರಿ ಕೊಟ್ಟು, ನಿರ್ದೇಶಕರ ವಿಶ್ವಾಸ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಷಡಾಕ್ಷರಿ, ದುಗ್ಗಪ್ಪಗೌಡ ವಿಜಯದೇವ್, ಯೋಗೀಶ್, ವೆಂಕಟೇಶ್, ಎಂಎಂ‌ ಪರಮೇಶ್ವರ್, ಸುಧೀರ್, ಎಸ್ಪಿ ದಿನೇಶ್, ಶ್ರೀಪಾದ್ ಸೇರಿ 9 ಜನ ಅವಿಶ್ವಾಸದ ಪರ ಮತ ಹಾಕಿದ್ದಾರೆ. ಅವಿಶ್ವಾಸ ಪರವಾಗಿ ಭೂಕಾಂತ್ ಚನ್ನವೀರಪ್ಪ, ಅಗಡಿ ಅಶೋಕ್ ಮತ ಚಲಾಯಿಸಿದರು. ಮತಗಳನ್ನು ಮುಚ್ಚಿದ ಲಕೋಟೆಯಲ್ಲಿಡಲಾಗಿದೆ. ಒಟ್ಟು ಚುನಾಯಿತ ನಿರ್ದೇಶಕರು 13 ಜನ ಇದ್ದು ಇದರಲ್ಲಿ 9 ಜನ ಅವಿಶ್ವಾಸ ನಿರ್ಣಯದ ಪರ ಮತಚಲಾವಣೆ ಆಗಿದೆ. ಹೈಕೋರ್ಟ್ ಆದೇಶದ ಮೇರೆಗೆ ನಾಮನಿರ್ದೇಶಿತರ ಮತವನ್ನೂ ಪರಿಗಣಿಸಬೇಕು, ಹಾಗಾಗಿ ನ್ಯಾಯಾಲಯದ ಆದೇಶದ ಪರ ಮುಚ್ಚಿದ ಲಕೋಟೆಯಲ್ಲಿ ಚಲಾವಣೆ ಮಾಡಲಾಗಿದೆ. 8 ಕ್ಕೂ ಹೆಚ್ಚು ಮತ ಅವಿಶ್ವಾಸ ಮತದ ಪರವಾಗಿ ಚಲಾವಣೆಯಾದ ಕಾರಣ ಮುಚ್ಚಿದ ಲಕೋಟೆಯ ಮತದಾನ ಲೆಕ್ಕಕ್ಕೆ ಬಾರದಂತಾಗಿದೆ. ಅವಿಶ್ವಾಸ ನಿರ್ಣಯಕ್ಕೆ ಜಯ ದೊರೆತಿದೆ. ಸಧ್ಯಕ್ಕೆ ಡಿಸಿಸಿ ಬ್ಯಾಕ್ ನ ಪ್ರಭಾರಿ ಅಧ್ಯಕ್ಷರಾಗಿ ಷಡಾಕ್ಷರಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್​​ ಆಪರೇಶನ್ ಗೆ ಬಿಜೆಪಿ ಬೆಂಬಲಿತ ಅಧ್ಯಕ್ಷರ ಯಾವ ಆಟವೂ ನಡೆಯಲಿಲ್ಲ. ಕಳೆದ ಎರಡು ಮೂರು ತಿಂಗಳ ಹಿಂದೆ ಡಿಸಿಸಿ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆದಿತ್ತು. ಒಂದೊಂದು ಹುದ್ದೆ 40 ಲಕ್ಷ ರೂಪಾಯಿಗೆ ಬಿಕರಿಯಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಸದ್ಯ ಈ ಅಕ್ರಮ ನೇಮಕಾತಿ ಕುರಿತು ಕಾಂಗ್ರೆಸ್ ಸರಕಾರ ತನಿಖೆ ಮಾಡುವುದು ಶತಸಿದ್ಧವೆಂದು ಸಾಗರ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಗುಡುಗಿದ್ದಾರೆ.

ಇನ್ನು ಸಂಸದ ಬಿ. ವೈ ರಾಘವೇಂದ್ರ ಮೇಲೆ ಶಾಸಕರು ವಾಗ್ದಾಳಿ ಮಾಡಿದ್ದಾರೆ. ಡಿಸಿಸಿ ಬ್ಯಾಂಕ್ ಹುದ್ದೆಯಲ್ಲಿ ಭ್ರಷ್ಟಾಚಾರ ನಡೆದಿದೆ. ನೇಮಕಾತಿ ಹಗರಣದ ತನಿಖೆಯನ್ನ ನೂತನ ಅಧ್ಯಕ್ಷರ ಆಯ್ಕೆಯಾದ ಬಳಿಕ ತನಿಖೆಯಾಗಲಿದೆ. ಧುರೀಣ ಮಂಜುನಾಥ್ ಗೌಡ ಆಪರೇಶನ್ ಯಶಸ್ಸು ಆಗಿದೆ. ಅಂದು ಬಿಜೆಪಿಗೆ ಬೆಂಬಲ ನೀಡಲಾಗಿತ್ತು. ದೌರ್ಭಾಗ್ಯವಾಗಿತ್ತು.. 9 ಜನ ಅವಿಶ್ವಾಸ ಮತ ಚಲಾಯಿಸಿದ್ದು, ಅಧ್ಯಕ್ಷರ ಪರ ಮೂರು ಮತ ಚಲಾವಣೆ ಆಗಿದೆ. ಬಿಜೆಪಿ ಮಯ ಮಾಡಲು ಹೊರಟ ಬಿಜೆಪಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಇದೀಗ ಯಾವುದೇ ಖರೀದಿ ನಡೆದಿಲ್ಲ, ಆಗ ಖರೀದಿಯನ್ನ ಬಿಜೆಪಿ ಮಾಡಿತ್ತು. ಇ.ಡಿ. ಬೆದರಿಕೆ ಹಾಕಲಾಗಿತ್ತು. ಪ್ರಜಾಪ್ರಭುತ್ವದ ಅಡಿ ಚುನಾವಣೆ ಆಗಿದೆ. ಬಹುಮತವಿಲ್ಲವಾದರು ಚನ್ನವೀರಪ್ಪ ಮೊಂಡುತನ ಪ್ರದರ್ಶನ ಮಾಡಿದ್ದಾರೆ. ಬಿಜೆಪಿ ಬೆಂಬಲಿತ ಚನ್ನವೀರಪ್ಪ ಅವರನ್ನು ಪದಚ್ಯುತಿ ಮೂಲಕ ಆರ್ ಎಂ ಮಂಜುನಾಥ್ ಗೌಡರು ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಿದ್ದ ಬಿಜೆಪಿ ವಿರುದ್ದ ಸೇಡು ತೀರಿಸಿಕೊಂಡಂತಾಗಿದೆ ಎಂದು ಬೇಳೂರು ಗೋಪಾಲ ಕೃಷ್ಣ, ಸಾಗರ ಕಾಂಗ್ರೆಸ್ ಶಾಸಕರು ವ್ಯಾಖ್ಯಾನಿಸಿದ್ದಾರೆ.

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮಲೆನಾಡಿನ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಚುಕ್ಕಾಣಿಯು ಬಿಜೆಪಿಯಿಂದ ಕೈತಪ್ಪಿ, ಅದೀಗ ಕಾಂಗ್ರೆಸ್ ಪಾಲು ಆಗಿದೆ. ಇನ್ನು ಡಿಸಿಸಿ ಬ್ಯಾಂಕ್ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಹಗರಣ ನಡೆದಿದೆ ಎನ್ನುವ ಗಂಭೀರ ಆರೋಪಗಳಿವೆ. ಸದ್ಯ ಕಾಂಗ್ರೆಸ್ ಸರಕಾರವು ಈ ನೇಮಕಾತಿಯ ಕುರಿತು ತನಿಖೆ ನಡೆಸುವುದಕ್ಕೆ ಮುಂದಾಗಿರುವುದು ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದೆ.