11 ತಿಂಗಳ ಮಗುವಿನ ಗಂಟಲಲ್ಲಿ ಸಿಕ್ಕಿಕೊಂಡ ಜೀವಂತ ಮೀನು; ಮೂಢನಂಬಿಕೆಗೆ ಬಲಿಯಾಗ್ತಿದ್ದ ಮಗುವಿನ ಪ್ರಾಣ ಉಳಿಸಿದ ಸರ್ಜಿ ಆಸ್ಪತ್ರೆ ವೈದ್ಯರು

11.3 ಸೆಂ.ಮೀ. ಉದ್ದದ ಮೀನು ನುಂಗಿ ಉಸಿರಾಟದ ತೊಂದರೆ ಅನುಭವಿಸಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ 11 ತಿಂಗಳ ಮಗುವನ್ನು ಶಿವಮೊಗ್ಗದ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯರು ಜೀವಪಾಯದಿಂದ ಪಾರು ಮಾಡಿದ್ದಾರೆ.

11 ತಿಂಗಳ ಮಗುವಿನ ಗಂಟಲಲ್ಲಿ ಸಿಕ್ಕಿಕೊಂಡ ಜೀವಂತ ಮೀನು; ಮೂಢನಂಬಿಕೆಗೆ ಬಲಿಯಾಗ್ತಿದ್ದ ಮಗುವಿನ ಪ್ರಾಣ ಉಳಿಸಿದ ಸರ್ಜಿ ಆಸ್ಪತ್ರೆ ವೈದ್ಯರು
ಶಿವಮೊಗ್ಗದಲ್ಲಿ ಜೀವಂತ ಮೀನು ನುಂಗಿ ಬದುಕುಳಿದ ಮಗು
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Feb 06, 2024 | 5:11 PM

ಶಿವಮೊಗ್ಗ, ಫೆ.06: ದಾವಣಗೆರೆ(Davanagere) ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ನ್ಯಾಮತಿ ಹತ್ತಿರದ ಗಂಜೇನಹಳ್ಳಿಯ ಯೋಗೀಶ್‌ ಅವರ 11 ತಿಂಗಳ ಮಗು ಪ್ರತೀಕ್‌ಗೆ ಹೆಚ್ಚು ಜೊಲ್ಲು ಬರುತ್ತಿತ್ತು, ಈ ಹಿನ್ನಲೆ ಮೀನಿನಿಂದ ಜೊಲ್ಲು ಹೊರ ತೆಗೆಯಬಹುದೆಂಬ ಮೂಢನಂಬಿಕೆ(Superstition)ಯಿಂದಾಗಿ ಮಗುವಿನ ಬಾಯಿಗೆ ಜೀವಂತ ಮೀನನ್ನು ಇಟ್ಟಿದ್ದರು. ಆಗ ಮಗು ಕೈಯಿಂದ ತಳ್ಳಿಕೊಂಡು ಮೀನು ನುಂಗಿದ್ದು, ಗಂಟಲಲ್ಲಿ ಸಿಕ್ಕಿಕೊಂಡಿತ್ತು. ತಕ್ಷಣ ಮೀನನ್ನು ಹೊರ ತೆಗೆಯಲು ಪೋಷಕರು ಪ್ರಯತ್ನ ನಡೆಸಿದ್ದರಾದರೂ ಯಶಸ್ವಿ ಆಗಿರಲಿಲ್ಲ.

ಅಷ್ಟೊತ್ತಿಗಾಗಲೇ ಮಗುವಿನ ಸ್ಥಿತಿ ಗಂಭೀರವಾಗಿದ್ದು, ಬಳಿಕ ಪೋಷಕರು ಮಗುವನ್ನು ಸರ್ಜಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಕೂಡಲೇ ತಪಾಸಣೆ ನಡೆಸಿದ ತಜ್ಞ ವೈದ್ಯರು, ತೀವ್ರ ನಿಗಾ ಘಟಕದಲ್ಲಿರಿಸಿ, ಗಂಟಲಲ್ಲಿ ಸಿಕ್ಕಿಕೊಂಡಿದ್ದ ಮೀನನ್ನು ಹೊರ ತೆಗೆದು ಮಗುವಿನ ಜೀವವನ್ನು ಉಳಿಸಿದ್ದಾರೆ. ಇದೊಂದು ಅಪರೂಪದ ಪ್ರಕರಣವಾಗಿದೆ.

ಇದನ್ನೂ ಓದಿ:ತುಮಕೂರು: ಮೂಢನಂಬಿಕೆಗೆ ಹಸುಗೂಸು ಬಲಿ ಪ್ರಕರಣ; ಸಾವಿಗೆ ಸತ್ಯಾಂಶ ತಿಳಿಯಲು ಹೂತ್ತಿದ್ದ ಮೃತದೇಹ ಹೊರತೆಗೆದ ಪೊಲೀಸ್ರು

ಚಿಕ್ಕಮಕ್ಕಳು ಈ ರೀತಿಯ ಆಹಾರ ಪದಾರ್ಥ, ಇಲ್ಲವೇ ಚಾಕೋಲೇಟ್‌, ಕಾಡಿಗೆ ಡಬ್ಬಿ, ಅಡಕೆ, ಗೋಲಿ, ಗಜಗ, ಶೇಂಗಾ ಬೀಜದಂತಹ ವಸ್ತುಗಳನ್ನು ಗಂಟಲಲ್ಲಿ ಸಿಕ್ಕಿಸಿಕೊಂಡು ಪ್ರಾಣಕ್ಕೆ ಎರವಾದಂತಹ ಘಟನೆಗಳು ಈ ಹಿಂದೆ ನಡೆದಿದ್ದವು. ಈ ಪ್ರಕರಣದಲ್ಲಿ ಮಗು ಜೀವಂತ ಮೀನನ್ನೇ ನುಂಗಿದ್ದು, ಮಕ್ಕಳ ತಜ್ಞ ವೈದ್ಯ ಡಾ.ಪ್ರದೀಪ್‌ ಅವರು ಚಿಕಿತ್ಸೆ ನೀಡಿದ್ದಾರೆ. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಗು, ಪ್ರಾಣಾಪಾಯದಿಂದ ಪಾರಾಗಿದೆ.

ಮೂಡ ನಂಬಿಕೆಗೆ ಮಾರುಹೋಗಬೇಡಿ

ಚಿಕ್ಕ ಮಕ್ಕಳಿಗೆ ಮೀನು ನುಂಗಿಸುವ ಮೂಢನಂಬಿಕೆ ಇಂದಿಗೂ ಕೆಲವು ಕಡೆ ಆಚರಣೆಯಲ್ಲಿದೆ. ದಯಮಾಡಿ ಪೋಷಕರು ಇಂತಹ ಮೂಢನಂಬಿಕೆಗೆ ಮಕ್ಕಳನ್ನು ಮಾರುಹೋಗಬಾರದು. ಅಲ್ಲದೇ ಪೋಷಕರು ಚಿಕ್ಕಮಕ್ಕಳ ಕೈಗೆ ಯಾವುದೇ ಘನ ವಸ್ತುಗಳನ್ನು ಸಿಗದಂತೆ ಇಡಬೇಕು ಎಂದು ತೀವ್ರ ನಿಗಾಘಟಕ ಹಾಗೂ ಶಸ್ತ್ರ ಚಿಕಿತ್ಸಾ ಘಟಕದ ತಜ್ಞ ವೈದ್ಯರಾದ ಡಾ.ವಿನೋದ್‌ ಸಲಹೆ ನೀಡಿದ್ದಾರೆ. ವೈದ್ಯರ ಸೇವೆಯನ್ನು ಸರ್ಜಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಧನಂಜಯ ಸರ್ಜಿ ಹಾಗೂ ಮೆಡಿಕಲ್‌ ಸೂಪರಿಂಟೆಂಡೆಂಟ್‌ ಡಾ.ಪ್ರಶಾಂತ್ ಅವರು ಶ್ಲಾಘಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 5:05 pm, Tue, 6 February 24