Shivamogga: ಮಳೆಗೆ ನಲುಗಿದ ಶಿವಮೊಗ್ಗ; ಸೋಮಿನಕೊಪ್ಪದಲ್ಲಿ ಮೀನು ಹಿಡಿಯಲು ಹೋಗಿದ್ದ ಯುವಕ ಸಾವು

ಜಿಲ್ಲೆ ಮಳೆಗೆ ನಲುಗಿದೆ. ಸೋಮಿನಕೊಪ್ಪದಲ್ಲಿ ಯುವಕನೊಬ್ಬ ಮೀನು ಹಿಡಿಯಲು ಹೋಗಿ ಮೃತಪ್ಟಿದ್ದಾನೆ. ಸೊರಬದಲ್ಲಿ ವರದಾ ನದಿಯ ನೀರು ನುಗ್ಗಿ ಐವತ್ತಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಜಿಲ್ಲೆಯ ಹಲವೆಡೆ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಯ ಆರಂಭಗೊಂಡಿದೆ.

Shivamogga: ಮಳೆಗೆ ನಲುಗಿದ ಶಿವಮೊಗ್ಗ; ಸೋಮಿನಕೊಪ್ಪದಲ್ಲಿ ಮೀನು ಹಿಡಿಯಲು ಹೋಗಿದ್ದ ಯುವಕ ಸಾವು
ಸೊರಬ ತಾಲೂಕಿನ ನೆಲ್ಲಿಕೊಪ್ಪ ಗ್ರಾಮಕ್ಕೆ ನುಗ್ಗಿರುವ ವರದಾ ನದಿಯ ನೀರು
Updated By: shivaprasad.hs

Updated on: Jul 25, 2021 | 10:31 AM

ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಸೋಮಿನಕೊಪ್ಪ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಯುವಕ ಸಾವಿಗೀಡಾಗಿದ್ದಾನೆ. ಯುವಕನನ್ನು ಸೋಮಿನಕೊಪ್ಪ ಗ್ರಾಮದ ಹಾಲೇಶ್(35) ಎಂದು ಗುರುತಿಸಲಾಗಿದೆ. ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೊರಬ: ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ನೆಲ್ಲಿಕೊಪ್ಪ ಗ್ರಾಮಕ್ಕೆ ವರದಾ ನದಿಯ ನೀರು ನುಗ್ಗಿದೆ. ಗ್ರಾಮದ 50ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದೆ. ಸಮೀಪದ ಜಮೀನುಗಳಿಗೂ ನೀರು ನುಗ್ಗಿದ್ದು, ಶುಂಠಿ ಮತ್ತು ವಿವಿಧ ತರಕಾರಿ ಬೆಳೆಗಳು ನೀರು ಪಾಲಾಗಿವೆ. ಕಳೆದ ಎರಡು ದಿನಗಳಿಂದ ಗ್ರಾಮಸ್ಥರು ಪರದಾಟ ನಡೆಸುತ್ತಿದ್ದರೂ ಗ್ರಾಮಕ್ಕೆ ಭೇಟಿ ನೀಡದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಂಗಾ ಅಣೆಕಟ್ಟು: ಮಲೆನಾಡಿನ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಾ ಡ್ಯಾಂನಿಂದ 72,717 ಕ್ಯೂಸೆಕ್ ನೀರು ನದಿಗೆ ಬಿಡುಗಡೆ ಮಾಡಲಾಗಿದೆ. ತುಂಗಾ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಮಳೆ ಹೆಚ್ಚಾದರೆ ಇನ್ನೂ ಹೆಚ್ಚು ನೀರು ಬಿಡುಗಡೆ ಸಾಧ್ಯತೆ ಇದೆ.

ಸಾಗರ: ಶಿವಮೊಗ್ಗ ಜಿಲ್ಲೆಯಲ್ಲಿ ವರದಾ ನದಿಯ ಪ್ರವಾಹಕ್ಕೆ ಸಿಲುಕಿ ಹಲವಾರು ಗ್ರಾಮಗಳು ನಲುಗಿ ಹೋಗಿವೆ. ಇಷ್ಟೇ ಅಲ್ಲ ಸಾಗರ ತಾಲೂಕಿನ ಸಿರವಾಳ ಗ್ರಾಮದಲ್ಲಿ ಧಾರಾಕಾರ ಮಳೆಗೆ ಮನೆಗಳು ಕುಸಿದು ಬಿದ್ದಿವೆ. ಈ ಕುರಿತ ವಿಡಿಯೊ ವರದಿ ಇಲ್ಲಿದೆ.

ಜಿಲ್ಲೆಯ ಕೆಲವು ಭಾಗದಲ್ಲಿ ಮಳೆ ತಗ್ಗಿದ ಹಿನ್ನೆಲೆಯಲ್ಲಿ ಸ್ವಚ್ಛತಾಕಾರ್ಯ ನಡೆಸಲಾಗುತ್ತಿದೆ. ಭಾರಿ ಮಳೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿತ್ತು. ಈಗ ಮಳೆ ತಗ್ಗಿರುವುದರಿಂದ ವಿವಿಧ ಬಡಾವಣೆಗಳ ಮನೆಗಳಲ್ಲಿ ಕ್ಲೀನಿಂಗ್ ನಡೆಸಲಾಗುತ್ತಿದೆ.

ಇದನ್ನೂ ಓದಿ: Maharashtra Rains: ಮಹಾರಾಷ್ಟ್ರದಲ್ಲಿ ಮಳೆ, ಪ್ರವಾಹ..ಭೂಕುಸಿತ; ಸಹಾಯಕ್ಕೆ ಧಾವಿಸಿದ ಭಾರತೀಯ ವಾಯುಸೇನೆ

ಇದನ್ನೂ ಓದಿ: ಭಾರಿ ಮಳೆಗೆ ಬೆಳಗಾವಿ, ಉತ್ತರ ಕನ್ನಡ, ಮಲೆನಾಡಲ್ಲಿ ಹೆಚ್ಚು ಅನಾಹುತ; ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ

(Heavy rain in Shivamogga; a youth from Sominakoppa dead while fishing in a lake)