ಶಿವಮೊಗ್ಗ: ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ; ವಿಚಾರಗೋಷ್ಠಿಗೆ KDSS ವಿರೋಧ

ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ 'ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ' ಕುರಿತು ನಡೆಯಲಿರುವ ವಿಚಾರಗೋಷ್ಠಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿರೋಧ ವ್ಯಕ್ತಪಡಿಸಿದೆ. ಈ ಕಾರ್ಯಕ್ರಮವು ಬಲಪಂಥೀಯ ಅಜೆಂಡಾ ಮತ್ತು ಕುವೆಂಪು, ಅಂಬೇಡ್ಕರ್ ಆಶಯಗಳಿಗೆ ವಿರುದ್ಧವಾಗಿದೆ ಎಂದು KDSS ಆರೋಪಿಸಿದೆ. ಜಾತಿಪದ್ಧತಿ ಸಮರ್ಥನೆಗೆ ಭಗವದ್ಗೀತೆ ಬಳಸಲಾಗಿದೆ ಎಂದಿರುವ KDSS, ಕಾರ್ಯಕ್ರಮ ನಡೆಸಿದರೆ ತಮಟೆ ಚಳವಳಿ ನಡೆಸುವುದಾಗಿ ಎಚ್ಚರಿಸಿದೆ.

ಶಿವಮೊಗ್ಗ: ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ; ವಿಚಾರಗೋಷ್ಠಿಗೆ KDSS ವಿರೋಧ
ಕುವೆಂಪು ವಿಶ್ವವಿದ್ಯಾಲಯ

Updated on: Nov 18, 2025 | 7:00 AM

ಶಿವಮೊಗ್ಗ, ನವೆಂಬರ್​ 18: ಕುವೆಂಪು ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿರುವ ‘ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ’ ಎಂಬ ವಿಚಾರಗೋಷ್ಠಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (KDSS) ವಿರೋಧ ವ್ಯಕ್ತಪಡಿಸಿದೆ. ಕಾರ್ಯಕ್ರಮ ನಡೆಸಿದರೆ ತಮಟೆ ಚಳವಳಿ ಆರಂಭಿಸುವ ಎಚ್ಚರಿಕೆಯನ್ನೂ ನೀಡಿದೆ. ವಿಶ್ವವಿದ್ಯಾಲಯದ ಬಸವ ಮಂಟಪದಲ್ಲಿ ಸ್ವರ್ಣ ರಶ್ಮಿ ಟ್ರಸ್ಟ್, ಭಗವದ್ಗೀತೆ ಅಭಿಯಾನ ಜಿಲ್ಲಾ ಸಮಿತಿ ಮತ್ತು ಕುವೆಂಪು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಇಂದು (ನ.18) ವಿಚಾರಗೋಷ್ಠಿಯನ್ನ ಆಯೋಜಿಸಲಾಗಿದೆ.

ವಿಚಾರಗೋಷ್ಠಿಗೆ ವಿರೋಧ ಯಾಕೆ?

ಈ ವಿಚಾರಗೋಷ್ಠಿ ಬಲಪಂತೀಯ ತತ್ತ್ವದ ಅಜೆಂಡಾವನ್ನು ಉತ್ತೇಜಿಸುತ್ತದೆ ಮತ್ತು ರಾಷ್ಟ್ರೀಯ ಕವಿ ಕುವೆಂಪು ಅವರ ಆದರ್ಶಗಳು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಭಗವದ್ಗೀತೆಯನ್ನು ಇತಿಹಾಸದಲ್ಲಿ ಚಾತುರ್ವರ್ಣ ವ್ಯವಸ್ಥೆ ಮತ್ತು ಜಾತಿ ಪದ್ಧತಿಯನ್ನು ಸಮರ್ಥಿಸಲು ಬಳಸಲಾಗಿದೆ. ಬಲಪಂತೀಯ ಗುಂಪುಗಳು ಇಂತಹ ಕಾರ್ಯಕ್ರಮಗಳ ಮೂಲಕ ವಿಶ್ವವಿದ್ಯಾಲಯಗಳಲ್ಲಿ ಒಂದೇ ರೀತಿಯ ತತ್ತ್ವದ ಚೌಕಟ್ಟನ್ನು ಮುನ್ನೆಲೆಗೆ ತಂದು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿವೆ ಎಂದು KDSS ಸಂಚಾಲಕ ಎಂ. ಗುರುಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಆಟೋ ಹಿಂದೆ ಭಗವದ್ಗೀತೆ ಶ್ಲೋಕಗಳು, ಇದು ಸನಾತನ ಧರ್ಮದ ಹೊಸ ಅಧ್ಯಾಯ

ಯಾವುದೇ ಇನ್ನೊಂದು ವಿಶ್ವವಿದ್ಯಾಲಯವೂ ಇಂತಹ ವಿಚಾರಗೋಷ್ಠಿಯನ್ನು ಆಯೋಜಿಸದಿರುವಾಗ, ಕುವೆಂಪು ವಿಶ್ವವಿದ್ಯಾಲಯವೇ ಇದನ್ನು ಏಕೆ ಆಯ್ಕೆ ಮಾಡಿಕೊಂಡಿದೆ ಎಂದು KDSS ಪ್ರಶ್ನಿಸಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಉಪ ಕುಲಪತಿಗಳು ವಹಿಸುವುದಕ್ಕೂ ವಿರೋಧ ವ್ಯಕ್ತವಾಗಿದ್ದು, ಇದು ಕುವೆಂಪು ಅವರ ಸರ್ವಮಾನವ ಮೌಲ್ಯಗಳಿಗೆ ಅವಮಾನ. ಅಲ್ಲದೆ, ಆಹ್ವಾನಿತ ವಕ್ತಾರರು ಗಾಂಧಿ, ಬಸವಣ್ಣ ಮತ್ತು ಅಂಬೇಡ್ಕರ್ ಅವರ ದೃಷ್ಟಿಕೋನಗಳಿಗೆ ವಿರೋಧವಾಗಿ ನಿಲ್ಲುವ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಆರೋಪವನ್ನೂ ಸಮಿತಿ ಮಾಡಿದೆ. ಕಾರ್ಯಕ್ರಮಕ್ಕೆ ಕೇವಲ ಎರಡು ದಿನಗಳು ಮಾತ್ರ ಬಾಕಿ ಇರುವಾಗ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಗಿದ್ದು, ವಿಚಾರಗೋಷ್ಠಿಯನ್ನು ರದ್ದುಪಡಿಸುವಂತೆ ವಿಶ್ವವಿದ್ಯಾಲಯವನ್ನು KDSS ಒತ್ತಾಯಿಸಿದೆ ಎಂದು ದಿ ನ್ಯೂ ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:00 am, Tue, 18 November 25