ನಿಯಂತ್ರಣ ತಪ್ಪಿ ಕಾರು ಪಲ್ಟಿ, ಇಬ್ಬರು ಶಿಕ್ಷಕರು ಸ್ಥಳದಲ್ಲೇ ಸಾವು
ಕಾರು ಪಲ್ಟಿಯಾಗಿ ಇಬ್ಬರು ಶಿಕ್ಷಕರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇನ್ನಿಬ್ಬರು ಶಿಕ್ಷಕರಿಗೆ ಗಂಭೀರ ಗಾಯಗಳಾಗಿವೆ. ತುಮಕೂರಿನಿಂದ ಮದುವೆ ಆರತಕ್ಷತೆ ಕಾರ್ಯಕ್ರಮ ಮುಗಿಸಿ ಪಾವಗಡಕ್ಕೆ ವಾಪಸ್ಸು ಹೋಗುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ.
![ನಿಯಂತ್ರಣ ತಪ್ಪಿ ಕಾರು ಪಲ್ಟಿ, ಇಬ್ಬರು ಶಿಕ್ಷಕರು ಸ್ಥಳದಲ್ಲೇ ಸಾವು](https://images.tv9kannada.com/wp-content/uploads/2024/05/teachers-car.jpg?w=1280)
ತುಮಕೂರು, (ಮೇ 12): ಜಿಲ್ಲೆಯ (Tumkur) ಪಾವಗಡ ತಾಲೂಕಿನಲ್ಲಿ ಕಾರೊಂದು (Pavagada Accident) ಪಲ್ಟಿಯಾಗಿದ್ದು, ಇಬ್ಬರು ಶಿಕ್ಷಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಶಿಕ್ಷಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕಣಿವೆನಹಳ್ಳಿ ಗೇಟ್ ಬಳಿ ಕಾರು ಪಲ್ಟಿಯಾಗಿದೆ. ನಾಲ್ವರೂ ತುಮಕೂರಿನಲ್ಲಿ ಮದುವೆ ಆರತಕ್ಷತೆ ಮುಗಿಸಿಕೊಂಡು ಪಾವಗಡಕ್ಕೆ ತೆರಳುತ್ತಿದ್ದರು. ಇದೇ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಮಗುಚಿದೆ. ಕಾರು ಪಲ್ಟಿಯಾದ ತೀವ್ರತೆಗೆ ಒ. ಧನಂಜಯ ಹಾಗೂ ಶ್ರೀಕೃಷ್ಣ ಅವರು ಮೃತಪಟ್ಟಿದ್ದಾರೆ. ಗಾಯಗೊಂಡಿರುವ ನರಸಿಂಹ ಹಾಗೂ ವೆಂಕಟಾಚಲಪತಿ ಎಂಬುವರ ಸ್ಥಿತಿ ಗಂಭೀರವಾಗಿರುವ ಕಾರಣ ಅವರನ್ನು ಬೆಂಗಳೂರಿನ (Bengaluru) ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಒ. ಧನಂಜಯ ಅವರು ಪಾವಗಡ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ಪ್ರಾಂಶುಪಾಲರಾಗಿದ್ದರು. ಇನ್ನು ಶ್ರೀಕೃಷ್ಣ ಅವರು ಪಾವಗಡ ತಾಲೂಕಿನ ಗೌಡೇಟಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾಗಿದ್ದರು. ಪಲ್ಟಿಯಾದ ತೀವ್ರತೆಗೆ ಕಾರು ಕೂಡ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪಾವಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ