AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವರ್ಕರ್ ಫೋಟೋ ಬದಲಾವಣೆ ವಿಚಾರ; ಸಚಿವರು, ಶಾಸಕರು ತಮ್ಮ ಕೆಲಸಗಳನ್ನು ಮಾಡಲಿ ಎಂದ ಸ್ಪೀಕರ್ ಯುಟಿ ಖಾದರ್

ಬೆಳಗಾವಿ ಸುವರ್ಣ ಸೌಧದಲ್ಲಿ ಸ್ಪೀಕರ್ ಯು.ಟಿ ಖಾದರ್, ಸಭಾಪತಿ ಬಸವರಾಜ ಹೊರಟ್ಟಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ವಿಧಾನಸೌಧದ ಒಳಗಡೆ ಇರುವ ವೀರ ಸಾವರ್ಕರ್ ಫೋಟೋ ಬದಲಾವಣೆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ ಹೇಳಿಕೆ ಪ್ರಸ್ತಾಪವಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಯುಟಿ ಖಾದರ್, ಸಚಿವರು ಹಾಗೂ ಶಾಸಕರು ತಮ್ಮ ತಮ್ಮ ಕೆಲಸಗಳನ್ನು ಮಾಡಲಿ ಎಂದರು.

ಸಾವರ್ಕರ್ ಫೋಟೋ ಬದಲಾವಣೆ ವಿಚಾರ; ಸಚಿವರು, ಶಾಸಕರು ತಮ್ಮ ಕೆಲಸಗಳನ್ನು ಮಾಡಲಿ ಎಂದ ಸ್ಪೀಕರ್ ಯುಟಿ ಖಾದರ್
ಯುಟಿ ಖಾದರ್ ಮತ್ತು ಪ್ರಿಯಾಂಕ್ ಖರ್ಗೆ
Follow us
Anil Kalkere
| Updated By: Rakesh Nayak Manchi

Updated on: Dec 08, 2023 | 3:34 PM

ಬೆಳಗಾವಿ, ಡಿ.8: ಅವಕಾಶ ಇದ್ದಿದ್ದರೆ ವಿಧಾನಸೌಧದಲ್ಲಿರುವ ವೀರ ಸಾವರ್ಕರ್ ಫೋಟೋ ಬದಲಾಯಿಸುತ್ತಿದ್ದೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿಕೆ ವಿಚಾರವಾಗಿ ಮಾತನಾಡಿದ ಸ್ಪೀಕರ್ ಯುಟಿ ಖಾದರ್ (UT Khader), ಮಂತ್ರಿಗಳು ಮತ್ತು‌ ಶಾಸಕರ ಕೆಲಸ ಸರಿಯಾದ ಸಮಯಕ್ಕೆ ಬರುವುದು, ಉತ್ತಮವಾದ ಚರ್ಚೆಗೆ, ಪ್ರಶ್ನೆಗೆ ಉತ್ತರ ಕೊಡುವಂತಹ ಕೆಲಸಗಳನ್ನ ಚೆನ್ನಾಗಿ ಮಾಡಲಿ ಎಂದರು.

ಯಾರು ಏನು ಕೆಲಸ ಮಾಡಬೇಕೋ ಅದನ್ನ ಮಾಡಲಿ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ‌ ಈ‌ ರಥವನ್ನ ಮುಂದಕ್ಕೆ ತೆಗೆದುಕೊಂಡು ಹೋಗಿ. ಇಲ್ಲವಾದರೆ ಅಲ್ಲೇ ಇಟ್ಟು ಬಿಡಿ, ಹಿಂದಕ್ಕೆ ಹೋಗಬೇಡಿ ಅಂತ ಅಂಬೇಡ್ಕರ್ ಹೇಳಿದ್ದಾರೆ. ಹಿಂದೆ ಏನಾಗಿದೆ ಅನ್ನೋದು ಬೇಡ. ಮುಂದೆ ಏನಾಗಬೇಕು ಅಂತ ಸಂವಿಧಾನ ಬದ್ಧವಾಗಿ ಕೆಲಸ ಮಾಡಬೇಕು ಎಂದರು.

ಸಮಾಜವನ್ನ ಒಗ್ಗಟ್ಟು ಮಾಡುವುದು ನನ್ನ ಜವಾಬ್ದಾರಿ. ಅದು ನನ್ನ ಮೊದಲ ಆಧ್ಯತೆಯಾಗಿದೆ. ಯಶವಂತಪುರ ಮೇಲ್ಸೇತುವೆ ಇದೆ. ಅದರ ಕೆಳಗೆ ಈಗ ಯಾರೂ ಹೋಗುವುದಿಲ್ವಾ? ಸಚಿವರು ಹಾಗೂ ಶಾಸಕರು ತಮ್ಮ ತಮ್ಮ ಕೆಲಸಗಳನ್ನ ಮಾಡಲಿ ಎಂದು ಸ್ಪೀಕರ್ ಖಾದರ್ ಸಲಹೆ ನೀಡಿದರು.

ಇದನ್ನೂ ಓದಿ: ವೀರ ಸಾವರ್ಕರ್ ನಿಮ್ಮಂತೆ ವಂಶವಾದದಿಂದ ಬೆಳೆದವರಲ್ಲ: ಸಚಿವ ಪ್ರಿಯಾಂಕ್ ಖರ್ಗೆಗೆ ಸಿಟಿ ರವಿ ತೀಕ್ಷ್ಣ ತಿರುಗೇಟು

ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಿಟ್ಟು ಬಂದರೆ ರುಂಡನೇ ತೆಗೆಯುತ್ತೇನೆ ಅಂತಾರೆ. ತೆಗೆಯುತ್ತಾರಾ ಎಂದು ಹೇಳಿ ನಕ್ಕರು.

ಬೆಳಗಾವಿ ಸುವರ್ಣ ಸೌಧದಲ್ಲಿ ಸ್ಪೀಕರ್ ಯು.ಟಿ ಖಾದರ್ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಬಸವರಾಜ ಹೊರಟ್ಟಿ,ಈ ಬಾರೀ ಸ್ವಲ್ಪ ಪ್ರತಿಭಟನೆ ಇದ್ದವು. ಒಂದಷ್ಟು ಅಜೆಂಡಾಗಳನ್ನ ಚರ್ಚೆ ಮಾಡಲಾಯ್ತು. ಮುಂದಿನ‌ವಾರ ಹಲವು ಅಜೆಂಡಾಗಳ ಬಗ್ಗೆ ಚರ್ಚೆ ಆಗಲಿದೆ. ಡಿ.12 ರ ಸಂಜೆ 6 ಗಂಟೆಗೆ ಸುವರ್ಣ ಕಾರ್ಯಕ್ರಮ ನಡೆಸಲು ತೀರ್ಮಾನ ಮಾಡಿದ್ದೇವೆ ಎಂದರು.

ಯು.ಟಿ ಖಾದರ್ ಮಾತನಾಡಿ, ಸುವರ್ಣ ಕಾರ್ಯಕ್ರಮಕ್ಕೆ ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಸದಸ್ಯರು ಭಾಗಿಯಾಗಲಿದ್ದಾರೆ. ವಿಧಾನ ಮಂಡಲಕ್ಕೆ ಗೌರವ ಕೊಟ್ಟಿರುವ ಮಾಜಿ‌ ಸಭಾಧ್ಯಕ್ಷರು ಹಾಗೂ ಮಾಜಿ ಸಭಾತಿಗಳಿಗೂ ಆಹ್ವಾನ ನೀಡಿದ್ದೇವೆ. ಕಾರ್ಯಕ್ರಮಕ್ಕೂ ಮುನ್ನ ಕರ್ನಾಟಕ ಪಾರಂಪರೆ ಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಗಾವಿ ಜನರಿಗೆ ಈ ಕಾರ್ಯಕ್ರಮ ನಡೆಯಬೇಕು ಅಂತ ಆಸೆಯಾಗಿದ್ದಾರೆ. ಆಳ್ವಾಸ್ ನುಡಿ ಸಿರಿ ತಂಡದಿಂದ ಕಾರ್ಯಕ್ರಮ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ 450 ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಇದೊಂದು ವಿಶಿಷ್ಠ ಕಾರ್ಯಕ್ರಮವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿ ಈ‌ ನಿರ್ಧಾರ ಕೈಗೊಳ್ಳಲಾಗಿದೆ. ಸುವರ್ಣ ಸೌಧದ ಹೆಮ್ಮೆ ಹೆಚ್ಚಿಸಲು ಈ ತೀರ್ಮಾನ ಕೈಗೊಂಡಿದ್ದೇವೆ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.

ಒಂದು ರಾಜ್ಯದಲ್ಲಿ ಎರಡು ವಿಧಾನಸೌಧ ಒಂದೇ ಕಡೆ ಇಲ್ಲ. ಮಹಾರಾಷ್ಟ್ರ ಮತ್ತು‌ ಹಿಮಾಚಲ ಪ್ರದೇಶದಲ್ಲೂ ಇದೆ. ಇದು ಪ್ರವಾಸಿ ತಾಣವಾಗಿ ಬೆಳೆಯಬೇಕು. ಹೀಗಾಗಿ ಸುವರ್ಣ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಯುಟಿ ಖಾದರ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ