ಮುಂದಿನ ವರ್ಷ ಕರ್ನಾಟಕದಲ್ಲಿ ನಡೆಯುತ್ತೆ ಮತದಾರರ ಪಟ್ಟಿ ಪರಿಷ್ಕರಣೆ: ರಾಜ್ಯ ಚುನಾವಣಾ ಆಯೋಗ
ಮತಗಳ್ಳತನ ಆರೋಪ ಸದ್ಯ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಬಗ್ಗೆ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ಪರಿಷ್ಕರಣೆ ಮಾಡುವುದಾಗಿ ಹೇಳಿತ್ತು. ಇದರ ಬೆನ್ನಲ್ಲೇ ಕರ್ನಾಟಕ ಮುಖ್ಯ ಚುನಾವಣಾ ಆಯೋಗ ಮಹತ್ವದ ಹೆಜ್ಜೆ ಇಟ್ಟಿದ್ದು, ಮುಂದಿನ ವರ್ಷ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದೆ ಎಂದು ತಿಳಿಸಿದೆ.

ಬೆಂಗಳೂರು, ಸೆಪ್ಟೆಂಬರ್ 17: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ವೇಳೆ ದೊಡ್ಡ ಮತ ಕಳ್ಳತನ (Vote Scam) ನಡೆದಿದೆ ಎಂದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತು ಭಾರಿ ಸಂಚಲನ ಸೃಷ್ಟಿಸಿತ್ತು. ಕಾಂಗ್ರೆಸ್ ನಾಯಕರು ಬಿಜೆಪಿ ಮೇಲೆ ಆರೋಪ ಮಾಡಿದ್ದರು. ಇತ್ತೀಚೆಗೆ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಪರಿಷ್ಕರಣೆ ಮಾಡುವುದಾಗಿ ಹೇಳಿದ್ದರು. ಈ ಮಧ್ಯೆ ಕರ್ನಾಟಕದಲ್ಲಿ ಮುಂದಿನ ವರ್ಷ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಯಲಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾ ಆಯೋಗ ತಿಳಿಸಿದೆ.
ಮತದಾರರ ಪಟ್ಟಿ ಸಿದ್ಧತೆ
ರಾಜ್ಯ ಶಾಸಕಾಂಗ ಮತ್ತು ಸಂಸತ್ತಿಗೆ ನಿಯತಕಾಲಿಕವಾಗಿ ಚುನಾವಣೆಗಳನ್ನು ನಡೆಸಲು ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಹೊಸ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿ ಪ್ರಕಟಿಸಿದಾಗಲೆಲ್ಲಾ, ಹಿಂದಿನ ಮತದಾರರ ಪಟ್ಟಿಗಳು ನಿಷ್ಕ್ರಿಯವಾಗುತ್ತವೆ ಮತ್ತು ಹೊಸದು ಮಾತ್ರ ಜಾರಿಯಲ್ಲಿರುತ್ತದೆ.
ಇದನ್ನೂ ಓದಿ: ರಾಹುಲ್ ಗಾಂಧಿ ಮತಗಳ್ಳತನ ಆರೋಪ ಸಿಎಂ ಸಿದ್ದರಾಮಯ್ಯ ಬುಡಕ್ಕೆ!
ಹಿಂದಿನ ಮತದಾರರ ಪಟ್ಟಿಯನ್ನು ಉಲ್ಲೇಖಕ್ಕಾಗಿ ಮಾತ್ರ ಬಳಸಲಾಗುತ್ತದೆ. ಭಾರತ ಸಂವಿಧಾನದ 324 ನೇ ವಿಧಿಯ ಅಡಿ, ವಿಶೇಷ ತೀವ್ರ ಪರಿಷ್ಕರಣೆ ಸೂಕ್ತವೆಂದು ಭಾವಿಸಿ ಆದೇಶಿಸಲು ಇಸಿಐಗೆ ಅಧಿಕಾರ ನೀಡಲಾಗಿದೆ. ಆ ಪ್ರಕಾರ ಪರಿಷ್ಕರಣೆಗಾಗಿ ಇಸಿಐ ಎಸ್ಐಆರ್ ಅನ್ನು ಘೋಷಿಸುತ್ತದೆ.
ವಿಶೇಷ ತೀವ್ರ ಪರಿಷ್ಕರಣೆ ಏಕೆ ಅಗತ್ಯ?
ಪ್ರತಿ ಭಾರತೀಯ ನಾಗರಿಕನು ತನಗೆ ಸಂಬಂಧಿಸಿದ ವಿಧಾನಮಂಡಲವು ನಿಗದಿಪಡಿಸಿದ ದಿನಾಂಕದಂದು ಕನಿಷ್ಠ 18 (ಹದಿನೆಂಟು) ವರ್ಷ ವಯಸ್ಸು ಹೊಂದಿರಬೇಕು. ವಾಸಸ್ಥಳದ ಕೊರತೆ, ಮಾನಸಿಕ ಅಸ್ವಸ್ಥತೆ, ಅಪರಾಧ ಅಥವಾ ಭ್ರಷ್ಟ, ಅಕ್ರಮಗಳ ಆಧಾರದ ಮೇಲೆ ಸಂವಿಧಾನ ಅಥವಾ ಸಂಬಂಧಿತ ಕ್ಷೇತ್ರ ನಿಗದಿ ಪಡಿಸಿರುವ ಯಾವುದೇ ಕಾನೂನು ಪ್ರಕಾರ ಅನರ್ಹನಾಗಿರದಿದ್ದಲ್ಲಿ, ಅಂತಹ ಪ್ರತಿ ವ್ಯಕ್ತಿಗೂ ಯಾವುದೇ ಚುನಾವಣೆಯಲ್ಲಿ ಮತದಾರರಾಗಿ ನೋಂದಾಯಿಸಿಕೊಳ್ಳುವ ಹಕ್ಕು ಇರುತ್ತದೆ.
ಇದನ್ನೂ ಓದಿ: ಮತಗಳ್ಳತನ: ಅಷ್ಟೆಲ್ಲಾ ಆರೋಪ ಮಾಡಿ ಚುನಾವಣೆ ಆಯೋಗಕ್ಕೆ ದೂರು ನೀಡದೇ ಹೋದ ರಾಹುಲ್ ಗಾಂಧಿ
ಜನಸಂಖ್ಯಾ ಬದಲಾವಣೆ, ನಕಲಿ ಮತ್ತು ಅನರ್ಹ ಮತ ತಡೆಗಟ್ಟುವಿಕೆ, ಚುನಾವಣಾ ವಂಚನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಅಗತ್ಯವಾಗಿದೆ. ಯಾವುದೇ ಅರ್ಹ ಮತದಾರರನ್ನು ಮತದಾನದ ಪಟ್ಟಿಯಿಂದ ಹೊರಗಿಡದಿರುವುದು ಮತ್ತು ಅನರ್ಹ ವ್ಯಕ್ತಿಯನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಎಸ್ಐಆರ್ನ ಪ್ರಮುಖ ಉದ್ದೇಶವಾಗಿದೆ.
ಎಸ್ಐಆರ್ನ ಪ್ರಮುಖ ಹಂತಗಳು
- ಮನೆ ಮನೆಗೆ ತೆರಳಿ ಗಣತಿ ಮಾಡುವುದು
- ಕರಡು ಮತದಾರರ ಪಟ್ಟಿ ಪ್ರಕಟಿಸುವುದು
- ಹಕ್ಕುಗಳು ಮತ್ತು ಆಕ್ಷೇಪಣೆ ಹಂತ
- ದಾಖಲೆಗಳ ಪರಿಶೀಲನೆ
- ಅಂತಿಮ ಮತದಾರರ ಪಟ್ಟಿ ಪ್ರಕಟಿಸುವುದು
Published On - 1:44 pm, Wed, 17 September 25




