ಮುದ್ರಾಂಕ ಶುಲ್ಕ ಬಾಕಿ ಉಳಿಸಿಕೊಂಡ ರಾಜ್ಯದ ಟೋಲ್ ಗೇಟ್‌ ಏಜೆನ್ಸಿಗಳು; ಸರ್ಕಾರದ ಬೊಕ್ಕಸಕ್ಕೆ ಬರಬೇಕಿದೆ 500 ಕೋಟಿ ರೂ. !

ರಾಜ್ಯಾದ್ಯಂತ ಇರುವ ಟೋಲ್ ಗೇಟ್‌ಗಳನ್ನು ನಿರ್ವಹಿಸುತ್ತಿರುವ ಎಲ್ಲ ಖಾಸಗಿ ಏಜೆನ್ಸಿಗಳು ಪಾವತಿಸಬೇಕಾದ ದೀರ್ಘಾವಧಿಯ ಮುದ್ರಾಂಕ ಶುಲ್ಕ ಸಮಸ್ಯೆಯನ್ನು ಬಗೆಹರಿಸಲು ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ನಿರ್ಧರಿಸಿದೆ.

ಮುದ್ರಾಂಕ ಶುಲ್ಕ ಬಾಕಿ ಉಳಿಸಿಕೊಂಡ ರಾಜ್ಯದ ಟೋಲ್ ಗೇಟ್‌ ಏಜೆನ್ಸಿಗಳು; ಸರ್ಕಾರದ ಬೊಕ್ಕಸಕ್ಕೆ ಬರಬೇಕಿದೆ 500 ಕೋಟಿ ರೂ. !
ಟೋಲ್​
Updated By: ವಿವೇಕ ಬಿರಾದಾರ

Updated on: Sep 09, 2023 | 12:43 PM

ಬೆಂಗಳೂರು: ರಾಜ್ಯಾದ್ಯಂತ ಇರುವ ಟೋಲ್ ಗೇಟ್‌ಗಳನ್ನು (Toll Gate) ನಿರ್ವಹಿಸುವ 53 ಖಾಸಗಿ ಏಜೆನ್ಸಿಗಳು ಬಾಕಿ ಇಟ್ಟುಕೊಂಡಿರುವ ಮುದ್ರಾಂಕ ಶುಲ್ಕವನ್ನು (Stamp Duty) ಪಾವತಿಸದರೇ ಸರ್ಕಾರದ ಬೊಕ್ಕಸಕ್ಕೆ 500 ಕೋಟಿ ರೂ. ಆದಾಯ ಬರಲಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ದಿ ನ್ಯೂ ಇಂಡಿಯನ್​ ಎಕ್ಸಪ್ರೆಸ್​ ವರದಿ ಮಾಡಿದೆ. ಹೌದು ರಾಜ್ಯಾದ್ಯಂತ ಇರುವ ಟೋಲ್ ಗೇಟ್‌ಗಳ ನಿರ್ವಹಿಸುತ್ತಿರುವ ಎಲ್ಲ ಖಾಸಗಿ ಏಜೆನ್ಸಿಗಳು ಪಾವತಿಸಬೇಕಾದ ದೀರ್ಘಾವಧಿಯ ಮುದ್ರಾಂಕ ಶುಲ್ಕ ಸಮಸ್ಯೆಯನ್ನು ಬಗೆಹರಿಸಲು ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ನಿರ್ಧರಿಸಿದೆ. ಈ ಮೂಲಕ ಬಾಕಿ ಇರುವ ಮುದ್ರಾಂಕ ಶುಲ್ಕವನ್ನು ವಸೂಲಿ ಮಾಡಲು ಇಲಾಖೆ ತೀರ್ಮಾನಿಸಿದೆ.

ಈ ಟೋಲ್​ಗೇಟ್‌ಗಳನ್ನು ನಿರ್ವಹಿಸಲು ಏಜೆನ್ಸಿಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳ ಬಗ್ಗೆ ವಿವರಗಳನ್ನು ನೀಡುವಂತೆ ಇಲಾಖೆಯು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಪತ್ರ ಬರೆದಿದೆ. ಈ ಮಾಹಿತಿ ಮೂಲಕ ಏಜೆನ್ಸಿಗಳಿಂದ ಬಾಕಿ ಇರುವ ಮುದ್ರಾಂಕ ಶುಲ್ಕವನ್ನು ಸಂಗ್ರಹಿಸಬಹುದಾಗಿದೆ.

ಇದನ್ನೂ ಓದಿ: Toll Update: ಕೇಂದ್ರದಿಂದ ಸದ್ಯದಲ್ಲೇ ತಡೆರಹಿತ ಟೋಲ್ ಸಿಸ್ಟಂ; ಹೆದ್ದಾರಿ ಪ್ರಯಾಣ ಇನ್ನೂ ಸುಗಮ

ಗುತ್ತಿಗೆದಾರನು ಸ್ಟ್ಯಾಂಪ್ ಡ್ಯೂಟಿಗಾಗಿ ಎನ್​ಹೆಚ್​ಎಐನೊಂದಿಗೆ ಮಾಡಿಕೊಂಡ ಒಪ್ಪಂದದಲ್ಲಿ ನಮೂದಿಸಿದ ಮೊತ್ತದ ಶೇ1ರಷ್ಟನ್ನು (ಒಪ್ಪಂದ ಪಡೆಯಲು ಉಲ್ಲೇಖಿಸಿದ ಮೊತ್ತ) ಇಲಾಖೆಗೆ ಪಾವತಿಸಬೇಕಾಗುತ್ತದೆ. ಇದು ಆರ್ಟಿಕಲ್ 32 (A) (i) ಅಡಿಯಲ್ಲಿ ಕರ್ನಾಟಕ ಸ್ಟ್ಯಾಂಪ್ ಆಕ್ಟ್ 1957 ಗೆ ಅನುಗುಣವಾಗಿದೆ. ಆದರೆ, ಈವರೆಗೆ ಇದು ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ.

ಏಜೆನ್ಸಿಗಳು ಬಾಕಿ ಉಳಿಸಿಕೊಂಡಿರುವ ಮುದ್ರಾಂಕ ಶುಲ್ಕವನ್ನು ಪಾವತಿಸುವಂತೆ ಕರ್ನಾಟಕದ ಮುದ್ರಾಂಕ ಮತ್ತು ನೋಂದಣಿಯ ಇನ್ಸ್‌ಪೆಕ್ಟರ್ ಜನರಲ್ ಬಿಆರ್ ಮಮತಾ ಅವರು ಟೋಲ್ ಗೇಟ್ ಆಪರೇಟಿಂಗ್ ಫರ್ಮ್‌ಗಳಿಗೆ ಹಾಗೂ ಎನ್‌ಎಚ್‌ಎಐಗೆ ಪತ್ರ ಬರೆದಿದ್ದಾರೆ. ಇನ್ನು ಬಾಕಿ ಉಳಿಸಿಕೊಂಡಿರುವ ಏಜೆನ್ಸಿಗಳಿಂದ ಮುದ್ರಾಂಕ ಶುಲ್ಕವನ್ನು ಸಂಗ್ರಹಿಸುವಂತೆ ಜಿಲ್ಲೆಗಳಲ್ಲಿರುವ ಇಲಾಖೆಯ ಕಚೇರಿಗಳಿಗೆ ತಿಳಿಸಿದ್ದಾರೆ.

ಕೆಲವು ಏಜೆನ್ಸಿಗಳು ಅಲ್ಪ ಮೊತ್ತದ ಮುದ್ರಾಂಕ ಶುಲ್ಕವನ್ನು ಪಾವತಿಸಿವೆ. ಆದರೆ ಇದು ಒಪ್ಪಂದದಲ್ಲಿ ಉಲ್ಲೇಖಿಸಿದ ಮೊತ್ತಕ್ಕಿಂತ ಇದು ಕಡಿಮೆಯಾಗಿದೆ ಎಂದು ಏಜೆನ್ಸಿಗಳ ಒಪ್ಪಂದ ಪತ್ರ ಅಧ್ಯಯನ ನಡೆಸಿದಾಗ ಬಹಿರಂಗವಾಗಿದೆ ಎಂದು ಮೂಲವೊಂದು ತಿಳಿಸಿದೆ. ಹೀಗಾಗಿ ಬಾಕಿ ಇರುವ ಮುದ್ರಾಂಕ ಶುಲ್ಕವನ್ನು ಶೀಘ್ರದಲ್ಲಿ ಪಾವತಿಸುವಂತೆ ಸೂಚಿಸಲಾಗಿದೆ. ಒಂದು ವೇಳೆ ಪಾವತಿಸದಿದ್ದರೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ