Assembly Polls: ರಾಜ್ಯ ಬಿಜೆಪಿ ನಾಯಕರು 2023 ವಿಧಾನ ಸಭಾ ಚುನಾವಣೆ ಗೆಲ್ಲಲು ಕೇವಲ ಪ್ರಧಾನಿ ನರೇಂದ್ರ ಮೋದಿಯವರನ್ನು ನೆಚ್ಚಿಕೊಂಡಿದ್ದಾರೆ

|

Updated on: Feb 01, 2023 | 8:04 AM

224-ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 120 ಸ್ಥಾನಗಳನ್ನು ಹೊಂದಿದೆ. ಇವರಲ್ಲಿ ಎಷ್ಟು ಸದಸ್ಯರು ಪ್ರಧಾನಿಗಳ ನೆರವಿಲ್ಲದೆ, ಕೇವಲ ತಮ್ಮ ವರ್ಚಸ್ಸು ಹಾಗೂ ಕ್ಷೇತ್ರಗಳಲ್ಲಿ ಮಾಡಿರಬಹುದಾದ ಅಭಿವೃದ್ಧಿ ಕೆಲಸಗಳ ಬಲದಿಂದ ವಿಧಾನ ಸಭೆಗೆ ಪುನರಾಯ್ಕೆಗೊಳ್ಳಲಿದ್ದಾರೆ?

Assembly Polls: ರಾಜ್ಯ ಬಿಜೆಪಿ ನಾಯಕರು 2023 ವಿಧಾನ ಸಭಾ ಚುನಾವಣೆ ಗೆಲ್ಲಲು ಕೇವಲ ಪ್ರಧಾನಿ ನರೇಂದ್ರ ಮೋದಿಯವರನ್ನು ನೆಚ್ಚಿಕೊಂಡಿದ್ದಾರೆ
ಸಿಎಮ್ ಬಸವರಾಜ ಬೊಮ್ಮಾಯಿ ಮತ್ತು ಪ್ರಧಾನಿ ನರೇಂದ್ರ ಮೋದಿ
Follow us on

ಬೆಂಗಳೂರು:  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಈ ತಿಂಗಳು 6 ರಂದು ರಾಜ್ಯಕ್ಕೆ ಮತ್ತೊಮ್ಮೆ ಭೇಟಿ ನೀಡಲಿರುವುದು ದೃಢಪಟ್ಟಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ನಿಟ್ಟೂರಿನಲ್ಲಿ ಹೆಚ್ ಎ ಎಲ್ ತಯಾರಿಕಾ ಘಟಕದ ಉದ್ಘಾಟನೆ ಜೊತೆಗೆ ಬೇರೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಅವರು ಕೇವಲ ಈ ಅಥವಾ ಇಂಥ ಕಾರ್ಯಕ್ರಮಗಳಿಗಾಗಿ ರಾಜ್ಯಕ್ಕೆ ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ಭೇಟಿ ನೀಡುತ್ತಿದ್ದಾರೆ ಅಂತ ಭಾವಿಸಿದರೆ ತಪ್ಪಾದೀತು. ಇನ್ನೆರಡು ಮೂರು ತಿಂಗಳಲ್ಲಿ ರಾಜ್ಯ ವಿಧಾನ ಸಭೆಗೆ ಚುನಾವಣೆ (assembly polls) ನಡೆಯಲಿದೆ. ಅದಕ್ಕಾಗಿಯೇ ಪ್ರಧಾನಿಗಳು ಒಮ್ಮೆ ದಕ್ಷಿಣ ಕರ್ನಾಟಕ (South Karnataka) (ಅಂತರರಾಷ್ಟ್ರೀಯ ಯೋಗ ದಿನ, ಮೈಸೂರು), ಎರಡು ಸಲ ಉತ್ತರ ಕರ್ನಾಟಕ (ಹುಬ್ಬಳ್ಳಿ-ಕಲಬುರಗಿ-ಯಾದಗಿರಿ) ಮತ್ತು ಈಗ ಮಧ್ಯ ಕರ್ನಾಟಕ (ತುಮಕೂರು) ಆಗಮಿಸಿದ್ದಾರೆ ಮತ್ತು ಅಗಮಿಸಲಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಪ್ರಧಾನಿಗಳ ಭೇಟಿಗಳಿಗೆ ಡೆಸ್ಪರೇಟ್ ಆಗುತ್ತಿದ್ದಾರೆ. ಪ್ರಧಾನಿಗಳ ಭೇಟಿಗಳಿಲ್ಲದೆ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವುದು ಸಾಧ್ಯವಿಲ್ಲ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರ ಸಚಿವ ಸಂಪುಟ ಹಾಗೂ ಶಾಸಕರಿಗೆ ಖಾತ್ರಿಯಾದಂತಿದೆ.

ಇದನ್ನೂ ಓದಿ: Tulu Language: ತುಳುವಿಗೆ ಕರ್ನಾಟಕದ 2ನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಸಮಿತಿ ರಚನೆ: ಸುನಿಲ್ ಕುಮಾರ್

ಪ್ರಾಮಾಣಿಕವಾಗಿ ಯೋಚನೆ ಮಾಡಿ ನೋಡೋಣ. 224-ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 120 ಸ್ಥಾನಗಳನ್ನು ಹೊಂದಿದೆ. ಇವರಲ್ಲಿ ಎಷ್ಟು ಸದಸ್ಯರು ಪ್ರಧಾನಿಗಳ ನೆರವಿಲ್ಲದೆ, ಕೇವಲ ತಮ್ಮ ವರ್ಚಸ್ಸು ಹಾಗೂ ತಮ್ಮ ಕ್ಷೇತ್ರಗಳಲ್ಲಿ ಮಾಡಿರಬಹುದಾದ ಅಭಿವೃದ್ಧಿ ಕೆಲಸಗಳ ಬಲದಿಂದ ವಿಧಾನ ಸಭೆಗೆ ಪುನರಾಯ್ಕೆಗೊಳ್ಳಲಿದ್ದಾರೆ? ಬಹಳ ಕಡಿಮೆ ಸದಸ್ಯರಿಗೆ ಅಂಥ ಆತ್ಮವಿಶ್ವಾಸವಿರಬಹುದು.

ಹಲವಾರು ವೈಫಲ್ಯಗಳು, ಆರೋಪಗಳು

ನಲ್ವತ್ತು ಪರ್ಸೆಂಟ್ ಕಮೀಶನ್ ಆರೋಪ, ಕೋವಿಡ್ ನಿರ್ವಹಣೆಯಲ್ಲಿ ವೈಫಲ್ಯತೆ, ಪಿಎಸ್ ಐ ನೇಮಕಾತಿ ಹಗರಣ, ಕುಂಠಿತಗೊಂಡಿರುವ ಅಭಿವೃದ್ಧಿ ಕಾರ್ಯಗಳು, ಆಡಳಿತ ಯಂತ್ರದ ವೈಫಲ್ಯತೆಯಿಂದಾಗಿ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರದ ಅರೋಪಗಳು ಕೇಳಿಬರುತ್ತಿವೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯದಮಟ್ಟಿಗೆ ಬಿಜೆಪಿಯ ಅತಿದೊಡ್ಡ ನಾಯಕ, ಮತ್ತು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದವರು. ಲಿಂಗಾಯತ ಸಮುದಾಯ ಮಾತ್ರವಲ್ಲ, ಉಳಿದೆಲ್ಲ ಸಮುದಾಯಗಳ ಮತದಾರರನ್ನು ಸೆಳೆಯುವ ಶಕ್ತಿ ಅವರಲ್ಲಿದೆ. ಆದರೆ, ಕಾರಣಗಳು ಹಲವಾರು ಇರಬಹುದು-ರಾಜ್ಯದ ಕೆಲ ಬಿಜೆಪಿ ನಾಯಕರು ಅವರನ್ನು ಉಪೇಕ್ಷಿಸುತ್ತಿದ್ದಾರೆ. ಹಾಗೆ ನೋಡಿದರೆ, ಮುಖ್ಯಮಂತ್ರಿ ಸ್ಥಾನದಿಂದ ಸರಿಸಿದಾಗ ಖುದ್ದು ಯಡಿಯೂರಪ್ಪನವರೇ ಹತಾಶರಾಗಿದ್ದರು, ಭ್ರಮನಿರಸನಗೊಂಡಿದ್ದರು.

ವಿಜಯೇಂದ್ರನನ್ನು ಪ್ರಮೋಟ್ ಮಾಡುತ್ತಿದ್ದಾರೆ

ಈಗ ಅವರು ತಮ್ಮ ಮಗ ಬಿವೈ ವಿಜಯೇಂದ್ರ ಅವರನ್ನು ತಮ್ಮ ಪರ್ಯಾಯವಾಗಿ ಬೆಳಸುತ್ತಿದ್ದಾರೆ. ವಿಜಯೇಂದ್ರ ಪಕ್ಷ ಸಂಘಟನೆಯನ್ನು ಅದ್ಭುತವಾಗಿ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸಮಸ್ಯೆಯೇನೆಂದರೆ, ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿರುವ ಅವರಿಗೆ ಪಕ್ಷದಲ್ಲೇ ಮಗ್ಗುಲ ಮುಳ್ಳುಗಳಿವೆ. ಅವರ ಏಳಿಗೆ ಸಹಿಸದ ಒಂದಷ್ಟು ನಾಯಕರಿದ್ದಾರೆ ಎಂಬ ಆರೋಪವಿದೆ. ಬಿಎಸ್ ವೈ ಕುಟುಂಬದ ಬದ್ಧ ವೈರಿಯಂತಾಡುವ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಪಿಎಸ್ ಐ ನೇಮಕಾತಿ ಪ್ರಕರಣದ ಕಿಂಗ್ ಪಿನ್ ವಿಜಯೇಂದ್ರ ಅಂತ ಆರೋಪಿಸಿದ್ದರು. ಅದನ್ನವರು ಸಾಬೀತು ಮಾಡಲಿಲ್ಲ ಅನ್ನೋದು ಬೇರೆ ವಿಷಯ. ಯತ್ನಾಳ್ ಹಿಟ್ ಅಂಡ್ ರನ್ ಕೇಸ್ ಅಂತ ಎಲ್ಲರಿಗೂ ಗೊತ್ತಿದೆ.

ಇದನ್ನೂ ಓದಿ: Himachal Pradesh Snowfall: ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ; 3 ರಾಷ್ಟ್ರೀಯ ಹೆದ್ದಾರಿ ಸೇರಿ 479 ರಸ್ತೆಗಳು ಬಂದ್

ಯಡಿಯೂರಪ್ಪರನ್ನು ಬಿಟ್ಟು ಬೊಮ್ಮಾಯಿ, ಆರ್ ಅಶೋಕ್, ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಕೆ ಎಸ್ ಈಶ್ವರಪ್ಪ, ಸಿಟಿ ರವಿ, ಬಿ ಸಿ ನಾಗೇಶ್ ಇನ್ನೂ ಕೆಲ ಪ್ರಮುಖ ನಾಯಕರು ಪ್ರಚಾರ ಮಾಡಿ ಪಕ್ಷದ ಸದಸ್ಯರನ್ನು ಗೆಲ್ಲಿಸಬಲ್ಲರೇ? ಸಾಧ್ಯವಿಲ್ಲ ಅಂತ ನಿಮಗನಿಸುವುದಿಲ್ಲವೇ? ಹಾಗಾಗೇ, ಇವರೆಲ್ಲ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಪದೇಪದೆ ರಾಜ್ಯಕ್ಕೆ ಬರಲಿ ಅಂತ ತವಕಿಸುತ್ತಾರೆ.

ಪ್ರಧಾನಿ ಮೋದಿ ಈಗಲೂ ಅತ್ಯಂತ ಜನಪ್ರಿಯ

ಪ್ರಧಾನಿ ಮೋದಿಯವರ ಮಾತು ಬಿಡಿ. ಇಂಗ್ಲಿಷ್ ಮಾಧ್ಯಮವೊಂದು ಇತ್ತೀಚಿಗೆ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಈಗ ಸಾರ್ವತ್ರಿಕ ಚುನಾವಣೆ ನಡೆದರೂ ಅವರು ಬಿಜೆಪಿಗೆ 298 ಸೀಟು ಗೆಲ್ಲಿಸಿಕೊಡುತ್ತಾರಂತೆ. ಭಾರತ ಜೋಡೋ ಯಾತ್ರೆ ಮೂಲಕ ಪಕ್ಷವನ್ನು ಸಂಘಟಿಸಿರುವ ರಾಹುಲ್ ಗಾಂಧಿ ನೇತೃತ್ವದ ಯುಪಿಎ 153 ಸ್ಥಾನಗಳನ್ನು ಗೆಲ್ಲಬಹುದಂತೆ. ಪ್ರಧಾನಿ ಮಂತ್ರ ಪಟ್ಟದ ರೇಸ್ ನಲ್ಲಿ ಶೇಕಡಾ 67 ಜನ ಮೋದಿ ತಮ್ಮ ಆಯ್ಕೆ ಎಂದು ಹೇಳಿದ್ದಾರೆ. ಎರಡನೇ ಸ್ಥಾನದಲ್ಲಿರುವ ಅರವಿಂದ್ ಕೇಜ್ರಿವಾಲ್ ಶೇಕಡ 24 ರಷ್ಟು ಜನರ (ಸಮೀಕ್ಷೆಯಲ್ಲಿ ಭಾಗವಹಿಸಿದವರು) ಆಯ್ಕೆಯಾಗಿದ್ದಾರೆ. ಮಮತಾ ಬ್ಯಾನರ್ಜಿ ಶೇಕಡ 20ರಷ್ಟು ಜನರ ಆಯ್ಕೆಯಾದರೆ, ಕೇವಲ 13 ಪರ್ಸೆಂಟ್ ಜನ ರಾಹುಲ್ ಪ್ರಧಾನಿಯಾಗಲಿ ಅಂದಿದ್ದಾರೆ.

ಅದು ಸರಿ, ಪ್ರಧಾನಿ ಮೋದಿ ಜನಪ್ರಿಯತೆ ಬಗ್ಗೆ ಎರಡು ಮಾತಿಲ್ಲ. ಆದರೆ ಬಿಜೆಪಿ ನಾಯಕರು ಕೇವಲ ಅವರನ್ನು ಮಾತ್ರ ನೆಚ್ಚಿಕೊಂಡು ಮುಂದುವರಿದರೆ ಹೇಗೆ? ಮುಂದೆ ಅವರ ಈ ಧೋರಣೆ ದುಬಾರಿಯಾಗಲಾರದೇ?

ಮತ್ತಷ್ಟು ಕರ್ನಾಟಕ ಸುದ್ದಿಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ