ಬಿಲ್​ ಪೇ ಮಾಡಿದ್ದಕ್ಕೂ ರಾಜಕೀಯ ಬಣ್ಣ; ತೇಜಸ್ವಿ ಸೂರ್ಯಗೆ ಹೋಟೆಲ್​ನವರಿಂದಲೇ ಬಂತು ಎಪಿಕ್​ ಉತ್ತರ!

ತೇಜಸ್ವಿ ಸೂರ್ಯ ತಮಿಳುನಾಡಿಗೆ ತೆರಳಿದ್ದರು. ಈ ವೇಳೆ ಹೋಟೆಲ್​ ಒಂದರಲ್ಲಿ ಬೆಳಗಿನ ಉಪಹಾರ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಬಗ್ಗೆ ಟ್ವೀಟ್​ ಮಾಡಿದ್ದರು.

ಬಿಲ್​ ಪೇ ಮಾಡಿದ್ದಕ್ಕೂ ರಾಜಕೀಯ ಬಣ್ಣ; ತೇಜಸ್ವಿ ಸೂರ್ಯಗೆ ಹೋಟೆಲ್​ನವರಿಂದಲೇ ಬಂತು ಎಪಿಕ್​ ಉತ್ತರ!
ತೇಜಸ್ವಿ ಸೂರ್ಯ
Edited By:

Updated on: Apr 03, 2021 | 8:13 PM

ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಲೋಕಸಭಾ ಕ್ರೇತ್ರದ ಸಂಸದ. ಅವರು ಎಲ್ಲೇ ಹೋದರೂ, ಏನೇ ಒಳ್ಳೆಯದನ್ನು ಮಾಡಿದರೂ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿ ಅದರ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಳ್ಳುತ್ತಾರೆ. ಆದರೆ, ಕೆಲವೊಮ್ಮೆ ಅವರು ಟ್ರೋಲ್​ ಆದ ಉದಾಹರಣೆ ಇದೆ. ಈಗ ಹೋಟೆಲ್​ ಒಂದರಲ್ಲಿ ಬಿಲ್​ ಪೇ ಮಾಡಿದ್ದಕ್ಕೆ ರಾಜಕೀಯ ಬಣ್ಣ ಹಚ್ಚಲು ಹೋಗಿದ್ದ ತೇಜಸ್ವಿ ಸೂರ್ಯ ಅವರು ಮುಖಭಂಗ ಅನುಭವಿಸಿದ್ದಾರೆ.

ತೇಜಸ್ವಿ ಸೂರ್ಯ ತಮಿಳುನಾಡಿಗೆ ತೆರಳಿದ್ದರು. ಈ ವೇಳೆ ಕೊಯಮತ್ತೂರು ಹೋಟೆಲ್​ ಒಂದರಲ್ಲಿ ಬೆಳಗಿನ ಉಪಹಾರ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಬಗ್ಗೆ ಟ್ವೀಟ್​ ಮಾಡಿದ್ದ ಅವರು, ನಾನು ರೆಸ್ಟೋರೆಂಟ್​ ಒಂದರಲ್ಲಿ ಉಪಹಾರ ಸೇವಿಸಿದ ನಂತರ ಹಣ ಪಾವತಿಸಲು ಹೋದೆ. ಕ್ಯಾಶಿಯರ್​​ ಹಣ ತೆಗೆದುಕೊಳ್ಳಲು ಹಿಂಜರಿಕೆ ತೋರಿದ್ದರು. ಒತ್ತಾಯ ಮಾಡಿದ ನಂತರ ಹಿಂಜರಿಕೆಯಿಂದಲೇ ಹಣ ತೆಗೆದುಕೊಂಡರು. ನಾನು ಅವರಿಗೆ ಹೇಳಿದೆ. ಸಣ್ಣ ಉದ್ಯಮಿಗಳಿಂದಲೂ ಹಣ ವಸೂಲಿ ಮಾಡಲು ನಮ್ಮದು ಡಿಎಂಕೆ ಅಲ್ಲ. ನಾವು ಬಿಜೆಪಿಯವರು. ನಮ್ಮ ಪಕ್ಷ ಎಲ್ಲರನ್ನೂ ಸಮಾನ ರೀತಿಯಲ್ಲಿ ನೋಡುತ್ತದೆ ಎಂದು ಬರೆದುಕೊಂಡಿದ್ದರು.

ಈ ಟ್ವೀಟ್​ ಅನ್ನು ಹಾಕಿಕೊಂಡಿರುವ ಅನ್ನಪೂರ್ಣ ರೆಸ್ಟೋರೆಂಟ್​ನವರು ಇದಕ್ಕೆ ಉತ್ತರಿಸಿದ್ದಾರೆ. ತೇಜಸ್ವಿ ಸೂರ್ಯ ಅವರೇ ನಮ್ಮ ರೆಸ್ಟೋರೆಂಟ್​ನಲ್ಲಿ ನಿಮಗೆ ಸೇವೆ ನೀಡಿದ್ದಕ್ಕೆ ಸಂತೋಷವಾಗಿದೆ. ಅನ್ನಪೂರ್ಣದಲ್ಲಿ ನಾವು ಎಲ್ಲರನ್ನೂ ಒಂದೇ ರೀತಿಯಲ್ಲಿ ಸೇವೆ ನೀಡುತ್ತೇವೆ. ಇಲ್ಲಿ ಆಹಾರ ಸೇವಿಸಿದ ಪ್ರತಿಯೊಬ್ಬರೂ ಬಿಲ್‌ ಪೇ ಮಾಡುತ್ತಾರೆ. ಯಾರೂ ಇಲ್ಲಿ ಉಚಿತವಾಗಿ ಊಟ ಕೊಡಿ ಎಂದು ಕೇಳಲಿಲ್ಲ. ಸಮಾಜಕ್ಕಾಗಿ ಒಳ್ಳೆಯ ಕೆಲಸ ಮಾಡಿದವರಿಂದ ನಾವು ಕೆಲವೊಮ್ಮೆ ಹಣವನ್ನು ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.

ಈ ಮೂಲಕ ನಮ್ಮ ದೃಷ್ಟಿಯಲ್ಲಿ ಎಲ್ಲಾ ಪಕ್ಷದವರೂ ಒಂದೇ ಎನ್ನುವ ಅರ್ಥದಲ್ಲಿ ಹೋಟೆಲ್​ನವರು ಉತ್ತರಿಸಿದ್ದಾರೆ. ಅಚ್ಚರಿ ಎಂದರೆ ತೇಜಸ್ವಿ ಸೂರ್ಯ ಅವರು ಈ ಟ್ವೀಟ್​ ಅನ್ನು ಡಿಲೀಟ್​ ಮಾಡಿದ್ದಾರೆ. ಅವರ ಖಾತೆಯಲ್ಲಿ ಈ ಟ್ವೀಟ್​ ಕಾಣುತ್ತಿಲ್ಲ.

ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ಬಿಜೆಪಿಯ ಹಿರಿ-ಕಿರಿಯ ಮುಖಂಡರ ಮಧ್ಯೆ ವಾಕ್ಸಮರ.. ತೇಜಸ್ವಿ ಸೂರ್ಯ-ಮಾಧುಸ್ವಾಮಿ ಮಧ್ಯೆ ಟಾಕ್‌ಫೈಟ್

Follow Us