ಯಾದಗಿರಿ, ಮಾರ್ಚ್ 07: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋ (reality show) ಕೊನೆ ಕ್ಷಣದಲ್ಲಿ ಏಕಾಏಕಿ ರದ್ದು ಮಾಡಲಾಗಿದೆ. ಮಧ್ಯಾಹ್ನದಿಂದಲೇ ಜಿಲ್ಲಾ ಕ್ರೀಡಾಂಗಣದಲ್ಲಿ ಸಾವಿರಾರು ಜನರು ಸೇರಿದ್ದರು. ಆದರೆ ಇದೀಗ ಕಾರ್ಯಕ್ರಮ ರದ್ದು ಆಗಿರುವ ಬಗ್ಗೆ ಯಾದಗಿರಿ ಡಿಸಿ ಸುಶೀಲಾ ಬಿ ಮತ್ತು ಎಸ್ಪಿ ಸಂಗೀತಾ ಜಿ ಮಾಹಿತಿ ನೀಡಿದ್ದಾರೆ. ಹೀಗಾಗಿ ರಿಯಾಲಿಟಿ ಶೋ ನೋಡಲು ಬಂದಿದ್ದ ಸಾವಿರಾರು ಪ್ರೇಕ್ಷಕರಲ್ಲಿ ಗೊಂದಲ ಉಂಟಾಗಿದೆ. ಆದರೆ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಕೊನೆ ಕ್ಷಣದಲ್ಲಿ ರದ್ದಾಗಿರುವುದಕ್ಕೆ ಕಾರಣ ಮಾತ್ರ ತಿಳಿದು ಬಂದಿಲ್ಲ. ಖಾಸಗಿ ವಾಹಿನಿ ಕಡೆಯಿಂದಲೂ ಯಾವುದೇ ಸ್ಪಷ್ಟನೆ ಬಂದಿಲ್ಲ.
ಖಾಸಗಿ ವಾಹಿನಿಯ ರಿಯಾಲಿಟಿ ಶೋ ರದ್ದಾಗಿದ್ದರಿಂದ ಎಲ್ಲಾ ತಯಾರಿ ಮಾಡಿಕೊಂಡಿದ್ದ ಸ್ಪರ್ಧಿಗಳಿಗೆ ತುಂಬಾ ನೋವಾಗಿದೆ. ಅದೇ ರೀತಿಯಾಗಿ ಬೇರೆ ಬೇರೆ ಜಿಲ್ಲೆಗಳಿಂದ ಕಾರ್ಯಕ್ರಮ ನೋಡಲು ಬಂದಿದ್ದ ಸಾವಿರಾರು ಜನರಿಗೂ ತುಂಬಾ ಬೇಸರವಾಗಿದೆ.
ಇದನ್ನೂ ಓದಿ: ಕರ್ನಾಟಕ ಉಗ್ರಾಣ ನಿಗಮ ಅಧ್ಯಕ್ಷರ ನೇಮಕ: ನಕಲಿ ಆದೇಶ ಪ್ರತಿ ಸೃಷ್ಟಿಸಿದ ಕಿರಾತಕರು!
ಮೂಲಗಳ ಪ್ರಕಾರ ಸ್ಥಳೀಯ ರಾಜಕೀಯ ಮುಖಂಡರುಗಳಿಗೆ ಮತ್ತು ಹಿರಿಯರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡದಿರುವುದೇ ಶೋ ರದ್ದಾಗಲು ಕಾರಣವೆನ್ನಲಾಗುತ್ತಿದ್ದು, ಇನ್ನೊಂದೆಡೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಹಿನ್ನೆಲೆ ರದ್ದು ಮಾಡಲಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಆದರೆ ಇದೆಲ್ಲದರ ಮಧ್ಯೆ ವೇದಿಕೆಯ ಮೇಲಿಂದಲೇ ಕಾರ್ಯಕ್ರಮದ ಆಯೋಜಕರಿಂದ ತಾಂತ್ರಿಕ ಕಾರಣ ಹಿನ್ನೆಲೆ ಶೋ ರದ್ದು ಮಾಡುತ್ತಿರುವುದಾಗಿ ಡಿಸಿ ಸುಶೀಲಾ ಬಿ ಮತ್ತು ಎಸ್ಪಿ ಸಂಗೀತಾ ಜಿ ಅವರು ಹೇಳಿಸಿದ್ದಾರೆ.
ಯಾದಗಿರಿಯಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ವಿಚಾರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು, ಇದರ ಹಿಂದೆ ವ್ಯವಸ್ಥಿತ ಜಾಲವಿದೆ. ಯಾರು ಸ್ಫೋಟಿಸಿದ್ದಾರೆ, ಕೃತ್ಯದ ಹಿನ್ನೆಲೆ ಏನೆಂದು ತಿಳಿದುಕೊಳ್ಳಬೇಕು. ಯಾರೋ ಒಬ್ಬರೋ ಇಬ್ಬರು ಬಾಂಬ್ ಸ್ಫೋಟ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: PM Modi Death Threat: ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿಗೆ ಜೀವ ಬೆದರಿಕೆ ಹಾಕಿದ್ದ ಆರೋಪಿಯ ಬಂಧನ
ಯಾವ ಉದ್ದೇಶಕ್ಕಾಗಿ ಏಕೆ ಸ್ಫೋಟಿಸಿದ್ದಾರೆಂದು ತಿಳಿದುಕೊಳ್ಳಬೇಕು. ನಮ್ಮ ಪೊಲೀಸ್ ಇಲಾಖೆ, ಎನ್ಐಎಯಿಂದ ತನಿಖೆ ನಡೆಯುತ್ತಿದೆ. ಉಗ್ರವಾದ, ಭಯ ಸೃಷ್ಟಿಸುವಂಥ ಜನರನ್ನು ಮಟ್ಟ ಹಾಕೋದು ಮುಖ್ಯ. ಬಾಂಬ್ ಸ್ಫೋಟ ಪ್ರಕರಣದ ಸೂಕ್ತ ತನಿಖೆಗೆ ಎಲ್ಲರೂ ಕೈಜೋಡಿಸಬೇಕು. ಇದು ಸರ್ಕಾರದ ಒಂದು ಜವಾಬ್ದಾರಿ ಕೂಡ ಹೌದು. ಪ್ರಕರಣವನ್ನು ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ. ಪರಮೇಶ್ವರ್ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:30 pm, Thu, 7 March 24