AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಜವಾಗುತ್ತಿದೆ ತಜ್ಞರ ಲೆಕ್ಕಾಚಾರ; ಬೆಂಗಳೂರಿನಲ್ಲಿ ಒಂದು ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ 30 ಸಾವಿರ ಮುಟ್ಟುವ ಆತಂಕ

ಪ್ರತಿದಿನವೂ ಸೋಂಕಿತರ ಸಂಖ್ಯೆಯು ಹೊಸ ದಾಖಲೆಗಳನ್ನು ಬರೆಯುತ್ತಿದೆ. ಸಾವಿನ ಸಂಖ್ಯೆ ಮತ್ತು ಚಿತಾಗಾರಗಳ ಮುಂದೆ ನಿಂತಿರುವ ಶವಗಳನ್ನು ಹೊತ್ತ ಆಂಬುಲೆನ್ಸ್​ಗಳ ಸಾಲು ಜನರಲ್ಲಿ ಭೀತಿ ಮೂಡಿಸುತ್ತಿದೆ.

ನಿಜವಾಗುತ್ತಿದೆ ತಜ್ಞರ ಲೆಕ್ಕಾಚಾರ; ಬೆಂಗಳೂರಿನಲ್ಲಿ ಒಂದು ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ 30 ಸಾವಿರ ಮುಟ್ಟುವ ಆತಂಕ
ಕೊವಿಡ್-19
Ghanashyam D M | ಡಿ.ಎಂ.ಘನಶ್ಯಾಮ
|

Updated on:Apr 25, 2021 | 11:18 PM

Share

ಕರ್ನಾಟಕದಲ್ಲಿ ಕೊರೊನಾ ಸೋಂಕಿನ 2ನೇ ಅಲೆ ಉತ್ತುಂಗ ಸ್ಥಿತಿ ಮುಟ್ಟುವ ಮೊದಲೇ 3ನೇ ಅಲೆ ಕಾಣಿಸಿಕೊಳ್ಳುವ ಆತಂಕದ ಬಗ್ಗೆ ತಜ್ಞರು ಮಾತನಾಡಲು ಆರಂಭಿಸಿದ್ದಾರೆ. ಪ್ರತಿದಿನವೂ ಸೋಂಕಿತರ ಸಂಖ್ಯೆಯು ಹೊಸ ದಾಖಲೆಗಳನ್ನು ಬರೆಯುತ್ತಿದೆ. ಸಾವಿನ ಸಂಖ್ಯೆ ಮತ್ತು ಚಿತಾಗಾರಗಳ ಮುಂದೆ ನಿಂತಿರುವ ಶವಗಳನ್ನು ಹೊತ್ತ ಆಂಬುಲೆನ್ಸ್​ಗಳ ಸಾಲು ಜನರಲ್ಲಿ ಭೀತಿ ಮೂಡಿಸುತ್ತಿದೆ. ಸರ್ಕಾರ ಘೋಷಿಸಿದ್ದ 2 ದಿನಗಳ ಕಠಿಣ ನಿರ್ಬಂಧಕ್ಕೆ ಜನರಿಂದ ಉತ್ತಮ ಸಹಕಾರವೇ ವ್ಯಕ್ತವಾಯಿತು. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ನಗರಗಳಲ್ಲಿ ಜನರ ಓಡಾಟ ಬೆರಳೆಣಿಕೆಯಷ್ಟಿತ್ತು.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ ಭಾನುವಾರ (ಏಪ್ರಿಲ್ 25) 30 ಸಾವಿರದ ಗಡಿ ದಾಟಿದೆ. ಒಟ್ಟು 34,804 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಕಳೆದ ವರ್ಷದ ಕೊರೊನಾ ಮೊದಲ ಅಲೆಯಲ್ಲಿಯೂ ರಾಜ್ಯದಲ್ಲಿ ಒಂದೇ ದಿನ ಈ ಪ್ರಮಾಣದ ಸೋಂಕಿತರ ಸಂಖ್ಯೆ ವರದಿಯಾಗಿರಲಿಲ್ಲ. ನಿನ್ನೆ (ಏಪ್ರಿಲ್ 24) ರಾಜ್ಯದಲ್ಲಿ 30 ಸಾವಿರದ ಸನಿಹಕ್ಕೆ ಸೋಂಕಿತರ ಸಂಖ್ಯೆ ಮುಟ್ಟಿದ್ದು ರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಪ್ರಧಾನವಾಗಿ ವರದಿಯಾಗಿತ್ತು. ನಿನ್ನೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 29,438 ಮುಟ್ಟಿತ್ತು. ಕೇವಲ ಮೂರು ದಿನಗಳಲ್ಲಿ ಅಂತರದಲ್ಲಿ ಸೋಂಕಿತರ ಸಂಖ್ಯೆ ಸುಮಾರು 3000ದಷ್ಟು ಹೆಚ್ಚಾಗಿರುವುದು ತಜ್ಞರಲ್ಲಿ ಆತಂಕ ಮೂಡಿಸಿದೆ. ಮೂರು ದಿನಗಳ ಹಿಂದೆ ಅಂದರೆ ಶುಕ್ರವಾರ ರಾಜ್ಯದ ಸೋಂಕಿತರ ಸಂಖ್ಯೆ 26,962 ಇತ್ತು.

ಸಾವಿನ ಸಂಖ್ಯೆಯ ವಿಚಾರದಲ್ಲಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿರುವುದನ್ನು ಸಂಖ್ಯೆಗಳು ಸೂಚಿಸುತ್ತಿವೆ. ಇಂದು ರಾಜ್ಯದ ಒಟ್ಟು ಮೃತರ ಸಂಖ್ಯೆ 143, ಶನಿವಾರ ರಾಜ್ಯದಲ್ಲಿ 208 ಮಂದಿ ಮೃತಪಟ್ಟಿದ್ದರು. ಶುಕ್ರವಾರ ಮೃತಪಟ್ಟಿದ್ದವರ ಒಟ್ಟು ಸಂಖ್ಯೆ 190. ಅಂದರೆ ಕಳೆದ ಮೂರು ದಿನಗಳಿಗೆ ಹೋಲಿಸಿದರೆ ಇಂದು ಮೃತರ ಸಂಖ್ಯೆ ತುಸು ಕಡಿಮೆಯಾಗಿದೆ.

ರಾಜ್ಯದಲ್ಲಿ ಎಂದಿನಂತೆ ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕು ಸತತವಾಗಿ 10 ಸಾವಿರ ದಾಟುತ್ತಿತ್ತು, ಆದರೆ ಇಂದು ಅಪಾಯಕಾರಿ ಮಟ್ಟವನ್ನೂ ಮೀರಿ 20,733 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ತುಮಕೂರಿನಲ್ಲಿಯೂ ಕಳೆದ ಒಂದು ವಾರದಿಂದ ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳ ವರದಿಯಾಗುತ್ತಿವೆ. ಅಚ್ಚರಿಯ ವಿಚಾರವೆಂದರೆ ರಾಜ್ಯದ ಪುಟಾಣಿ ಜಿಲ್ಲೆ ಕೊಡಗಿನಲ್ಲಿ ಭಾನುವಾರ ಸೋಂಕಿತರ ಸಂಖ್ಯೆ ಸಾವಿರ ದಾಟಿದೆ. ಅಲ್ಲಿ 1077 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ಹೊರತುಪಡಿಸಿದರೆ ತುಮಕೂರು, ಕೊಡಗು, ಮೈಸೂರು, ಕಲಬುರಗಿ ಮತ್ತು ಬೀದರ್​ ಜಿಲ್ಲೆಗಳಲ್ಲಿ ಪರಿಸ್ಥಿತಿ ಹದಗೆಡಬಹುದು ಎಂಬ ವಿಶ್ಲೇಷಣೆಗಳು ಮುನ್ನೆಲೆಗೆ ಬರುತ್ತಿವೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುವ ಆತಂಕಗಳು ವ್ಯಕ್ತವಾಗುತ್ತಿವೆ. ಭಾನುವಾರ ರಾಜ್ಯ ಸರ್ಕಾರವು ಕೋವಿಡ್-19 ಮಾದರಿ ಪರೀಕ್ಷೆಗಳ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಎಲ್ಲಾ ಪ್ರಾಥಮಿಕ ಸಂಪರ್ಕಿತರನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಲು ಸೂಚನೆ ನೀಡಿದೆ. ಸೋಂಕಿತರನ್ನು ಆರಂಭದಲ್ಲಿಯೇ ಗುರುತಿಸಿದರೆ ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ನೀಡಬಹುದು ಎಂದು ರಾಜ್ಯ ಸರ್ಕಾರ ಹೇಳಿದೆ.

ನಿಜವಾಗುತ್ತಿದೆ ತಜ್ಞರ ಭವಿಷ್ಯ ರಾಜ್ಯದಲ್ಲಿ ಕೋವಿಡ್-19 ನಿರ್ವಹಣೆಗೆಂದು ಸರ್ಕಾರ ರಚಿಸಿರುವ ತಾಂತ್ರಿಕ ಸಲಹಾ ಸಮಿತಿ ಸದಸ್ಯರೂ ಆಗಿರುವ ಜನಾರೋಗ್ಯ ತಜ್ಞ ಡಾ.ಗಿರಿಧರ ಆರ್.ಬಾಬು ಅವರು ಏಪ್ರಿಲ್ 19ರಂದು ಟ್ವೀಟ್ ಮಾಡಿ, ಏಪ್ರಿಲ್ 25ರ ಹೊತ್ತಿಗೆ ಬೆಂಗಳೂರಿನಲ್ಲಿ ಸೋಂಕಿತರ ಒಟ್ಟು ಸಂಖ್ಯೆ 18,028 ಆಗಬಹುದು ಎಂದು ವಿಶ್ಲೇಷಿಸಿದ್ದರು. ಆದರೆ ಏಪ್ರಿಲ್ 25ಕ್ಕೆ ಸೋಂಕಿತರ ಸಂಖ್ಯೆಯು ಈ ವಿಶ್ಲೇಷಣೆಯ ಮಟ್ಟವನ್ನೂ ದಾಟಿ, 20,733 ಮುಟ್ಟಿತ್ತು. ಮೇ 1ರ ಹೊತ್ತಿಗೆ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 29,124 ಮುಟ್ಟಬಹುದು ಎಂದು ಡಾ.ಗಿರಿಧರ್ ಬಾಬು ಲೆಕ್ಕ ಹಾಕಿದ್ದರು. ಈ ಲೆಕ್ಕಾಚಾರದಂತೆ ಮೇ 1ಕ್ಕೆ ಬೆಂಗಳೂರಿನಲ್ಲಿ 1347 ಐಸಿಯು ಬೆಡ್​ಗಳು ಬೇಕಾಗುತ್ತವೆ ಎಂದು ಅವರು ಹೇಳಿದ್ದರು. ರಾಜ್ಯ ಸರ್ಕಾರ ಇದೀಗ ಈ ಪರಿಸ್ಥಿತಿ ನಿರ್ವಹಣೆಗೆ ಸನ್ನದ್ಧವಾಗುತ್ತಿದೆ.

ಕೋವಿಡ್-19ರ ವಿಚಾರದಲ್ಲಿ ವರ್ತಮಾನ ಮತ್ತು ಭವಿಷ್ಯ ಆತಂಕ ಹುಟ್ಟಿಸುವಂತಿದೆ. ಲಸಿಕೆಯನ್ನು ವೇಗವಾಗಿ ಜನರಿಗೆ ತಲುಪಿಸುವುದು, ಜನರೂ ಸಹ ಸ್ವಯಂ ಪ್ರೇರಿತರಾಗಿ ಕೋವಿಡ್-19 ಶಿಷ್ಟಾಚಾರಗಳನ್ನು ಪಾಲಿಸುವುದು ಮಾತ್ರ ಈ ಪಿಡುಗಿನಿಂದ ಕಾಪಾಡಬಲ್ಲದು. ಸದ್ಯದ ಮಟ್ಟಿಗೆ ಕೊರೊನಾ ಪಿಡುಗು ನಮ್ಮಿಂದ ದೂರಾಗುವಂತಿಲ್ಲ. ಕೊವಿಡ್-19 ಪಿಡುಗಿನ ಎರಡನೇ ಅಲೆ ಕೊನೆಗೊಂಡ ನಂತರ ಮೂರನೇ ಅಲೆ ಎದುರಿಸಲು ಸಿದ್ಧರಾಗಿರಬೇಕು ಎಂದು ಡಾ.ವಿವೇಕ್ ಜವಳಿ ಎಚ್ಚರಿಸಿದ್ದಾರೆ.

&

(Threat of Increasing Infections in Karnataka Experts Warns New Spike in Covid-19 Infections in Bengaluru)

ಇದನ್ನೂ ಓದಿ: Coronavirus in India Update: ಸತತ ನಾಲ್ಕನೇ ದಿನ ದೇಶದಲ್ಲಿ 3 ಲಕ್ಷ ದಾಟಿದ ಹೊಸ ಕೊವಿಡ್ ಪ್ರಕರಣ, 2,767 ಮಂದಿ ಸಾವು

ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ 34,804 ಮಂದಿಗೆ ಕೊರೊನಾ ಸೋಂಕು, 143 ಸಾವು

Published On - 11:16 pm, Sun, 25 April 21