ತುಮಕೂರು: ಡ್ರಗ್ಸ್ ನಶೆಗಾಗಿ ದೇವಿಯ ಚಿನ್ನದ ತಾಳಿಗಳನ್ನೇ ಟಾರ್ಗೆಟ್ ಮಾಡ್ತಿದ್ದ ಖದೀಮರು ಲಾಕ್
ತುಮಕೂರಿನಲ್ಲಿ ಡ್ರಗ್ಸ್ ಚಟಕ್ಕೆ ದಾಸರಾಗಿದ್ದ ಸೈಕೋ ಕಳ್ಳರ ಗ್ಯಾಂಗ್ ದೇವಾಲಯಗಳನ್ನು ಲೂಟಿ ಮಾಡುತ್ತಿತ್ತು. ತುರುವೇಕೆರೆ ಪೊಲೀಸರ ಯಶಸ್ವಿ ಕಾರ್ಯಾಚರಣೆಯಿಂದ ಈ ಗ್ಯಾಂಗ್ ಬಂಧನವಾಗಿದೆ. ಆರೋಪಿಗಳು 22 ದೇವಸ್ಥಾನಗಳಲ್ಲಿ ಕಳವು ಒಪ್ಪಿಕೊಂಡಿದ್ದು, ಅವರ ಬಳಿಯಿಂದ 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ದೇವಿಯ ತಾಳಿಗಳೇ ಇವರ ಮುಖ್ಯ ಗುರಿಯಾಗಿತ್ತು.

ಮುಖ್ಯಾಂಶಗಳು
- ನಶೆಯ ಲೋಕದಲ್ಲಿ ತೇಲಾಡಲು ಹಣಕ್ಕಾಗಿ ದೇವಸ್ಥಾನಗಳನ್ನೇ ಲೂಟಿ
- ತುಮಕೂರು ಜಿಲ್ಲೆಯ ತುರುವೆಕೆರೆ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ
- ಬಂಧಿತ ಆರೋಪಿಗಳು 19 ರಿಂದ 29 ವರ್ಷದೊಳಗಿನ ಯುವಕ
ತುಮಕೂರು ಜು. 2: ಮಾದಕ ವಸ್ತುಗಳ (Drugs) ಚಟಕ್ಕೆ ದಾಸರಾಗಿ, ಆ ನಶೆಯ ಲೋಕದಲ್ಲಿ ತೇಲಾಡಲು ಹಣಕ್ಕಾಗಿ ದೇವಸ್ಥಾನಗಳನ್ನೇ ಲೂಟಿ ಮಾಡುತ್ತಿದ್ದ ಸೈಕೋ ಕಳ್ಳರ ಗ್ಯಾಂಗ್ ಒಂದನ್ನು ತುಮಕೂರು ಜಿಲ್ಲೆಯ ತುರುವೆಕೆರೆ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ ಬರೊಬ್ಬರಿ 14 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳು 19 ರಿಂದ 29 ವರ್ಷದೊಳಗಿನ ಯುವಕರಾಗಿದ್ದು, ಇವರೆಲ್ಲರೂ ಡ್ರಗ್ಸ್ ಚಟಕ್ಕೆ ದಾಸರಾಗಿದ್ದರು. ದೇವಸ್ಥಾನಗಳನ್ನು ದೋಚುವುದು, ಅದರಿಂದ ಬಂದ ಹಣದಲ್ಲಿ ಐಷಾರಾಮಿ ರೂಮ್ಗಳನ್ನು ಬುಕ್ ಮಾಡಿ ಮಾದಕ ಲೋಕದಲ್ಲಿ ತೇಲುವುದನ್ನೇ ಈ ಯುವಕರು ತಮ್ಮ ಬದುಕಾಗಿಸಿಕೊಂಡಿದ್ದರು. ತುಮಕೂರು ಜಿಲ್ಲೆಯಾದ್ಯಂತ ಸದ್ದು ಮಾಡಿದ್ದ ಈ ಖತರ್ನಾಕ್ ಗ್ಯಾಂಗ್, ಒಂದಲ್ಲ ಎರಡಲ್ಲ ಬರೊಬ್ಬರಿ 22 ದೇವಸ್ಥಾನಗಳ ಬೀಗ ಮುರಿದು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದೆ.
ದೇವಿಯ ತಾಳಿಯೇ ಇವರ ಮೊದಲ ಟಾರ್ಗೆಟ್:
ಹಾಸನ ಹಾಗೂ ಮಂಡ್ಯ ಮೂಲದ ಆರು ಮಂದಿ ಯುವಕರು ಈ ಗ್ಯಾಂಗ್ನಲ್ಲಿ ಪ್ರಮುಖವಾಗಿ ಲಯನ್ ಅಲಿಯಾಸ್ ಎಟಿಎಂ, ಮಂಜುನಾಥ್ ಮಾಗಡಿ, ಚಂದನ್, ಮಧುಸೂದನ್, ಬಾಬು ಹಾಗೂ ನರಸಿಂಹ ಮೂರ್ತಿ ಎಂಬುವವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದೇವಸ್ಥಾನಗಳ ಹುಂಡಿ ಹಣದ ಜೊತೆಗೆ, ಗರ್ಭಗುಡಿಯಲ್ಲಿದ್ದ ದೇವಿಯ ಚಿನ್ನದ ತಾಳಿಗಳ ಮೇಲೆ ಈ ಕಳ್ಳರ ಕಣ್ಣಿರುತ್ತಿತ್ತು.
ಇನ್ನು ಆರೋಪಿಗಳು ಮತ್ತೊಂದು ದೊಡ್ಡ ದರೋಡೆಗೆ ಹೊಂಚು ಹಾಕುತ್ತಿದ್ದಾಗ ಸಿಕ್ಕ ಖಚಿತ ಮಾಹಿತಿಯ ಮೇರೆಗೆ ತುರುವೆಕೆರೆ ಪೊಲೀಸರು ದಾಳಿ ನಡೆಸಿ ಗ್ಯಾಂಗ್ ಅನ್ನು ಲಾಕ್ ಮಾಡಿದ್ದಾರೆ. ಬಂಧಿತರಿಂದ ೨೫ ಚಿನ್ನದ ತಾಳಿಗಳು ಸೇರಿದಂತೆ ಒಟ್ಟು ೧೪ ಲಕ್ಷ ರೂಪಾಯಿ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ತುರುವೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಂದ ಇನ್ನಷ್ಟು ಕಳವು ಪ್ರಕರಣಗಳ ಮಾಹಿತಿ ಹೊರಬರುವ ಸಾಧ್ಯತೆ ಇದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



