ಪರ ಪುರುಷನೊಂದಿಗೆ ಓಡಿ ಹೋದ ಪತ್ನಿ; ಮರ್ಯಾದೆಗೆ ಅಂಜಿ ಪತಿ ಆತ್ಮಹತ್ಯೆ, ತಬ್ಬಲಿಯಾದ ಮಕ್ಕಳು

ಸ್ನೇಹ, ಸಲುಗೆ ಅನ್ನೋದು ಮಿತಿ ಮೀರಿಬಿಟ್ರೆ ಏನೆಲ್ಲಾ ಅನಾಹುತ ಆಗುತ್ತೆ ಅನ್ನೋದಕ್ಕೆ ತುಮಕೂರಿನಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿ. ಪ್ರತಿನಿತ್ಯ ಅಂಗಡಿಗೆ ಬರ್ತಿದ್ದವನ ಜೊತೆ ಸಲುಗೆ ಬೆಳೆಸಿಕೊಂಡು ಪ್ರೀತಿಯ ಬಲೆಗೆ ಬಿದ್ದ ವಿವಾಹಿತ ಮಹಿಳೆ, ಗಂಡ ಮಕ್ಕಳನ್ನೇ ಬಿಟ್ಟು ಪ್ರಿಯಕರನ ಜೊತೆ ಓಡಿಹೋಗಿದ್ರೆ, ಇದರಿಂದ ಮನನೊಂದ ಗಂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ತಂದೆತಾಯಿಯ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋಹಾಗೆ ವಯಸ್ಸಿಗೆ ಬಂದ ಇಬ್ಬರು ಹೆಣ್ಣುಮಕ್ಕಳು ಅಪ್ಪನೂ ಇಲ್ಲದೇ, ಅಮ್ಮನೂ ಇಲ್ಲದೇ ತಬ್ಬಲಿಗಳಾಗಿದ್ದಾರೆ.

ಪರ ಪುರುಷನೊಂದಿಗೆ ಓಡಿ ಹೋದ ಪತ್ನಿ; ಮರ್ಯಾದೆಗೆ ಅಂಜಿ ಪತಿ ಆತ್ಮಹತ್ಯೆ, ತಬ್ಬಲಿಯಾದ ಮಕ್ಕಳು
Follow us
| Updated By: ರಮೇಶ್ ಬಿ. ಜವಳಗೇರಾ

Updated on: Jul 19, 2024 | 8:56 PM

ತುಮಕೂರು, (ಜುಲೈ 19): ನಿಜಕ್ಕೂ ಅದು ಹಾಲುಜೇನಿನಂತಿದ್ದ ಸಂಸಾರ. ಬರೋಬ್ಬರಿ 17 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಆ ಜೋಡಿಗೆ ಇಬ್ಬರು ಮುದ್ದಾದ ಹೆಣ್ಣುಮಕ್ಕಳು ಕೂಡ ಇದ್ರು. ಪುಟ್ಟ ಮನೆ, ಸಂಸಾರ ಸಾಗಿಸೋದಕ್ಕೆ ಒಂದು ಅಂಗಡಿ, ಹೀಗೆ ಅವರ ಬಾಳಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ಅವರ ಬಾಳಲ್ಲಿ ಬಂದ ಆ ಒಬ್ಬ ವ್ಯಕ್ತಿ ಇದೀಗ ಇಡೀ ಕುಟುಂಬದ ಆನಂದವನ್ನೇ ಕಿತ್ತುಕೊಂಡಿದ್ದಾನೆ. ಪರಪುರುಷನ ಜೊತೆ ಪ್ರೀತಿ, ಪ್ರೇಮ ಅಂತಾ ಹೋದ ಹೆಂಡತಿ ಗಂಡನ ಪ್ರಾಣವನ್ನೇ ಬಲಿ ತೆಗೆದುಕೊಂಡಿದ್ದಲ್ಲದೇ ತನ್ನಿಬ್ಬರು ಮಕ್ಕಳನ್ನೂ ತಬ್ಬಲಿಗಳನ್ನಾಗಿ ಮಾಡಿದ್ದಾಳೆ. ಹೌದು.. ಈ ಘಟನೆ ನಡೆದಿರೋದು ತುಮಕೂರು ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ.

ಹೊಸಹಳ್ಳಿ ಗ್ರಾಮದ ದೇವರಾಜ್ ಎಂಬಾತ ದಾಬಸ್ ಪೇಟೆ ಮೂಲದ ಮಾಧವಿ ಎಂಬಾಕೆಯನ್ನ ಕಳೆದ 17 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಈ ದಂಪತಿ ಅದೇ ಊರಿನಲ್ಲಿ ಪುಟ್ಟ ಅಂಗಡಿಯನ್ನ ಇಟ್ಟುಕೊಂಡು ಜೀವನ ಸಾಗಿಸುತ್ತಿತ್ತು. ಗಂಡ-ಹೆಂಡತಿ ಇಬ್ಬರೂ ಅಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ರು. ಗಂಡ ಇಲ್ಲದ ಸಂದರ್ಭದಲ್ಲಿ ಪತ್ನಿ ಮಾಧವಿ ಒಬ್ಬಳೇ ಅಂಗಡಿಯಲ್ಲಿ ಇರುತ್ತಿದ್ದಳು. ಇನ್ನು ಈ ಅಂಗಡಿಗೆ ಪ್ರತಿನಿತ್ಯ ಹೋಗುತ್ತಿದ್ದ ಅದೇ ಊರಿನ ಆನಂದ್ ಎಂಬಾತ, ದೇವರಾಜ್ ಪತ್ನಿ ಮಾಧವಿ ಜೊತೆ ಸ್ನೇಹ, ಸಲುಗೆ ಬೆಳೆಸಿಕೊಂಡಿದ್ದಾನೆ. ನಂತರ ಪ್ರೀತಿ-ಪ್ರೇಮ ಅಂತಾ ಬಲೆಗೆ ಬೀಳಿಸಿಕೊಂಡಿದ್ದ ಆನಂದ, ಕಳೆದ ಮೂರು ತಿಂಗಳ ಹಿಂದೆ ಮಾಧವಿಯನ್ನ ಓಡಿಸಿಕೊಂಡು ಹೋಗಿದ್ದಾನೆ.

ಇದನ್ನೂ ಓದಿ: ಯಾದಗಿರಿಯಲ್ಲಿ ಮೂವರ ಕಗ್ಗೊಲೆ: ರಾಜಿ ಪಂಚಾಯ್ತಿ ಬಳಿಕ ಪತ್ನಿ, ಅತ್ತೆ, ಮಾವನನ್ನ ಹತ್ಯೆಗೈದ

ಇನ್ನು ಓಡಿಹೋದ ಹೆಂಡತಿಯನ್ನ ವಾಪಾಸ್ ಮನೆಗೆ ಕರೆತರಲು ದೇವರಾಜ್ ಸಾಕಷ್ಟು ಪ್ರಯತ್ನ ನಡೆಸಿದ್ದ. ಆದ್ರೆ ಹೆಂಡತಿಯನ್ನ ಓಡಿಸಿಕೊಂಡು ಹೋಗಿದ್ದ ಆನಂದ್ ಅವಳ ತಂಟೆಗೆ ಬರದಂತೆ ದೇವರಾಜ್ ಗೆ ಆವಾಜ್ ಹಾಕಿದ್ದಾನೆ. ಅಂಗಡಿಯ ಬಳಿಯೂ ಬಂದು ಧಮ್ಕಿ ಹಾಕಿದ್ದಾನೆ. ಇದರಿಂದ ಮನನೊಂದ ದೇವರಾಜ್ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೂ ಮೊದಲು ಡೆತ್ ನೋಟ್ ಬರೆದಿಟ್ಟಿರುವ ದೇವರಾಜ್, ಹೆಂಡತಿಯನ್ನ ಓಡಿಸಿಕೊಂಡು ಹೋದ ಆನಂದ್ ತನಗೆ ಧಮ್ಕಿ ಹಾಕಿದ್ದ ವಿಚಾರವನ್ನ ಹೇಳಿಕೊಂಡಿದ್ದಾನೆ.

ಆನಂದ್ ಮತ್ತು ಹೆಂಡತಿಯ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಧಾನಿ ಮೋದಿ, ಕುಮಾರಸ್ವಾಮಿ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಟಾಧಿಕಾರಿ ಸೇರಿದಂತೆ ಹಲವರಿಗೆ ಡೆತ್ ನೋಟ್ ಬರೆದು, ಇಬ್ಬರಿಗೂ ಶಿಕ್ಷೆ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾನೆ. ಇನ್ನೂ ಗ್ರಾಮದ ಪಕ್ಕದಲ್ಲಿ ಇರುವ ಕ್ರಷರ್ ನಲ್ಲಿ ಡ್ರಿಲ್ಲಿಂಗ್ ಕೆಲಸ ಮಾಡಿಕೊಂಡಿದ್ದ ಆನಂದ ಆಗಾಗ ಅಂಗಡಿಗೆ ಬಂದು ಈ‌ ಕೆಲಸ ಮಾಡಿದ್ದಾನೆ.

ಇನ್ನು ಪ್ರಕರಣ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, ಮಾಧವಿ, ಆನಂದ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಮೇಲೆ ಕೇಸ್ ದಾಖಲಾಗಿದೆ. ಎಫ್.ಐ.ಆರ್ ದಾಖಲಾಗುತ್ತಿದ್ದಂತೆ ಪತ್ನಿ ಮಾಧವಿ ಮತ್ತು ಆನಂದ್ ತಲೆಮರೆಸಿಕೊಂಡಿದ್ದಾರೆ. ಈ ಮಧ್ಯೆ 16 ಹಾಗೂ 12 ವರ್ಷದ ಇಬ್ಬರು ಹೆಣ್ಣುಮಕ್ಕಳು ತಬ್ಬಲಿಗಳಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ