
ತುಮಕೂರು, ಮೇ 02: ಕುಣಿಗಲ್ ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ಕೌಟುಂಬಿಕ ಕಲಹಕ್ಕೆ ಇಬ್ಬರು ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಚಿನ್ನ, ಹಣ ಸಮೇತ ಪತ್ನಿ ಪರಪುರುಷನ ಜೊತೆ ಓಡಿಹೋಗಿದ್ದಕ್ಕೆ ನೊಂದು ಶಿವಣ್ಣ ಎಂಬಾತ ತನ್ನಿಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಸಾಯಿಸಿ ತಾನೂ ನೇಣಿಗೆ ಶರಣಾಗಿದ್ದ. ಆದರೆ ಶಿವಣ್ಣ ಪತ್ನಿ ಕಾವ್ಯಾ ಓಡಿಹೋಗಿರುವುದು ಈತನ ಅಕ್ಕನ ಮಗ ಹೇಮಂತ್ ಎಂಬಾತನ ಜೊತೆಗೆ ಎಂಬ ವಿಷಯವೀಗ ಬಹಿರಂಗಗೊಂಡಿದೆ.
ಅಕ್ಕ ಮೃತಪಟ್ಟಬಳಿಕ ಆಕೆಯ ಮಗ ಹೇಮಂತ್ನನ್ನು ತನ್ನ ಮನೆಗೇ ಕರೆತಂದು ಶಿವಣ್ಣ ಸಾಕಿಕೊಂಡಿದ್ದ. ಆದರೆ ಈ ಹೇಮಂತ್ ಮಾವನಿಗೇ ಮೋಸ ಮಾಡಿದ್ದು, ಆತನ ಹೆಂಡತಿ ಅಂದರೆ ಅತ್ತೆಯಾದ ಕಾವ್ಯಾ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಈ ವಿಚಾರ ಗೊತ್ತಾಗಿ ಆತನನ್ನು ಶಿವಣ್ಣ ಮನೆಯಿಂದ ಹೊರಹಾಕಿದ್ದ. ಆ ಬಳಿಕ ಒಮ್ಮೆ ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದ. ಈ ವೇಳೆ ಗ್ರಾಮಸ್ಥರು ನ್ಯಾಯ ಪಂಚಾಯ್ತಿ ಮಾಡಿ ಗಂಡ ಹೆಂಡತಿ ಇಬ್ಬರೂ ಅನೋನ್ಯವಾಗಿ ಇರುವಂತೆ ಬುದ್ದಿ ಹೇಳಿದ್ದರು. ಆ ಬಳಿಕ ಕೆಲ ತಿಂಗಳು ಗಂಡ ಹೆಂಡತಿ ಚೆನ್ನಾಗಿಯೇ ಇದ್ದರು. ಆದರೆ ಕಳೆದ ಒಂದು ವಾರದ ಹಿಂದೆ ಗಂಡ ಶಿವಣ್ಣ ಮತ್ತು ಮಕ್ಕಳನ್ನು ಬಿಟ್ಟು ಹೇಮಂತ್ ಜೊತೆ ಕಾವ್ಯಾ ಓಡಿಹೋಗಿದ್ದಳು. ಈ ಬಗ್ಗೆ ಕುಣಿಗಲ್ ಪೊಲೀಸ್ ಠಾಣೆಗೆ ಶಿವಣ್ಣ ದೂರು ನೀಡಿದ್ದು, ಮತ್ತೆ ಈ ರೀತಿ ಕೆಲಸ ಮಾಡಲ್ಲ ಎಂದು ಠಾಣೆಯಲ್ಲಿಯೇ ಕ್ಷಮೆ ಕೇಳಿ ಗಂಡನ ಮನೆಗೆ ವಾಪಸ್ ಬಂದಿದ್ದಳು ಎನ್ನಲಾಗಿದೆ.
ಇದನ್ನೂ ಓದಿ: ಮನೆಯಲ್ಲಿದ್ದ ಚಿನ್ನಾಭರಣ ಸಮೇತ ಪತ್ನಿ ಎಸ್ಕೇಪ್; ಮಕ್ಕಳಿಬ್ಬರನ್ನು ಸಾಯಿಸಿ ತಾನೂ ನೇಣಿಗೆ ಶರಣಾದ ಪತಿ!
ಇನ್ನು ಗಂಡನ ಮನೆಗೆ ಬಂದ ಮರುದಿನವೇ ಶಿವಣ್ಣ ಕೆಲಸಕ್ಕೆ ಹೋದ ವೇಳೆ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣ ಹಾಗೂ ಮನೆಯಲ್ಲಿಟ್ಟಿದ್ದ ಹಣವನ್ನ ತೆಗೆದುಕೊಂಡು ಓಡಿಹೋಗಿದ್ದಳು. ಇದರಿಂದ ಮನನೊಂದಿದ್ದ ಶಿವಣ್ಣ, ನಿನ್ನೆ ರಾತ್ರಿ ತನ್ನ ಮನೆಯಲ್ಲಿ ಮಕ್ಕಳನ್ನ ಉಸಿರುಗಟ್ಟಿಸಿ ಸಾಯಿಸಿ ಬಳಿಕ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಬೆಳಗ್ಗೆ ಅಕ್ಕಪಕ್ಕದ ಮನೆಯವರು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದ್ದು, ಕುಣಿಗಲ್ ಪೊಲೀಸರಿಂದ ಈ ಬಗ್ಗೆ ತನಿಖೆ ಮುಂದುವರಿದಿದೆ. ಮೃತದೇಹಗಳನ್ನು ಆದಿಚುಂಚನಗಿರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದ್ದು, ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.