ಬೆಳಗಾವಿಯಲ್ಲಿ ಸಿಡಿಲಿಗೆ ಇಬ್ಬರು ಬಲಿ, 6 ಜನರ ಸ್ಥಿತಿ ಗಂಭೀರ: ರಾಜ್ಯದಲ್ಲಿ ಎಲ್ಲೆಲ್ಲಿ ಹೇಗಿದೆ ಮಳೆ ಪರಿಸ್ಥಿತಿ? ಇಲ್ಲಿದೆ ವಿವರ

|

Updated on: May 24, 2024 | 6:57 AM

Karnataka Rains: ರಾಜ್ಯದಲ್ಲಿ ಮುಂಗಾರುಪೂರ್ವ ಮಳೆಯ ಅಬ್ಬರ ಮುಂದುವರಿದಿದೆ. ಬೆಳಗಾವಿ, ಯಾದಗಿರಿ, ಬಾಗಲಕೋಟೆ ಸೇರಿದಂತೆ ಅನೇಕ ಕಡೆಗಳಲ್ಲಿ ಗುರುವಾರವೂ ಮಳೆಯಾಗಿದೆ. ಎಲ್ಲೆಲ್ಲಿ ಮಳೆಯಾಗಿದೆ? ಮಳೆ ಸಂಬಂಧಿ ಅವಘಡಗಳು ಏನೇನಾಗಿವೆ ಎಂಬ ವಿವರ ಇಲ್ಲಿದೆ.

ಬೆಳಗಾವಿಯಲ್ಲಿ ಸಿಡಿಲಿಗೆ ಇಬ್ಬರು ಬಲಿ, 6 ಜನರ ಸ್ಥಿತಿ ಗಂಭೀರ: ರಾಜ್ಯದಲ್ಲಿ ಎಲ್ಲೆಲ್ಲಿ ಹೇಗಿದೆ ಮಳೆ ಪರಿಸ್ಥಿತಿ? ಇಲ್ಲಿದೆ ವಿವರ
ಯಾದಗಿರಿಯಲ್ಲಿ ಗಾಳಿ ಮಳೆಯ ಅಬ್ಬರ
Follow us on

ಬೆಂಗಳೂರು, ಮೇ 24: ಕರ್ನಾಟಕದಾದ್ಯಂತ ಅನೇಕ ಪ್ರದೇಶಗಳಲ್ಲಿ ಮಳೆಯ (Karnataka Rains) ಅಬ್ಬರ ಗುರುವಾರವೂ ಮುಂದುವರಿದಿದೆ. ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ, ರಾಯಬಾಗ ಮತ್ತು ಹುಕ್ಕೇರಿ ತಾಲೂಕಿನಲ್ಲಿ ಸಿಡಿಲಬ್ಬರದ ಮಳೆ ಸುರಿದಿದೆ. ರಾಯಬಾಗ ಪಟ್ಟಣದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರಿಗೆ ಸಿಡಿಲು ಬಡಿದಿದೆ. ಇದರಿಂದ ಒಬ್ಬ ಮಹಿಳೆ ಮೃತಪಟ್ಟಿದ್ದು ನಾಲ್ವರ ಸ್ಥಿತಿ ಗಂಭೀರವಾಗಿದೆ. ಇನ್ನು, ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲೂ ಕುರಿಮೇಯಿಸಲು ಹೋಗಿದ್ದವರಿಗೆ ಸಿಡಿಲು ಹೊಡೆದಿದೆ. ಒಬ್ಬ ಮೃತಪಟ್ಟಿದ್ರೆ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. 12 ಕುರಿಗಳು ಕೂಡ ಸಾವನ್ನಪ್ಪಿವೆ.

ಚಿಕ್ಕೋಡಿ ತಾಲೂಕಿನ ಕಾಡಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಆಲೆಮನೆ ಧ್ವಂಸವಾಗಿದೆ. ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಮರ ಬಿದ್ದು ಆಕಳು ಸಾವನ್ನಪ್ಪಿದೆ.

ಯಾದಗಿರಿ ನಗರದ ಮಾತಾಮಾಣಿಕೇಶ್ವರಿ ನಗರದಲ್ಲಿ ಗಾಳಿಯ ಅಬ್ಬರಕ್ಕೆ ಚಾಲಕನಿಲ್ಲದೇ ಆಟೋ ಮುಂದಕ್ಕೆ ಸಾಗಿದೆ! ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಮನೆಯೊಂದರ ಮೇಲ್ಚಾವಣಿಯೇ ಕಿತ್ತು, ಹಾರಿಹೋಗಿದೆ.

ಚಾಲಕನಿಲ್ಲದೆ ಸಾಗಿದ ಆಟೋ!

ಬಾಗಲಕೋಟೆಯಲ್ಲೂ ಗುಡುಗು, ಮಿಂಚು, ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಅಲ್ಲೋಲ ಕಲ್ಲೋಲವೇ ಉಂಟಾಗಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿಯ ಕೆರಕಲಮಟ್ಟಿ ಗ್ರಾಮ, ಕೇದಾರನಾಥ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಭಾರಿ ಅವಾಂತರಗಳೇ ನಡೆದಿವೆ. ಬಾಗಲಕೋಟೆ ತಾಲೂಕಿನ ಹಿರೇಶೆಲ್ಲಿಕೇರಿ ರಸ್ತೆಯಲ್ಲಿ 10ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ತುಳಸಿಗೇರಿ, ದೇವನಾಳ ಭಾಗದಲ್ಲಿ ಆಪಾರ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿವೆ.

ಇನ್ನು, ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಕೃಷ್ಣಾ ನದಿಗೆ ನೀರು ಹರಿದುಬರ್ತಿದೆ. ರೈತರಲ್ಲಿ ಸಂತಸ ತಂದಿದೆ.

ಮೈಸೂರಿನಲ್ಲಿ ಮಳೆ ಅವಾಂತರಗಳು ಮುಂದುವರಿದಿದ್ದು, ಸರಗೂರು ತಾಲೂಕಿನ ಬಾಡಿಗೆ ಗ್ರಾಮದಲ್ಲಿ ಲಕ್ಷಾಂತರ ಮೌಲ್ಯದ ಶುಂಠಿ ನಾಶವಾಗಿದೆ. ಜವರಯ್ಯ, ಪುಟ್ಟತಾಯಮ್ಮ ಎಂಬುವವರ ಬೆಳೆ ನಾಶವಾಗಿದೆ. ಇವರು ಸುಮಾರು 4 ಲಕ್ಷ ಖರ್ಚು ಮಾಡಿ ಶುಂಠಿ ಬೆಳೆದಿದ್ದರು.

ಹೀಗೆ ಸಾಲು ಸಾಲು ಅವಾಂತರಗಳ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಆಗುತ್ತದೆ. ಪ್ರವಾಹ‌ ಬಂದರೆ ಎದುರಿಸಲು ಜಿಲ್ಲಾಡಳಿತ ಸನ್ನದ್ಧರಾಗಿರಬೇಕು. ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಇದನ್ನೂ ಓದಿ: ಮೈಸೂರಿನ ಗ್ರಾಮಗಳಲ್ಲಿ ಕಾಲರಾ: ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಒಪ್ಪಿಕೊಂಡ ಸಿಎಂ ಸಿದ್ದರಾಮಯ್ಯ

ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು ಮಳೆ ಬಗ್ಗೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರವಾಹ ತಗ್ಗಿಸುವಿಕೆ, ರಾಜಕಾಲುವೆ ಮತ್ತು ಕೆರೆಗಳ ಒತ್ತುವರಿ ತೆರವು ಬಗ್ಗೆ ಚರ್ಚಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:52 am, Fri, 24 May 24