ಮಹಿಳಾ ದಿನಾಚರಣೆ 2021: ಬೆಳಕು ಹರಿಯದ ಮುಂಜಾನೆಯಲ್ಲಿ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಗರ್ಭಿಣಿಗೆ ಆಸರೆಯಾದ ಆಟೋ ಚಾಲಕಿ…

|

Updated on: Mar 07, 2021 | 8:07 PM

Women's Day 2021: ಆಶಾ ಕಾರ್ಯಕರ್ತೆಯೂ ಆಗಿರುವ ರಾಜೀವಿ ಹಲವು ದಿನಗಳ ಹಿಂದೆಯೇ ಪತಿಯನ್ನು ಕಳೆದುಕೊಂಡಿದ್ದಾರೆ. ಪತಿ ಮೃತಪಟ್ಟ ನಂತರ ಸಂಸಾರದ ನೊಗ ಹೊತ್ತರು. ಅನಿವಾರ್ಯವಾಗಿ ಹೆಚ್ಚೆಚ್ಚು ಕೆಲಸ ಮಾಡಬೇಕಿತ್ತು. ಆಶಾ ಕಾರ್ಯಕರ್ತೆ ಆಗಿದ್ದ ಅವರು, ಜೀವನಕ್ಕಾಗಿ ಅರ್ಧ ದಿನ ಆಟೋ ಓಡಿಸಲು ಶುರು ಮಾಡಿದರು.

ಮಹಿಳಾ ದಿನಾಚರಣೆ 2021: ಬೆಳಕು ಹರಿಯದ ಮುಂಜಾನೆಯಲ್ಲಿ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಗರ್ಭಿಣಿಗೆ ಆಸರೆಯಾದ ಆಟೋ ಚಾಲಕಿ...
ರಾಜೀವಿ
Follow us on

‘ಸ್ತ್ರೀ’ ಇದು ಬರೀ ಪದವಲ್ಲ. ಶಕ್ತಿ, ಮನಸ್ಥಿತಿ, ಸಾಧ್ಯತೆ, ಮಮತೆ, ಸ್ಫೂರ್ತಿ, ಸಂಭ್ರಮ. ಸಮತೆಯೂ. ಪೂಜ್ಯನೀಯ ಪಟ್ಟದಿಂದಾಚೆಯೂ ಆಕೆ ತನ್ನನ್ನು ತಾನಿವತ್ತೂ  ನಿಭಾಯಿಸಿಕೊಳ್ಳುವಷ್ಟು ಸ್ವತಂತ್ರ ಮನೋಭಾವವನ್ನು ಹೊಂದಿದ್ದಾಳೆ. ಹಾಗಂತ ಪೂರ್ತಿಯಾಗಿ ಶೋಷಣೆಯಿಂದ ಹೊರಗಾಗಿದ್ದಾಳೆ ಎನ್ನುವುದನ್ನೂ ಒಪ್ಪಲಾಗದು. ಕೂಲಿಯಿಂದ ಸೇನೆಯವರೆಗೂ ಆಕೆ ಶಕ್ತಿಯಾಗಿ ಚಿಮ್ಮಿದ್ದಾಳೆಂದರೆ ಆಕೆಯ ದಿಟ್ಟತೆಗೆ ದೊಡ್ಡ ಇತಿಹಾಸವೇ ಇದೆ. ಅವಳು ಕಾಲಿಟ್ಟಲ್ಲೆಲ್ಲ ಹೊಳಹಿನ ಛಾಯೆ ಆವರಿಸುತ್ತದೆಯೆಂದರೆ ಒಡಲೊಳಗೆ ಕಟ್ಟಿಟ್ಟುಕೊಂಡ ತಾಳ್ಮೆ ಇದೆ, ವಿವೇಚನೆ ಇದೆ, ಸ್ವಾವಲಂಬೀ ಮನೋಭಾವವಿದೆ. ಹೀಗೆ ಅವಳ ಆತ್ಮಗೌರವವನ್ನು ದ್ವಿಗುಣಗೊಳಿಸುತ್ತಿರುವ ಬೆನ್ನಲ್ಲೇ ಮತ್ತೊಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅವಳನ್ನಪ್ಪಿದೆ (International Women’s Day 2021). ನಮ್ಮನಿಮ್ಮ ನಡುವೆಯೇ ಇರುವ ಸಾಧಕ ಮನಸ್ಥಿತಿಗಳನ್ನು ಈ ಸಂದರ್ಭದಲ್ಲಿ ನಾವು ನಿಮಗೆ ಪರಿಚಯಿಸುತ್ತಿದ್ದೇವೆ.

ಹಾಗೇ ಪತಿಯನ್ನು ಕಳೆದುಕೊಂಡ ನೋವಿನ ಮಧ್ಯೆಯೂ ಸಂಸಾರದ ನೊಗ ಹೊತ್ತು, ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುತ್ತ ಜೀವನ ನಡೆಸುತ್ತಿರುವ ಉಡುಪಿ ಮೂಲದ ಮಹಿಳೆ ರಾಜೀವಿ ಪರಿಚಯ ಟಿವಿ 9 ಕನ್ನಡ ಡಿಜಿಟಲ್​​ನಲ್ಲಿ.. ಆಶಾ ಕಾರ್ಯಕರ್ತೆಯೂ ಆಗಿರುವ ಇವರು ಕೊರೊನಾ ಸಂದರ್ಭದಲ್ಲೂ ನಿರಂತರವಾಗಿ ಶ್ರಮವಹಿಸಿದ್ದಾರೆ..

ಸವಾಲುಗಳಿಗೇನೂ ಬದುಕಲ್ಲಿ ಹೆಜ್ಜೆಗೊಂದು ಸಿಗುತ್ತವೆ. ಅವುಗಳನ್ನು ಅಷ್ಟೇ ಧೈರ್ಯವಾಗಿ ಮೆಟ್ಟಿನಿಲ್ಲುವ ಛಾತಿ ಇರಬೇಕು ಅಷ್ಟೇ. ಹೀಗೆ ಬದುಕಲ್ಲಿ ಬಂದ ಕಷ್ಟಗಳನ್ನೆಲ್ಲ ಗಟ್ಟಿಯಾಗಿ ಮೆಟ್ಟಿನಿಂತ ಹೆಣ್ಣುಮಗಳು ಈ ರಾಜೀವಿ. ಇವರು ಆಟೋ ಚಾಲನೆ ಮಾಡಿ ಬದುಕು ಕಟ್ಟಿಕೊಂಡವರು. ಆಶಾ ಕಾರ್ಯಕರ್ತೆಯೂ ಹೌದು. ಉಡುಪಿಯ ಈ ಮಹಿಳೆ ನಿಜಕ್ಕೂ ಸ್ಪೆಶಲ್​ ಎನ್ನಿಸಲು ಕಾರಣ ಇವರಲ್ಲಿನ ಆತ್ಮವಿಶ್ವಾಸ.. ಇನ್ನೊಬ್ಬರಿಗೆ ಸಹಾಯ ಮಾಡುವ ಸ್ವಭಾವ. 54ನೇ ವರ್ಷದಲ್ಲೂ ಕುಗ್ಗದ ಇವರ ಉತ್ಸಾಹ.

ಆಟೋದಲ್ಲಿ ಗರ್ಭಿಣಿಯರಿಗೆ ಉಚಿತ ಸೇವೆ ನೀಡುವ ರಾಜೀವಿ

ಅದು ಕೊರೊನಾ ಲಾಕ್​ಡೌನ್ ಕಾಲ. ಇನ್ನೂ ಬೆಳಕು ಹರಿಯದ ಸಮಯದಲ್ಲಿ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಶುರುವಾಗುತ್ತದೆ. ಇವರಿರುವುದು ಒಂದು ಹಳ್ಳಿಯಲ್ಲಿ. ಅಲ್ಲಿಂದ ಆಸ್ಪತ್ರೆಗೆ ಹೋಗಲು ಏನಿಲ್ಲವೆಂದರೂ 15 ಕಿ.ಮೀ.ಪ್ರಯಾಣ ಮಾಡಬೇಕು. ರಸ್ತೆ ಪೂರ್ತಿ ಹಾಳಾಗಿದೆ. ಅಂಥ ಎಡರುತೊಡರು ರಸ್ತೆಯಲ್ಲಿ, ಮುಂಜಾನೆ 4 ಗಂಟೆ ಹೊತ್ತಿಗೆ ತುಂಬುಗರ್ಭಿಣಿಯನ್ನು ಆಟೋದಲ್ಲಿ ಕರೆದುಕೊಂಡು ಆಸ್ಪತ್ರೆಗೇನೋ ಹೋದರು. ಹಾಗೆ ಹೋದರೂ ಅದೆಷ್ಟೋ ಆಸ್ಪತ್ರೆಗಳಿಗೆ ಗರ್ಭಿಣಿಯನ್ನು ಸೇರಿಸಲು ಸಾಧ್ಯವಾಗಲೇ ಇಲ್ಲ. ಕೊರೊನಾ ಕಾರಣ ಹೇಳಿ ಆಕೆಯನ್ನು ದಾಖಲಿಸಿಕೊಳ್ಳಲಿಲ್ಲ. ಆದರೆ ಈ ರಾಜೀವಿಯವರು ಅವರನ್ನು ಕೈಬಿಡದೆ ಉಡುಪಿಯ ಜಾಜೀ ಅಬ್ದುಲ್ಲ ಕುಶಮ್ಮ ಶಂಭು ಶೆಟ್ಟಿ ಆಸ್ಪತ್ರೆಗೆ ಸೇರಿಸಿದರು. ಅಂದು ತುಂಬುಗರ್ಭಿಣಿಯನ್ನು ಇವರು ನಾಜೂಕಾಗಿ ಕರೆದುಕೊಂಡು ಹೋಗಿ, ಆಸ್ಪತ್ರೆಗೆ ಸೇರಿಸದೆ ಇದ್ದರೆ ಖಂಡಿತ ಅಪಾಯವಾಗುತ್ತಿತ್ತು. ಇದೀಗ ತಾಯಿ-ಮಗು ಆರೋಗ್ಯವಾಗಿದ್ದು, ರಾಜೀವಿಯವರ ಸಹಾಯವನ್ನು ಮಹಿಳೆ ಸದಾ ಸ್ಮರಿಸುತ್ತಾರೆ. ಸ್ಥಳೀಯರೂ ಸಹ ತುಂಬ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಒಂಟಿ ಬದುಕಿನ ಹೋರಾಟ
ಆಶಾ ಕಾರ್ಯಕರ್ತೆಯೂ ಆಗಿರುವ ರಾಜೀವಿ ಹಲವು ದಿನಗಳ ಹಿಂದೆಯೇ ಪತಿಯನ್ನು ಕಳೆದುಕೊಂಡಿದ್ದಾರೆ. ಪತಿ ಮೃತಪಟ್ಟ ನಂತರ ಸಂಸಾರದ ನೊಗ ಹೊತ್ತರು. ಅನಿವಾರ್ಯವಾಗಿ ಹೆಚ್ಚೆಚ್ಚು ಕೆಲಸ ಮಾಡಬೇಕಿತ್ತು. ಆಶಾ ಕಾರ್ಯಕರ್ತೆ ಆಗಿದ್ದ ಅವರು, ಜೀವನಕ್ಕಾಗಿ ಅರ್ಧ ದಿನ ಆಟೋ ಓಡಿಸಲು ಶುರು ಮಾಡಿದರು. ಇನ್ನೊಂದು ವಿಶೇಷ ಸಂಗತಿಯೆಂದರೆ ಇವರು ಗರ್ಭಿಣಿಯರು ಆಟೋದಲ್ಲಿ ಪ್ರಯಾಣ ಮಾಡಿದರೆ ಅವರಿಂದ ಹಣ ತೆಗೆದುಕೊಳ್ಳುವುದಿಲ್ಲ. ಸ್ವಂತ ದುಡಿಮೆಯಿಂದ ಜೀವನ ಕಟ್ಟಿಕೊಂಡ ಇವರು ಇತರರಿಗೆ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಅದೆಷ್ಟೋ ಹೆಣ್ಣುಮಕ್ಕಳಿಗೆ ಮಾದರಿಯಾಗಿ ಬದುಕುತ್ತಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಕೂಡ ತಮಗೆ ನೀಡಿದ ಕೆಲಸವನ್ನು ಅಷ್ಟೇ ಶ್ರದ್ಧೆಯಿಂದ ಮಾಡಿದ್ದಾರೆ. ಮನೆಮನೆಯ ಸರ್ವೇ, ವಿದೇಶದಿಂದ ಬಂದವರ ಮಾಹಿತಿ ಸಂಗ್ರಹ ಸೇರಿ ಎಲ್ಲ ರೀತಿಯ ಕೆಲಸದಲ್ಲೂ ತಮ್ಮನ್ನು ತೊಡಗಿಸಿಕೊಂಡರು. ಇನ್ನು ತಮ್ಮ ಆಟೋ ಮೇಲೆ ಕೊವಿಡ್​-19 ಬಗ್ಗೆ ಜಾಗೃತಿ ಮೂಡಿಸುವ ಪೋಸ್ಟರ್​ಗಳನ್ನು ಹಾಕಿ ಓಡಿಸುತ್ತಿದ್ದರು. ಇವರಿಗೆ ಒಬ್ಬ ಮಗಳು, ಮತ್ತೊಬ್ಬ ಮಗಳಿದ್ದಾರೆ. ಅವರು ವಯಸ್ಸಿಗೆ ಬಂದು, ಉದ್ಯೋಗದಲ್ಲಿದ್ದರೂ ಈ ತಾಯಿ ತನ್ನ ದುಡಿಮೆ ನಿಲ್ಲಿಸಿಲ್ಲ.

 

(ನಿರೂಪಣೆ- ಹರೀಶ್ ಪಾಲೆಚ್ಚಾರ್)

Published On - 7:59 pm, Sun, 7 March 21