ಕೇರಳದಲ್ಲಿ ಬಾಂಬ್ ಬ್ಲಾಸ್ಟ್: ಕರ್ನಾಟಕದಲ್ಲಿ ಕಟ್ಟೆಚ್ಚರ, ಗೃಹ ಸಚಿವ ಪರಮೇಶ್ವರ್ ಹೇಳಿದ್ದಿಷ್ಟು

| Updated By: ಗಂಗಾಧರ​ ಬ. ಸಾಬೋಜಿ

Updated on: Oct 29, 2023 | 6:25 PM

ಕೇರಳದಲ್ಲಿ ಅವಳಿ ಬಾಂಬ್‌ ಸ್ಫೋಟದಲ್ಲಿ ಮಹಿಳೆ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೂಕ್ಷ್ಮವಾಗಿ ಗಮನ ಇರಿಸಲಾಗಿದೆ. ಕರಾವಳಿ ಭಾಗ ಮತ್ತು ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕರ್ನಾಟಕದಲ್ಲಿ ಇಂತಹ ಘಟನೆ ನಡೆಯಲು ಬಿಡಲ್ಲ ಎಂದು ಹೇಳಿದ್ದಾರೆ. 

ಉಡುಪಿ, ಅಕ್ಟೋಬರ್ 29: ಕೇರಳ (Kerala) ದ ಎರ್ನಾಕುಲಂ ಜಿಲ್ಲೆಯ ಸಮಾವೇಶ ಕೇಂದ್ರವೊಂದರಲ್ಲಿ ಭಾನುವಾರ ಸಂಭವಿಸಿದ ಭಾರೀ ಸ್ಫೋಟದಲ್ಲಿ ಓರ್ವ ಸಾವನ್ನಪ್ಪಿದ್ದು, 37 ಮಂದಿ ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿ ಪೊಲೀಸರಿಗೆ ಶರಣಾಗಿದ್ದಾನೆ. ಸದ್ಯ ಈ ಕುರಿತಾಗಿ ಉಡುಪಿಯಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದು, ಕರಾವಳಿ ಭಾಗ ಮತ್ತು ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೂಕ್ಷ್ಮವಾಗಿ ಗಮನ ಇರಿಸಲಾಗಿದೆ. ಕರ್ನಾಟಕದಲ್ಲಿ ಇಂತಹ ಘಟನೆ ನಡೆಯಲು ಬಿಡಲ್ಲ ಎಂದಿದ್ದಾರೆ.

ತೀವ್ರ ನಿಗಾ ಇರಿಸುವಂತೆ ಗುಪ್ತಚರ ಇಲಾಖೆಗೆ ಸೂಚಿಸಲಾಗಿದೆ. ಕೆಲ ಸಂಘಟನೆ ಸಕ್ರಿಯ ಆಗಬಹುದು ಅಥವಾ ಆಗದೇ ಇರಬಹುದು. ಎಲ್ಲ ಎಸ್‌ಪಿಗಳಿಗೆ ಸೂಚನೆ ನೀಡಲಾಗಿದೆ. ವ್ಯಕ್ತಿ ಹಾಗೂ ಸಂಘಟನೆ ಮೇಲೆ ಅನುಮಾನ ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತದೆ ಎಂದು ಬಿಜೆಪಿ ಕಾಯ್ದುಕೊಂಡು ಇರಲಿ

ಮತ್ತೊಮ್ಮೆ ಆಪರೇಷನ್ ಕಮಲ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತದೆ ಎಂದು ಬಿಜೆಪಿ ಐದು ವರ್ಷ ಕಾದುಕೊಂಡಿರಲಿ ಎಂದು ರಾಜ್ಯದ ಜನರೇ ತೀರ್ಮಾನಿಸಿದ್ದಾರೆ. ಸರಕಾರದ ಅಧಿಕಾರ ಹಂಚಿಕೆ ಎರಡುವರೆ ವರ್ಷ, ಒಂದು ಕಾಲು ವರ್ಷ ಎಂದು ಮಾಧ್ಯಮಗಳು ಹೇಳುತ್ತವೆ. ನಮ್ಮಲ್ಲಿ ಯಾವುದೇ ಚರ್ಚೆ ಇಲ್ಲ ಎಂದರು.

ಇದನ್ನೂ ಓದಿ: ಕೇರಳದ ಎರ್ನಾಕುಲಂ ಸರಣಿ ಸ್ಫೋಟ ಪ್ರಕರಣ: ಸ್ಫೋಟದ ಹೊಣೆಹೊತ್ತು ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣು

ಎಐಸಿಸಿ ಅಧ್ಯಕ್ಷ ಖರ್ಗೆ ಅವರು ಈ ಬಗ್ಗೆ ಏನಾದರೂ ಹೇಳಿದ್ದಾರಾ? ಕೇವಲ ಊಹೆಯ ಮೇಲೆ ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಕೆಲಸ ಮಾಡುತ್ತಿದ್ದಾರೆ, ಮಿಕ್ಕಿದ್ದೆಲ್ಲ ಅಪ್ರಸ್ತುತ. ಬದಲಾವಣೆಗಳಿದ್ದರೆ, ಸಂದರ್ಭ ಬಂದಾಗ ಹೈಕಮಾಂಡ್ ತೀರ್ಮಾನಿಸುತ್ತೆ ಎಂದು ತಿಳಿಸಿದ್ದಾರೆ.

ನಾವು ಬಿಜೆಪಿಯವರನ್ನು ಕೇಳಿಕೊಂಡು ಆಡಳಿತ ಮಾಡುತ್ತಿಲ್ಲ

ರಾಷ್ಟ್ರೀಯ ಚಿಂತಕರು, ಬಿಜೆಪಿ ಶಾಸಕರಿಗೆ ಕಿರುಕುಳ ನಳಿನ್ ಕುಮಾರ್​ ಕಟೀಲ್​ ಆರೋಪ ವಿಚಾರವಾಗಿ ಪ್ರತಿಕ್ರಿಯಸಿದ್ದು, ನಾವು ಬಿಜೆಪಿಯವರನ್ನು ಕೇಳಿಕೊಂಡು ಆಡಳಿತ ಮಾಡುತ್ತಿಲ್ಲ. ಅವರ ಮುಖಂಡರನಾಗಲಿ ಪಕ್ಷವನ್ನಾಗಲಿ ಕೇಳಿಕೊಂಡು ಆಡಳಿತ ಮಾಡುತ್ತಿಲ್ಲ ಅನ್ನೋದು ಸ್ಪಷ್ಟ. ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯ ಸಲಹೆ ಕೊಟ್ಟರೆ ಪರಿಗಣಿಸಬಹುದು. ಟೀಕೆ ಟಿಪ್ಪಣಿ ಮಾಡುವುದು ಬಿಡಿ, ರಾಜ್ಯದ ಹಿತ ದೃಷ್ಟಿಯಿಂದ ಸಲಹೆ ಕೊಡಿ ಎಂದಿದ್ದಾರೆ.

ಇದನ್ನೂ ಓದಿ: ರಾಜ್ಯದ ಅಭಿವೃದ್ಧಿ ಮರೆತ ಕಾಂಗ್ರೆಸ್ ನಾಯಕರು ಆಂತರಿಕ ಕಿತ್ತಾಟದಲ್ಲೇ ಮುಳುಗಿದ್ದಾರೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಗುಜರಿ ಗೋಲ್ಮಾಲ್ ವಿಚಾರಕ್ಕೆ, ಅದು ಸಹಕಾರಿ ಸಂಸ್ಥೆಗೆ ಸೇರಿದ ಕಾರ್ಖಾನೆ. ಸಹಕಾರಿ ಮತ್ತು ಸಕ್ಕರೆ ಸಚಿವರು ಈ ಬಗ್ಗೆ ಜಂಟಿಯಾಗಿ ತನಿಖೆ ಮಾಡುತ್ತಾರೆ. ಪೊಲೀಸ್ ತನಿಖೆಗೆ ಸೂಚನೆ ಬಂದರೆ ನಾವು ಮಾಡುತ್ತೇವೆ. ಸರ್ಕಾರ ಪೊಲೀಸ್ ಇಲಾಖೆಗೆ ತನಿಖೆಗೆ ಸೂಚಿಸಿದರೆ ಕ್ರಮ ಜರುಗಿಸುತ್ತೇವೆ.
ಬಸವನಾಡು ಮರುನಾಮಕರಣ ವಿಚಾರ ನನಗೆ ಗೊತ್ತಿಲ್ಲ ಎಂದರು.

ಗೃಹ ಸಚಿವ ಪರಮೇಶ್ವರ್ ನಿವಾಸದಲ್ಲಿ ಡಿನ್ನರ್ ಪಾರ್ಟಿ ವಿಚಾರವಾಗಿ ಮಾತನಾಡಿದ ಅವರು, ಮನೆಯಲ್ಲಿ ಊಟ ಮಾಡಿದ್ರೆ ವಿಶೇಷ ಅರ್ಥ ಯಾಕೆ ಕಲ್ಪಿಸುತ್ತೀರಿ? ಬೆಳಗಾವಿ ಜಿಲ್ಲಾ ಕಾಂಗ್ರೆಸ್​​ನಲ್ಲಿ ಎಲ್ಲವೂ ಸರಿಯಾಗಿದೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಗೆ ಅಸಮಾಧಾನ ಇಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:17 pm, Sun, 29 October 23