ಉಡುಪಿಯಲ್ಲಿ ಭೀಕರ ಅಪಘಾತ: ಐವರು ಕಾರ್ಮಿಕರು ದುರಂತ ಸಾವು
ಉಡುಪಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಐವರು ಕಾರ್ಮಿಕರು ದುರಂತ ಸಾವು ಕಂಡಿದ್ದಾರೆ. ಕಾರ್ಯಕ್ರಮವೊಂದಕ್ಕೆ ಡೆಕೊರೇಷನ್ ಸಾಮಗ್ರಿ ಸಾಗಿಸುತ್ತಿದ್ದ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಸರ್ವಿಸ್ ರಸ್ತೆಗೆ ಉರುಳಿಬಿದ್ದಿದ್ದು, ಹೊಟ್ಟೆಪಾಡಿಗಾಗಿ ದೂರದ ಊರಿನಿಂದ ಬಂದಿದ್ದ ಕಾರ್ಮಿಕರು ದುರಂತ ಅಂತ್ಯಕಂಡಿದ್ದಾರೆ.

ಉಡುಪಿ, (ನವೆಂಬರ್ 30): ಕಾರ್ಯಕ್ರಮವೊಂದಕ್ಕೆ ಡೆಕೊರೇಷನ್ ಸಾಮಗ್ರಿ ಸಾಗಿಸುತ್ತಿದ್ದ ಟೆಂಟೋ (Tempo) ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಘಟನೆಯಲ್ಲಿ ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇಂದು (ನವೆಂಬರ್ 30) ಉಡುಪಿ (Udupi) ಜಿಲ್ಲೆಯ ಕಾಪು ತಾಲೂಕಿನ ಕೋತಲಕಟ್ಟೆ ಬಳಿ ಈ ದುರ್ಘಟನೆ ಸಂಭವಿಸಿದೆ. ಕಾರ್ಯಕ್ರಮವೊಂದಕ್ಕೆ ಡೆಕೊರೇಷನ್ ಸಾಮಗ್ರಿ ಸಾಗಿಸುತ್ತಿದ್ದ ವೇಳೆ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಡಿವೈಡರ್ ಹಾರಿ ಸರ್ವಿಸ್ ರಸ್ತೆಗೆ ಉರುಳಿಬಿದ್ದಿದ್ದು, ಟೆಂಪೋನಲ್ಲಿದ್ದ 12 ಕಾರ್ಮಿಕರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾರೆ. ಈ ಪೈಕಿ ಐವರು ಮೃತಪಟ್ಟಿದ್ದಾರೆ. ಹಲವರಿಗೆ ಗಾಯಗಳಾಗಿವೆ. ಪಶ್ಚಿಮ ಬಂಗಾಳದ ಕಮಲ್, ಸಮರೇಶ್, ಅಸ್ಸಾಂನ ಪಪ್ಪು ರವಿ ದಾಸ್, ಹರೀಶ್,ತ್ರಿಪುರಾದ ಗಪುನಾತ್ ಮೃತ ಕಾರ್ಮಿಕರು.
ಘಟನೆ ನಡೆದದ್ದು ಹೇಗೆ?
ಟೆಂಪೋವು ಕಾಪು ಮಜೂರಿನಿಂದ ಮಲ್ಪೆಗೆ ಡೆಕರೋಷನ್ ಕೆಲಸಕ್ಕೆ ಬೇಕಾದ ಸಲಕರಣೆಗಳನ್ನು ಸಾಗಿಸುತ್ತಿತ್ತು. ವಾಹನದಲ್ಲಿ ಒಟ್ಟು 12 ಮಂದಿ ಕಾರ್ಮಿಕರಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ರಸ್ತೆಯ ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ಟೆಂಪೋದಲ್ಲಿದ್ದ ಭಾರವಾದ ಕಬ್ಬಿಣದ ಸಲಕರಣೆಗಳು ಕಾರ್ಮಿಕರ ಮೇಲೆ ಬಿದ್ದಿವೆ. ಈ ಪರಿಕರಗಳ ನಡುವೆ ಸಿಲುಕಿ ಉಸಿರುಗಟ್ಟಿ ಉತ್ತರ ಭಾರತದ ಐವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿ ಲಾರಿ- 4 ಕಾರುಗಳ ನಡುವೆ ಸರಣಿ ಅಪಘಾತ
ಘಟನೆಯಲ್ಲಿ ಸ್ಥಳದಲ್ಲೇ ಇಬ್ಬರು ಕಾರ್ಮಿಕರು ಸಾವಿಗೀಡಾಗಿದ್ದರೆ, ಆಸ್ಪತ್ರೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ವಾಹನದಲ್ಲಿ 12 ಜನರು ಪೈಕಿ ಇನ್ನುಳಿದ ಏಳು ಕಾರ್ಮಿಕರಿಗೆ ಗಂಭೀರಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ವಿವಿಧ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಕಾಪು ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಗಾಯಾಳುಗಳ ಗುರುತು ಪತ್ತೆ
ಒಟ್ಟು 12 ಕಾರ್ಮಿಕರಲ್ಲಿ ಐವರು ಸಾವನ್ನಪ್ಪಿದ್ದು, ಇನ್ನುಳಿದ ಏಳು ಗಾಯಾಳುಗಳ ಬಗ್ಗೆ ಕೆಲವರ ಗುರುತು ಪತ್ತೆ ಮಾಡಲಾಗಿದೆ. ಗಣೇಶ್ ಬಹದ್ದೂರ್ ರಾಯ್ 36) ಅಸ್ಸಾಂ ನಿವಾಸಿ ಪ್ರಬಾಸ್ ರಾಯ್ (26) ಪಶ್ಚಿಮ ಬಂಗಾಳದ ಗೋಪಾಲ್ ಭೌಮಿಕ್ (16), ಕಾಪು ಮಜೂರು ನಿವಾಸಿ ರಂಜಿತ್ ಅಮೀನ್ (33) , ಪ.ಬಂಗಾಳದ ಸುಬ್ರದೋ, ಸೂರಜ್ ದೊಲೈ ಎನ್ನುವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:50 pm, Sun, 30 November 25



