ಮಲ್ಪೆಯಲ್ಲಿ ಅಡ್ರೆಸ್ ಇಲ್ಲದೆ ಸಾಯುತ್ತಿರುವ ಅಮಾಯಕ ಮೀನುಗಾರರು, ಕಾಣದಂತೆ ಕುಳಿತ ಸರ್ಕಾರ

ಉಡುಪಿ ಜಿಲ್ಲೆಯಲ್ಲಿ ಸದ್ಯ ಸಮುದ್ರಕ್ಕಿಂತ ಬಂದರಿನ ಹೂಳು ಅಪಾಯ ಎಂಬ ಸ್ಥಿತಿ ಎದುರಾಗಿದ್ದು, ಕಳೆದ 5 ವರ್ಷಗಳಲ್ಲಿ 54 ಜನ ಮೀನುಗಾರರು ಸಾವನ್ನಪ್ಪಿದ್ದಾರೆ.

ಮಲ್ಪೆಯಲ್ಲಿ ಅಡ್ರೆಸ್ ಇಲ್ಲದೆ ಸಾಯುತ್ತಿರುವ ಅಮಾಯಕ ಮೀನುಗಾರರು, ಕಾಣದಂತೆ ಕುಳಿತ ಸರ್ಕಾರ
ಮಲ್ಪೆ ಬಂದರು
Edited By:

Updated on: Nov 02, 2022 | 5:30 AM

ಉಡುಪಿ ಜಿಲ್ಲೆಯಲ್ಲಿ ಸದ್ಯ ಸಮುದ್ರಕ್ಕಿಂತ ಬಂದರಿನ ಹೂಳು ಅಪಾಯ ಎಂಬ ಸ್ಥಿತಿ ಎದುರಾಗಿದೆ. ಇದಕ್ಕೆ ಅಮಾಯಕ ಮೀನುಗಾರರು ಅಡ್ರೆಸ್ ಇಲ್ಲದೆ ಸಾಯುತ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ ಸತ್ತವರ ಸಂಖ್ಯೆ 54! ತಕ್ಷಣ ಹೊಳೆತ್ತಲು ಇನ್ನೆಷ್ಟು ಜೀವ ಹೋಗಬೇಕು.

ಉಡುಪಿಯ ಮಲ್ಪೆ ಮೀನುಗಾರಿಕಾ ಬಂದರು ಏಷ್ಯಾದಲ್ಲಿ ಅತಿ ದೊಡ್ಡ ಸರ್ವ ಋತು ಮೀನುಗಾರಿಕಾ ಬಂದರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಇಲ್ಲಿ ದುಡಿಯುವ ಮೀನುಗಾರರಿಗೆ ಕಡಲಿಗಿಂತಲೂ ಬಂದರೇ ಅಪಾಯಕಾರಿ ಎನಿಸಿದೆ. ಆಳ ಸಮುದ್ರದಲ್ಲಿ ನಡೆಯುವ ಅವಘಡಗಳಿಗಿಂತಲೂ ಹೆಚ್ಚು ಬಂದರ್​ನಲ್ಲೇ ಮೀನುಗಾರರು ಬಿದ್ದು ಸಾಯುತ್ತಿದ್ದಾರೆ. ಅಂಕಿ ಅಂಶಗಳ ಪ್ರಕಾರ 2017ರಿಂದ 2022ರ ವರೆಗೆ ಮಲ್ಪೆ ಬಂದರಿನಲ್ಲಿ ಬರೋಬ್ಬರಿ 54 ಮೀನುಗಾರರು ಮೃತಪಟ್ಟಿದ್ದಾರೆ. ಇವರಲ್ಲಿ ಬಹುತೇಕರು ಬಂದರಿನಲ್ಲಿ ಜಮೆಯಾಗಿರುವ ಹೂಳಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ!

ಕಳೆದ ಎಂಟು ವರ್ಷಗಳಿಂದ ಧಕ್ಕೆಯಲ್ಲಿನ ಹೂಳು ತೆಗೆದಿಲ್ಲ. ಇದರ ಪರಿಣಾಮ ಮಲ್ಪೆ ಬಂದರು ಮೀನುಗಾರರ ಪಾಲಿಗೆ ಮೃತ್ಯು ಕೋಪವಾಗಿ ಮಾರ್ಪಟ್ಟಿದೆ. ದಕ್ಕೆಯಲ್ಲಿ ಒಂದು ಬೋಟಿನಿಂದ ಮತ್ತೊಂದು ಬೋಟಿಗೆ ದಾಟುವಾಗ, ಮೀನು ಇಳಿಸುವಾಗ ಆಯತಪ್ಪಿ ಬಿದ್ದರೆ ಬದುಕಿ ಮೇಲೆ ಬರುವ ಸಾಧ್ಯತೆಯೇ ಇಲ್ಲ.

ಬಂದರಿನಲ್ಲಿ ದುಡಿಯಲು ನಾನಾ ರಾಜ್ಯಗಳ ಕಾರ್ಮಿಕರು ಬರುತ್ತಾರೆ. ಅದರಲ್ಲೂ ಜಾರ್ಖಂಡ್, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದ ಬಡ ಕಾರ್ಮಿಕರೇ ಹೆಚ್ಚು. ಯಾವುದೋ ಊರಿನಿಂದ ಬಂದವರು ಇಲ್ಲಿ ಸತ್ತರೆ ಹೇಳೋರಿಲ್ಲ ಕೇಳೋರಿಲ್ಲ. ಕೆಲವೊಮ್ಮೆ ಶವ ಮೇಲಕ್ಕೆ ಬರಲು ವಾರಗಳು ತಗಲುತ್ತದೆ. ಹೋಳು ಇರುವುದರಿಂದ ಬಂದರಿನೊಳಗೆ ಬೋಟುಗಳು ಬರಲು ಕಷ್ಟವಾಗುತ್ತಿದೆ. ಫೀಡ್ ಫೋಟೋಗಳ ರೆಕ್ಕೆಗಳು ಕೆಸರಿನಲ್ಲಿ ಸಿಲುಕಿ ಹಾನಿಯಾಗುತ್ತಿವೆ. ಬೋಟ ನೀರಿನ ಮೇಲ್ಮೈಯಿಂದ 3 ಮೀಟರ್ ಆಳಕ್ಕೆ ಇಳಿಯುತ್ತೆ. ಆದರೆ ಹೂಳಿನ ಸಮಸ್ಯೆಯಿಂದಾಗಿ ಬೋಟುಗಳ ಸಂಚಾರ ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಿಂದ ಭಾರಿ ಪ್ರಮಾಣದ ಕೆಸರು ನೀರು ಸಮುದ್ರ ಸೇರುತ್ತದೆ. ಹೀಗೆ ಬಂದ ನೀರು ಬಂದರು ಪ್ರದೇಶದಲ್ಲಿ ಜಮೆ ಆಗುತ್ತಿದೆ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಹೀಗಾಗಿ ಶೀಘ್ರ ಹೋಳು ತೆಗೆದು ಮೀನುಗಾರರ ಜೀವ ಕಾಪಾಡಬೇಕೆಂದು ಸ್ಥಳೀಯರು ಬೇಡಿಕೊಂಡಿದ್ದಾರೆ.

ಇಲ್ಲಿಯ ಓರ್ವ ಸಾಮಾಜಿಕ ಕಾರ್ಯಕರ್ತ ಈಶ್ವರ ಮಲ್ಪೆ, ಹೂಳಿನಲ್ಲಿ ಸಿಲುಕಿದ ಅನೇಕರನ್ನು ಬದುಕಿಸಿದ್ದಾರೆ. ಅನೇಕ ಶವಗಳನ್ನು ಮೇಲಕ್ಕೆತ್ತಿದ್ದಾರೆ. ಹೂಳು ತೆಗೆಯದೆ ಹೋದರೆ ಇನ್ನಷ್ಟು ಅಮಾಯಕ ಜೀವಗಳು ಬಲಿಯಾಗುತ್ತದೆ ಎಂದು ಈಶ್ವರ ಮಲ್ಪೆ ಎಚ್ಚರಿಕೆ ನೀಡಿದ್ದಾರೆ. ಇನ್ನಾದರೂ ಸರಕಾರ ಎಚ್ಚೆತ್ತು ಮಲ್ಪೆ ಬಂದರು ಸೇರಿದಂತೆ ಕರಾವಳಿಯ ಮೀನುಗಾರಿಕಾ ಬಂದರುಗಳಲ್ಲಿ ಹೂಳೆತ್ತುವ ಕೆಲಸ ಮಾಡಬೇಕು.

Web contact

TV9 Kannada

Read More
Follow Us