ಉಡುಪಿ ಕಾಲೇಜಿನ ವಿಡಿಯೋ ಚಿತ್ರೀಕರಣ ಕೇಸ್​: ತನಿಖಾಧಿಕಾರಿ ಬದಲಾಗುತ್ತಿದ್ದಂತೆಯೇ ತನಿಖೆ ಚುರುಕು, ಆರೋಪಿಗಳ ಫ್ರೆಂಡ್ಸ್​ ಫೋನ್ ವಶಕ್ಕೆ

ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ಬೆಳ್ಳಿಯಪ್ಪ ನೇತೃತ್ವದಲ್ಲಿ ತನಿಖೆ ತೀವ್ರಗೊಂಡಿದ್ದು, ಆರೋಪಿತರ ಸ್ನೇಹಿತರ ಮೊಬೈಲ್​ಗಳನ್ನು ವಶಕ್ಕೆ ಪಡೆದಿದ್ದಾರೆ.

ಉಡುಪಿ ಕಾಲೇಜಿನ ವಿಡಿಯೋ ಚಿತ್ರೀಕರಣ ಕೇಸ್​: ತನಿಖಾಧಿಕಾರಿ ಬದಲಾಗುತ್ತಿದ್ದಂತೆಯೇ ತನಿಖೆ ಚುರುಕು, ಆರೋಪಿಗಳ ಫ್ರೆಂಡ್ಸ್​ ಫೋನ್ ವಶಕ್ಕೆ
ಉಡುಪಿ ಖಾಸಗಿ ಕಾಲೇಜು (ಎಡಚಿತ್ರ) ಸಾಂದರ್ಭಿಕ ಚಿತ್ರ (ಬಲಚಿತ್ರ)
Updated By: ವಿವೇಕ ಬಿರಾದಾರ

Updated on: Aug 02, 2023 | 11:56 AM

ಉಡುಪಿ: ಉಡುಪಿಯ (Udupi) ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯ (Student) ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ಬೆಳ್ಳಿಯಪ್ಪ ನೇತೃತ್ವದಲ್ಲಿ ತನಿಖೆ ತೀವ್ರಗೊಂಡಿದ್ದು, ಆರೋಪಿತರ ಸ್ನೇಹಿತರ ಮೊಬೈಲ್​ಗಳನ್ನು (Mobile) ವಶಕ್ಕೆ ಪಡೆದಿದ್ದಾರೆ. ಸದ್ಯ ಪೊಲೀಸರ ತಂಡ ಮೊಬೈಲ್​ಗಳನ್ನು ಪರಿಶೀಲನೆ ನಡೆಸುತ್ತಿದೆ. ಇನ್ನು ಕಳೆದ ವಾರ ಮಳೆಯ ಕಾರಣಕ್ಕೆ ಕಾಲೇಜಿಗೆ ರಜೆ ಇತ್ತು. ಇದೀಗ ಮಳೆ ಕಡಿಮೆಯಾದ ಹಿನ್ನೆಲೆ ಸೋಮವಾರದಿಂದ ಕಾಲೇಜು ಆರಂಭವಾಗಬೇಕಿತ್ತು. ಆದರೆ ಕಾಲೇಜಿನ ಶೈಕ್ಷಣಿಕ ವಾತಾವರಣ ಕೆಡಬಾರದೆಂದು ಅನಿರ್ದಿಷ್ಟಾವಧಿಗೆ ರಜೆ ಮುಂದುವರಿಸಿದ ಕಾಲೇಜು ಆಡಳಿತ ಮಂಡಳಿ ಆದೇಶ ಹೊರಡಿಸಿದೆ.

ಈ ಹಿಂದೆ ಕಾಲೇಜಿಗೆ ಐಜಿಪಿ ಭೇಟಿ ನೀಡಿದ್ದ ಹಿನ್ನೆಲೆ ಉಡುಪಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಈ ವೇಳೆ ಸಂತ್ರಸ್ತ ವಿದ್ಯಾರ್ಥಿನಿಯ ಹೇಳಿಕೆಯನ್ನು ಮಹಿಳಾ ಅಧಿಕಾರಿಗಳು ದಾಖಲಿಸಿಕೊಂಡಿದ್ದರು. ಅಲ್ಲದೇ ಸ್ಥಳದಲ್ಲಿ ಆಪರೇಟ್ ಆಗುತ್ತಿದ್ದ ಎಲ್ಲ ಮೊಬೈಲ್​ಗಳ ಕಾಲ್ ಡೀಟೇಲ್ಸ್​​ಗಳನ್ನು ಪತ್ತೆ ಹಚ್ಚಿದ್ದರು. ಮೊಬೈಲ್​ಗಳನ್ನು ಎಫ್​ಎಸ್​ಎಲ್​ಗೆ ಕಳುಹಿಸಿದ್ದರು. ಜೊತೆಗೆ ಅನಗತ್ಯ ವ್ಯಕ್ತಿಗಳು ಕಾಂಪೌಂಡ್ ಆವರಣದಲ್ಲಿ ಓಡಾಟ ಆರೋಪ ಕೇಳಿಬಂದಿದ್ದ ಹಿನ್ನೆಲೆ ಕಾಲೇಜು ಆವರಣದಲ್ಲಿನ ಸಿಸಿ ಕ್ಯಾಮರಾಗಳ ಫೂಟೇಜ್​ನ್ನು ವಶಕ್ಕೆ ಪಡೆಯಲಾಗಿತ್ತು.

ತನಿಖಾಧಿಕಾರಿ ಬದಲಾವಣೆ

ಪ್ರಕರಣವನ್ನು ಮುಂದಿಟ್ಟುಗೊಂಡು ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದೆ. ಈ ಸಂಬಂಧ ಉಡುಪಿಯಲ್ಲಿ ಬೃಹತ್​ ಪ್ರತಿಭಟನೆ ಮಾಡಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಒತ್ತಾಯಿಸಿತ್ತು. ಅಲ್ಲದೇ ಆರಂಭದಿಂದ ಪ್ರಕರಣದ ತನಿಖೆ ನಡೆಸಿಕೊಂಡು ಬಂದಿದ್ದ ಮಲ್ಪೆ ಇನ್ಸ್​ಪೆಕ್ಟರ್ ಮಂಜುನಾಥ್ ಗೌಡರನ್ನು ಬದಲಾಯಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು.

ಇದನ್ನೂ ಓದಿ: ಇಂದು ಕ್ಯಾಮರಾ ಇಟ್ಟ ವಿದ್ಯಾರ್ಥಿಗಳು, ನಾಳೆ ಬಾಂಬ್ ಇಡುತ್ತಾರೆ – ಯಶ್‌ಪಾಲ್ ಸುವರ್ಣ

ಈ ಹಿನ್ನೆಲೆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಮಲ್ಪೆ ಇನ್ಸ್​ಪೆಕ್ಟರ್​ ಮಂಜುನಾಥ್ ಗೌಡ ಅವರನ್ನು ಬದಲಾವಣೆ ಮಾಡಿ, ಕುಂದಾಪುರ ಡಿವೈಎಸ್​​​ಪಿ ಬೆಳ್ಳಿಯಪ್ಪ ಅವರನ್ನು ತನಿಖಾಧಿಕಾರಿಯನ್ನಾಗಿ ಉಡುಪಿ ಎಸ್​​​​​​ಪಿ ಅಕ್ಷಯ್​ ನೇಮಕ ಮಾಡಿದ್ದರು. ಮಂಗಳೂರು ವಿಮಾನ ನಿಲ್ದಾಣದ ಬಾಂಬ್ ಪ್ರಕರಣ ಮತ್ತು ಶಿರೂರು ಸ್ವಾಮೀಜಿ ಸಾವು ಪ್ರಕರಣದಲ್ಲೂ ದಕ್ಷ ತನಿಖಾಧಿಕಾರಿಯಾಗಿ ಬೆಳ್ಳಿಯಪ್ಪ ಅವರು ಕಾರ್ಯನಿರ್ವಹಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:21 am, Wed, 2 August 23