ಉಡುಪಿ ನೇಜಾರಿನಲ್ಲಿ ನಾಲ್ವರ ಅಮಾನುಷ ಹತ್ಯೆ ಪ್ರಕರಣದಲ್ಲಿ ಅನಪೇಕ್ಷಿತ ಬೆಳವಣಿಗೆ: ಗ್ರಾಮಸ್ಥರ ಆಕ್ರೋಶ

| Updated By: ಸಾಧು ಶ್ರೀನಾಥ್​

Updated on: Dec 11, 2023 | 10:05 AM

ಆರೋಪಿ ಪ್ರವೀಣ್ ಚೌಗಲೆಗೆ ಸೂಕ್ತ ಭದ್ರತೆ ನೀಡಲು ಕಷ್ಟವಾದ ಕಾರಣ, ಆತನನ್ನು ಉಡುಪಿ ಸಬ್ ಜೈಲಿನಿಂದ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರ ಮಾಡಲಾಗಿತ್ತು. ವಿಡಿಯೋ ಕಾನ್ಫರೆನ್ಸ್ ಮೂಲಕವೇ ವಿಚಾರಣೆಗೂ ವ್ಯವಸ್ಥೆ ಮಾಡಲಾಗಿದೆ. ಪರಿಸ್ಥಿತಿ ಇಷ್ಟೊಂದು ಸೂಕ್ಷ್ಮವಾಗಿರುವಾಗ, ಜನರ ಸಂಯಮವನ್ನು ಗೌರವಿಸಬೇಕಾದ ಇಲಾಖೆ ನೊಟೀಸು ನೀಡಿ ಮತ್ತೊಂದು ತಲೆನೋವು ಎದುರು ಹಾಕಿಕೊಂಡಂತಿದೆ.

ಉಡುಪಿ ನೇಜಾರಿನಲ್ಲಿ ನಾಲ್ವರ ಅಮಾನುಷ ಹತ್ಯೆ ಪ್ರಕರಣದಲ್ಲಿ ಅನಪೇಕ್ಷಿತ ಬೆಳವಣಿಗೆ: ಗ್ರಾಮಸ್ಥರ ಆಕ್ರೋಶ
ಉಡುಪಿ: ನಾಲ್ವರ ಅಮಾನುಷ ಹತ್ಯೆ ಪ್ರಕರಣದಲ್ಲಿ ಅನಪೇಕ್ಷಿತ ಬೆಳವಣಿಗೆ
Follow us on

ಉಡುಪಿಯ ನೇಜಾರಿನಲ್ಲಿ (Udupi, Nezari) ನಡೆದ ನಾಲ್ವರ ಅಮಾನುಷ ಹತ್ಯೆ (Murder) ಪ್ರಕರಣದಲ್ಲಿ ಅನಪೇಕ್ಷಿತ ಬೆಳವಣಿಗೆಯೊಂದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿ ಪ್ರವೀಣ್ ಚೌಗಲೆಯನ್ನು ಮಹಜರಿಗೆ ಕರೆತಂದಾಗ ಉಂಟಾದ ಗದ್ದಲ, ಲಾಠಿಚಾರ್ಜ್ ಸಂಬಂಧ 11 ಮಂದಿಗೆ ನೊಟೀಸು ನೀಡಿರುವ ಪೊಲೀಸ್ ಇಲಾಖೆ ನಡೆ ಗೊಂದಲ ಸೃಷ್ಟಿಸಿದೆ. ಈ ಪೈಕಿ ಕೊಲೆಯತ್ನ ಪ್ರಕರಣ ದಾಖಲಿಸಲು ಪೊಲೀಸ್ ಇಲಾಖೆ ಸಿದ್ದತೆ ನಡೆಸಿದೆ ಎಂಬ ವದಂತಿ ನೇಜಾರಿನ ಜನರನ್ನು (Villagers) ಮತ್ತಷ್ಟು ಆತಂಕಕ್ಕೆ (Angry) ತಳ್ಳಿದೆ.

ನೇಜಾರಿನ ಹತ್ಯಾಕಾಂಡ ಕುರಿತಂತೆ ಸಾರ್ವಜನಿಕರಲ್ಲಿ ಅದರಲ್ಲೂ ಮುಸ್ಲೀಂ ಸಮುದಾಯದಲ್ಲಿ ಇನ್ನಿಲ್ಲದ ಆಕ್ರೋಶ ಮಡುಗಟ್ಟಿದೆ. 15 ನಿಮಿಷದ ಅವಧಿಯಲ್ಲಿ ನಾಲ್ವರನ್ನು ಬಲಿ ಪಡೆದ ಪಾತಕಿ ಪ್ರವೀಣ್ ಚೌಗಲೆಗೆ ಗಲ್ಲು ಶಿಕ್ಷೆ ಆಗಬೇಕೆಂದು ಉಡುಪಿಯ ಜನತೆ ಒಕ್ಕೊರಲಿನಿಂದ ಒತ್ತಾಯಿಸುತ್ತಿದ್ದಾರೆ. ಘಟನೆ ನಡೆದು ಸಾಕಷ್ಟು ಸಮಯ ಕಳೆದರೂ ಜನರ ಕೋಪ ಮಾತ್ರ ತಣ್ಣಗಾಗಿಲ್ಲ.

ಪ್ರಕರಣ ಇನ್ನೂ ಹಸಿಯಾಗಿರುವಾಗಲೇ, ಆರೋಪಿ ಪ್ರವೀಣನನ್ನು ನವೆಂಬರ್ 16 ರಂದುಸೂಕ್ತ ಭದ್ರತೆಗಳಿಲ್ಲದೆ ಘಟನೆ ನಡೆದ ಮನೆಗೆ ಪೊಲೀಸರು ಕರೆತಂದಿದ್ದರು. ಈ ವೇಳೆ ಉದ್ರಿಕ್ತ ಜನರು ಪ್ರವೀಣನ ಮೇಲೆ ಹಲ್ಲೆಗೆ ಮುಂದಾಗಿದ್ದರು. ಕೋಪಗೊಂಡಿದ್ದ ಜನರನ್ನು ಹಿಮ್ಮೆಟ್ಟಿಸಲು ಪೊಲೀಸರು ವಿಫಲರಾಗಿದ್ದರು. ನಂತರ ಲಾಠಿ ಚಾರ್ಜ್ ನಡೆಸಿದ್ದರು.

ಇದೀಗ ಈ ಘಟನೆ ಸಂಬಂಧ ಹಲ್ಲೆಗೆ ಮುಂದಾದ 11 ಮಂದಿಯನ್ನು ಗುರುತಿಸಿ ಮಲ್ಪೆ ಪೊಲೀಸರು ನೊಟೀಸು ನೀಡಿದ್ದಾರೆ. ಈ ಪೈಕಿ ಮೂವರ ಮೇಲೆ 307, ಅಂದರೆ ಆರೋಪಿಯ ಕೊಲೆ ಯತ್ನ ಸಂಬಂಧ ಪ್ರಕರಣ ದಾಖಲಿಸಲು ತಯಾರಿ ನಡೆಯುತ್ತಿದೆ ಎಂಬ ವದಂತಿ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಸಂತ್ರಸ್ಥ ಕುಟುಂಬ ಮಧ್ಯಪ್ರವೇಶಿಸುವ ಮೂಲಕ ವಿವಾದ ತಿಳಿಗೊಂಡಿದೆ.

ವಾಸ್ತವದಲ್ಲಿ ಪ್ರವೀಣ್ ಚೌಗಲೆಗೆ ಭದ್ರತೆ ನೀಡುವುದು ಪೊಲೀಸ್ ಇಲಾಖೆಗೆ ದೊಡ್ಡ ತಲೆನೋವಾಗಿತ್ತು. ಕೋರ್ಟ್ ಗೆ ಹಾಜರುಪಡಿಸುವಾಗಲೂ ಹತ್ತಾರು ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ ಮಹಜರು ವೇಳೆ ಮಾತ್ರ ಸೂಕ್ತ ರಕ್ಷಣೆ ಇಲ್ಲದೆ ಕರೆತರಲಾಗಿತ್ತು. ಸಹಜವಾಗಿಯೇ ಕೋಪದಲ್ಲಿದ್ದ ನಾಗರಿಕರು, ಆರೋಪಿಯತ್ತ ನುಗ್ಗಿ ದಾಳಿಗೆ ಮುಂದಾಗಿದ್ದರು.

ಈ ವೇಳೆ ಲಾಠಿಚಾರ್ಜ್ ನಡೆದು, ಬಳಿಕ ಸ್ಥಳೀಯರ ಪ್ರತಿಭಟನೆಯೂ ನಡೆದಿತ್ತು. ಲಾಠಿ ಚಾರ್ಜ್ ಮಾಡಿದ ಬಗ್ಗೆ ಜನರು ಕೋಪ ವ್ಯಕ್ತಪಡಿಸಿದ್ದರು. ಇದೀಗ ಈ ಗಲಾಟೆ ಸಂಬಂಧ ಹಲವರಿಗೆ ನೊಟೀಸು ನೀಡಲಾಗಿದೆ. ನಾಲ್ವರ ಹತ್ಯೆಯಾದರೂ ಸಂಯಮದಿಂದಿದ್ದ ಸ್ಥಳೀಯ ಜನತೆಯ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು, ಇದೀಗ ಪೊಲೀಸರು ಮತ್ತೆ ಕೇಸ್ ಓಪನ್ ಮಾಡಿರೋದು, ಸಹಜವಾಗಿಯೇ ಇಲಾಖೆಯ ಮೇಲೆ ಕೋಪಕ್ಕೆ ಕಾರಣವಾಗಿದೆ. ಕೊನೆಯಲ್ಲಿ ಪೊಲೀಸರು ಜನರ ಆಕ್ರೋಶ ಅರಿತು, ವಿಚಾರಣೆ ನಡೆಸಿ ಠಾಣಾ ಜಾಮೀನಿನ ಮೂಲಕ ಬಿಡುಗಡೆಗೊಳಿಸಿದ್ದಾರೆ. ಏನೇ ಆದರೂ ಕಾನೂನು ಕ್ರಮ ಅನಿವಾರ್ಯ ಅನ್ನೋದು ಇಲಾಖೆಯ ಧೋರಣೆಯಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:05 am, Mon, 11 December 23