ಮೂರಿನ್ ಕಟ್ಟೆ ವಿವಾದ: ಬಕ್ರಿದ್ ಹಬ್ಬದ ದಿನ ಮದ್ಯ ಮಾರಾಟ ನಿಷೇಧ; ಸಂಘರ್ಷಕ್ಕೆ ಕಾರಣವಾದ ವಿಡಿಯೋ ವೈರಲ್​

ಉತ್ತರ ಕನ್ನಡದ ಭಟ್ಕಳದಲ್ಲಿ ಮೂರಿನ್ ಕಟ್ಟೆ ಧ್ವಂಸ ಪ್ರಕರಣ ಸದ್ಯ ಬೂದಿಮುಚ್ಚಿದ ಕೆಂಡವಾಗಿದೆ. ಈ ಮಧ್ಯೆ ಅದೊಂದು ವಿಡಿಯೋ ವೈರಲ್​ ಆಗಿದ್ದು, ಹಿಂದೂ ಮತ್ತು ಮುಸ್ಲಿಂ ಗಲಾಟೆಗೆ ಪ್ರಚೋದನೆ ನೀಡಲಾಗಿದೆ ಎನ್ನಲಾಗುತ್ತಿದೆ. ಈ ವಿವಾದದಕ್ಕೆ ವಿಡಿಯೋ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಬಕ್ರೀದ್ ಹಬ್ಬ ಹಿನ್ನೆಲೆ ಭಟ್ಕಳದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಕಾರವಾರ, ಮೇ 26: ತಣ್ಣಗಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ (Bhatkal) ಮೂರಿನ್ ಕಟ್ಟೆ ಧ್ವಂಸ ವಿವಾದ (Moorin Katte Controversy) ಕೋಲಾಹಲ ಎಬ್ಬಿಸಿದೆ. ಬೂದಿಮುಚ್ಚಿದ ಕೆಂಡದಂತಾಗಿದ್ದು, ಮೂರು ದಿನಗಳ ಕಾಲ ನಿಷೇಧಾಜ್ಞೆ ಕೂಡ ಜಾರಿ ಮಾಡಲಾಗಿದೆ. ಈ ಮಧ್ಯೆ ಹಿಂದೂ ಮತ್ತು ಮುಸ್ಲಿಂ ಗಲಾಟೆಗೆ ಪ್ರಚೋದನೆಯ ವಿಡಿಯೋ ಒಂದು ಟಿವಿ9ಗೆ ಲಭ್ಯ ಆಗಿದೆ. ಅಷ್ಟೇ ಅಲ್ಲದೆ ಬಕ್ರಿದ್ ಹಬ್ಬ ಹಿನ್ನೆಲೆ ಭಟ್ಕಳದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಮುಖ್ಯಾಂಶಗಳು

  • ಮೂರಿನಕಟ್ಟೆ ಧ್ವಂಸ ಬೆನ್ನಲ್ಲೇ ಭಟ್ಕಳದಲ್ಲಿ ಕೋಲಾಹಲ
  • ಹಿಂದೂ ಮತ್ತು ಮುಸ್ಲಿಂ ಗಲಾಟೆಗೆ ಪ್ರಚೋದಿಸಿದ ವಿಡಿಯೋ ವೈರಲ್​​
  • ಬಕ್ರಿದ್ ಹಬ್ಬದ ದಿನ ಭಟ್ಕಳದಲ್ಲಿ ಮದ್ಯ ಮಾರಾಟ ನಿಷೇಧ

ವಿವಾದಕ್ಕೆ ಈ ವಿಡಿಯೋ ಕಾರಣವೆಂದ ಪೊಲೀಸ್​​

ನೂರಾರು ವರ್ಷಗಳ ಇತಿಹಾಸವಿರುವ ಭಟ್ಕಳದ ಮೂರಿನ್ ಕಟ್ಟೆ ಸದ್ಯ ವಿವಾದದ ಕೇಂದ್ರಬಿಂದುವಾಗಿದೆ. ಇದೀಗ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ಅದೊಂದು ವಿಡಿಯೋ ಟಿವಿ9ಗೆ ಲಭ್ಯವಾಗಿದ್ದು, ವಿಡಿಯೋದಲ್ಲಿನ ಒಂದೊಂದು ಮಾತು ಕೋಮು ಸಂಘರ್ಷಕ್ಕೆ ಪ್ರಚೋದನೆ ಎನ್ನಲಾಗುತ್ತಿದೆ. ಈ ವಿಡಿಯೋ ಬಿಡುಗಡೆ ಆದ ಕೆಲವೇ ಗಂಟೆಯಲ್ಲಿ ಸಾವಿರಾರು ಮುಸ್ಲಿಂಮರು ಜಮಾವಣೆ ಆಗಿದ್ದರು. ವಿವಾದಕ್ಕೆ ಈ ವಿಡಿಯೋ ಕಾರಣ ಎಂದು ಪೊಲೀಸರು ಅಧಿಕೃತ ಸ್ಪಷ್ಟಣೆ ನೀಡಿದ್ದಾರೆ.

ಕೋಮು ಸಂಘರ್ಷಕ್ಕೆ ಕಾರಣವಾದ ವಿಡಿಯೋ ವೈರಲ್​​

‘ಮುಸ್ಲಿಂರ ಜಾಗದ ಮುಂದೆ ಹಿಂದೂಗಳು ಕಟ್ಟೆ ಕಟ್ಟಿದ್ದಾರೆ. ಪ್ರಶ್ನಿಸಲು ಬಂದ ನಮ್ಮ ನಾಯಕರಿಗೆ ಪೊಲೀಸರು ಕೇರ್ ಮಾಡಿಲ್ಲ. ನಮ್ಮವರು ನಾಲ್ಕು ಜನ ವಿರೋಧ ಮಾಡಿದಕ್ಕೆ ಅವರು ಬಗ್ಗಿಲ್ಲ. ಕೆಲವೇ ಗಂಟೆಯಲ್ಲಿ ಅನಧಿಕೃತ ಕಟ್ಟೆ ಕಟ್ಟಿದ್ದಾರೆ. ಧರ್ಮ ರಕ್ಷಣೆಯಲ್ಲಿ ಮುಸ್ಲಿಂ ಯುವಕರು ಏಕೆ ಮುಂದೆ ಬರುತ್ತಿಲ್ಲ. ಭಟ್ಕಳದಲ್ಲಿ ಒಂದು ಕ್ರಿಕೆಟ್ ಮ್ಯಾಚ್ ಇದ್ದರೆ ಕನಿಷ್ಟ 300ಕ್ಕೂ ಹೆಚ್ಚು ಯುವಕರು ಬರುತ್ತಾರೆ. ಆದರೆ ಇಷ್ಟು ದೊಡ್ಡ ಅನ್ಯಾಯ ಆಗುತ್ತಿದ್ದರು ಮುಸ್ಲಿಂ ಯುವಕರೇ ಎಲ್ಲಿದ್ದಿರಾ? ಏಕೆ ನೀವು ಇನ್ನೂ ಇದನ್ನು ಗಟ್ಟಿಯಾಗಿ ವಿರೋಧಿಸುತ್ತಿಲ್ಲ’ ಎಂದು ವಿಡಿಯೋದಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಭಟ್ಕಳದ ಮೂರಿನ್ ಕಟ್ಟೆಯ ಇತಿಹಾಸವೇನು? ಹಿಂದೂ-ಮುಸ್ಲಿಮರ ಸಂಘರ್ಷಕ್ಕೆ ಕಾರಣ ಏನು?

‘ಹಿಂದೂಗಳು ಆಡಳಿತ ದುರುಪಯೋಗ ಮಾಡಿಕೊಂಡು ತಮಗೆ ಬೇಕಾದ ಹಾಗೆ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ನಾಯಕರಿಗೆ, ಯುವಕರಿಗೆ ಇದನ್ನ ಪ್ರಶ್ನಿಸುವ ಶಕ್ತಿ ಇಲ್ವಾ‌?’ ಹೀಗೆ ಹತ್ತಾರು ಪ್ರಚೋದನೆ ನೀಡುವ ಪದಗಳನ್ನು ಯುವಕ‌ನೋರ್ವ ವಿಡಿಯೋದಲ್ಲಿ ಬಳಿಸಿದ್ದಾನೆ.

ಮದ್ಯ ಮಾರಾಟ ನಿಷೇಧ

ಬಕ್ರಿದ್ ಹಬ್ಬ ಹಿನ್ನೆಲೆ ಮೇ 28ರ ಬೆಳಗ್ಗೆ 6ರಿಂದ ಮೇ 29ರವರೆಗೂ ಮದ್ಯ ಮಾರಾಟ ನಿಷೇಧಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಭಟ್ಕಳ ಶಹರ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:06 pm, Tue, 26 May 26

Suraj Mahaveer Utture

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More
Follow Us