ಕಬ್ಬು ಬೆಳೆಗಾರರಿಗೆ ಬಾಕಿ ಹಣ ನೀಡಲು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಖಡಕ್ ಸೂಚನೆ ನೀಡಿದ ವಿಜಯಪುರ ಜಿಲ್ಲಾಧಿಕಾರಿ

|

Updated on: Mar 27, 2021 | 11:44 AM

ಕಬ್ಬು ನುರಿಸುವ ಕಾರ್ಯ ಮಾಡುತ್ತಿರುವ ಎಂಟು ಸಕ್ಕರೆ ಕಾರ್ಖಾನೆಗಳು ರೈತರಿಗೆ ಅಪಾರ ಪ್ರಮಾಣದ ಹಣವನ್ನು ಬಾಕಿ ಇರಿಸಿಕೊಂಡಿವೆ. ಈ ಬಾಕಿ ಹಣವನ್ನು ಮುಂದಿನ ಏಪ್ರೀಲ್ 7 ರೊಳಗೆ ಪಾವತಿ ಮಾಡಬೇಕಿದೆ. ಇಲ್ಲವಾದರೆ ಬಾಕಿ ಪಾವತಿ ಮಾಡದ ಸಕ್ಕರೆ ಕಾರ್ಖಾನೆ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಲಿದ್ದಾರೆ.

ಕಬ್ಬು ಬೆಳೆಗಾರರಿಗೆ ಬಾಕಿ ಹಣ ನೀಡಲು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಖಡಕ್ ಸೂಚನೆ ನೀಡಿದ ವಿಜಯಪುರ ಜಿಲ್ಲಾಧಿಕಾರಿ
ಸಕ್ಕರೆ ಕಾರ್ಖಾನೆ, ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್
Follow us on

ವಿಜಯಪುರ : ಬರದ ನಾಡು ವಿಜಯಪುರ ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ಭೀಮಾ ನದಿಯ ತಟದಲ್ಲಿ ರೈತರು ಹೆಚ್ಚು ಕಬ್ಬು ಬೆಳೆಯುತ್ತಾರೆ. ಜಿಲ್ಲೆಯಲ್ಲಿ ಒಟ್ಟು 55 ರಿಂದ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬನ್ನು ಬೆಳೆಯಲಾಗುತ್ತಿದೆ. ಸದ್ಯ ಮುಂದಿನ ದಿನಗಳಲ್ಲಿ ಕಬ್ಬು ಬೆಳೆಯುವ ರೈತರ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಕಾರಣ ಜಿಲ್ಲೆಯಲ್ಲಿ ವಿವಿಧ ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳಿಗೆ ಮತ್ತು ಹಳ್ಳಗಳಿಗೆ ನೀರು ಹರಿಸಲಾಗಿದೆ. ಇದರಿಂದ ಅಂತರ್ಜಲ ಹೆಚ್ಚಾಗಿದೆ. ಕೊಳವೆ ಬಾವಿ ಹಾಗೂ ಬಾವಿಗಳಲ್ಲಿ ನೀರು ಹೆಚ್ಚು ಸಿಗುತ್ತಿದೆ. ಈ ಕಾರಣದಿಂದ ಕಬ್ಬು ಬೆಳೆಯುವುದು ಹೆಚ್ಚಾಗಬಹುದು.

ಜಿಲ್ಲೆಯಲ್ಲಿ ಒಟ್ಟು 9 ಸಕ್ಕರೆ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿದ್ದವು. ಇವುಗಳ ಪೈಕಿ ಇಂಡಿ ತಾಲೂಕಿನ ಹಿರೆಬೇವನೂರು ಬಳಿಯ ಜ್ಞಾನಯೋಗಿ ಸಕ್ಕರೆ ಕಾರ್ಖಾನೆ ಸದ್ಯ ಬಂದ್ ಆಗಿದೆ. ಇನ್ನುಳಿದಂತೆ ವಿಜಯಪುರ ತಾಲೂಕಿನ ಕಾರಜೋಳ ಬಳಿಯ ಬಸವೇಶ್ವರ ಸಕ್ಕರೆ ಕಾರ್ಖಾನೆ, ಬಬಲೇಶ್ವರ ತಾಲೂಕಿನ ಗಲಗಲಿ ಬಳಿಯ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಸಿಂದಗಿ ತಾಲೂಕಿನ ಮಲಘಾಣ ಬಳಿಯ ಮನಾಲಿ ಶುಗರ್ಸ್ ಲಿಮಿಟೆಡ್, ಮುದ್ದೇಬಿಹಾಳ ತಾಲೂಕಿನ ಯರಗಲ್ ಬಳಿಯ ಬಾಲಾಜಿ ಶುಗರ್ಸ್ ಆ್ಯಂಡ್ ಕೆಮಿಕಲ್ ಪ್ರೈ.ಲಿ. ಇಂಡಿ ತಾಲೂಕಿನ ಮರಗೂರು ಬಳಿಯ ಭೀಮಾಶಂಕರ ಕೋ.ಆಪ್ ಶುಗರ್ಸ್ ಫ್ಯಾಕ್ಟರಿ, ಇಂಡಿ ತಾಲೂಕಿನ ಬಳಿಯ ಜಮಖಂಡಿ ಶುಗರ್ಸ್ ಲಿ. ಯುನಿಟ್-2 , ಆಲಮೇಲ ಪಟ್ಟಣದ ಬಳಿಯ ಕೆಪಿಆರ್ ಶುಗರ್ಸ್ ಮಿಲ್ಸ್ ಪ್ರೈ.ಲಿ, ಇಂಡಿ ತಾಲೂಕಿನ ಹಾವಿನಾಳ ಬಳಿಯ ಇಂಡಿಯನ್ ಶುಗರ್ ಮ್ಯಾನುಫೆಕ್ಚರ್ ಕೋ.ಲಿ ಜಿಲ್ಲೆಯಲ್ಲಿ ಕಬ್ಬು ನುರಿಸುತ್ತವೆ.

ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಖಡಕ್ ಸೂಚನೆ
2020-21 ನೇ ಸಾಲಿಗೆ ವಿಜಯಪುರ ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬನ್ನು ಪೂರೈಸಿದ ರೈತರ ಖಾತೆಗೆ ಬಾಕಿ ಹಣ ಪಾವತಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸೂಚಿಸಿದ್ದಾರೆ. ಜಿಲ್ಲೆಯಲ್ಲಿರುವ ಎಂಟು ಜನ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸಭೆ ನಡೆಸಿ ಕಬ್ಬು ಬೆಳೆಗಾರರಿಗೆ ಬಾಕಿ ಹಣ ಬಿಡುಗಡೆ ಮಾಡುವಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಶೇಕಡಾ 80 ಕ್ಕಿಂತ ಕಡಿಮೆ ಹಣವನ್ನು ರೈತರಿಗೆ ಪಾವತಿಸಿರುವ ಸಕ್ಕರೆ ಕಾರ್ಖಾನೆ ಮಾಲೀಕರು ಏಪ್ರೀಲ್ 7ರೊಳಗೆ ಬಾಕಿ ಉಳಿಸಿಕೊಂಡಿರುವ ರೈತರ ಕಬ್ಬಿನ ಬಿಲ್ನ ತಪ್ಪದೇ ಪಾವತಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಬಾಕಿ ಹಣ ನೀಡದಿದ್ದರೆ ಕರ್ನಾಟಕ ಭೂಕಂದಾಯ ಕಾಯ್ದೆ 1964 ರ ಪ್ರಕಾರ ಭೂಕಂದಾಯ ಬಾಕಿ ಎಂದು ಪರಿಗಣಿಸಿ, ಬಾಕಿ ಬಿಲ್ನ ಹಣ ವಸೂಲಿ ಮಾಡಲು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ಸದ್ಯ ಜಿಲ್ಲೆಯಲ್ಲಿ ಕಬ್ಬು ನುರಿಸುವ ಕಾರ್ಯ ಮಾಡುತ್ತಿರುವ ಎಂಟು ಸಕ್ಕರೆ ಕಾರ್ಖಾನೆಗಳು ರೈತರಿಗೆ ಅಪಾರ ಪ್ರಮಾಣದ ಹಣವನ್ನು ಬಾಕಿ ಇರಿಸಿಕೊಂಡಿವೆ. ಈ ಬಾಕಿ ಹಣವನ್ನು ಮುಂದಿನ ಏಪ್ರೀಲ್ 7 ರೊಳಗೆ ಪಾವತಿ ಮಾಡಬೇಕಿದೆ. ಇಲ್ಲವಾದರೆ ಬಾಕಿ ಪಾವತಿ ಮಾಡದ ಸಕ್ಕರೆ ಕಾರ್ಖಾನೆ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಲಿದ್ದಾರೆ. ಕಬ್ಬಿನ ಬಿಲ್ ಪಾವತಿ ಮಾಡಲು ಜಿಲ್ಲಾಧಿಕಾರಿಗಳು ತೆಗೆದುಕೊಂಡ ನಿರ್ಧಾರಕ್ಕೆ ರೈತಾಪಿ ಜನರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ

ಕಾಪಿ ಹೊಡೆದು ಡಿಬಾರ್​ ಆಗಿದ್ದಕ್ಕೆ ಕೋರ್ಟ್ ಮೆಟ್ಟಿಲೇರಿದ್ದ ಪ್ರಶಾಂತ್​ ಸಂಬರಗಿ

3 ತಿಂಗಳಲ್ಲಿ ಕಾಣೆಯಾಗಿದ್ದ 63 ಮಕ್ಕಳನ್ನು ಹುಡುಕಿ ಹೆತ್ತವರಿಗೆ ನೆಮ್ಮದಿ ಕೊಟ್ಟ ಪೊಲೀಸಮ್ಮ

Published On - 11:40 am, Sat, 27 March 21