ಕೋಮುದ್ವೇಷದ ಮಧ್ಯೆ ವಿಜಯಪುರದಲ್ಲೊಂದು ಭಾವೈಕ್ಯತೆಯ ಜಾತ್ರೆ; ಏನಿದರ ವಿಶೇಷತೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 11, 2024 | 9:55 PM

ಮಕರ ಸಂಕ್ರಮಣದ ಸಿದ್ದೇಶ್ವರ ಜಾತ್ರೆಯ ಬಳಿಕ ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಜಾತ್ರೆಗಳು ಆರಂಭವಾಗುವುದೇ ಶಿವರಾತ್ರಿಯಿಂದ. ಮಹಾಶಿವರಾತ್ರಿಯ ಬಳಿಕ ಸರದಿ ರೂಪದಲ್ಲಿ ಜಾತ್ರೆಗಳು ನಡೆಯುತ್ತವೆ. ಒಂದೊಂದು ಜಾತ್ರೆಯೂ ವಿಶೇಷತೆಗಳನ್ನು ಹೊಂದಿವೆ. ಅದರಲ್ಲಿ ವಿಜಯಪುರ ತಾಲೂಕಿನ ಕತಕನಹಳ್ಳಿ ಗ್ರಾಮದಲ್ಲಿ ನಡೆಯೋ ಜಾತ್ರೆ ಭಾವೈಕ್ಯತೆಯ ಜಾತ್ರೆಯಾಗಿದೆ. ಪ್ರತಿ ವರ್ಷಕ್ಕೊಮ್ಮೆ ನಡೆಯೋ ಈ ಜಾತ್ರೆಗೆ ಬರುವ ಭಕ್ತರು, ಮಠದ ಪಕ್ಕದಲ್ಲೇ ಇರುವ ದರ್ಗಾಕ್ಕೂ ನಮಿಸುತ್ತಾರೆ. ಎಲ್ಲರೂ ಜಾತ್ರೆಯಲ್ಲಿ ಭಾಗಿಯಾಗಿ ಕೋಮು ಸೌಹಾರ್ದತೆ ಬೆಳೆಸಿದ್ದಾರೆ. ಹಾಗಾಗಿ ಇದನ್ನು ಭಾವೈಕ್ಯತೆಯ ಜಾತ್ರೆಯೆಂದೇ ಕರೆಯಲಾಗುತ್ತದೆ.

ಕೋಮುದ್ವೇಷದ ಮಧ್ಯೆ ವಿಜಯಪುರದಲ್ಲೊಂದು ಭಾವೈಕ್ಯತೆಯ ಜಾತ್ರೆ; ಏನಿದರ ವಿಶೇಷತೆ
ಕತಕನಹಳ್ಳಿ ಜಾತ್ರೆ
Follow us on

ವಿಜಯಪುರ, ಏ.11: ಇತ್ತೀಚಿನ ವರ್ಷಗಳಲ್ಲಿ ಹಿಂದೂ-ಮುಸ್ಲಿಂ ಕೋಮುದ್ವೇಷದ ಘಟನೆಗಳು ಹೆಚ್ಚಿವೆ. ಅದರಲ್ಲೂ ಹಿಜಾಬ್, ಹಲಾಲ್ ವಿಚಾರಗಳು ಸಮುದಾಯದ ಜನರ ಮಧ್ಯೆ ಮತ್ತಷ್ಟು ಕಂದಕ ಹೆಚ್ಚಲು ಕಾರಣವಾಗಿದ್ದವು. ಆದರೆ, ಇದ್ಯಾವ ವಿಚಾರವೂ ವಿಜಯಪುರ(Vijayapura) ತಾಲೂಕಿನ ಕತಕಜನಹಳ್ಳಿ ಗ್ರಾಮದಲ್ಲಿ ನಡೆಯುವ ಶ್ರೀ ಗುರು ಚಕ್ರವರ್ತಿ ಸದಾಶಿವಯೋಗೇಶ್ವರ ಜಾತ್ರೆಯಲ್ಲಿ ಕಾಣ ಸಿಗಲ್ಲ. ಹೌದು, ಪ್ರತಿ ವರ್ಷ ನಡೆಯುವ ಈ ಜಾತ್ರೆಗೆ ಎಲ್ಲಾ ಕೋಮಿನವರೂ ಭಾಗಿಯಾಗುತ್ತಾರೆ. ಶ್ರೀ ಗುರು ಚಕ್ರವರ್ತಿ ಸದಾಶಿವಯೋಗೇಶ್ವರ ದೇವಸ್ಥಾನ ಅಷ್ಟೇಯಲ್ಲ, ಪಕ್ಕದಲ್ಲಿರುವ ಹಜರತ್ ಮೈಬೂಬ್ ಸುಬಾನಿ ದರ್ಗಾಕ್ಕೂ ಭೇಟಿ ನೀಡಿ ದರ್ಶನ ಪಡೆಯುತ್ತಾರೆ. ಹಾಗಾಗಿ ಈ ಜಾತ್ರೆಯನ್ನು ಭಾವೈಕ್ಯತಾ ಜಾತ್ರೆಯೆಂದೇ ಕರೆಯುತ್ತಾರೆ.

ಜಾತ್ರೆಯ ಹಾಗೂ ದರ್ಗಾದ ಕಾರ್ಯಕ್ರಮಗಳಲ್ಲಿ ಹಿಂದೂ-ಮುಸ್ಲಿಂ ಸಮುದಾಯದ ಜನರೆಲ್ಲರೂ ಸೇರಿ ಒಂದಾಗಿ ಕೆಲಸ ಕಾರ್ಯ ಮಾಡುತ್ತಾರೆ. ಜಾತ್ರೆಯ ಅಂಗವಾಗಿ ನೈವೇದ್ಯ, ಹಣ್ಣು-ಕಾಯಿಗಳೊಂದಿಗೆ ಶ್ರೀ ಗುರು ಚಕ್ರವರ್ತಿ ಸದಾಶಿವಯೋಗೇಶ್ವರ ದೇವಸ್ಥಾನ ದರ್ಶನ ಮಾಡುವವರೆಲ್ಲರೂ ಪಕ್ಕದಲ್ಲಿರುವ ಹಜರತ್ ಮೈಬೂಬ್ ಸುಬಾನಿ ದರ್ಗಾಕ್ಕೂ ನಮಿಸುತ್ತಾರೆ. ಈಹಿನ್ನಲೆ ಕೋಮುಸೌಹಾರ್ಧತೆಯನ್ನು ಮೆರೆಯುವ ಕತಕನಹಳ್ಳಿ ಜಾತ್ರೆ ಪ್ರಸಿದ್ದವಾಗಿದೆ.

ಇದನ್ನೂ ಓದಿ:ಈ ಬಾರಿ ಸಮ್ಮಿಶ್ರ ಸರ್ಕಾರ ಫಿಕ್ಸಾ? ಕತ್ನಳ್ಳಿ ಮಠದಿಂದ ಹೊರಬಿತ್ತು ವರ್ಷದ ಭವಿಷ್ಯ!

ಪ್ರತಿ ವರ್ಷ ಯುಗಾದಿ ವೇಳೆ ನಡೆಯುವ ಕತಕನಹಳ್ಳಿಯ ಶ್ರೀ ಗುರು ಚಕ್ರವರ್ತಿ ಸದಾಶಿವಯೋಗೇಶ್ವರ ಜಾತ್ರೆ, ಕಳೆದ 15 ದಿನಗಳಿಂದ ನಡೆದುಕೊಂಡು ಬಂದಿದೆ. ಇನ್ನು ಜಾತ್ರೆಯ ಕೊನೆಯಲ್ಲಿ ಅಂದರೆ ಇಂದು(ಏ.11) ಮಠದ ಪೀಠಾಧಿಪತಿ ಶ್ರೀ ಶಿವಯ್ಯ ಸ್ವಾಮೀಜಿ ನುಡಿಯುವ ವರ್ಷದ ಭವಿಷ್ಯ ಎಂದೂ ಸುಳ್ಳಾಗಲ್ಲ, ಎಂಬ ಪ್ರತೀತಿ ಇದೆ. ಅದರಂತೆ ಸ್ವಾಮೀಜಿ ಸಕಲ ಪೂಜಾ ವಿಧಿ- ವಿಧಾನಗಳನ್ನು ಮಾಡಿದ ಬಳಿಕ ವರ್ಷದ ಭವಿಷ್ಯ ಕೇಳಲು ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು.

ಇನ್ನು ಜಾತ್ರೆಯ ಪ್ರಯುಕ್ತ ಇಂದು ಸಹ ಹಲವಾರು ಕಾರ್ಯಕ್ರಮಗಳು ನಡೆದವು. ಪಲ್ಲಕ್ಕಿ ಉತ್ಸವ ಹಾಗೂ ಸುಮಂಗಲೆಯರಿಗೆ ಉಡಿ ತುಂಬು ಕಾರ್ಯಕ್ರಮ ನಡೆಯಿತು. ಬಳಿಕ ಶ್ರೀ ಗುರು ಚಕ್ರವರ್ತಿ ಸದಾಶಿವ ಶಿವಯೋಗಿ ಸಿದ್ದರಾಮೇಶ್ವರ ಲೀಲಾಮೃತ ಗ್ರಂಥ ಬಿಡುಗಡೆ ಮಾಡಲಾಯಿತು. ನಿಡಸೋಸಿಯ ಸಿದ್ದಸಂಸ್ಥಾನ ಮಠದ ಶ್ರೀ ಜಗದ್ಗುರು ಪಂಚಮಲಿಗೇಶ್ವರ ಮಹಾಸ್ವಾಮೀಜಿ ಹಾಗೂ ಮರೆಗುದ್ದಿಯ ಅಡವಿ ಸಿದ್ದೇಶ್ವರ ಮಠ ಶ್ರೀ ಸಿರುಪಾಧೀಶ್ವರ ಮಹಾಸ್ವಾಮೀಜಿ. ಕತಕನಹಳ್ಳಿಯ ಶ್ರೀ ಗುರು ಚಕ್ರವರ್ತಿ ಸದಾಶಿವಯೋಗೇಶ್ವರ ಮಠದ ಶ್ರೀ ಶಿವಯ್ಯ ಸ್ವಾಮೀಜಿ ಹಾಗೂ ಇತರರು ಗ್ರಂಥ ಬಿಡುಗಡೆ ಮಾಡಿದರು.

ಸದ್ಯ ಕತಕನಹಳ್ಳಿಯಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಶ್ರೀ ಗುರು ಚಕ್ರವರ್ತಿ ಸದಾಶಿವಯೋಗೇಶ್ವರ ಜಾತ್ರೆಗೆ ಇಂದು ಅಂತಿಮ ತೆರೆ ಬಿದ್ದಿದೆ. 15 ದಿನಗಳ ಕಾಲ ನಡೆದ ಜಾತ್ರೆಯಲ್ಲಿ ಎಲ್ಲಾ ವಯೋಮಾನದ ಎಲ್ಲಾ ಸಮಾಜಗಳ ಜನರು ಮುಂದೆ ನಿಂತು ಹತ್ತಾರು ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದ್ದು, ಇಲ್ಲಿನ ಐಕ್ಯತೆಯೆ ಉದಾಹರಣೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ