ವಕ್ಫ್ ಆಸ್ತಿ ನೋಂದಣಿ ವಿವಾದ: ಬಿಜೆಪಿ ಪರಿಶೀಲನಾ ತಂಡ ಪುನಾರಚನೆ, ಯತ್ನಾಳ್​ಗೆ ಸ್ಥಾನ

| Updated By: ರಮೇಶ್ ಬಿ. ಜವಳಗೇರಾ

Updated on: Oct 28, 2024 | 9:18 PM

ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ನೋಂದಣಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ವಕ್ಫ್‌ ಬೋರ್ಡ್‌ನ ದುರಾಸೆ ವಿಜಯಪುರ ರೈತರ ಜಮೀನಿನವರೆಗೂ ತಲುಪಿದೆ ಎನ್ನುವ ಆರೋಪ ಕೇಳಿ ಬಂದಿದೆ. ವಕ್ಫ್ ಬೋರ್ಡ್ ಕಡೆಯಿಂದ ರೈತರಿಗೆ ನೊಟೀಸ್ ಜಾರಿಯಾಗಿದೆ ಎನ್ನಲಾಗಿದೆ. ಈ ಸಂಬಂಧ ದೊಡ್ಡ ಚರ್ಚೆಯಾಗುತ್ತಿದ್ದು, ಪರಿಶೀಲನೆ ಸಂಬಂಧ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸಮಿತಿ ರಚಿಸಿದ್ದಾರೆ. ಆದ್ರೆ, ಮುಖ್ಯವಾಗಿ ಕ್ಷೇತ್ರದ ಶಾಸಕ ಯತ್ನಾಳ್​ ಹೆಸರು ಕೈಬಿಟ್ಟಿದ್ದಾರೆ. ಇದರಿಂದ ಯತ್ನಾಳ್​ ಆಕ್ರೋಶ ವ್ಯಕ್ತಪಡಿಸಿದ್ದು, ಇದರ ಬೆನ್ನಲ್ಲೇ ವಿಜಯೇಂದ್ರ ತಂಡ ಪುನಾರಚನೆ ಮಾಡಿದ್ದಾರೆ.

ವಕ್ಫ್ ಆಸ್ತಿ ನೋಂದಣಿ ವಿವಾದ: ಬಿಜೆಪಿ ಪರಿಶೀಲನಾ ತಂಡ ಪುನಾರಚನೆ, ಯತ್ನಾಳ್​ಗೆ ಸ್ಥಾನ
ಯತ್ನಾಳ್
Follow us on

ಬೆಂಗಳೂರು, (ಅಕ್ಟೋಬರ್ 28): ವಕ್ಫ್ ಕಾಯಿದೆಯಿಂದ ವಿಜಯಪುರ ಜಿಲ್ಲೆಯ ರೈತರಿಗೆ ತೊಂದರೆ ಉಂಟಾಗಿರುವ ಬಗ್ಗೆಆರೋಪ ಕೇಳಿಬಂದಿದೆ. ವಕ್ಫ್ ಬೋರ್ಡ್ ಕಡೆಯಿಂದ ರೈತರಿಗೆ ನೊಟೀಸ್ ಜಾರಿಯಾಗಿದೆ ಎನ್ನಲಾಗಿದೆ. ಈ ಸಂಬಂಧ ದೊಡ್ಡ ಚರ್ಚೆಯಾಗುತ್ತಿದ್ದು, ಇದರ ಪರಿಶೀಲನೆಗೆಂದು ರಾಜ್ಯ ಬಿಜೆಪಿ ತಂಡವನ್ನು ರಚನೆ ಮಾಡಿದೆ. ಆದ್ರೆ, ವಿಜಯಪುರದಲ್ಲಿ ವಕ್ಫ್​ ವಿರುದ್ಧ ಧ್ವನಿ ಎತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್​ ಅವರನ್ನೇ ತಂಡದಿಂದ ದೂರ ಇಡಲಾಗಿತ್ತು. ಬಳಿಕ ಯತ್ನಾಳ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ​ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಇಂದು(ಅಕ್ಟೋಬರ್ 28) ತಂಡವನ್ನು ಪುನಾರಚನೆ ಮಾಡಿದ್ದು, ಈ ತಂಡದಲ್ಲಿ ಯತ್ನಾಳ್​ ಅವರನ್ನು ಸೇರಿಸಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ನೋಂದಣಿ ವಿವಾದ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರು ಬಿಜೆಪಿ ಪರಿಶೀಲನಾ ತಂಡವನ್ನು ರಚನೆ ಮಾಡಿದ್ದರು. ಆದ್ರೆ, ಯತ್ನಾಳ್​ ತಂಡದಲ್ಲಿರಲಿಲ್ಲ. ಬಳಿಕ ಯತ್ನಾಳ್​, ಬಿಜೆಪಿ ತಂಡ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದರು. ಇದಕ್ಕೆ ಮಣಿದ ವಿಜಯೇಂದ್ರ , ವಿಜಯಪುರ ಪ್ರವಾಸಕ್ಕೆ ಒಂದು ದಿನ ಬಾಕಿ ಇರುವಾಗಲೇ ಬಿಜೆಪಿ ಪರಿಶೀಲನಾ ತಂಡವನ್ನು ಪುನಾರಚನೆ ಮಾಡಿದ್ದಾರೆ. ನಾಳೆ ವಿಜಯಪುರ ಜಿಲ್ಲೆಗೆ ತೆರಳುವ ಕಾರಜೋಳ ನೇತೃತ್ವದ ತಂಡಕ್ಕೆ ಇಂದು ಹೊಸದಾಗಿ ರಮೇಶ್​ ಜಿಗಜಿಣಗಿ, ಶಾಸಕ ಯತ್ನಾಳ್ ಹಾಗೂ ಮಾಜಿ ಜಿಲ್ಲಾಧ್ಯಕ್ಷ ಎಂ.ಬಿ.ಜಿರಲಿ ಅವರನ್ನು ಸೇರ್ಪಡೆ ಮಾಡಿದ್ದಾರೆ.

ಇದನ್ನೂ ಓದಿ: ವಿಜಯಪುರದಲ್ಲಿ ವಕ್ಫ್‌​ನ ಒಟ್ಟು ಆಸ್ತಿಪಾಸ್ತಿ ಎಷ್ಟಿದೆ? ಎಳೆ ಎಳೆಯಾಗಿ ಬಿಚ್ಚಿಟ್ಟ ಕಂದಾಯ ಸಚಿವ

ನಿನ್ನೆ ಸಂಸದ ಕಾರಜೋಳ ನೇತೃತ್ವದಲ್ಲಿ ಶಾಸಕರಾದ ಹರೀಶ್ ಪೂಂಜಾ, ಮಹೇಶ್ ಟೆಂಗಿನಕಾಯಿ, ಮಾಜಿ ಎಂಎಲ್​ಸಿ ಅರುಣ್ ಶಹಾಪುರ, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.

ಮಂಗಳವಾರ ವಿಜಯಪುರಕ್ಕೆ ತಂಡ ಭೇಟಿ

ವಿಜಯಪುರ ಜಿಲ್ಲೆಯ ರೈತರ ಅಹವಾಲು ಆಲಿಸಿ ಸಮಸ್ಯೆಯ ಕುರಿತ ಸಮಗ್ರ ವರದಿ ನೀಡುವಂತೆ ವಿಜಯೇಂದ್ರ ಸೂಚಿಸಿದ್ದಾರೆ. ಅದರಂತೆ ಈ ಮುಖಂಡರ ತಂಡ ಮಂಗಳವಾರ(ಅ.29) ವಿಜಯಪುರ ಜಿಲ್ಲೆಗೆ ಭೇಟಿ ನೀಡಲಿದೆ. ಆದ್ರೆ, ಒಂದು ದಿನ ಬಾಕಿ ಇರುವಾಗಲಷ್ಟೇ ತಮ್ಮ ಹೆಸರು ಸೇರಿಸಿದ್ದಕ್ಕೆ ಯತ್ನಾಳ್​, ತಂಡದ ಜೊತೆ ಹೆಜ್ಜೆ ಹಾಕುತ್ತಾರಾ ? ಅಥವಾ ಬಂಡಾಯದ ಬಾವುಟ ಹಾರಿಸುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:15 pm, Mon, 28 October 24