ಬೆಂಬಲಿಗರ ಸಭೆ ಅಂತ್ಯ: ಮಂಡ್ಯದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸುಮಲತಾ ಅಂಬರೀಶ್ ಹೇಳಿದ್ದಿಷ್ಟು

| Updated By: ಗಂಗಾಧರ​ ಬ. ಸಾಬೋಜಿ

Updated on: Feb 25, 2024 | 8:37 PM

ಸಂಸದರಾಗಿ 5 ವರ್ಷ ಪೂರೈಕೆ ಹಿನ್ನೆಲೆ ಬೆಂಗಳೂರಿನ ಜೆ.ಪಿ‌.ನಗರದ ನಿವಾಸದಲ್ಲಿ ಸಂಸದೆ ಸುಮಲತಾ ಬೆಂಬಲಿಗರ ಸಭೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ನಿಮ್ಮ ಜೊತೆ ಇದ್ದೇವೆ ಎಂದು ಬೆಂಬಲಿಗರು ಸಭೆಯಲ್ಲಿ ಹೇಳಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಈಗಲೂ ಬಿಜೆಪಿ ಪರವಾದ ವಾತಾವರಣ ಇದೆ ಎಂದು ಹೇಳಿದ್ದಾರೆ. ಮಂಡ್ಯದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಎಂದು ಬೆಂಬಲಿಗರು ಹೇಳಿದ್ದಾರೆ ಎಂದರು.

ಬೆಂಬಲಿಗರ ಸಭೆ ಅಂತ್ಯ: ಮಂಡ್ಯದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸುಮಲತಾ ಅಂಬರೀಶ್ ಹೇಳಿದ್ದಿಷ್ಟು
ಮಂಡ್ಯ ಸಂಸದೆ ಸುಮಲತಾ
Follow us on

ಬೆಂಗಳೂರು, ಫೆಬ್ರವರಿ 25: ರಾಜ್ಯದ 27 ಲೋಕಸಭಾ ಕ್ಷೇತ್ರಗಳದ್ದು ಒಂದೊಂದು ರೀತಿಯ ರಾಜಕಾರಣವಾದರೆ ಮಂಡ್ಯ ಕ್ಷೇತ್ರದ ರಾಜಕಾರಣ ಕಳೆದ ಚುನಾವಣೆಯಿಂದ ಬೇರೆ ರೂಪವನ್ನೇ ಪಡೆದುಕೊಂಡಿದೆ. ಸಂಸದರಾಗಿ 5 ವರ್ಷ ಪೂರೈಕೆ ಹಿನ್ನೆಲೆ ಬೆಂಗಳೂರಿನ ಜೆ.ಪಿ‌.ನಗರದಲ್ಲಿ ಸಂಸದೆ ಸುಮಲತಾ (Sumalatha) ನಿವಾಸದಲ್ಲಿ ಬೆಂಬಲಿಗರ ಸಭೆ ಮಾಡಿದ್ದಾರೆ. ಮಂಡ್ಯ ಕ್ಷೇತ್ರದಿಂದ ಸುಮಲತಾ ಸ್ಪರ್ಧೆ ಸಂಬಂಧ ಬೆಂಬಲಿಗರೊಂದಿಗೆ ಸಭೆ ಮಾಡಿದ್ದಾರೆ. ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿಮ್ಮ ಜೊತೆ ಇದ್ದೇವೆ ಎಂದು ಬೆಂಬಲಿಗರು ಸಭೆಯಲ್ಲಿ ಹೇಳಿದ್ದಾರೆ. ಕಳೆದ ಚುನಾವಣೆಯಲ್ಲಿ ನನ್ನ ಗೆಲುವಿಗೆ ದರ್ಶನ್​ ಕಾರಣರಾಗಿದ್ದರು. ಈಗಲೂ ನಿಮ್ಮ ಜೊತೆ ನಾನಿದ್ದೇನೆ ಎಂದಿದ್ದಾರೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದೆ. ಈಗಲೂ ಕೂಡ ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ. ಮಂಡ್ಯ ಕ್ಷೇತ್ರದಲ್ಲಿ ಈಗಲೂ ಬಿಜೆಪಿ ಪರವಾದ ವಾತಾವರಣ ಇದೆ ಎಂದು ಹೇಳಿದ್ದಾರೆ.

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಯೋಚನೆಯಿಲ್ಲ

ಮಂಡ್ಯದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಎಂದು ಬೆಂಬಲಿಗರು ಹೇಳಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಬಲಪಡಿಸಬೇಕೆಂಬುದು ನಾಯಕರ ಒಲವು ಇದೆ. ಯಾವುದೇ ಕಾರಣಕ್ಕೆ ಮಂಡ್ಯ ಬಿಡಬಾರದೆಂದು ಬೆಂಬಲಿಗರು ಹೇಳಿದ್ದಾರೆ. ಇಂತಹದ್ದೇ ಪಕ್ಷ ಅಂತೇನಿಲ್ಲ, ಒಟ್ಟಾರೆ ಮಂಡ್ಯ ಬಿಡಬಾರದೆಂಬ ಒತ್ತಾಯವಿದೆ. ಈ ಬಾರಿ ನನ್ನ ಪರ ಕೆಲಸ ಮಾಡಲು ದರ್ಶನ್​ ಪುಟ್ಟಣ್ಣಯ್ಯಗೆ ಕೇಳುತ್ತೇನೆ. ಬಿಜೆಪಿಯು ಮಂಡ್ಯ ಉಳಿಸಿಕೊಂಡರೆ ಟಿಕೆಟ್​ನಲ್ಲಿ ನನಗೆ ಮೊದಲ ಆದ್ಯತೆ. ಸೂಕ್ತ ಸಮಯದಲ್ಲಿ ಪಕ್ಷದ ನಾಯಕರು ಅಭ್ಯರ್ಥಿ ಘೋಷಣೆ ಮಾಡುತ್ತಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಯೋಚನೆ ಮಾಡಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಚ್ಚಿದಾನಂದ ಮನವೊಲಿಸಲು ಡಿ ಬಾಸ್ ಮೊರೆ, ಸುಮಲತಾ ರಾಜಕೀಯ ನಡೆ ಇಂದು ನಿರ್ಧಾರ!

ನಾನಾಗಲಿ, ನನ್ನ ಪುತ್ರನಾಗಲಿ ಸ್ಪರ್ಧಿಸಲ್ಲ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ. ಸ್ಫರ್ಧೆ ಮಾಡುತ್ತೇವೆ ಅಂತಾ H.D.ಕುಮಾರಸ್ವಾಮಿ ಎಲ್ಲೂ ಹೇಳಿಲ್ಲ. ಸ್ಪರ್ಧೆ ಬಗ್ಗೆ ನಿರ್ಧಾರಕೈಗೊಳ್ಳಲು 1 ತಿಂಗಳು ಮಾತ್ರ ಸಮಯವಿದೆ. ಸೂಕ್ತ ಸಮಯದಲ್ಲಿ ವರಿಷ್ಠರು ನಿರ್ಧಾರ ಮಾಡುತ್ತಾರೆಂಬ ವಿಶ್ವಾಸವಿದೆ ಎಂದಿದ್ದಾರೆ.

ಮಂಡ್ಯ ಟಿಕೆಟ್ ಜೆಡಿಎಸ್ ಪಾಲಾದರೆ ಮುಂದೇನು ಎಂಬ ಯೋಚನೆಯನ್ನೂ ನಾನು ಮಾಡಲ್ಲ. ನಾನು ಪಕ್ಷ ಅಲ್ಲ. ನಾನು ಸ್ವತಂತ್ರ ವ್ಯಕ್ತಿ. ಜೆಡಿಎಸ್ ಅವರದ್ದು ಪಕ್ಷ. ಅವರು ಮಂಡ್ಯ ಬಗ್ಗೆ ಮಾತ್ರ ಯೋಚನೆ ಮಾಡುತ್ತಿಲ್ಲ. ಇಡೀ ರಾಜ್ಯದ ಬಗ್ಗೆ ಅವರು ಯೋಚನೆ ಮಾಡುತ್ತಾರೆ. ಟಿಕೆಟ್ ಬಗ್ಗೆ ಎಲ್ಲೂ ಕೂಡ ಇನ್ನೂ ಅಂತಿಮ ನಿರ್ಧಾರ ಆಗಿಲ್ಲ. ಪ್ರಾಥಮಿಕ ಚರ್ಚೆ ಆಗಿದೆ ಅಷ್ಟೇ ಎಂದರು.

ಮಂಡ್ಯ ಬಿಟ್ಟು ಬರಲು ನನಗೆ ಇಷ್ಟ ಇಲ್ಲ

ಬೆಂಗಳೂರು ಉತ್ತರದಲ್ಲಿ ಸ್ಪರ್ಧಿಸಬೇಕು ಅಂದರೆ ಅದು ಕ್ಷಣ ಮಾತ್ರ. ಮಂಡ್ಯ ಬಿಟ್ಟು ಬರಲು ನನಗೆ ಇಷ್ಟ ಇಲ್ಲ. ಸೀಟು ಹಂಚಿಕೆ ಪಾಸಿಟಿವ್ ಆಗಿ ಇರುತ್ತೆ ಅಂತಾ ನಾನು ಭಾವಿಸಿದ್ದೇನೆ. ಈ ಸಭೆ ನಡೆದಿದ್ದು ಬಿಜೆಪಿ ಹೈಕಮಾಂಡ್ ಗಮನಕ್ಕೆ ಬಂದೇ ಬರಲಿದೆ. ಮಂಡ್ಯ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿ ಅಂತಾ ನಿರ್ಧಾರವಾಗಿಲ್ಲ. ಚುನಾವಣೆಗೆ ಇಂದಿನ ಸಭೆಯೇ ಮೊದಲ ಹೆಜ್ಜೆ ಎಂದರು.

ಇದನ್ನೂ ಓದಿ: ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್ ಸಿಗದಿದ್ದರೂ ಸುಮಲತಾ ಅಂಬರೀಶ್ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸುತ್ತಾರೆ: ಹನಕೆರೆ ಶಶಿಕುಮಾರ್

ಯಾವ ರೀತಿ ಪ್ರಚಾರ, ಹೋರಾಟ ಎಂಬ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ರಾಜಕೀಯಕ್ಕೆ ಬಂದಿದ್ದು ಮಂಡ್ಯ ಜನರ ವಿಶ್ವಾಸ ಕಳೆದುಕೊಳ್ಳಲು ಅಲ್ಲ. ಅಂಬರೀಶ್ ಅಂದ್ರೆ ಮಂಡ್ಯ ಅಂತಾ ಇಂಡಿಯಾದಲ್ಲೇ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಅಂಬರೀಶ್ ಒಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದರು.
ಇಂದು ಇಲ್ಲಿ ಎಲ್ಲಾ ಪಕ್ಷದವರೂ ಇದ್ದಾರೆ ಎಂದಿದ್ದಾರೆ.

ಮಂಡ್ಯಕ್ಕೆ ಸುಮಲತಾರನ್ನು ಬಿಜೆಪಿ ಅಭ್ಯರ್ಥಿ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ದೇವೇಗೌಡರಿಗೆ ಹೇಳಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ದೇವೇಗೌಡರು ಅವರ ಪಕ್ಷದ ಬಗ್ಗೆ ಮಾತಾಡಬಹುದೇ ಹೊರತು ಅವರು ಬಿಜೆಪಿ ವಕ್ತಾರರಾಗಿ ಮಾತಾಡುತ್ತಾರೆ ಅಂತಾ ನನಗೆ ಅನ್ನಿಸುವುದಿಲ್ಲ. ಮಂಡ್ಯ ಕಳೆದುಕೊಳ್ಳಲು ನನಗೆ ಇಷ್ಟ ಇಲ್ಲ. ಚುನಾವಣಾ ಪ್ರಚಾರದ ಬಗ್ಗೆ ನಟ ಯಶ್ ಜೊತೆ ಇನ್ನೂ ನಾನು ಮಾತಾಡಿಲ್ಲ. ಅವರು ಲಂಡನ್​​ನಲ್ಲಿ ಶೂಟಿಂಗ್​​ನಲ್ಲಿ ಬ್ಯುಸಿ ಇದ್ದಾರೆ.

ದರ್ಶನ್ ಖಂಡಿತಾ ಬರುತ್ತಾರೆ. ಕಳೆದ ಬಾರಿ ಅವರು ಎಲ್ಲರ ಪರವಾಗಿಯೂ ಪ್ರಚಾರ ಮಾಡಿದ್ದರು. ನನ್ನಿಂದಲೇ ಎಲ್ಲಾ ಎಂಬ ನಿಲುವು ನನ್ನದಲ್ಲ. ಬಿಜೆಪಿ 400+ ಗೆಲ್ಲುವ ನಿರೀಕ್ಷೆ ಇದೆ. ಗೆಲ್ಲಲೇಬೇಕು ಅಂದಾಗ ಎಲ್ಲರ ನಿರ್ಧಾರ ಮುಖ್ಯ. ಮೋದಿಯವರನ್ನು ಎಲ್ಲರೂ ಈಗ ವಿಶ್ವ ಮಟ್ಟದಲ್ಲಿ ಗುರುತಿಸುತ್ತಾರೆ. ನಾನು ಎಲ್ಲಾ ಕ್ರೆಡಿಟ್ ಮೋದಿಗೆ ಕೊಡಲು ಇಚ್ಚಿಸುತ್ತೇನೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:40 pm, Sun, 25 February 24