ಯಾದಗಿರಿ ಲೋಕೋಪಯೋಗಿ ಕಚೇರಿ ಪೀಠೋಪಕರಣಗಳು ಜಪ್ತಿ: ಕೋರ್ಟ್​ ಆದೇಶ

ಗುತ್ತಿಗೆದಾರನಿಗೆ ಬಾಕಿ ಹಣ ನೀಡದೆ ಸತಾಯಿಸುತ್ತಿದ್ದ ಲೋಕಪಯೋಗಿ ಇಲಾಖೆಗೆ ಕಲಬುರಗಿ ಜಿಲ್ಲಾ ನ್ಯಾಯಾಲಯ ಮಂಗಳರಾತಿ ಮಾಡಿದೆ. ಗುತ್ತಿಗೆದಾರನ ಬಾಕಿ 1.2 ಕೋಟಿ ರೂ. ಹಣ ನೀಡದ ಯಾದಗಿರಿ ಲೋಕೋಪಯೋಗಿ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.

ಯಾದಗಿರಿ ಲೋಕೋಪಯೋಗಿ ಕಚೇರಿ ಪೀಠೋಪಕರಣಗಳು ಜಪ್ತಿ: ಕೋರ್ಟ್​ ಆದೇಶ
ಯಾದಗಿರಿ ಲೋಕೋಪಯೋಗಿ ಇಲಾಖೆಯ ಕಚೇರಿ
Edited By: ವಿವೇಕ ಬಿರಾದಾರ

Updated on: Sep 24, 2024 | 9:58 AM

ಯದಾದಗಿರಿ, ಸೆಪ್ಟೆಂಬರ್​ 24: ನ್ಯಾಯಾಲಯದ (Court) ಆದೇಶದ ಮೇರೆಗೆ ಯಾದಗಿರಿ ಲೋಕೋಪಯೋಗಿ (PWD) ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಲಾಗಿದೆ. ಗುತ್ತಿಗೆದಾರ ಎಸ್.ಎಸ್.ಪೊಲೀಸ್ ಪಾಟೀಲ್ 2017ರಲ್ಲಿ ಯಾದಗಿರಿ (Yadgiri) ನಗರದ ಅಂಬೇಡ್ಕರ್ ವೃತ್ತದಿಂದ ಹತ್ತಿಕುಣಿ ಕ್ರಾಸ್ ವರೆಗೆ ರಸ್ತೆ ಕಾಮಗಾರಿ ಕೈಗೊಂಡಿದ್ದರು. ಈ ಕಾಮಗಾರಿಯ ಬಾಕಿ 27 ಲಕ್ಷ ರೂ. ಹಣವನ್ನು 2018 ರಲ್ಲಿ ಗುತ್ತಿಗೆದಾರನಿಗೆ ಲೋಕೋಪಯೋಗಿ ಇಲಾಖೆ ನೀಡಬೇಕಿತ್ತು. ಆದರೆ, ಲೋಕೋಪಯೋಗಿ ಇಲಾಖೆ ನೀಡದೆ ಸತಾಯಿಸಿದೆ.

ಇದರಿಂದ ಬೇಸತ್ತ ಗುತ್ತಿಗೆದಾರ ಎಸ್.ಎಸ್.ಪೊಲೀಸ್ ಪಾಟೀಲ್ ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ರಿಟ್​ ಅರ್ಜಿ ಸಲ್ಲಿಸಿದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಶೇ.12 ರಷ್ಟು ಬಡ್ಡಿಯೊಂದಿಗೆ ಬಾಕಿ ಹಣವನ್ನು ನೀಡುವಂತೆ ಆದೇಶಿಸಿತು. ಒಟ್ಟು ಲೋಕೋಪಯೋಗಿ ಇಲಾಖೆ 1.2 ಕೋಟಿ ರೂ. ಗುತ್ತಿಗೆದಾರನಿಗೆ ನೀಡಬೇಕಾಯ್ತು. ಆದರೆ, ಪಿಡಬ್ಲೂಡಿ ಅಧಿಕಾರಿಗಳು ಮಾತ್ರ ಕೋರ್ಟ್​ ಆದೇಶಕ್ಕೆ ಮಣಿಯದೆ ಗುತ್ತಿಗೆದಾರನಿಗೆ ಹಣ ನೀಡಲಿಲ್ಲ.

ನಂತರ ಗುತ್ತಿಗೆದಾರ ಎಸ್.ಎಸ್.ಪೊಲೀಸ್ ಪಾಟೀಲ್ ಜಿಲ್ಲಾ ಸೇಷನ್ ಕೋರ್ಟ್​ನಲ್ಲಿ ಎಕ್ಸಿಕ್ಯೂಷನ್ ಪೇಟೇಷನ್ ದಾಖಲಿಸಿದರು. 2024ರ ಜೂನ್​ 24ರಿಂದ ಮೂರು ತಿಂಗಳ ಒಳಗಾಗಿ ಬಾಕಿ ಹಣ ನೀಡುವಂತೆ ನ್ಯಾಯಾಲಯ ಗಡುವು ನೀಡಿತು. ಒಂದು ವೇಳೆ ನೀಡದಿದ್ದರೆ ಕಚೇರಿಯ ಪೀಠೋಪಕರಣ ಜಪ್ತಿಗೆ ಆದೇಶ ನೀಡಿತು.

ಇದನ್ನೂ ಓದಿ: ತ್ಯಾಗ, ಬಲಿದಾನದ ಪ್ರತೀಕ ಕಲ್ಯಾಣ ಕರ್ನಾಟಕ ಉತ್ಸವ

ಈ ಆದೇಶದ ಬಗ್ಗೆ ನ್ಯಾಯಾಲಯದ ವಿಶೇಷ ಬೇಲಿಫ್ ಅವರು ಒಂದು ತಿಂಗಳ ಮುಂಚೆ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದರು. ಆದರೆ, ಅಧಿಕಾರಿಗಳು, ತಮ್ಮ ಮೊಂಡುತನ ಮುಂದುವರೆಸಿದರು. ಈ ನಡುವೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮನವಿ ಮೇರೆಗೆ ಹಣ ಪಾವತಿಸಲು ಒಂದು ವಾರ ಮತ್ತೆ ಸಮಯ ನೀಡಲಾಯಿತು. ಆದರೆ, ಅಧಿಕಾರಿಗಳು ಮಾತ್ರ ಮತ್ತೆ ಉಡಾಫೆ ಮಾತುಗಳನ್ನಾಡಿ, ಹಣ ನೀಡದೆ ಸತಾಯಿಸಿದರು.

ಇದೀಗ, ನ್ಯಾಯಾಲಯ ನೀಡಿದ ಗಡುವು ಮುಕ್ತಾಯಗೊಂಡಿದ್ದು, ಯಾದಗಿರಿ ಲೋಕೋಪಯೋಗಿ ಇಲಾಖೆ ಕಚೇರಿಯ ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ ವಿವಿಧ ಪೀಠೋಪಕರಣಗಳನ್ನು ಜಿಲ್ಲಾ ಕೋರ್ಟ್​ನ ವಿಶೇಷ ಬೇಲಿಫ್ ಜಪ್ತಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us