ಪ್ರಾಮಾಣಿಕವಾಗಿ ಜಾತಿ ಗಣತಿ ಮಾಡಿಸಿಲ್ಲ ಎಂದ ಜಯಮೃತ್ಯುಂಜಯ ಸ್ವಾಮೀಜಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 01, 2024 | 2:45 PM

ವರದಿ ಬಗ್ಗೆ ಚರ್ಚೆ ಮಾಡಲು ಲಿಂಗಾಯತ ಸಮುದಾಯದ ಸ್ವಾಮಿಗಳು ,ಜನಪ್ರತಿನಿಧಿಗಳು ಸಭೆ ಕರೆಯಲಿ. ಈ ಬಗ್ಗೆ ಖುದ್ದು ಸಿಎಂ ಹತ್ತಿರ ತೆರಳಿ ಚರ್ಚೆ ಮಾಡೋಣವಂತೆ. ಸಿಎಂ ಅವರು ವರದಿಯ ಗೊಂದಲ ಸರಿಪಡಿಸದಿದ್ದರೆ, ಕಾನೂನಾತ್ಮಕ, ಸಾಮಾಜಿಕವಾಗಿ ಹೋರಾಟ ಮಾಡುವ ಬಗ್ಗೆ ನಾವು ಚರ್ಚೆ ಮಾಡುತ್ತೆವೆ ಎಂದು ಜಯಮೃತ್ಯುಂಜಯ ಸ್ವಾಮಿ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

ಪ್ರಾಮಾಣಿಕವಾಗಿ ಜಾತಿ ಗಣತಿ ಮಾಡಿಸಿಲ್ಲ ಎಂದ ಜಯಮೃತ್ಯುಂಜಯ ಸ್ವಾಮೀಜಿ
ಜಯಮೃತ್ಯುಂಜಯ ಸ್ವಾಮೀಜಿ
Follow us on

ಯಾದಗಿರಿ, ಮಾ.01: ಜಾತಿ ಗಣತಿ(Caste Census) ಸಮೀಕ್ಷೆ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗವು ರಾಜ್ಯ ಸರ್ಕಾರಕ್ಕೆ ನಿನ್ನೆ(ಫೆ.29) ಸಲ್ಲಿಕೆ ಮಾಡಿದೆ. ಈ ವಿಚಾರವಾಗಿ ಯಾದಗಿರಿಯಲ್ಲಿ ಕೂಡಲಸಂಗಮದ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ(Jayamrutyunjaya swamiji) ಮಾತನಾಡಿ, ‘ ರಾಜ್ಯ ಸರ್ಕಾರ ಕಾಂತರಾಜು ವರದಿಯನ್ನು ತಿರಸ್ಕರಿಸಬೇಕು. ಕಾಂತರಾಜು ವರದಿ ಅವೈಜ್ಞಾನಿಕವಾಗಿದೆ, ಈ ವರದಿಯನ್ನ ನಾವು ಒಪ್ಪಲ್ಲ. ಅದು ಅಲ್ಲದೆ ಮನೆ ಮನೆಗೆ ಹೋಗಿ ಪ್ರಾಮಾಣಿಕವಾಗಿ ಜಾತಿ ಗಣತಿ ಮಾಡಿಸಿಲ್ಲ. ಬದಲಾಗಿ ಪ್ರಮುಖ ಜಾಗದಲ್ಲಿ ಕುಳಿತುಕೊಂಡು ಸಮೀಕ್ಷೆ ಮಾಡಿದ್ದಾರೆ. ಹೀಗಾಗಿ ಸರ್ಕಾರ ವೈಜ್ಞಾನಿಕವಾಗಿ ಮತ್ತೆ ಜಾತಿ ಗಣತಿ ಮಾಡಿಸಬೇಕು ಎಂದಿದ್ದಾರೆ.

ಪ್ರಾಮಾಣಿಕವಾಗಿ ಜಾತಿಗಣತಿ ನಡೆಯಲಿ

ಪ್ರಮಾಣಿಕವಾಗಿ ಜಾತಿಗಣತಿ ಮಾಡಲು ಲಿಂಗಾಯತ ಸಮುದಾಯ ಸಂಪೂರ್ಣ ಬೆಂಬಲ ನೀಡುತ್ತದೆ. ಲಿಂಗಾಯತ ಸಮುದಾಯವನ್ನು ಕಡಿಮೆ ತೋರಿಸುವ ಉದ್ದೇಶದಿಂದ ತರಾತುರಿಯಾಗಿ ಈ ವರದಿ ಸ್ವೀಕಾರ ಮಾಡಲಾಗಿದೆ ಎಂಬ ಅನುಮಾನ ಕಾಡುತ್ತಿದೆ. ಜಾತಿ-ಜಾತಿ ನಡುವೆ ಅಸಮಾಧಾನ ಮಾಡುವ ಪ್ರಯತ್ನ ಸರಕಾರ ಮಾಡಿದೆ. ಕರ್ನಾಟಕದಲ್ಲಿ ಲಿಂಗಾಯತರ ವಿರುದ್ಧ ವರದಿ ಬಂದಾಗ ವಿರೋಧ ಮಾಡಿರುವ ಇತಿಹಾಸವಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದರು.

ಇದನ್ನೂ ಓದಿ:ಜಾತಿಗಣತಿ ವರದಿಯಲ್ಲಿ ಜನಸಂಖ್ಯೆ ಬಹಿರಂಗ: ಎಸ್ಸಿ ಫಸ್ಟ್‌, ಕುರುಬ ಜನಾಂಗವೇ ಅತಿ ಹಿಂದುಳಿದ ವರ್ಗ!

ಲಿಂಗಾಯತರ ಹೆಸರಿನಲ್ಲಿ ಮತ ಪಡೆದು ಸರ್ಕಾರ ಅಧಿಕಾರಕ್ಕೆ ಬಂದಿದೆ

ಸಮೀಕ್ಷೆ ಮಾಡಲು ನನ್ನ ಹತ್ತಿರ ಬಂದಿಲ್ಲವೆಂದು ತುಮಕೂರು ಸ್ವಾಮಿಗಳು ಹೇಳಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಸರ್ಕಾರ ತಪ್ಪು ಸಂದೇಶ ಸಾರುವ ಕೆಲಸ ಮಾಡಬಾರದು. ಲಿಂಗಾಯತ ಸಮುದಾಯದ ಶಾಸಕರು ಕಾಂತರಾಜ್ ವರದಿ ಅವೈಜ್ಞಾನಿಕವಾಗಿದೆ, ಹೀಗಾಗಿ ಅದನ್ನು ತಿರಸ್ಕರಿಸಿ ಎಂದು ಸಿಎಂ ಬಳಿ ಮನವಿ ಮಾಡಿದ್ದರು. ಆದರೂ ಸಿಎಂ ಅವರು ವರದಿ ಸ್ವೀಕಾರ ಮಾಡಿದ್ದಾರೆ. ಲಿಂಗಾಯತರ ಹೆಸರಿನಲ್ಲಿ ಮತ ಪಡೆದು ಸರ್ಕಾರ ಅಧಿಕಾರಿಕ್ಕೆ ಬಂದಿದೆ. ಈ ಹಿನ್ನಲೆ ಮತ್ತೊಮ್ಮೆ ಪುನರ್ ಪರಿಶೀಲನೆ ಮಾಡಿ ಜಾತಿ ಗಣತಿ ಮಾಡಬೇಕಿದೆ ಎಂದು ಹೇಳಿದರು.

ಕೇಂದ್ರ ಸರಕಾರ ಈ ಬಗ್ಗೆ ಮಧ್ಯ ಪ್ರವೇಶ ಮಾಡಲಿ

ಕರ್ನಾಟಕದ ಲೋಕಸಭಾ ಸದಸ್ಯರು ಈ ಬಗ್ಗೆ ಮಧ್ಯ ಪ್ರವೇಶ ಮಾಡಿ ಈ ವರದಿ ಬಗ್ಗೆ ಕೇಂದ್ರಕ್ಕೆ ಮನವೊರಿಕೆ ಮಾಡಬೇಕು. ಇದನ್ನು ಲಿಂಗಾಯತ ಸಮುದಾಯದ ಸಚಿವರು ಹಾಗೂ ಶಾಸಕರು ಸರಿಪಡಿಸುವ ಕೆಲಸ ಮಾಡಬೇಕು. ರಾಜ್ಯದಲ್ಲಿ 24 ಪ್ರತಿಶತ ಲಿಂಗಾಯತ ಸಮುದಾಯದವರು ಇದ್ದಾರೆ. ಜಯಪ್ರಕಾಶ್ ಹೆಗ್ಡೆ ಅವರು ಸಮಾಜಕ್ಕೆ ತಪ್ಪು ಸಂದೇಶ ಕೊಡಬಾರದು. ಒಂದು ಟಿಕೆಟ್ ಪಡೆಯಲು ಅಧಿಕಾರಕ್ಕಾಗಿ ಸಮಾಜಕ್ಕೆ ತೊಂದರೆ ಕೊಡುವ ತರಾತುರಿ ವರದಿ ಕೊಡಬಾರದಿತ್ತು. ಜನಸಾಮಾನ್ಯರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ವರದಿ ಬಗ್ಗೆ ಚರ್ಚೆ ಮಾಡಲು ಲಿಂಗಾಯತ ಸಮುದಾಯದ ಸ್ವಾಮಿಗಳು ,ಜನಪ್ರತಿನಿಧಿಗಳು ಸಭೆ ಕರೆಯಲಿ. ಈ ಬಗ್ಗೆ ಖುದ್ದು ಸಿಎಂ ಹತ್ತಿರ ತೆರಳಿ ಚರ್ಚೆ ಮಾಡೋಣವಂತೆ. ಸಿಎಂ ಅವರು ವರದಿಯ ಗೊಂದಲ ಸರಿಪಡಿಸದಿದ್ದರೆ, ಕಾನೂನಾತ್ಮಕ, ಸಾಮಾಜಿಕವಾಗಿ ಹೋರಾಟ ಮಾಡುವ ಬಗ್ಗೆ ನಾವು ಚರ್ಚೆ ಮಾಡುತ್ತೆವೆ. ಈಗಾಗಲೇ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಎಂ ಅವರು ಲಿಂಗಾಯತ ಸಮುದಾಯದ ಶಾಸಕರ ಅಭಿಪ್ರಾಯ ಪಡೆದು ವರದಿ ಅನುಷ್ಠಾನ ಮಾಡುವ ಬಗ್ಗೆ ನಿರ್ಧಾರ ಮಾಡಲಿ. ಸಿಎಂ ಅವರು ಸಣ್ಣಪುಟ್ಟ ಲಿಂಗಾಯತ ಸಮುದಾಯ ಬೇರ್ಪಡಿಸಿ ಲಿಂಗಾಯತ ಧರ್ಮ ಬೇರ್ಪಡಿಸುವ ಕಾರ್ಯ ಮಾಡಬಾರದು ಎಂದು ಯಾದಗಿರಿಯಲ್ಲಿ ಜಯಮೃತ್ಯುಂಜಯ ಸ್ವಾಮಿ ಸಿಎಂಗೆ ಕಿವಿ ಮಾತು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:44 pm, Fri, 1 March 24