ಸಕಲ ಸರ್ಕಾರಿ ಗೌರವಗಳೊಂದಿಗೆ ಶಾಸಕ ವೆಂಕಟಪ್ಪ ನಾಯಕ ಅಂತ್ಯಕ್ರಿಯೆ: ಹಿರಿಯ ಪುತ್ರನಿಂದ ಚಿತೆಗೆ ಅಗ್ನಿಸ್ಪರ್ಶ
ಅವರು ಆ ಕ್ಷೇತ್ರದ ಜನಪ್ರಿಯ ಶಾಸಕ. ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದರು. ಈ ಸುದ್ದಿ ಸುರಪುರ ಕ್ಷೇತ್ರದ ಜನರಿಗೆ ಬರಸಿಡಿಲು ಬಡೆದಂತಾಗಿತ್ತು. ಇಂದು ಶಾಸಕ ರಾಜಾವೆಂಕಟಪ್ಪ ನಾಯಕ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದಿದೆ. ಹಿರಿಯ ಪುತ್ರ ರಾಜಾ ವೇಣುಗೋಪಾಲ ನಾಯಕರಿಂದ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ. ಈ ವೇಳೆ ಕುಟುಂಬಸ್ಥರು, ಬಂಧು ಮಿತ್ರರು ಮತ್ತು ಸಾವಿರಾರು ಬೆಂಬಲಿಗರು ಉಪಸ್ಥಿತರಿದ್ದರು.
ಯಾದಗಿರಿ, ಫೆಬ್ರವರಿ 26: ಜಿಲ್ಲೆಯ ಸುರಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ (Raja Venkatappa Nayaka) ಅವರು ನಿನ್ನೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಯಾವಾಗ ತಮ್ಮ ನೆಚ್ಚಿನ ರಾಜಾ ವೆಂಕಟಪ್ಪ ಇಹಲೋಕ ತ್ಯಜಿಸಿದರು ಎನ್ನುವ ಸುದ್ದಿ ತಿಳಿಯಿತೋ ಇಡೀ ಸುರಪುರವೇ ಸ್ತಬ್ಧವಾಗಿತ್ತು. ಇಂದು ಸುರಪುರ ಪಟ್ಟಣದ ಗೋಸಲ ರಾಜವಂಶದ ಸಂಪ್ರದಾಯದಂತೆ ರಾಜಮನೆತನದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿದ್ದು, ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಹಿರಿಯ ಪುತ್ರ ರಾಜಾ ವೇಣುಗೋಪಾಲ ನಾಯಕರಿಂದ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ. ಈ ವೇಳೆ ಕುಟುಂಬಸ್ಥರು, ಬಂಧು ಮಿತ್ರರು ಮತ್ತು ಸಾವಿರಾರು ಬೆಂಬಲಿಗರು ಉಪಸ್ಥಿತರಿದ್ದರು.
ನಸುಕಿನ ಜಾವ 4 ಗಂಟೆಗೆ ಸುರಪುರಕ್ಕೆ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ದರ್ಬಾರ್ ಹೌಸ್ನಲ್ಲಿ ಇಡಲಾಗಿತ್ತು. ಬೆಳಿಗ್ಗೆ 11 ಗಂಟೆಯವರೆಗೂ ದರ್ಬಾರ್ ಹೌಸ್ನಲೇ ಘೋಷಲ ವಂಶದ ರಾಜ ಪದ್ದತಿಯಂತೆ ಪೂಜಾ ಕಾರ್ಯಕ್ರಮ ಮಾಡಲಾಯಿತು. ಬಳಿಕ ದರ್ಬಾರ್ ಹೌಸ್ನಿಂದ ಪ್ರಭು ಕಾಲೇಜು ಮೈದಾನದವರೆಗೆ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು. ಬಳಿಕ ಸಂಜೆ 4 ಗಂಟೆಯವರೆಗೆ ಮೈದಾನದಲ್ಲೆ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ರಾಜಕೀಯ ಶಿಷ್ಯನ ಅಂತಿಮ ದರ್ಶನ ಪಡೆದರು. ರಾಜಕೀಯದಲ್ಲಿನ ತಮ್ಮ ಶಿಷ್ಯನ ಅಂತಿಮ ದರ್ಶನಕ್ಕೆ ಬಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾವುಕರಾದ್ದರು.
ಇದನ್ನೂ ಓದಿ: Raja Venkatappa Nayaka: ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನ
ಬ್ರಿಟಿಷರ ವಿರುದ್ದ ಹೋರಾಟ ಮಾಡಿದ್ದ ಘೋಷಲ ರಾಜ ವಂಶಕ್ಕೆ ಸೇರಿದ ರಾಜಾವೆಂಕಟಪ್ಪ ನಾಯಕ್, ರಾಜಕೀಯ ಜೀವನ ಕೂಡ ಅಷ್ಟೆ ರೋಚಕವಾಗಿತ್ತು. ರಾಜ ಮನೆತನದಲ್ಲಿ ಜನಿಸಿದರೂ ಜನರ ಜೊತೆ ಸರಳವಾಗಿ ಬದುಕುತ್ತಿದ್ದರು. ಅದಕ್ಕಾಗಿ ಇಂದು ಸಾವಿರಾರು ಸಂಖ್ಯೆಯಲ್ಲಿ ಜನಸ್ತೋಮ ಜಮಾಯಿಸಿತ್ತು.
ಸಿಎಂ ಸಿದ್ದರಾಮಯ್ಯ ಆದಿಯಾಗಿ ಸಚಿವರು ಹಾಗೂ ಅನೇಕ ರಾಜಕೀಯ ನಾಯಕರ ದಂಡೇ ಆಗಮಿಸಿತ್ತು. ಸಂಜೆ ನಾಲ್ಕು ಗಂಟೆಯಾಗ್ತಿದ್ದಂತೆ ಪ್ರಭು ಕಾಲೇಜಿನಿಂದ ಅಂತ್ಯಸಂಸ್ಕಾರ ನಡೆಯುವ ರಾಜ ಮನೆತನದ ಆಸರ್ ಮೋಹಲ್ಲಾಗೆ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನ ತೆಗೆದುಕೊಂಡು ಹೋಗಲಾಯಿತು. ಬಳಿಕ ಘೋಷಲ ವಂಶದ ಪದ್ದತಿಯಂತೆ ವಿಧಿ ವಿಧಾನಗಳು ಹಾಗೂ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಇದನ್ನೂ ಓದಿ: ರಾಜಾ ವೆಂಕಟಪ್ಪ ನಾಯಕ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಚಾಪರ್ ನಲ್ಲಿ ಸುರಪುರಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ
ನಾಲ್ಕು ಭಾರಿ ಸುರಪುರ ಕ್ಷೇತ್ರದ ಶಾಸಕರಾಗಿದ್ದ ರಾಜಾವೆಂಕಟಪ್ಪ ನಾಯಕ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಮೊನ್ನೆಯಷ್ಟೆ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವಿಕರಿಸಿದ್ದ ವೆಂಕಟಪ್ಪ ನಾಯಕ್ ಸಚಿವರಾಗುವ ಮಹದಾಸೆ ಇಟ್ಟುಕೊಂಡಿದ್ದರು. ಆದರೆ ಅವರ ಕನಸು ಕೊನೆವರೆಗೂ ನನಸಾಗಲೇ ಇಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:44 pm, Mon, 26 February 24



