ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್: ಹಲವು ಸಚಿವರ ಕೆಂಗಣ್ಣಿಗೂ ಗುರಿಯಾದ ಈ ಮಹದೇವ್ ಯಾರು?

| Updated By: Rakesh Nayak Manchi

Updated on: Nov 16, 2023 | 10:07 AM

ನಾನು ನೀಡಿದ ಲಿಸ್ಟ್​​ನದ್ದು ಮಾತ್ರ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ವಿಶೇಷ ಕರ್ತವ್ಯಾಧಿಕಾರಿ ಮಹದೇವ್ ಅವರಿಗೆ ದೂರವಾಣಿ ಕರೆ ಮೂಲಕ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಸಚಿವ ಸಂತೋಷ್ ಲಾಡ್​ಗೆ ಮಾಹಿತಿ ನೀಡದೆ ವರ್ಗಾವಣೆ ಪಟ್ಟಿ ರೆಡಿ ಮಾಡಿದ್ದು ಕೂಡ ಇದೇ ಮಹದೇವ್.

ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್: ಹಲವು ಸಚಿವರ ಕೆಂಗಣ್ಣಿಗೂ ಗುರಿಯಾದ ಈ ಮಹದೇವ್ ಯಾರು?
ಮಹದೇವ್ ಜೊತೆ ಮಾತನಾಡುತ್ತಿರುವ ಯತೀಂದ್ರ ಸಿದ್ದರಾಮಯ್ಯ
Follow us on

ಬೆಂಗಳೂರು, ನ.16: ನಾನು ನೀಡಿದ ಲಿಸ್ಟ್​​ನದ್ದು ಮಾತ್ರ ಮಾಡಿ ಎಂದು ಮಹದೇವ್ ಅವರ ಜೊತೆ ದೂರವಾಣಿ ಕರೆ ಮೂಲಕ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು ಮಾತನಾಡಿರುವ ವಿಡಿಯೋ ವೈರಲ್ (Video Viral) ಆಗಿದೆ. ಸಚಿವ ಸಂತೋಷ್ ಲಾಡ್​ಗೆ ಮಾಹಿತಿ ನೀಡದೆ ವರ್ಗಾವಣೆ ಪಟ್ಟಿ ರೆಡಿ ಮಾಡಿದ್ದು ಕೂಡ ಇದೇ ಮಹದೇವ್. ಹಾಗಾದರೆ, ಈ ಹಿಂದೆ ಹಲವು ಸಚಿವರ ಕೆಂಗಣ್ಣಿಗೆ ಗುರಿಯಾಗಿದ್ದ ಈ ಮಹದೇವ್ ಯಾರು?

ಮೈಸೂರು ತಾಲೂಕಿನ ಕೀಳನಪುರ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಯತೀಂದ್ರ ಅವರು ದೂರವಾಣಿ ಕರೆ ಮಾಡಿ “ಅಪ್ಪ ಹೇಳಿ” ಅಂತ ಮಾತು ಆರಂಭಿಸಿ ತಾನು ನೀಡಿದ ಲಿಸ್ಟ್​ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು ವಿವೇಕಾನಂದರ ಹೆಸರು ಎತ್ತಿದ್ದು, ಇದಕ್ಕೆ ಯಾರು ಎಂದು ಯತೀಂದ್ರ ಅವರು ಪ್ರಶ್ನೆ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.

ಅಲ್ಲದೆ, ಬೇರೊಂದು ಲಿಸ್ಟ್​ ನೀಡಿದ ಬಗ್ಗೆ ಅಸಮಾಧಾನಗೊಂಡ ಯತೀಂದ್ರ ಅವರು, ನಾನು ಕೊಟ್ಟಿರುವುದೇ ಐದು ಅಂತ ಹೇಳಿ ಮಹದೇವರಿಗೆ‌ ಫೋನ್ ನೀಡುವಂತೆ ಸಿದ್ದರಾಮಯ್ಯಗೆ ಸೂಚಿಸುತ್ತಾರೆ. ಬಳಿಕ ಮಹದೇವ್ ಜೊತೆ ಮಾತನಾಡಿದ ಯತೀಂದ್ರ, ಮಹದೇವ್​ ಯಾಕೆ ಯಾವ್ದ್ಯಾವುದೋ ಕೊಡ್ತೀಯಾ? ಮತ್ತೆ ಇದೆಲ್ಲ ಯಾರು ಕೊಡ್ತಿರೋದು ಅಂತ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ನಾನು ನೀಡಿದ ಲಿಸ್ಟ್​​ನದ್ದು ಮಾತ್ರ ಮಾಡಿ: ಡಾ.ಯತೀಂದ್ರ ಎಡವಟ್ಟು ವಿಡಿಯೋ ವೈರಲ್

ಅಲ್ಲದೆ, ಇಲ್ಲ ಅದೆಲ್ಲ ಬೇಡ. ನಾನು ಯಾವುದು ನಾಲ್ಕೈದು ಕೊಟ್ಟಿದ್ದೇನೋ ಅಷ್ಟೇ ಮಾತ್ರ ಮಾಡಿ ಅಂತ ಹೇಳುವಂತೆ ಯತೀಂದ್ರ ಅವರು ಮಹದೇವರಿಗೆ ಸೂಚಿಸಿ ಮಾತು ನಿಲ್ಲಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.

ಅಷ್ಟಕ್ಕೂ ಈ ಮಹದೇವ್ ಬೇರೆ ಯಾರೂ ಅಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಕರ್ತವ್ಯಾಧಿಕಾರಿ. ಹೌದು, ವರ್ಗಾವಣೆ ವಿಚಾರವಾಗಿ ಈ ಹಿಂದೆ ಹಲವು ಸಚಿವರ ಕೆಂಗಣ್ಣಿಗೂ ಮಹದೇವ್​ ಗುರಿಯಾಗಿದ್ದರು. ಈ ಬಗ್ಗೆ ಸಿದ್ದರಾಮಯ್ಯ ಅವರಿಗೆ ದೂರು ಕೂಡ ನೀಡಲಾಗಿತ್ತು.

ಸಚಿವ ಸಂತೋಷ್ ಲಾಡ್ ಅವರ ಕಾರ್ಮಿಕ ಇಲಾಖೆಯಲ್ಲೂ ಮಹದೇವ್ ಮಧ್ಯಪ್ರವೇಶಿಸಿದ್ದರು. ಸಚಿವರಿಗೆ ಯಾವುದೇ ಮಾಹಿತಿ ನೀಡದೆ ಮಹದೇವ್ ವರ್ಗಾವಣೆ ಪಟ್ಟಿ ರೆಡಿ ಮಾಡಿದ್ದರು. ಮುಖ್ಯಮಂತ್ರಿ ಅವರ ಒಪ್ಪಿಗೆ ಪಡೆದುಕೊಳ್ಳುವ ವೇಳೆ 40 ಮಂದಿಯ ಹೆಚ್ಚುವರಿ ಲಿಸ್ಟ್ ರೆಡಿ ಮಾಡಿದ್ದರು.

ಮಹದೇವ್ ಅವರ ನಡೆಗೆ ಕೆಂಡಾಮಂಡಲರಾಗಿದ್ದ ಸಂತೋಷ್ ಲಾಡ್, ಅವರನ್ನು ಹುದ್ದೆಯಿಂದ ತಕ್ಷಣ ಬದಲಾಯಿಸುವಂತೆ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದರು. ಸದ್ಯ, ಯತೀಂದ್ರ ಅವರು ಕಳಿಸಿದ ಲಿಸ್ಟ್​ ವಿಚಾರದಲ್ಲೂ ಇದೇ ಸಮಸ್ಯೆ ಆಗಿರುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:04 am, Thu, 16 November 23