ಚಿನ್ನದ ನಾಡು ಕೋಲಾರದಲ್ಲಿ IPhone ಘಟಕ ಆರಂಭ! ಸ್ಥಳೀಯರಿಗೆ ಉದ್ಯೋಗಾವಕಾಶದ ಸುಗ್ಗಿ
ಕೋಲಾರ: ಹೆಮ್ಮಾರಿ ಕೊರೊನಾದ ಅಟ್ಟಹಾಸದಿಂದ ಅದೆಷ್ಟೋ ಜನ್ರು ನಿರುದ್ಯೋಗಿಗಳಾಗಿ ಬೀದಿಪಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕೋಲಾರದಲ್ಲಿ ಪ್ರತಿಷ್ಟಿತ ಕಂಪನಿಯೊಂದು ತಲೆ ಎತ್ತುವ ಮೂಲಕ ನಿರುದ್ಯೋಗಿಗಳಿಗೆ ಆಸರೆಯಾಗಿದೆ. ಇಲ್ಲಿ ಬೃಹತ್ತಾದ ಕಂಪನಿಯೊಂದರ ಆರಂಭದಿಂದ ಉದ್ಯೋಗಾವಕಾಶದ ಸುಗ್ಗಿ ಆರಂಭವಾಗಲಿದೆ. ಇಷ್ಟಕ್ಕೂ ಯಾವುದಾ ಬೃಹತ್ ಕಂಪನಿ ಈ ವರದಿ ಓದಿ. ಕೊರೊನಾ ಕಾಲದಲ್ಲಿ ಉದ್ಯೋಗ ನೀಡಲು ಸಿದ್ದವಾಗ್ತಿದೆ ಕಂಪನಿ? ಕೋಲಾರ ಬರಗಾಲದ ತವರು ಜಿಲ್ಲೆ ಅನ್ನೋ ಹಣೆಪಟ್ಟಿಪಡೆದಿರುವ ಹಾಗೂ ಸದಾ ಕಾಲವೂ ಬರಪೀಡಿತ ಪ್ರದೇಶ ಅಂತಾನೇ ಹೆಸರಾಗಿರುವ ಈ ಜಿಲ್ಲೆಯಲ್ಲಿ ಒಂದಷ್ಟು ಕೈಗಾರಿಕೆಗಳು […]

ಕೋಲಾರ: ಹೆಮ್ಮಾರಿ ಕೊರೊನಾದ ಅಟ್ಟಹಾಸದಿಂದ ಅದೆಷ್ಟೋ ಜನ್ರು ನಿರುದ್ಯೋಗಿಗಳಾಗಿ ಬೀದಿಪಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕೋಲಾರದಲ್ಲಿ ಪ್ರತಿಷ್ಟಿತ ಕಂಪನಿಯೊಂದು ತಲೆ ಎತ್ತುವ ಮೂಲಕ ನಿರುದ್ಯೋಗಿಗಳಿಗೆ ಆಸರೆಯಾಗಿದೆ. ಇಲ್ಲಿ ಬೃಹತ್ತಾದ ಕಂಪನಿಯೊಂದರ ಆರಂಭದಿಂದ ಉದ್ಯೋಗಾವಕಾಶದ ಸುಗ್ಗಿ ಆರಂಭವಾಗಲಿದೆ. ಇಷ್ಟಕ್ಕೂ ಯಾವುದಾ ಬೃಹತ್ ಕಂಪನಿ ಈ ವರದಿ ಓದಿ.
ಕೊರೊನಾ ಕಾಲದಲ್ಲಿ ಉದ್ಯೋಗ ನೀಡಲು ಸಿದ್ದವಾಗ್ತಿದೆ ಕಂಪನಿ?
ಕೋಲಾರ ಬರಗಾಲದ ತವರು ಜಿಲ್ಲೆ ಅನ್ನೋ ಹಣೆಪಟ್ಟಿಪಡೆದಿರುವ ಹಾಗೂ ಸದಾ ಕಾಲವೂ ಬರಪೀಡಿತ ಪ್ರದೇಶ ಅಂತಾನೇ ಹೆಸರಾಗಿರುವ ಈ ಜಿಲ್ಲೆಯಲ್ಲಿ ಒಂದಷ್ಟು ಕೈಗಾರಿಕೆಗಳು ಪ್ರಾರಂಭವಾಗುವುದರ ಮೂಲಕ ಇಲ್ಲಿನ ಜನರ ಕೈ ಹಿಡಿದಿವೆ.
ಅವುಗಳ ಮಧ್ಯೆ ಕಳೆದ 6 ತಿಂಗಳಿನಿಂದ ದೇಶದ ಜನ್ರನ್ನು ಬೆಂಬಿಡದೆ ಕಾಡುತ್ತಿದ್ದ ಕೊರೊನಾ ಆಘಾತದಿಂದ ತತ್ತರಿಸಿದ ಜನ್ರಿಗೆ ಕೋಲಾರದಲ್ಲಿ ಬೃಹತ್ ಕೈಗಾರಿಕೆಯೊಂದು ಆರಂಭವಾಗುವ ಮೂಲಕ ಇಲ್ಲಿನ ನಿರುದ್ಯೋಗಿಗಳಿಗೆ ಕೊರೊನಾ ಸಂದರ್ಭದಲ್ಲಿ ಆಸರೆಯಾಗಿ ನಿಂತಿದೆ.
ಸುಮಾರು 2900 ಕೋಟಿ ರೂ.ಗಳ ಬಂಡವಾಳ ಹೂಡಿಕೆಯೊಂದಿಗೆ ಆ್ಯಪಲ್ ಸಂಸ್ಥೆಯ ಐ ಫೋನ್ ತಯಾರಿಕಾ ಕಂಪನಿ ವಿಸ್ಟ್ರಾನ್ ಇನ್ನೇನು ಕಾರ್ಯಾರಂಭ ಮಾಡಲಿದೆ. ತೈವಾನ್ ಮೂಲದ ವಿಸ್ಟ್ರಾನ್ ಕಂಪನಿಯಲ್ಲಿ ಎಲೆಕ್ಟ್ರಾನಿಕ ಉಪಕರಣ ತಯಾರಿಕೆ ಮಾಡಲಾಗುತ್ತಿದೆ. ಇದಕ್ಕಾಗಿ ಜಿಲ್ಲಾಡಳಿತ ವತಿಯಿಂದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 43 ಎಕರೆ ಭೂಮಿಯನ್ನ ಸಹ ನೀಡಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಸುಮಾರು 10 ಸಾವಿರ ಉದ್ಯೋಗಾವಕಾಶಗಳು ಸಿಗುವ ನಿರೀಕ್ಷೆಯೂ ಸಹ ಇಲ್ಲಿದೆ.
ಬೆಂಗಳೂರು ಬಿಟ್ಟು ಊರು ಸೇರಿಕೊಂಡವರಿಗೆ ಸುವರ್ಣಾವಕಾಶ!
ಇನ್ನು ಐ ಪೋನ್ ಕಂಪನಿ ಪೂರ್ಣ ಪ್ರಮಾಣದಲ್ಲಿ ಕೆಲಸವನ್ನು ಸೆಪ್ಟೆಂಬರ್ ತಿಂಗಳಲ್ಲಿ ಆರಂಭಿಸಲು ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ಕಂಪನಿಯಲ್ಲಿ ಉದ್ಯೋಗ ನೇಮಕಾತಿಗಾಗಿ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ.
ಸದ್ಯ ಕಂಪನಿಯಲ್ಲಿ 2300 ಹುದ್ದೆ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮೊದಲ ಹಂತದಲ್ಲಿ 5000 ಮಂದಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ 2700 ಮಂದಿ ನೇಮಕಗೊಂಡಿದ್ದು ಅವರಿಗೆ ತರಬೇತಿ ನೀಡಲಾಗಿದೆ. ಇನ್ನು ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ಮಹಿಳೆಯರಿಗೆ ಹೆಚ್ಚು ಹೆಚ್ಚು ಹುದ್ದೆ ನೀಡಲಾಗುತ್ತಿದೆ.
ಉಳಿದಂತೆ ಮುಂದಿನ ಮಾರ್ಚ್ ತಿಂಗಳಲ್ಲಿ ಉಳಿದ 5000 ಮಂದಿಗೆ ಉದ್ಯೋಗ ನೀಡಲು ಸಿದ್ದತೆ ನಡೆಸಲಾಗಿದೆ.ಇದ್ರಿಂದ ನರಸಾಪುರ ಕೈಗಾರಿಕಾ ಪ್ರದೇಶವೊಂದರಲ್ಲಿ 10 ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದ್ದು, ಇದ್ರಿಂದ ಕೋಲಾರ ಜಿಲ್ಲೆಯ ಮಟ್ಟಿಗೆ ಉತ್ತಮ ಬೆಳವಣಿಗೆ ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯಿಂದ ಚಾಲನೆ
ಕೊರೊನಾದಿಂದ ದೇಶದ ಆರ್ಥಿಕತೆ ಮೇಲೆ ಒಡೆತ ಬಿದ್ದಿರುವಂತಹ ಸಂದರ್ಭದಲ್ಲಿ ಮತ್ತು ಅಪಾರವಾದ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದ ಕೋಲಾರ ಜಿಲ್ಲೆಗೆ, ಈ ಕಂಪನಿ ಸ್ಥಾಪನೆಯಿಂದಾಗಿ ಕೋಲಾರ ಜಿಲ್ಲೆಯ ಅದೆಷ್ಟೋ ನಿರುದ್ಯೋಗಿಗಳಿಗೆ ಆಸರೆಯಾಗಲಿದೆ. ಇಂಥಹ ಕಾರ್ಖಾನೆಯ ಲೋಕಾರ್ಪಣೆ ಹಾಗೂ ಕಾರ್ಯಾರಂಭಕ್ಕೆ ದೇಶದ ಪ್ರಧಾನಿ ಚಾಲನೆ ನೀಡುತ್ತಾರೆ ಅನ್ನೋ ಮಾತು ದಟ್ಟವಾಗಿದ್ದು ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಕಂಪನಿ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ.
Published On - 9:02 am, Thu, 13 August 20