- Kannada News Latest news Ashwins fear drowned Litton Das Indian spinner showed such effect in turning the match
IND vs BAN: ಅಶ್ವಿನ್ ಮಂಕಡಿಂಗ್ ಭಯಕ್ಕೆ ಸಿಲುಕಿ ವಿಕೆಟ್ ಕೈಚೆಲ್ಲಿದ ಲಿಟನ್ ದಾಸ್! ಫೋಟೋ ನೋಡಿ
IND vs BAN: ಅಶ್ವಿನ್ ಹೊರತುಪಡಿಸಿ ಬೇರೆ ಬೌಲರ್ಗಳು ದಾಳಿಗಿಳಿದಾಗ ಬಾಲು ಬೌಲರ್ ಕೈಯಿಂದ ರಿಲೀಸ್ ಆಗುವ ಮೊದಲೇ ಕ್ರೀಸ್ ಬಿಟ್ಟಿರುತ್ತಿದ್ದ ದಾಸ್, ಅಶ್ವಿನ್ ಬೌಲಿಂಗ್ನಲ್ಲಿ ಮಾತ್ರ ಕ್ರೀಸ್ನಲ್ಲೇ ನೆಲೆಯುರುತ್ತಿದ್ದರು.
Updated on:Nov 03, 2022 | 2:47 PM

ಬುಧವಾರ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಮಳೆ ಪೀಡಿತ ಈ ರೋಚಕ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು ಐದು ರನ್ಗಳಿಂದ ಸೋಲಿಸುವುದರೊಂದಿಗೆ ಸೆಮಿಫೈನಲ್ ಹಾದಿಯನ್ನು ಸುಗಮಗೊಳಿಸಿಕೊಂಡಿದೆ. ಆದರೆ ಗೆಲುವಿನ ಟ್ರ್ಯಾಕ್ನಲ್ಲಿದ್ದ ಬಾಂಗ್ಲಾ ತಂಡಕ್ಕೆ ಉಪನಾಯಕ ರಾಹುಲ್ ಮಾಡಿದ ಅದೊಂದು ರನೌಟ್ ಸೋಲಿನ ಕೂಪಕ್ಕೆ ತಳ್ಳಿತ್ತು. ಈಗ ಈ ಅದ್ಭುತ ರನೌಟ್ ಮಾಡಿದ ರಾಹುಲ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ ಈ ರನೌಟ್ ಹಿಂದೆ ಅಶ್ವಿನ್ ಕಾಣದ ತಂತ್ರವಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ವಾಸ್ತವವಾಗಿ ಟೀಂ ಇಂಡಿಯಾ ಸ್ಪಿನ್ನರ್ ಆರ್. ಅಶ್ವಿನ್, ನಾನ್ ಸ್ಟ್ರೇಕ್ನಲ್ಲಿ ನಿಲ್ಲುವ ಬ್ಯಾಟ್ಸ್ಮನ್ಗಳನ್ನು ಹಲವು ಬಾರಿ ಮಂಕಂಡಿಂಗ್ ಮಾಡುವ ಮೂಲಕ ಔಟ್ ಮಾಡಿದ್ದಾರೆ. ಹೀಗಾಗಿ ಎದುರಾಳಿ ತಂಡದ ಬ್ಯಾಟರ್ಗಳು ಅಶ್ವಿನ್ ದಾಳಿಗಿಳಿದರೆ, ಬೌಲಿಂಗ್ ಮಾಡುವ ಮೊದಲ ಯಾವುದೇ ಕಾರಣಕ್ಕೂ ನಾನ್ ಸ್ಟ್ರೈಕ್ ತುದಿಯ ಗೆರೆಯನ್ನು ದಾಟುವುದಿಲ್ಲ.

ಇದಕ್ಕೆ ತಾಜಾ ಉದಾಹರಣೆಯಾಗಿ ಬಾಂಗ್ಲಾ ವಿರುದ್ಧ ನಡೆದ ಪಂದ್ಯವೇ ಸಾಕ್ಷಿಯಾಗಿದೆ. ಟೀಂ ಇಂಡಿಯಾ ನೀಡಿದ 185 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಬಾಂಗ್ಲಾ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತ್ತು. ಆರಂಭಿಕ ಲಿಟನ್ ದಾಸ್ ಕೇವಲ 22 ಎಸೆತಗಳಲ್ಲೇ ಅರ್ಧಶತಕ ಬಾರಿಸಿ ಟೀಂ ಇಂಡಿಯಾ ವೇಗಿಗಳ ಮೇಲೆ ಸವಾರಿ ನಡೆಸಿದ್ದರು. ಆದರೆ 8ನೇ ಒವರ್ನಲ್ಲಿ ಮಳೆ ಬಂದ ಕಾರಣ ಆಟವನ್ನು ನಿಲ್ಲಿಸಲಾಗಿತ್ತು.

ಆ ಬಳಿಕ ಆಟ ಆರಂಭವಾದಾಗ ಬಾಂಗ್ಲಾ ತಂಡಕ್ಕೆ 16 ಓವರ್ಗಳಲ್ಲಿ 151 ರನ್ ಟಾರ್ಗೆಟ್ ನೀಡಲಾಯಿತು. ಈಗಾಗಲೇ ಅರ್ಧ ರನ್ ಬಾರಿಸಿದ್ದ ಬಾಂಗ್ಲಾ ತಂಡಕ್ಕೆ 45 ಎಸೆತಗಳಲ್ಲಿ 85 ರನ್ ಸವಾಲು ಮುಂದಿತ್ತು. ಈ ವೇಳೆ 8ನೇ ಓವರ್ ಎಸೆದ ಅಶ್ವಿನ್ ಅವರ ಎರಡನೇ ಎಸೆತವನ್ನು ನಜ್ಮುಲ್ ಶಾಂಟೊ ಡೀಪ್ ಮಿಡ್ ವಿಕೆಟ್ ಕಡೆಗೆ ಆಡಿದರು ಮತ್ತು ಇಬ್ಬರೂ ಬ್ಯಾಟ್ಸ್ಮನ್ಗಳು ಎರಡು ರನ್ಗಳಿಗೆ ಓಡಿದರು. ಇಲ್ಲಿ ಕೆಎಲ್ ರಾಹುಲ್ ಅದ್ಭುತ ಫೀಲ್ಡಿಂಗ್ ಮಾಡಿ, ಬೌಂಡರಿಯಿಂದ ವೇಗವಾಗಿ ಓಡಿ ಬಂದು ಸುಮಾರು 65 ಮೀಟರ್ ದೂರದಿಂದ ಚೆಂಡನ್ನು ನಾನ್ ಸ್ಟ್ರೈಕರ್ ತುದಿಯತ್ತ ಎಸೆದರು. ಆ ಚೆಂಡು ಸೀದಾ ಸ್ಟಂಪ್ಗೆ ಬಡಿಯಿತು.

ಹೀಗಾಗಿ ಈ ವಿಕೆಟ್ ಪಡೆದ ಶ್ರೇಯ ಈಗ ರಾಹುಲ್ಗೆ ಸಲ್ಲುತ್ತಿದೆ. ಆದರೆ ಈ ವಿಕೆಟ್ನ ಹಿಂದೆ ಅಶ್ವಿನ್ ಈಗಾಗಲೇ ಹುಟ್ಟಿಸಿರುವ ಮಂಕಂಡಿಗ್ ಭಯ ಸಾಕಷ್ಟು ಕೆಲಸ ಮಾಡಿರುವುದು ಗೋಚರಿಸುತ್ತಿದೆ. ಅಶ್ವಿನ್ ಹೊರತುಪಡಿಸಿ ಬೇರೆ ಬೌಲರ್ಗಳು ದಾಳಿಗಿಳಿದಾಗ ಬಾಲು ಬೌಲರ್ ಕೈಯಿಂದ ರಿಲೀಸ್ ಆಗುವ ಮೊದಲೇ ಕ್ರೀಸ್ ಬಿಟ್ಟಿರುತ್ತಿದ್ದ ದಾಸ್, ಅಶ್ವಿನ್ ಬೌಲಿಂಗ್ನಲ್ಲಿ ಮಾತ್ರ ಕ್ರೀಸ್ನಲ್ಲೇ ನೆಲೆಯುರುತ್ತಿದ್ದರು. ಒಂದು ವೇಳೆ ಅಶ್ವಿನ್ ಬೌಲಿಂಗ್ನಲ್ಲೂ ದಾಸ್ ಬೇಗನೇ ಕ್ರೀಸ್ ಬಿಟ್ಟಿದ್ದರೆ ಅವರು ರನೌಟ್ ಆಗುವ ಸಾಧ್ಯತೆಗಳು ಕಮ್ಮಿ ಇರುತ್ತಿತ್ತು ಎಂಬುದು ನೆಟ್ಟಿಗರ ವಿಶ್ಲೇಷಣೆಯಾಗಿದೆ.
Published On - 2:34 pm, Thu, 3 November 22









